ದೆಹಲಿ ವಿಶ್ವವಿದ್ಯಾನಿಲಯವು ತಮಿಳು ದಲಿತ ಬರಹಗಾರರಾದ ಬಾಮಾ ಫೌಸ್ಟಿನಾ ಸೂಸಾಯಿರಾಜ್ ಮತ್ತು ಸುಕೀರ್ಥರಾಣಿ ಹಾಗೂ ಬಂಗಾಳಿ ಲೇಖಕಿ ಮಹಾಶ್ವೇತಾದೇವಿ ಅವರ ಬರೆದಿರುವ ಪಠ್ಯವನ್ನು ಪದವಿಪೂರ್ವ ಶಿಕ್ಷಣದಿಂದ ಕೈಬಿಡುವ ನಿರ್ಧಾರವನ್ನು ಗುರುವಾರ ಸಮರ್ಥಿಸಿಕೊಂಡಿದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಪಠ್ಯಕ್ರಮವನ್ನು ಅನುಮೋದಿಸಲಾಗಿದೆ ಎಂದು ಹೇಳಿದೆ.
“ಭಾಷಾ ಕೋರ್ಸ್ನಲ್ಲಿ ಪಠ್ಯದ ಭಾಗವಾಗಿರುವ ಸಾಹಿತ್ಯಿಕ ವಿಷಯವು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸದಂತಿರಬೇಕು ಮತ್ತು ನಮ್ಮ ಸಮಾಜದ ನೈಜ ಚಿತ್ರಣವನ್ನು ಚಿತ್ರಿಸಬೇಕು ಎಂಬ ಕಲ್ಪನೆಗೆ ವಿಶ್ವವಿದ್ಯಾಲಯವು ಬದ್ಧವಾಗಿದೆ” ಎಂದೂ ಹೇಳಿದೆ.
ದೇವಿ ಅವರ ಸಣ್ಣ ಕಥೆ ‘ದ್ರೌಪದಿ’, ಸುಕೀರ್ಥಾರಿಣಿ ಅವರ ‘ಮೈ ಬಾಡಿ’ ಮತ್ತು ಸೂಸೈರಾಜ್ ಅವರ ‘ಸಂಗಾತಿ’ ಎಂಬ ಮೂರು ಪಠ್ಯಗಳನ್ನು ಅದರ ಬಿಎ (ಆನರ್ಸ್) ಇಂಗ್ಲಿಷ್ ಕೋರ್ಸ್ನಿಂದ ತೆಗೆದುಹಾಕಿದ್ದಕ್ಕಾಗಿ ಸಂಸ್ಥೆಯು ವ್ಯಾಪಕ ಟೀಕೆಗೆ ಒಳಗಾಗಿತ್ತು. ಅಲ್ಲದೆ ಬುಧವಾರ, ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ನ 15 ಸದಸ್ಯರೇ ಈ ಕ್ರಮವನ್ನು ವಿರೋಧಿಸಿ ಇದನ್ನು “ವಿಧ್ವಂಸಕ” ಎಂದು ಕರೆದಿದ್ದರು.
“ಮೇಲ್ವಿಚಾರಣಾ ಸಮಿತಿಯು ಯಾವಾಗಲೂ ದಲಿತರು, ಬುಡಕಟ್ಟುಗಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿರುದ್ಧ ಪೂರ್ವಾಗ್ರಹವನ್ನು ತೋರಿಸುತ್ತಾ ಬಂದಿದೆ. ಅಂತಹ ಎಲ್ಲಾ ಧ್ವನಿಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಅದು ಮಾಡುತ್ತಿರುವ ಸಂಘಟಿತ ಪ್ರಯತ್ನಗಳು ಸ್ಪಷ್ಟವಾಗಿವೆ” ಎಂದು ಸದಸ್ಯರು ಹೇಳಿದ್ದಾರೆ.

ಆದರೆ ಟೀಕೆಗಳ ಹೊರತಾಗಿಯೂ, ವಿಶ್ವವಿದ್ಯಾನಿಲಯವು ಗುರುವಾರ ತನ್ನ ಪಠ್ಯಕ್ರಮವನ್ನು ಸಮರ್ಥಿಸಿಕೊಂಡಿದೆ. ಸಂಸ್ಥೆಯು ತನ್ನ ಪಠ್ಯಕ್ರಮವು “ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರ ಕೃತಿಗಳನ್ನು ಅವರ ಬಣ್ಣ, ಜಾತಿ ಅಥವಾ ಮತವನ್ನು ಪರಿಗಣಿಸದೆ ಒಳಗೊಂಡಿದೆ” ಎಂದು ಹೇಳಿದೆ. ಭಾರತೀಯ ಸೈನ್ಯವನ್ನು ಕೆಟ್ಟ ರೀತಿಯಲ್ಲಿ ತೋರಿಸಿದ ಮತ್ತು ಭಯಾನಕ ಲೈಂಗಿಕ ವಿಷಯವನ್ನು ಹೊಂದಿದ್ದ ಕಾರಣ ಈ ಮೂರು ಪಠ್ಯಗಳನ್ನು ಕೋರ್ಸ್ನಿಂದ ತೆಗೆದುಹಾಕಲಾಗಿದೆ ಎಂದು ವಿಶ್ವವಿದ್ಯಾಲಯದ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಬುಧವಾರ ‘ದಿ ಪ್ರಿಂಟ್’ಗೆ ತಿಳಿಸಿದ್ದಾರೆ.
ಡಿಯು ಶಿಕ್ಷಕರ ಸಂಘದ ಖಜಾಂಚಿ ಅಭಾ ದೇವ್ ಹಬೀಬ್ ಅವರು ವಿಶ್ವವಿದ್ಯಾನಿಲಯದ ಆಡಳಿತವು ಪಠ್ಯಕ್ರಮದಿಂದ ‘ಅನೈತಿಕ ಮತ್ತು ಅನೌಪಚಾರಿಕ ಲೇಖಕರನ್ನು ಕತ್ತರಿಸುವಲ್ಲಿ’ ಸಹಭಾಗಿತ್ವ ಹೊಂದಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ವಿಶ್ವವಿದ್ಯಾನಿಲಯವು ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಮತ್ತು ನಂಬಿಕೆಗೆ ಘಾಸಿ ಎನ್ನುವ ಹೆಸರಿನಲ್ಲಿ ಉನ್ನತ ಶಿಕ್ಷಣದಲ್ಲಿ ಕಠಿಣ ವಿಮರ್ಶೆಯ ಪಠ್ಯಗಳನ್ನು ಕೈ ಬಿಡುತ್ತಿದೆ” ಎಂದು ಅವರು ಹೇಳಿದ್ದಾರೆ
ಭಾರತೀಯ ಜನತಾ ಪಕ್ಷ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶದಂತೆ ಹಿರಿಯ ಶಿಕ್ಷಣತಜ್ಞರು ಕೋರ್ಸ್ಗಳ ಮೇಲೆ ಸೆನ್ಸಾರ್ಶಿಪ್ ಹೇರುವ ಸಾಧನಗಳಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಬೀಬ್ ವಿಷಾದ ವ್ಯಕ್ತಪಡಿಸಿದ್ದಾರೆ.





