ನಮ್ಮ ದಿನಬಳಕೆಯ ವಸ್ತುಗಳಲ್ಲಿ ಬಿದಿರು ನಿಧಾನಕ್ಕೆ ಕಣ್ಮರೆ ಆಗುತ್ತಿದೆ. ಆ ಸ್ಥಾನವನ್ನು ಪ್ಲಾಸ್ಟಿಕ್ ಮತ್ತು ಅಲ್ಯಮೀನಿಯಂ ಏಣಿಗಳು ಆಕ್ರಮಿಸಿಕೊಳ್ಳುತ್ತಿವೆ. ಇಂದು ಬಹಳ ಹಿಂದಿನಿಂದಲೂ ನಾವು ಮನೆಯಲ್ಲಿ ಬಳಸುತಿದ್ದ ಬಿದಿರಿನ ಮೊರ ಬಹುತೇಕ ಕಣ್ಮರೆ ಆಗಿದೆ. ಬಿದಿರಿನ ಏಣಿ ಬದಲಿಗೆ ಅಲ್ಯಮೀನಿಯಂ ಏಣಿ ಬಂದಿದೆ. ಹಾಗಂತ ಬಿದಿರಿನ ವಸ್ತುಗಳ ತಯಾರಕರಿಗೇನೂ ನಷ್ಟವಾಗಿಲ್ಲ, ಬಿದಿರಿನ ವಸ್ತುಗಳನ್ನು ಈಗಲೂ ನಮ್ಮ ಮಧ್ಯಮ ವರ್ಷದವರು ಬಳಸುತಿದ್ದಾರೆ. ಆದರೆ ಲಾಕ್ ಡೌನ್ ಘೋಷಿಸಿದ್ದೇ ತಡ ಬಿದಿರು ಸಾಮಗ್ರಿ ಮಾರಾಟಗಾರರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾಗಿದೆ.
ಈ ಮಾರಾಟಗಾರರು ಸಾಮಾನ್ಯವಾಗಿ ಆದಿವಾಸಿ ಸಮುದಾಯದ ಕಾಡಿನ ಮಕ್ಕಳೇ ಆಗಿದ್ದಾರೆ. ಇವರಿಗೆ ಬೇಕಾದ ಕಚ್ಚಾ ವಸ್ತು ಬಿದಿರು ಸಿಗುವುದೇ ಕಾಡಿನಲ್ಲಿ. ಅದನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಡಿನಿಂದ ಕಡಿದು ತಂದು ಕೂತು ವಿವಿಧ ಸಾಮಗ್ರಿಗಳನ್ನು ಮಾಡಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಿ ಉದರ ಪೋಷಣೆ ಮಾಡೋದು ಹಗ್ಗದ ಮೇಲಿನ ನಡಿಗೆಯಂತೆ. ನಿತ್ಯವೂ ನಿಗದಿತ ಆದಾಯ ಬಾರದಿದ್ದರೂ ತಿಂಗಳ ಸರಾಸರಿ ಲೆಕ್ಕದಲ್ಲಿ ಉದರ ಪೋಷಣೆಗೆ ಸಮಸ್ಯೆ ಬಾರದು.
ಮೈಸೂರಿನ ಬೊಂಬು ಬಜಾರ್ ಸರ್ಕಲ್ ನಲ್ಲಿ ಬಿದಿರಿನ ಸಾಮಗ್ರಿಗಳನ್ನು ಮಾರಾಟ ಮಾಡುವ ಪಾಪಣ್ಣ ಅವರನ್ನು ಮಾತಾಡಿಸಿದಾಗ ಅವರಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ಬಿದಿರಿನ ಸಾಮಗ್ರಿ ಮಾರಾಟ ಮಾಡುವ ಕುರಿತು ಆಸಕ್ತಿ ಉಳಿದಿರಲಿಲ್ಲ. ಈಗ ಕಾಡಿನಲ್ಲಿ ಬಿದಿರು ಸಿಗೋದೇ ಕಷ್ಟ ಆಗಿದೆ ಜತೆಗೇ ಬೇಡಿಕೆಯೂ ಮೊದಲಿನಂತಿಲ್ಲ. ಈಗ ಲಾಕ್ ಡೌನ್ ನಿಂದ ವಾಹನಗಳ ಓಡಾಟ ಇಲ್ಲದೆ ಇರೋದರಿಂದ ಮಾರಾಟವೇ ಇಲ್ಲ ಎಂದರು. ಮೇಧ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರ ತಂದೆ ಮತ್ತು ಅಜ್ಜ ಇದೇ ಉದ್ಯೋಗವನ್ನೇ ಮಾಡಿದರು. ಆಧರೆ ನನ್ನ ಮಕ್ಕಳು ಈ ಉದ್ಯೋಗ ಮಾಡುವುದಿಲ್ಲ ಇದು ನನಗೆ ಕೊನೆಯಾಗುತ್ತದೆ ಎಂದು ವಿಷಾದದ ನಗು ಬೀರುತ್ತಾರೆ. ಈಗ ಮೊದಲಿನಂತೆ ಇಲ್ಲ ಸ್ವಾಮಿ. ಅರಣ್ಯ ಇಲಾಖೆಯವರು ಬಿದಿರು ಕಡಿಯುವುದನ್ನು ನಿಷೇದಿಸಿದ್ದಾರೆ. ಬಿದಿರನ್ನು ಖಾಸಗೀ ರೈತರಿಂದ ಖರೀದಿಸಿ ತರಬೇಕು. ಆ ರೀತಿ ಖರೀದಿಸಲೂ ಕೂಡ ಬೇಕಾದಷ್ಟು ಬಿದಿರು ಸಿಗೋದಿಲ್ಲ , ಇದರಲ್ಲಿನ ಲಾಭವೂ ಅಷ್ಟಕ್ಕಷ್ಟೆ ಎಂದರು.
ಮೈಸೂರಿನ ನಂಜು ಮಳಿಗೆ ಸಮೀಪ ಇದೇ ವ್ಯಾಪಾರ ಮಾಡುತಿದ್ದ ಗೋಪಮ್ಮ ಅವರದ್ದೂ ಇದಕ್ಕಿಂತ ಭಿನ್ನವಾದ ಕಥೆಯೇನಲ್ಲ. ಈಗ ದಿನಕ್ಕೆ ಒಪ್ಪತ್ತು ಊಟ ಮಾಡೋದು ಕಷ್ಟ ಆಗಿದೆ. ಸರ್ಕಾರದವರು ಸೋಮವಾರ ಮತ್ತು ಗುರುವಾರ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದ್ದಾರೆ ಹೀಗಾಗಿ ಮಾರಾಟ ಏನೂ ಇಲ್ಲ ಎಂದು ಅಲವತ್ತುಕೊಂಡರು. ನಗರದಲ್ಲಿ ನಿರ್ಮಾಣ ಚಟುವಟಿಕೆಗಳು ಕುಂಟಿತಗೊಂಡಿವೆ . ನಿರ್ಮಾಣ ಚಟುವಟಿಕೆಗಳು ಇದ್ದರೆ ಒಂದಷ್ಟು ಏಣಿಗಳು ಮಾರಾಟವಾಗುತ್ತವೆ ಈಗ ಅದೂ ಇಲ್ಲ ಎಂದು ಹೇಳುತ್ತಾರೆ . ಇಲ್ಲಿನ ನಂಜು ಮಳಿಗೆ ಅಗ್ರಹಾರದ ಬಳಿ ಮೇದರ ಬೀದಿಯೇ ಇದೆ. ಇಲ್ಲಿ ಸುಮಾರು 150-200 ಕುಟುಂಬಗಳು ಬಿದಿರಿನ ಸಾಮಗ್ರಿಗಳನ್ನೇ ಮಾರಾಟ ಮಾಡುವ ಕಸುಬನ್ನೆ ಹೊಂದಿದ್ದವು. ಅದರೆ ಕಾಲ ಕಳೆದಂತೆ ಅನೇಕರು ಇದರಿಂದ ವಿಮುಖರಾಗಿ ಬೇರೆ ಉದ್ಯೋಗ ಹುಡುಕಿಕೊಂಡಿದ್ದಾರೆ. ಇವರಿಗೆ ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿ ಈ ಹಿಂದೆ ಬಿದಿರನ್ನು ನೀಡಲಾಗುತಿತ್ತು. ಆದರೆ ಅರಣ್ಯ ಇಲಾಖೆ ಬಿದಿರು ಕಡಿಯುವುದನ್ನು ನಿಷೇಧಿಸಿದ್ದು ಖಾಸಗಿ ಜಮೀನಿನಲ್ಲಿ ಬಿದಿರು ಸಿಗುತ್ತಿಲ್ಲ. ಹೀಗಾಗಿ ಇವರದ್ದು ತ್ರಿಶಂಕು ಸ್ಥಿತಿ ಆಗಿದೆ.
ಈ ಕುರಿತು ಮಾತನಾಡಿದ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್ಟಿಆರ್ಐ ) ಮಾಜಿ ಜಂಟಿ ನಿರ್ದೇಶಕ ಪ್ರತಿಭಾ ಅವರು ನವೀನ ತಂತ್ರಜ್ಞಾನದಿಂದ ಇವರನ್ನು ಸಜ್ಜುಗೊಳಿಸಲು ಸಂಸ್ಥೆ ವರ್ಷಕ್ಕೆ ಎರಡು ಬಾರಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ನಾವು ಕಲೆ ಅಳಿದು ಹೋಗದಂತೆ ಉಳಿಸಿಕೊಳ್ಳಲು ನಾವು ಎಲ್ಲವನ್ನು ಮಾಡುತ್ತಿದ್ದೇವೆ. ಇತ್ತೀಚಿನ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು ನಾವು ವರ್ಷಕ್ಕೆ ಎರಡು ಬಾರಿ ತರಬೇತಿಯನ್ನು ಆಯೋಜಿಸುತ್ತೇವೆ, ಆದರೆ ಈ ಕಲೆಯಲ್ಲಿ ತೊಡಗಿರುವ ಜನರು ಹಿರಿಯರಾದ್ದರಿಂದ ಬದಲಾವಣೆಗೆ ಒಗ್ಗಿಕೊಂಡಿಲ್ಲ ಎಂದು ಅವರು ಹೇಳುತ್ತಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ನಂತರ, ಕೆಎಸ್ಟಿಆರ್ಐ ತಮ್ಮ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಮಾಡಿ ಹಣಗಳಿಸಲು ಮೇಧಾ ಬುಡಕಟ್ಟು ಜನಾಂಗಕ್ಕೆ ಇತ್ತೀಚಿನ ಯಂತ್ರಗಳನ್ನು ಒದಗಿಸಲು ಯೋಜಿಸಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅವರಿಗೆ ಏನನ್ನೂ ಒದಗಿಸಲಾಗಿಲ್ಲ ಎಂದು ಹೇಳುತ್ತಾರೆ.
ಈವರೆಗೆ ಈ ಬುಡಕಟ್ಟು ಸಮುದಾಯಗಳಿಗೆ ಸರ್ಕಾರ ಯಾವುದೇ ರೀತಿಯ ಪರಿಹಾರವನ್ನು ನೀಡಿಲ್ಲ ಎಂದು ಕೆಎಸ್ಟಿಆರ್ಐ ನ ಪ್ರಸ್ತುತ ಜಂಟಿ ನಿರ್ದೇಶಕ ರಾಜೇಶ್ ಗೌಡ ಹೇಳುತ್ತಾರೆ. ಮುಖ್ಯವಾಗಿ ಬುಟ್ಟಿ ನೇಯ್ಗೆಯಲ್ಲಿ ತೊಡಗಿರುವ ಮೇಧಾ ಬುಡಕಟ್ಟು ಜನಾಂಗವು ಸಾಂಕ್ರಾಮಿಕ ರೋಗದಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಅವರ ಜೀವನೋಪಾಯಕ್ಕೆ ತೊಂದರೆ ಆಗಿದೆ ಮತ್ತು ಸರ್ಕಾರದಿಂದ ಪರಿಹಾರ ನೀಡುವ ಪ್ರಸ್ತಾವನೆಯಲ್ಲಿ ಅವರನ್ನು ಸೇರಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ರಾಜೇಶ್ ಗೌಡ ಹೇಳುತ್ತಾರೆ.
ಸರ್ಕಾರ ಇಂತಹ ಅಪರೂಪದ ಕಲೆಗಾರರ ನೆರವಿಗೆ ಧಾವಿಸಬೇಕಿದೆ.