ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮೇ 2 ರಂದು ಆಕ್ಸಿಜನ್ ಕೊರತೆಯಿಂದ 24 ಕೋವಿಡ್ ಸೋಂಕಿತರು ಮೃತಪಟ್ಟ ಸುದ್ದಿ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಹೈ ಕೋರ್ಟ್ ನೇಮಿಸಿದ್ದ ಕಾನೂನುಪ್ರಾಧಿಕಾರ ಸಮಿತಿಯು ತನಿಖೆ ನಡೆಸಿ ದುರಂತದಲ್ಲಿ ಮೃತಪಟ್ಟಿದ್ದು 36 ಜನ ರೋಗಿಗಳು, ಮತ್ತು ಈ ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಹಾಗೂ
ಆಸ್ಪತ್ರೆಯ ಅಧಿಕಾರಿಗಳು ಎಂದು ಬೊಟ್ಟು ಮಾಡಿತ್ತು. ಆದರೆ ಅದಕ್ಕೂ ಮೊದಲೇ ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಈ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿಯವರು ಆಕ್ಸಿಜನ್ ಸರಬರಾಜು ಮಾಡಬೇಕಾದರೆ ತಮ್ಮ ಗಮನಕ್ಕೆತಂದು ಮಾತ್ರ ಸರಬರಾಜು ಮಾಡಬೇಕೆಂದು ಮೌಕಿಕ ಸೂಚನೆ ನೀಡಿದ್ದರಿಂದಲೇ ಆಕ್ಸಿಜನ್
ಸರಬರಾಜು ಆಗಿಲ್ಲ ಎಂದು ಆರೋಪಿಸಿದ್ದರು.
ಇದನ್ನೇ ಜಿಲ್ಲಾಧಿಕಾರಿ ಡಾ ಎಂ ಆರ್ ರವಿಅವರೂ ಆರೋಪ ಮಾಡಿ ಹೇಳಿದ್ದರು. ಆದರೆ ತನಿಖೆ ನಡೆಸಿದ್ದ ಸಮಿತಿಯು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪಾತ್ರ ಇದರಲ್ಲಿ ಏನಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದು ಇವರು ಸರಬರಾಜು ತಡೆದಿದ್ದಕ್ಕೆ ಸಾಕ್ಷ್ಯವೇ ಇಲ್ಲ ಎಂದು ಹೇಳಿತ್ತು.ಆಗೆಲ್ಲ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬೆನ್ನಿಗೆ ನಿಂತಿದ್ದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜೂನ್ 6 ರ ಭಾನುವಾರ ಯೂ ಟರ್ನ್ ಹೊಡೆದಿದ್ದಾರೆ. ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಮೌಕಿಕ ಸೂಚನೆ ಇದ್ದಿದ್ದರಿಂದಲೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಸರಬರಾಜು ಆಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ನಾನು ಆವತ್ತೆ ಬಾಯಿ ಬಿಟ್ಟಿದ್ದರೆ ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ನಡುವೆಜಗಳ ಆಗುತಿತ್ತು ಎಂದು ಹೇಳಿದ್ದಾರೆ. ಇವರ ಲೈವ್ ಬೆನ್ನಲ್ಲೇ ಬಿಜೆಪಿ ಮುಖಂಡ
ಅಮ್ಮಿನಪುರ ಮಲ್ಲೇಶ್ ಸುದ್ದಿ ಗೋಷ್ಠಿಯಲ್ಲಿ ಎರಡು ಆಡಿಯೋ ಕ್ಲಿಪ್ಪಿಂಗ್ ನ್ನು
ಬಿಡುಗಡೆ ಮಾಡಿದರು.

ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ
ಮೈಸೂರಿನ ಅಧಿಕಾರಿಗಳು, ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವ ಅಲ್ಲಿನ ಎರಡು ಸಂಸ್ಥೆಗಳ ಸಿಬ್ಬಂದಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗಳು ಭಾನುವಾರ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗಿವೆ. ಚಾಮರಾಜನಗರಕ್ಕೆ ಆಮ್ಲಜನಕ ಸಿಲಿಂಡರ್ ನೀಡಬೇಕಾದರೆ, ಮೈಸೂರು ಜಿಲ್ಲಾಧಿಕಾರಿ ಅವರ ಅನುಮತಿ ಬೇಕು ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಿರುವುದು ಧ್ವನಿಮುದ್ರಿಕೆಯಲ್ಲಿವೆ. ಎಂಪಿ3 ಮಾದರಿಯಲ್ಲಿರುವ ಐದು ಧ್ವನಿಮುದ್ರಿಕೆಗಳು ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿದ್ದು, ಪ್ರತಿ ಧ್ವನಿಮುದ್ರಿಕೆಯ ಕುರಿತ ಒಕ್ಕಣೆಯೂ ವೈರಲ್ ಆಗಿದೆ. ಕರೆ ಮಾಡಿದ ದಿನ, ಸಮಯ, ಯಾರ ನಡುವಿನ ಸಂಭಾಷಣೆ, ಯಾರು ಏನು ಹೇಳುತ್ತಾರೆ ಎಂಬ ವಿವರಗಳು ಅದರಲ್ಲಿವೆ. ಅದರ ಪ್ರಕಾರ,ಎಲ್ಲ ಸಂಭಾಷಣೆಗಳು ಆಮ್ಲಜನಕ ದುರಂತ ಸಂಭವಿಸುವುದಕ್ಕೂ ಮೊದಲೇ ನಡೆದಿವೆ. ಮೂರು
ಧ್ವನಿಮುದ್ರಿಕೆಗಳ ಸಂಭಾಷಣೆ ಮೇ 1ರಂದು ಹಾಗೂ ಒಂದು ಮೇ 2ರ ರಾತ್ರಿ 8.35ಕ್ಕೆ ಹಾಗೂ
ಇನ್ನೊಂದು ಏಪ್ರಿಲ್ 29ರಂದು ನಡೆದ ಸಂಭಾಷಣೆ ಎಂದು ಹೇಳಲಾಗಿದೆ. ಏಪ್ರಿಲ್ 29ರಂದು ನಡೆದ ಸಂಭಾಷಣೆಯು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಅಲ್ಲಿನ ಉಪ ಔಷಧ ನಿಯಂತ್ರಕ ಅರುಣ್ ಕುಮಾರ್ ಎಂಬುವವರ ನಡುವೆ ನಡೆದಿದೆ
ಎನ್ನಲಾಗಿದೆ.
ಅರುಣ್, ಡಿಸಿ ಮಾತಾಡುತ್ತಾ ನಿನ್ನನ್ನು ವಜಾ ಮಾಡಲು ಶಿಫಾರಸು ಮಾಡಲಾ?
ಏನು ಮಾಡಲಿ ಹೇಳು? ಆಮ್ಲಜನಕ ಮತ್ತೆ ಚಾಮರಾಜನಗರಕ್ಕೆ ಯಾಕೆ ಹೋಗುತ್ತಿದೆ? ನಾಳೆ
ಮೈಸೂರಿಗೆ ರಿಫಿಲ್ಗೆ ಇಲ್ಲ ಎಂದು ಸದರ್ನ್ ಗ್ಯಾಸ್ ಏಜೆನ್ಸಿಯವನು ಹೇಳುತ್ತಿದ್ದಾನೆ.
ನನಗೆ ಇವತ್ತು ರಾತ್ರಿ 10 ಸಾವಿರ ಲೀಟರ್ನ ಘಟಕ ಭರ್ತಿಯಾಗಬೇಕು. ಏನಕ್ಕೆ ಅಷ್ಟಷ್ಟು
ಹೋಗ್ತಾ ಇದೆ’ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸುವುದು ಆಡಿಯೊದಲ್ಲಿದೆ. ಇದಕ್ಕೆ
ಪ್ರತಿಕ್ರಿಯಿಸುವ ಅಧಿಕಾರಿ, ‘ಚಾಮರಾಜನಗರದಲ್ಲಿ ಕೋವಿಡ್ ರೋಗಿಗಳಿಗೆ ಮಾತ್ರ ಅಲ್ಲ,
ಆಸ್ಪತ್ರೆಗೆ ಆಮ್ಲಜನಕ ಇಲ್ಲ ಅದಕ್ಕೆ ಹೋಗುತ್ತಿದೆ’ ಎಂದು ಹೇಳುತ್ತಾರೆ. ‘ಮುಂದಿನ
ಎರಡು ದಿನಗಳ ಅವಧಿಗೆ 34 ಆಸ್ಪತ್ರೆಗಳಿಗೆ ಎಷ್ಟೆಷ್ಟು ಆಮ್ಲಜನಕ ಬೇಕು ಎಂಬ ಮಾಹಿತಿ
ಸಂಗ್ರಹಿಸಿ, ಕಚೇರಿಗೆ 11 ಗಂಟೆಗೆ ಬಾ’ ಎಂದು ಜಿಲ್ಲಾಧಿಕಾರಿ ಅವರು ಹೇಳುವುದು
ಧ್ವನಿಮುದ್ರಿಕೆಯಲ್ಲಿ ಕೇಳಿಸುತ್ತಿದೆ.
ಆಮ್ಲಜನಕ ನೀಡಬೇಕು ಎಂದರೆ ಜಿಲ್ಲಾಧಿಕಾರಿ ಅವರ ಅನುಮತಿ ಬೇಕು. ಅವರಿಂದ ಕರೆ
ಮಾಡಿಸಿ, ಇಲ್ಲವೇ ಅನುಮತಿ ಪತ್ರ ತನ್ನಿ. ಆ ಯಮ್ಮನಿಂದ ಬೈಗಳು ತಿನ್ನುವುದಕ್ಕೆ
ಆಗುವುದಿಲ್ಲ’ ಎಂದು ಆಮ್ಲಜನಕ ಪೂರೈಸುವ ಸಂಸ್ಥೆಯೊಂದರ ಸಿಬ್ಬಂದಿ ಹೇಳುವುದು
ಧ್ವನಿಮುದ್ರಿಕೆಯಲ್ಲಿದೆ. ಅಧಿಕಾರಿಯೊಬ್ಬರು ಡಿಸಿ ಪಿಏ ಬಳಿಯಿಂದ ಫೋನ್
ಮಾಡಿಸಲಾ ಎಂದು ಕೇಳಿದ್ದು ಅದಕ್ಕೆ ಅಕ್ಸಿಜನ್ ಸರಬರಾಜು ಮಾಡುವವ ಆಗುವುದಿಲ್ಲ
ಎಂದದ್ದು ಕೇಳಿಸುತ್ತಿದೆ. ಒಂದು ಧ್ವನಿಮುದ್ರಿಕೆಯಲ್ಲಿ ಉಪ ಔಷಧ ನಿಯಂತ್ರಕ
ಅಧಿಕಾರಿ, ಗ್ಯಾಸ್ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ‘ಚಾಮರಾಜನಗರದಲ್ಲಿ ತುರ್ತು
ಪರಿಸ್ಥಿತಿ ಇದೆ. ಬೆಳಿಗ್ಗೆ 6 ಗಂಟೆಯ ಹೊತ್ತಿಗೆ 50 ಸಿಲಿಂಡರ್ ತುರ್ತಾಗಿ ಬೇಕು.
ಇಲ್ಲದಿದ್ದರೆ 20 ಜನ ಸಾಯುತ್ತಾರೆ. ಅಲ್ಲಿ ಜಿಲ್ಲಾ ಸರ್ಜನ್ ಅಳುತ್ತಿದ್ದಾರೆ.

ಕಾಲಿಗೆ ಬೀಳ್ತೀನಿ. ನೀವು ಯಾಕೆ ಈ ರೀತಿ ಮಾಡ್ತೀರಿ. ಯಾಕೆ ಆಟ ಆಡ್ತಾ ಇದ್ದಾರೆ.
ಸಿಲಿಂಡರ್ ಕೊಡ್ರಿ’ ಎಂದು ಅಳುತ್ತಾ ಹೇಳುತ್ತಿರುವುದು ಕೇಳಿಸುತ್ತಿದೆ. ‘ಸಿಲಿಂಡರ್
ಕೊಡುವುದಕ್ಕೆ ಡಿಸಿ ಅನುಮತಿ ಬೇಕು’ ಎಂದು ಸಿಬ್ಬಂದಿ ಹೇಳುವುದೂ ಧ್ವನಿ
ಮುದ್ರಿಕೆಯಲ್ಲಿದೆ. ಮೇ 1ರಂದು ಮುಂಜಾನೆ 4.15ಕ್ಕೆ ಈ ಸಂಭಾಷಣೆ ನಡೆದಿದೆ. ‘ಈಗ 4.15
ಆಯ್ತು. 6 ಗಂಟೆಗೆ ಅಲ್ಲಿಗೆ ತಲುಪಬೇಕು’ ಎಂದು ಅಧಿಕಾರಿ ಹೇಳುವುದು 11.17 ನಿಮಿಷಗಳ
ಧ್ವನಿಮುದ್ರಿಕೆಯಲ್ಲಿ ಕೇಳಿಸುತ್ತದೆ. ಪ್ರತಾಪ್ ಸಿಂಹ ಅವರ ಲೈವ್ ನಂತರ , ಆಡಿಯೋ
ಬಿಡುಗಡೆ ಆಗಿರುವುದು , ಅದೂ ಆಮ್ಲಜನಕ ದುರಂತ ನಡೆದ ಒಂದು ತಿಂಗಳ ಬಳಿಕ, ಅಲ್ಲದೆ
ರೋಹಿಣಿ ಸಿಂಧೂರಿ ಅವರು ವರ್ಗಾವಣೆ ಆದ ಮರು ದಿನವೇ ಬಿಡುಗಡೆಯಾಗಿರುವುದು
ಕಾಕತಾಳೀಯವೇನಲ್ಲ, ಇದರ ಬೆನ್ನಲ್ಲೇ ಕೆ ಆರ್ ನಗರದ ಶಾಸಕ ಸಾರಾ ಮಹೇಶ್ ಅವರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ರೊಬ್ಬರು ಸುದ್ದಿಗೋಷ್ಟಿಯಲ್ಲಿ ದಾಖಲೆ ಸಹಿತ
ಆರೋಪಿಸಿದ್ದಾರೆ. ಡಿಸಿ ಸಿಂಧೂರಿ ವಿರುದ್ದ ತಿಂಗಳ ಮೊದಲೇ ಸ್ವಿಮ್ಮಿಂಗ್ ಫುಲ್
ನಿರ್ಮಾಣ ವಿಷಯದಲ್ಲಿ ಆರೋಪಿಸಿದ್ದ ಮಹೇಶ್ ಅವರು ಈ ಕುರಿತು ರಾಜ್ಯ ಸರ್ಕಾರಕ್ಕೆ
ದೂರನ್ನೂ ನೀಡಿದ್ದರು. ಸರ್ಕಾರ ತನಿಖೆಗೂ ಆದೇಶಿಸಿತ್ತು. ಅದಕ್ಕೆ ಸೂಕ್ತ ಉತ್ತರವನ್ನೂ
ಡಿಸಿ ನೀಡಿದ್ದರು.ಆದರೆ ಆಕ್ಸಿಜನ್ ದುರಂತಕ್ಕೆ ಸಂಬಂದಪಟ್ಟಂತೆ ಸ್ವತಃ ಕೋರ್ಟ್ ನೇಮಿಸಿದ್ದ ಸಮಿತಿಯುಆಕ್ಸಿಜನ್ ಸರಬರಾಜುದಾರರ ಕುರಿತು ತನಿಖೆಯನ್ನೇ ಮಾಡದೆ ವರದಿ
ಸಲ್ಲಿಸಿತೆ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ಕೋರ್ಟ್ ಆದೇಶಿಸಿರುವ ನ್ಯಾಯಾಂಗ
ತನಿಖೆಯಲ್ಲಾದರೂ ಸತ್ಯ ಹೊರಬರಲಿದೆಯೇ ಎಂದು ಕಾದು ನೋಡಬೇಕಿದೆ.