ಕೆಲವು ದಿನಗಳಿಂದ ತಣ್ಣಗಾಗಿದ್ದ ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ಕೂಗು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರದ್ವಯರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಯ ಭಾರೀ ಕೋಲಾಹಲದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವುದು ಮತ್ತು ಕೇಂದ್ರ ಸಂಪುಟ ವಿಸ್ತರಣೆಯ ಬಳಿಕ ವರಿಷ್ಠರೊಂದಿಗೆ ಹೊಸ ಸಚಿವರನ್ನೂ ಭೇಟಿ ಮಾಡುತ್ತಿರುವುದು ಸಹಜವಾಗೇ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯವಾಗಿ ನಾಯಕತ್ವ ಬದಲಾವಣೆಯ ಕೂಗಿನ ಮುಂಚೂಣಿಯಲ್ಲಿದ್ದ ನಾಯಕರು ಕೆಲವು ದಿನಗಳಿಂದ ಬಹುತೇಕ ಮೌನಕ್ಕೆ ಶರಣಾಗಿರುವುದು ಮತ್ತು ರಾಜ್ಯ ಸಂಪುಟ ಪುನರ್ ರಚನೆಯ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೂಡ ಸಿಎಂ ದೆಹಲಿ ಭೇಟಿಗೆ ಸಾಕಷ್ಟು ಮಹತ್ವ ಬಂದಿದೆ.
ಅಧಿಕೃತವಾಗಿ ಮೇಕೆದಾಟು ಯೋಜನೆ ವಿವಾದ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು, ಕೋವಿಡ್ ಲಸಿಕೆ ಕೊರತೆ ಮುಂತಾದ ವಿಷಯಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಪ್ರಧಾನಿ ಮೋದಿ ಮತ್ತು ಒಕ್ಕೂಟ ಸರ್ಕಾರದ ಪ್ರಮುಖರನ್ನು ಭೇಟಿ ಮಾಡಿ ಈ ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆ, ಯಡಿಯೂರಪ್ಪ ಶುಕ್ರವಾರ ಸಂಜೆಯೇ ಪ್ರಧಾನಿ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಾಜ್ಯದ ವಿವಿಧ ಯೋಜನೆಗಳ ಕುರಿತು ಪ್ರಧಾನಿಗಳೊಂದಿಗೆ ಚರ್ಚಿಸಿರುವುದಾಗಿ ಮಾತುಕತೆ ಬಳಿಕ ಮಾಧ್ಯಮಗಳಿಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಮಾರನೇ ದಿನ; ಶನಿವಾರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿಯೂ ಅವರು ಈ ವೇಳೆ ಮಾಹಿತಿ ನೀಡಿದ್ದಾರೆ. ಆ ಮೂಲಕ ತಮ್ಮ ದೆಹಲಿ ಭೇಟಿ ಕೇವಲ ಸರ್ಕಾರಿ ಅಧಿಕೃತ ಸಂಗತಿಗಳ ಕುರಿತದ್ದು ಮಾತ್ರವಲ್ಲ; ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸೇರಿದಂತೆ ಪಕ್ಷದ ಮಹತ್ವದ ವಿಷಯಗಳ ಕುರಿತ ಚರ್ಚೆಯ ಉದ್ದೇಶವನ್ನೂ ಹೊಂದಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.
ಆದರೆ, ಅತ್ತ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರರಾದ ಸಂಸದ ಬಿ ವೈ ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೊಂದಿಗೆ ದೆಹಲಿಯಾತ್ರೆ ಆರಂಭಿಸಿರುವ ಹೊತ್ತಿಗೇ ಇತ್ತ ರಾಜ್ಯ ಬಿಜೆಪಿಯಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೆದಿದ್ದು, ಆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.
ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಆರ್ ಅಶೋಕ್ ಅವರ ವಿಧಾನಸೌಧದ ಕಚೇರಿಯಲ್ಲಿ, ಸಿಎಂ ಪರಮಾಪ್ತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಿಎಂ ವಿರೋಧಿ ಬಣದ ಪ್ರಮುಖ ಮತ್ತು ಪರ್ಯಾಯ ನಾಯಕರ ಸಾಲಿನಲ್ಲಿ ಮೊದಲಿಗರಾಗಿ ಹೆಸರು ಕೇಳಿಬಂದಿದ್ದ ಶಾಸಕ ಅರವಿಂದ್ ಬೆಲ್ಲದ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ನಾಯಕತ್ವ ಬದಲಾವಣೆಯ ಬೇಡಿಕೆ ಇಟ್ಟುಕೊಂಡು, ಯಡಿಯೂರಪ್ಪ ವಿರುದ್ಧ ದಾಖಲೆಗಳ ಕಟ್ಟು ಹಿಡಿದುಕೊಂಡು ದೆಹಲಿ ವರಿಷ್ಠರಿಗೆ ಮೇಲಿಂದ ಮೇಲೆ ದೂರು ನೀಡುವ ಮೂಲಕವೇ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದಿಢೀರನೇ ಮುಂಚೂಣಿಗೆ ಬಂದಿರುವ ಅರವಿಂದ್ ಬೆಲ್ಲದ್ ಅವರನ್ನು ಯಡಿಯೂರಪ್ಪ ಪರಮಾಪ್ತರು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಸಹಜವಾಗೇ ಹಲವು ಲೆಕ್ಕಾಚಾರಗಳಿಗೆ, ವದಂತಿಗಳಿಗೆ ಇಂಬು ನೀಡಿದೆ..
ಈ ನಡುವೆ, ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ದಿಢೀರನೇ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ನೂತನ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರನ್ನು ಔಪಚಾರಿಕವಾಗಿ ಭೇಟಿ ಮಾಡಿ ಶುಭ ಕೋರಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಸಿಎಂ ದೆಹಲಿ ಭೇಟಿಯ ವೇಳೆಯೇ ಈ ಭೇಟಿ ಏಕಾಯಿತು ಎಂಬುದು ಚರ್ಚೆಯಾಗುತ್ತಿರುವ ಸಂಗತಿ.
ಅದರಲ್ಲೂ ಯಡಿಯೂರಪ್ಪ ಅವರ ದೆಹಲಿ ಭೇಟಿ ಅಧಿಕೃತ ಎಂದು ಹೇಳುತ್ತಿದ್ದರೂ ಅವರೊಂದಿಗೆ ರಾಜ್ಯದ ಯಾವುದೇ ಪ್ರಮುಖ ಸಚಿವರಾಗಲೀ, ಅವರ ಆಪ್ತ ಶಾಸಕರಾಗಲೀ ದೆಹಲಿಗೆ ಹೋಗಿಲ್ಲ. ಬದಲಾಗಿ, ಇಬ್ಬರು ಪುತ್ರರು ಮತ್ತು ಮೊಮ್ಮಗನೊಂದಿಗೆ ಸಿಎಂ ದೆಹಲಿಗೆ ಹೋಗಿ ಪಕ್ಷದ ವರಿಷ್ಠರು ಮತ್ತು ಒಕ್ಕೂಟ ಸರ್ಕಾರದ ಪ್ರಮುಖರನ್ನು ಭೇಟಿ ಮಾಡುತ್ತಿದ್ದಾರೆ. ಅದೇ ಹೊತ್ತಿಗೆ ರಾಜ್ಯದಲ್ಲಿ ಅವರ ಆಪ್ತರು, ನಾಯಕತ್ವ ಬದಲಾವಣೆ ಅಭಿಯಾನದ ರೂವಾರಿಗಳೊಂದಿಗೆ ರಹಸ್ಯ ಮಾತುಕತೆಗೆ ಚಾಲನೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ, ಬಿಜೆಪಿಯಲ್ಲಿ ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ ನಾಯಕತ್ವ ಬದಲಾವಣೆಯ ವಿಷಯ ಇದೀಗ ದಿಢೀರನೇ ಮತ್ತೆ ಚರ್ಚೆಗೆ ಬಂದಿದೆ.