ಕೋವಿಡ್ ವಾರಿಯರ್ಸ್ ಎಂಬ ಪದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಗೌರವದಂತಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಇವೆರಡರ ಮಧ್ಯೆ, ನಾವುಬೆನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ .ಕೆ. ಶಿವಕುಮಾರ್ ಹೇಳಿದ್ದಾರೆ.
ಕೋವಿಡ್ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಪ್ರಬುದ್ಧತೆಯಿಂದ ಜನರ ಪ್ರಾಣ ಉಳಿಸಲು ಸ್ವಾರ್ಥ ಇಲ್ಲದೆ ಸಮಾಜ ಸೇವೆ ಮಾಡುವವರಿಗೆ ಗೌರವ ನೀಡುತ್ತದೆ. ಸಮಾಜಸೇವೆ, ದೇಶ ಸೇವೆ ಮಾಡುವವರಿಗೆ ಪಕ್ಷ ಮುಖ್ಯ ಅಲ್ಲ. ನಾವೆಲ್ಲರೂ ಮೊದಲು ಭಾರತೀಯರು. ಕೋವಿಡ್ ಬಂದ ತಕ್ಷಣ ವಿವಿಧ ರೀತಿ ಬಣ್ಣ ಕೊಡಲು ಪ್ರಯತ್ನಿಸಿದರು. ಮುಸಲ್ಮಾನ ಮಾವಿನ ವರ್ತಕರಿಗೆ ಬೆಳೆ ನೀಡದಂತೆ ಎತ್ತಿಕಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿರಲಿಲ್ಲ. ನಾವು ಆಗ್ರಹಿಸಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಸುತ್ತೇವೆ ಎಂದರು. ಅವರ ಮಾತಿಗೆ ಬೆಲೆ ಕೊಟ್ಟು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿದೆವು. ಮೋದಿ ಅವರು ಸ್ವರ್ಗ ತೋರಿಸುತ್ತೇನೆ ಎಂದು ನರಕ ತೋರಿಸಿದರು. ನಾವು ರಾಜಕೀಯ ಮಾತಾಡುತ್ತಿಲ್ಲ. ಇತಿಹಾಸದ ಬಗ್ಗೆ ಮಾತನಾಡುತ್ತಿದ್ದೇವೆ. ಕೆಲವು ಶಾಸಕರು ದ್ವೇಷ ಭಾಷಣ ಮಾಡುತ್ತಿದ್ದಾರೆ ಕ್ರಮ ಕೈಗೊಳ್ಳಿ ಎಂದರೆ ಅವರ ಬೆಂಬಲಕ್ಕೆ ನಿಂತರು. ವೈದ್ಯರು, ವೃತ್ತಿ ಸೇವೆಯವರಿಗೆ ಧರ್ಮದ ವ್ಯತ್ಯಾಸ ಇಲ್ಲ. ಆದರೂ ಬಿಜೆಪಿ ನಾಯಕರು ಪಂಚರ್ ಹಾಕುವವರಿಗೆ ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ ಎಂದರು. ಎಲ್ಲ ಜಾತಿ, ಧರ್ಮದವರ ಶವಗಳನ್ನು ಎತ್ತಿದ್ದರೆ ಅದು ಈ ಸಮಾಜದವರು. ಇವರ ಬಗ್ಗೆ ಮಾತನಾಡುವ ಗಂಡಸರುಗಳು ಯಾರ ಶವಕ್ಕಾದರೂ ಹೆಗಲು ಕೊಟ್ಟರಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಈ ರಾಜ್ಯದಿಂದ ಆಯ್ಕೆಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರ ಹೇಗೆ ಮಾಡಿದರು. ಬಳ್ಳಾರಿಯಲ್ಲಿ ಶವಗಳನ್ನು ಹೇಗೆ ಬಿಸಾಕಿದರು. ಇದೇನಾ ನಮ್ಮ ದೇಶದ ಸಂಸ್ಕೃತಿನಾ? ದೇವನೊಬ್ಬ ನಾಮ ಹಲವು. ಯಾವುದೇ ಧರ್ಮವಾದರೂ ಮಾನವೀಯತೆ, ಸೋದರತೆಯಿಂದ ಕಾಣಿ ಎಂದು ಹೇಳುತ್ತಾರೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಎಲ್ಲ ಧರ್ಮದವರ ಬಗ್ಗೆ ಚಿಂತಿಸಿದ್ದೇವೆ. ಚಾಮರಾಜನಗರ ದುರಂತದಲ್ಲಿ 36 ಜನ ಸತ್ತರು. ನಮ್ಮ ಸಚಿವರು 3 ಜನ ಸತ್ತರೆ, ಕೇಂದ್ರ ಸಚಿವರು ಒಬ್ಬರೂ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎಂದರು. ನಾನು ಅಷ್ಟೂ ಜನರ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದೇವೆ. ಜತೆಗೆ ಆ ಕುಟುಂಬಗಳಿಗೆ ತಲಾ 1 ಲಕ್ಷ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಆದರೆ ಪರಿಹಾರ ನೀಡಬೆಕಾಗುತ್ತದೆ ಎಂದು ಕೇವಲ 37 ಸಾವಿರ ಜನ ಸತ್ತಿದ್ದಾರೆ ಎಂದು ತೋರಿಸುತ್ತಿದ್ದಾರೆ. ನಾನು ಡೆತ್ ಆಡಿಟ್ ಮಾಡಿಸಿ ಅವರ ಮಾಹಿತಿ ಪಡೆದು ಅವರಿಗೆ ಪರಿಹಾರ ಕೊಡಿಸಲು ಅರ್ಜಿ ಹಾಕಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮನೆಯಲ್ಲೇ ಸತ್ತಿದ್ದಾರೆ. ಅನೇಕರು ನೂರಾರು ಕಿ.ಮೀ ದೂರ ನಡೆದಿದ್ದಾರೆ. ಕಾರ್ಮಿಕರಿಂದ ಮೂರುಪಟ್ಟು ಬಸ್ ಟಿಕೆಟ್ ದರ ವಸೂಲಿ ಮಾಡಲು ಮುಂದಾದರು. ನಾನು 1 ಕೋಟಿ ಚೆಕ್ ಕೊಡಲು ಮುಂದಾದಾಗ, ಜನ ಸರ್ಕಾರಕ್ಕೆ ಉಗಿಯಲು ಆರಂಭಿಸಿದಾಗ ಉಚಿತ ಪ್ರಯಾಣ ಆರಂಭಿಸಿದರು. ನಮ್ಮಲ್ಲಿ ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಿಮ್ಮ ಸಮಾಜದಲ್ಲಿ ಎಷ್ಟು ಜನ ಕೋವಿಡ್ ಸಮಯದಲ್ಲಿ ಸತ್ತಿದ್ದಾರೆ ಎಂದು ಮಾಹಿತಿ ಕೊಡಿ ಎಂದು ಅವರು ಆಗ್ರಹಿಸಿದ್ದಾರೆ.
ನೀವು ಈ ಸಮಯದಲ್ಲಿ ಮುಸಲ್ಮಾನರು ಬೇರೆ ಧರ್ಮದವರ ಶವಾಗಳಿಗೂ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಿ ನಿಮ್ಮ ಧರ್ಮದ ಹೃದಯವೈಶಾಲ್ಯತೆ ಮೆರೆದಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಹೇಳಿದ ಅವರು, ನಾವು ಕಾಂಗ್ರೆಸ್ ಪಕ್ಷ ಮುಚ್ಚಲಿಲ್ಲ. ಪಕ್ಷದಲ್ಲಿ ಅನೇಕ ಸಮಿತಿ ಮಾಡಿ, ಸಹಾಯ ಹಸ್ತ ಕಾರ್ಯಕ್ರಮ ಮಾಡಿದೆವು. ಕಾಂಗ್ರೆಸ್ ಪಕ್ಷದಿಂದಲೇ 1225 ಆಂಬ್ಯುಲೆನ್ಸ್ ಸೇವೆ, 3746 ಹೆಚ್ಚು ಆಕ್ಸಿಜನ್ ಕಾನ್ಸಟ್ರೇಟರ್, 26 ಲಕ್ಷ ದಿನಸಿಂಕಿಟ್, 93 ಲಕ್ಷ ಆಹಾರ ಕಿಟ್, 23 ಸಾವಿರ ಜನರಿಗೆ ಆಕ್ಸಿಜನ್, 10 ಸಾವಿರಕ್ಕೂ ಹೆಚ್ಚು ಮೃತರ ಅಂತ್ಯಸಂಸ್ಕಾರಕ್ಕೆ ನೆರವು ನೀಡಿದ್ದೇವೆ. ಇದೆಲ್ಲದಕ್ಕೂ ನಮ್ಮಲ್ಲಿ ದಾಖಲೆ ಇವೆ. ಕೆಲವರು ಪಕ್ಷ, ಅಧಿಕಾರ ಆಸೆ ಇಲ್ಲದೆ ಈ ಸೇವೆ ಮಾಡಿದ್ದೀರಿ. ಬೇರೆಯವರಿಗೆ ನೇರವಾಗಿ ಮಾನವೀಯ ಧರ್ಮ ಉಳಿಸಿದ್ದೀರಿ. ರಾಜ್ಯಾದ್ಯಂತ ನಿಮ್ಮಂತವರಿಗೆ ಗೌರವ ಸಲ್ಲಿಸಬೇಕು ಎಂದು ಅವರು ಶ್ಲಾಘಿಸಿದ್ದಾರೆ.
ಸರ್ಕಾರದಿಂದ ಯಾವುದೇ ನಿರೀಕ್ಷೆ ಮಾಡುವಂತಿಲ್ಲ. ಸತ್ತವರಿಗೆ ಪರಿಹಾರ ಇಲ್ಲ, ಬದುಕಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುತ್ತಿಲ್ಲ. ಹೆಚ್ಚಿನ ತೆರಿಗೆ ವಿಧಿಸುತ್ತಿದ್ದಾರೆ. ನಾನು ನಿಮ್ಮನ್ನು ಸೋದರರು ಎಂದಿದ್ದಕ್ಕೆ ನನ್ನನ್ನು ಲೇವಡಿ ಮಾಡುತ್ತಾರೆ. ಹೌದು ಮುಸಲ್ಮಾನರು ನಮ್ಮ ಸಹೋದರರು ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಿಗಳು ದೇಶ ವಿಭಜನೆಯಾದ ದಿನ ಆಚರಿಸಬೇಕು ಎಂದು ವಿಚಿತ್ರವಾಗಿ ಹೇಳುತ್ತಾರೆ. ನಂತರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಕ್ಕೆ ಶುಭಕೋರುತ್ತಾರೆ. ವಿಶ್ವದ ಅನೇಕ ನಾಯಕರು ಈ ದೇಶದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಪ್ರಶ್ನಿಸಿದ್ದಾರೆ. ಯಾರು ನಾಯಕರನ್ನು ಬೆಳೆಸುತ್ತಾರೋ ಅವರೇ ನಿಜವಾದ ನಾಯಕರು ಎಂದು ನಮಗೆ ರಾಜೀವ್ ಗಾಂಧಿ ಅವರು ಹೇಳಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ನಿಮ್ಮ ಜತೆ ಇದ್ದೇ ಇದೆ. ನಾನು ಕೂಡ ನಿಮ್ಮ ಪರವಾಗಿ ಇರುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.





