ಸಂಸತ್ತಿನಲ್ಲಿ ನಡೆದ ಗಲಾಟೆಯ ಕುರಿತು ಕೇಂದ್ರ ಮಂತ್ರಿಗಳಿಗೆ ಎಂಟು ಪ್ರಶ್ನೆಗಳನ್ನು ಕೇಳಿದ್ದ ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್ ಒ’ಬ್ರಾಯನ್, ಇಂದು ನೇರವಾಗಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಎರಡನೇ ವೀಡಿಯೋ ಬಿಡುಗಡೆ ಮಾಡಿರುವ ಡೆರಿಕ್ ಅವರು, ನೇರವಾಗಿ ಪ್ರಧಾನಿಯವರಿಗೇ ತಮ್ಮ ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜ್ಯಸಭೆಯಲ್ಲಿ ಒಬಿಸಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಗೈರಾಗಿದ್ದರು. ಇದನ್ನು ಪ್ರಶ್ನಿಸಿರುವ ಡೆರಿಕ್, ಇಬ್ಬರು ಮಾಜಿ ಪ್ರಧಾನಿಗಳು ಸಭೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ನೀವು ಎಲ್ಲಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಟ್ವಿಟರ್’ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ಡೆರಿಕ್, ಪಾರ್ಲಿಮೆಂಟ್’ನಲ್ಲಿ ನಡೆದ ಗಲಾಟೆಯ ಕುರಿತು ಕೇಂದ್ರ ಸಚಿವರಿಗೆ ಎಂಟು ಪ್ರಶ್ನೆಗಳನ್ನು ಕೇಳಿದ 24 ಗಂಟೆಗಳ ನಂತರವೂ ನನಗೆ ಯಾವುದೇ ಉತ್ತರ ದೊರಕಿಲ್ಲ. ನನಗೆ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ, ಅವರ ಬಳಿ ಉತ್ತರವಿಲ್ಲ ಎಂಬುದು ನನಗೆ ತಿಳಿದಿದೆ. ಅದರ ‘ಬಾಸ್’ ಬಳಿ ಪ್ರಶ್ನೆ ಕೇಳಲು ಪ್ರಯತ್ನಿಸೋಣ, ಎಂದಿದ್ದಾರೆ.
“ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ದೇವೇ ಗೌಡ ಅವರು ಮಸೂದೆಯನ್ನು ಮತಕ್ಕೆ ಹಾಕುವಾಗ ಸಭೆಯಲ್ಲಿ ಹಾಜರಿದ್ದರು. ಒಬಿಸಿ ಮಸೂದೆಯ ಕುರಿತಾಗಿ ಆರು ಸುತ್ತಿನ ಮತ ಪ್ರಕ್ರಿಯೆ ನಡೆಯಿತು. ಇದು ಅತ್ಯಂತ ಅಮೂಲ್ಯವಾದ ಸಂದರ್ಭವಾಗಿತ್ತು,” ಎಂದು ಡೆರೆಕ್ ಹೇಳಿದ್ದಾರೆ.
ಮಿಸ್ಟರ್ ಪ್ರೈಮ್ ಮಿನಿಸ್ಟರ್, ನೀವು ಏಕೆ ಸಂಸತ್ತಿಗೆ ಗೈರು ಹಾಜರಾಗಿದ್ರಿ? ನೀವು ಏಕೆ ಸಂಸತ್ತನ್ನು ನಿರ್ಲಕ್ಷಿಸುತ್ತಿದ್ದೀರಿ? ನೀವೆಲ್ಲಿದ್ದೀರಾ ಪ್ರಧಾನಿಯವರೇ? ನೀವು ಸಂಸತ್ತಿಗೆ ಅಪಮಾನ ಮಾಡುತ್ತಿದ್ದೀರಾ, ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ನೀವು ಜನರಿಗೆ ಉತ್ತರ ನೀಡಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಉತ್ತರ ನೀಡಬೇಕಾಗುತ್ತದೆ. ನೀವು ಸಂಸತ್ತಿಗೆ ಉತ್ತರ ನೀಡಬೇಕಾಗುತ್ತದೆ. ಉತ್ತರಿಸುವುದು ನಿಮ್ಮ ಕರ್ತವ್ಯ. ಎಂಟು ಸಚಿವರಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು,” ಎಂದು ಡೆರಿಕ್ ಹೇಳಿದ್ದಾರೆ.
ಈ ಬಾರಿಯ ಮಾನ್ಸೂನ್ ಅಧಿವೇಶನ ಬಹುತೇಕ ಪ್ರತಿಭಟನೆಗಳಿಂದಲೇ ಮುಗಿದು ಹೋಯಿತು. ಪೆಗಾಸಸ್, ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ತೈಲ ಬೆಲೆ ಏರಿಕೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ವಿಪಕ್ಷಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವು. ಇದರಿಂದಾಗಿ, ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿಯೇ ಅಧಿವೇಶನವನ್ನು ಮುಗಿಸಲಾಯಿತು.