ಹೈನುಗಾರಿಕೆ ಇಂದಿಗೂ ನಮ್ಮ ದೇಶದಲ್ಲಿ ಗ್ರಾಮೀಣ ಭಾಗದ ಜನತೆಯ ಜೀವನಾಡಿ ಆಗಿದೆ. ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿವೆ. ಆದರೆ ರೈತರು ನೀಡುವ ಗುಣಮಟ್ಟದ ಹಾಲಿಗೇ ಕಲಬೆರಕೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತಿದ್ದ ಖದೀಮರ ಗ್ಯಾಂಗ್ ಕಳೆದ ಮೇ 30 ರಂದು ಸಿಕ್ಕುಬಿದ್ದಿದೆ. ಕೆಂಎಫ್ನ ಅಧೀನದಲ್ಲಿಯೇ ಈ ಖದೀಮ ಗ್ಯಾಂಗ್ ಮಾಡುತಿದ್ದ ಖತರ್ನಾಕ್ ಕೆಲಸಕ್ಕೆ ಮಂಡ್ಯವೇ ಬೆಚ್ಚಿ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಮಂಡ್ಯದ ನಂದಿನಿ ಹಾಲು ಬಳಕೆದಾರರಿಗೆ ಹಾಲು ನೀರಾಗಿರುವಂತೆ ಅನಿಸುತಿತ್ತು. ನೂರಾರು ಗ್ರಾಹಕರು ನಂದಿನಿ ಖರೀದಿಸುವುದನ್ನೇ ಬಿಟ್ಟು ಬೇರೆ ಖಾಸಗೀ ಕಂಪೆನಿಗಳ ಹಾಲಿಗೆ ಮೊರೆ ಹೋಗಿದ್ದರು. ಹಾಲು ಒಕ್ಕೂಟದ ಆಡಳಿತ ಮಂಡಳಿಗೂ ಈ ದೂರು ಬಂದಿತ್ತು. ಆದರೆ ನೀರು ಎಲ್ಲಿ ಮಿಶ್ರ ಆಗುತ್ತಿದೆ ಎಂದು ಗೊತ್ತಾಗಿರಲಿಲ್ಲ ಪ್ಯಾಕೇಟ್ನಲ್ಲಿನ ಹಾಲು ಮಾತ್ರ ಗುಣಮಟ್ಟ ಕಡಿಮೆ ಇರುತಿತ್ತು. ಶತ ಪ್ರಯತ್ನದ ನಂತರ ಹಾಲಿಗೆ ನೀರು ಬೆರೆಸಿ ರೈತರ ಬದುಕನ್ನೇ ನಾಶ ಮಾಡಲು ಹೊರಟಿದ್ದ ಖದೀಮರು ಸಿಕು ಬಿದ್ದಿದ್ದಾರೆ.
ಇವರು ಬೇರಾರೂ ಅಲ್ಲ , ಹಾಲನ್ನು ಸಾಗಿಸಲು ಗುತ್ತಿಗೆ ಪಡೆದಿರುವ ಟ್ಯಾಂಕರ್ಗಳ ಮಾಲೀಕರೇ , ಕೆಎಂಎಫ್ನ ಭ್ರಷ್ಟರ ಜತೆ ಸೇರಿ ಈ ಮಣ್ಣು ತಿನ್ನುವ ಕೆಲಸ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಶಿಥಲೀಕರಣ ಕೇಂದ್ರಗಳಿಂದ ಒಕ್ಕೂಟಕ್ಕೆ ಸಾಗಿಸುವ ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸಲಾಗುತ್ತಿದ್ದು, ಹಾಲಿನ ಪರೀಕ್ಷೆ ಮುಗಿದ ಬಳಿಕ ನೀರು ಮಿಶ್ರಣವಾಗುತ್ತಿತ್ತು ಎಂದು ಹೇಳಲಾಗಿದೆ.ಈ ಖದೀಮರು ವಂಚನೆ ಮಾಡಲಿಕ್ಕಾಗಿಯೇ ಟ್ಯಾಂಕರ್ ವಿನ್ಯಾಸಗೊಳಿಸಿ ಟ್ಯಾಂಕರ್ ಒಳಭಾಗದಲ್ಲಿ ನೀರು ತುಂಬಲು ಪ್ರತ್ಯೇಕ ವಿಭಾಗ ರೂಪಿಸಿದ್ದರು. ಶೀಥಲೀಕರಣ ಘಟಕದಿಂದ ಪ್ಯಾಕಿಂಗ್ ಘಟಕಕ್ಕೆ ಹೋಗುವಾಗ ಟ್ಯಾಂಕರಿಗೆ ನೀರು ಬೆರೆಸಿ ಗಟ್ಟಿ ಹಾಲನ್ನು ಬೇರೆ ಕ್ಯಾನ್ಗಳಿಗೆ ತುಂಬಿ ನಂತರ ಖಾಸಗೀ ತಿರುಮಲ ಡೇರಿಗೆ ಮಾರಾಟ ಮಾಡಲಾಗುತಿತ್ತು. ಇದರಿಂದ ಖದೀಮರಿಗೆ ನಿತ್ಯ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಲಾಭ ಆಗುತಿತ್ತು. ಈ ವಂಚನೆ ನಡೆಸಲು ಬಳಸಿದ ವಿಧಾನಕ್ಕೆ ಇಡೀ ಜಿಲ್ಲೆಯೇ ದಂಗಾಗಿದೆ. ಈ ರೀತಿ ವಂಚಿಸುತಿದ್ದ 4 ಟ್ಯಾಂಕರ್ಗಳನ್ನು ಮದ್ದೂರು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಮಂಡ್ಯ ಕಾಲು ಒಕ್ಕೂಟದ ಅದ್ಯಕ್ಷ ರಾಮ ಚಂದ್ರ ಅವರು ನಮ್ಮ ಹಾಲು ಒಕ್ಕೂಟಕ್ಕೆ ಜಿಲ್ಲೆಯ ಹಳ್ಳಿಗಳಿಂದ ಸಂಗ್ರಹಿಸಿ ತರಲಾಗುತ್ತಿದ್ದ ಹಾಲಿನ ಟ್ಯಾಂಕರ್ ಗಳ ಪೈಕಿ ಕೆಲವು ಮಾರ್ಗಗಳಿಂದ ಬರುವ ಟ್ಯಾಂಕರ್ ಗಳಲ್ಲಿನ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಅದು ಹೆಚ್ಚಾಗತೊಡಗಿತ್ತು. ಈ ಬಗ್ಗೆ ಒಂದು ತಿಂಗಳಿನಿಂದ ಪರಿಶೀಲನೆ ನಡೆಸಿದಾಗ ಹಗರಣ ಬೆಳಕಿಗೆ ಬಂತು ಎಂದರು.

ಈ ನಡುವೆ ಈ ಮೋಸದಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡಿದ್ದ ಅಧಿಕಾರಿಗಳನ್ನು ರಕ್ಷಿಸಲು ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವೂ ಬಂದಿದೆ. ನೀರು ಮಿಶ್ರಿತ ಹಾಲು ಸರಬರಾಜು ಮಾಡುತ್ತಿದ್ದ ಪ್ರಕರಣದ ತನಿಖೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಒಂದು ಪ್ರಕರಣಕ್ಕೆ ಹಲವು ತನಿಖೆಗಳು ನಡೆಯುತ್ತಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ನಾಗಮಂಗಲದ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಒಂದೆಡೆ ತನಿಖೆ ನಡೆಯುತ್ತಿದೆ. ಮದ್ದೂರಿನ ಎಸ್.ಐ.ಗಳಾದ ನವೀನ್ ಗೌಡ ಹಾಗೂ ಮೋಹನ್ ಪಟೇಲ್ ಅವರ ತಂಡದಿಂದ ತನಿಖೆ ನಡೆಯುತ್ತಿದೆ. ಘಟನೆ ನಡೆದು ವಾರ ಕಳೆದರೂ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪ್ರಕರಣದ ರೂವಾರಿಗಳು ಜಿಲ್ಲೆಯ ಹಾಲು ಒಕ್ಕೂಟ ಮನ್ಮುಲ್ ಅಂಗಳದಲ್ಲೇ ಇದ್ದಾರೆ ಎಂಬ ಮಾಹಿತಿ ಇದ್ದರೂ ಯಾವುದೇ ಅಧಿಕಾರಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಆಡಳಿತ ಮಂಡಳಿ ಸದಸ್ಯರನ್ನು ಪ್ರಕರಣದಲ್ಲಿ ಸೇರಿಸಿಕೊಂಡಿಲ್ಲ. ಹೀಗಾಗಿ ಇಡೀ ಪ್ರಕರಣ ಯಾವ ಹಂತಕ್ಕೆ ತಲುಪುತ್ತಿದೆ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉಳಿದಿವೆ.
ಇನ್ನೊಂದೆಡೆ, ಶುಕ್ರವಾರ, ಶನಿವಾರ ಮೈಸೂರು ವಿಭಾಗೀಯ ಮಟ್ಟದ ತನಿಖಾ ತಂಡವೊಂದು ಮನ್ಮುಲ್ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಕೂಡ ಮನ್ಮುಲ್ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೋಟ್ಯಂತರ ರೂಪಾಯಿ ಹಗರಣಕ್ಕೆ ಕಾರಣ ಯಾರು ಎಂಬ ಬಗ್ಗೆ ಸ್ಪಷ್ಟತೆ ಬಂದಿಲ್ಲ. ‘ಪ್ರಕರಣ ತನಿಖೆಯ ಹಂತದಲ್ಲಿದ್ದು ಎಲ್ಲವನ್ನೂ ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆ ಮುಗಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಲಿದ್ದಾರೆ’ ಎನ್ನುತ್ತಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ನವೀನ್ ಕುಮಾರ್. ನೀರು ಮಿಶ್ರಿತ ಹಾಲು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ಗಳು ಸಿಕ್ಕಿವೆ. ಟ್ಯಾಂಕರ್ ಮಾಲೀಕರ ವಿವರವೂ ಸಿಕ್ಕಿದೆ. ಹಾಲಿನ ಗುಣಮಟ್ಟದ ಪರೀಕ್ಷೆ ಮಾಡುತ್ತಿದ್ದ ಪರೀಕ್ಷಕರು, ತಜ್ಞರು ಹಾಗೂ ಅಧಿಕಾರಿಗಳ ತಂಡದ ಮಾಹಿತಿಯೂ ಇದೆ. ಇಷ್ಟಾದರೂ ಪ್ರಕರಣದ ತನಿಖೆಯಲ್ಲಿ ಒಂದು ಸ್ಪಷ್ಟತೆ ಇಲ್ಲ. ಇಲ್ಲಿ ಆಡಳಿತ ಮಂಡಳಿ ಯಾರನ್ನೋ ರಕ್ಷಣೆ ಮಾಡಲು ಮುಂದಾಗುತ್ತಿದೆ ಎಂಬ ಪ್ರಶ್ನೆ ಜಿಲ್ಲೆಯ ರೈತರನ್ನು ಕಾಡುತ್ತಿದೆ.

ಈ ಕುರಿತು ಮಾತನಾಡಿದ ರೈತ ಮುಖಂಡ ಶಿವಲಿಂಗಯ್ಯ ಅವರು ‘ಮನ್ಮುಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಈ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲೂ ಈ ಅವ್ಯವಹಾರ ನಡೆಯುತ್ತಿತ್ತೇ ಎಂಬ ಬಗ್ಗೆ ತಿಳಿಯಬೇಕಾಗಿದೆ. ಅದಕ್ಕೆ ಸಿಬಿಐ ತನಿಖೆಯೊಂದೇ ಪರಿಹಾರ. ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಈಗಿನ ಆಡಳಿತ ಮಂಡಳಿಯನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು. ನೀರು ಮಿಶ್ರಿತ ಹಾಲು ಸ್ವೀಕರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವ ಮನ್ಮುಲ್ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ವಾರದ ನಂತರ ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ಏಳು ಅಧಿಕಾರಿಗಳನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ . ನಂತರ ಒತ್ತಡ ಹೆಚ್ಚುತಿದ್ದಂತೆ ಶನಿವಾರ ಆರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಈ ಪ್ರಕರಣವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಈ ಜಾಲವನ್ನೇ ಬೇಧಿಸಿ ಹೆಡೆಮುರಿ ಕಟ್ಟಬೇಕು ಎಂದು ಜಿಲ್ಲೆಯ ಜನತೆಯ ಒತ್ತಾಯವಾಗಿದೆ.





