ಅಸ್ಸಾಂ-ಮಿಝೋರಾಂ ಗಡಿ ವಿವಾದ ಸದ್ಯ ಬೇರೆಯದ್ದೇ ಮಜಲಿಗೆ ತಲುಪಿದೆ. ಗಡಿಯಲ್ಲಿ ಉಂಟಾದ ಸಂಘರ್ಷಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಮಿಝೋರಾಂ ಪೊಲೀಸರು ನೆರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳನ್ನೇ ಆರೋಪಿಗಳನ್ನಾಗಿಸಿದೆ.
ಮಂಗಳವಾರ ನಡೆದಿದ್ದ ಉಭಯ ರಾಜ್ಯಗಳ ಪೊಲೀಸರ ನಡುವಿನ ಗುಂಡಿನ ಕಾಳಗದಲ್ಲಿ ಅಸ್ಸಾಮಿನ ಐವರು ಪೊಲೀಸರು ಹಾಗೂ ಓರ್ವ ನಾಗರಿಕ ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದರು.
ತಾರಕಕ್ಕೇರಿದ ಅಸ್ಸಾಂ-ಮಿಜೋರಾಂ ಗಡಿ ವಿವಾದ; ಪರಸ್ಪರ ಗುಂಡು ಹಾರಿಸಿದ ಉಭಯ ರಾಜ್ಯ ಪೊಲೀಸರು
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ಉನ್ನತ ಅಧಿಕಾರಿಗಳ ವಿರುದ್ಧ ಮಿಝೋರಾಮ್ನ ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಿಝೋರಾಮ್ ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂ ಪೊಲೀಸರು ಮುಖ್ಯಮಂತ್ರಿ ಶರ್ಮಾ ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದ್ದು, ಮಿಝೋರಾಂ ಪೊಲೀಸರೊಂದಿಗೆ ಸೌಹಾರ್ದಯುತ ಸಂವಾದ ನಡೆಸಲು ಅಸ್ಸಾಂ ಸಿಎಂ ನಿರಾಕರಿಸಿದ್ದೇ ಕಾರಣ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿದೆ.
ವಿವಾದಿತ ಸ್ಥಳದಲ್ಲಿ ಅಸ್ಸಾಂ ಸಿಎಂ ನಿರ್ದೇಶನದ ಮೇರೆಗೆ ಪೊಲೀಸ್ ಶಿಭಿರ ನಿರ್ಮಿಸಲಾಗಿದೆ ಎಂದು ಮಿಝೋರಾಂ ಪೊಲೀಸರು ಆರೋಪಿಸಿದ್ದಾರೆ.
“ಅವರು ಶಿಬಿರ ನಿರ್ಮಾಣಕ್ಕಾಗಿ ಗುಡಾರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು, ಮಿಜೋರಾಂ ವ್ಯಾಪ್ತಿಯ ಭೂಪ್ರದೇಶವನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಎಂದು ಸ್ಪಷ್ಟವಾಗಿ ತೋರಿತ್ತು, ಏಕೆಂದರೆ ಅವರು ಸುಮಾರು 20 ಬೆಂಗಾವಲು ವಾಹನಗಳು ಮತ್ತು ಆಂಬುಲೆನ್ಸ್ ವಾಹನಗಳಲ್ಲಿ ಬಂದಿದ್ದರು ಎಂದು ಮಿಝೋರಾಂ ಪೊಲೀಸ್ ವರದಿ ಹೇಳಿದೆ.
ವೈರಿ ರಾಷ್ಟ್ರಗಳಂತೆ ಎರಡು ರಾಜ್ಯಗಳು ಕಿತ್ತಾಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಎರಡೂ ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟದ ಸದಸ್ಯ ಪಕ್ಷಗಳ ಸರ್ಕಾರಗಳೇ ಇರುವುದು ಕೂಡಾ ಕೇಂದ್ರ ನಾಯಕತ್ವಕ್ಕೆ ಇರುಸು-ಮುರಿಸು ತಂದಿದೆ.





