ಬಸವಕಲ್ಯಾಣದಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮರಾಠ ಪ್ರಾಧಿಕಾರ ರಚಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಅದೇ ಆರೋಪವನ್ನು ಮಾಡಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ಮರಾಠ ಸಮುದಾಯದ ಮತದಾರರಿದ್ದಾರೆ, ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರ ಮಾಡಿದೆಯೇ ಹೊರತು ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನೈಜ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇನ್ನೂ ಇವೆ, ಅವುಗಳ ಅಭಿವೃದ್ಧಿಗೂ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಸರಿಯಲ್ಲ. ಅಭಿವೃದ್ಧಿಯ ಹಾದಿಯಲ್ಲಿ ಎಲ್ಲರು ಒಂದಾಗಿ ಸಾಗಿದಾಗ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಪ್ರಾಧಿಕಾರ ರಚನೆಯ ಕುರಿತು ಸರ್ಕಾರವನ್ನು ಟೀಕಿಸಿದ್ದಾರೆ.
ನೆರೆ ಪರಿಹಾರವಾಗಿ ಕೇಂದ್ರ ನIಡಿದ ಅಲ್ಪ ಮೊತ್ತವನ್ನು ಖಂಡಿಸಿದ ಸಿದ್ದರಾಮಯ್ಯ, ಈ ಬಾರಿಯ ಪ್ರವಾಹದಿಂದ ರಾಜ್ಯದಲ್ಲಿ ಸುಮಾರು ರೂ.25,000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ, ಆದರೆ ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವುದು ರೂ.577 ಕೋಟಿ ಮಾತ್ರ. ಇದರಲ್ಲಿ ಎಷ್ಟು ಜನರಿಗೆ ನೆರೆ ಪರಿಹಾರ ನೀಡಲು ಸಾಧ್ಯ? ರಾಜ್ಯ ಸರ್ಕಾರದ ಬಳಿಯೂ ಹಣವಿಲ್ಲ, ಕೇಂದ್ರವೂ ನೀಡುತ್ತಿಲ್ಲ. ಹೀಗಾದರೆ ಜನರಿಗೆ ಯಾರು ದಿಕ್ಕು? ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಭರವಸೆ ನೀಡಿ, ಈಗ ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನೂ ನೀಡದೆ ರೈತರನ್ನು ಕಷ್ಟಕ್ಕೆ ತಳ್ಳಿ ಕೈತೊಳೆದುಕೊಂಡಿದೆ. ಇದರ ಮೇಲೆ ರೈತವಿರೋಧಿ ಕಾನೂನುಗಳನ್ನು ಬೇರೆ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಉಳ್ಳವರ ಸರ್ಕಾರದಲ್ಲಿ ಅನ್ನದಾತ ನರಳಾಡುತ್ತಿದ್ದಾನೆ ಎಂದಿದ್ದಾರೆ.
ಶಾಲಾ-ಕಾಲೇಜುಗಳನ್ನು ಮರುಪ್ರಾರಭಿಸಲು ಸರ್ಕಾರದ ಬಳಿ ಸರಿಯಾದ ರೂಪುರೇಷೆ ಇಲ್ಲವೆಂದು ಆರೋಪಿಸಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಶಾಲಾ-ಕಾಲೇಜು ತೆರೆಯದಂತೆ ಸರ್ಕಾರಕ್ಕೆ 2 ಬಾರಿ ಪತ್ರ ಬರೆದಿದ್ದೆ, ಆದರೂ ಇಂದು ಸರ್ಕಾರ ಪೂರ್ವತಯಾರಿ ಇಲ್ಲದೆ ಪದವಿ ಕಾಲೇಜುಗಳನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಸರಿಯಲ್ಲ, ಕಾಲೇಜು ನಡೆಸಲೇಬೇಕು ಎಂದು ನಿರ್ಧರಿಸಿದ್ದರೆ ಸರ್ಕಾರವೇ ವಿದ್ಯಾರ್ಥಿಗಳ ನಿಯಮಿತ ಸೋಂಕು ಪರೀಕ್ಷೆಯನ್ನು ಮಾಡಿ, ತರಗತಿಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್ ಮೇಲೆಯೂ ತನ್ನ ಟೀಕಾ ಪ್ರಹಾರ ಪ್ರಯೋಗಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್ನ ಒಳಒಪ್ಪಂದದ ರಾಜಕಾರಣ ಹೊಸತಲ್ಲ. ಹಿಂದೆಯೂ ಮಾಡಿಕೊಂಡಿದ್ದರು, ಕಳೆದ ಉಪಚುನಾವಣೆಯಲ್ಲೂ ಈ ಆರೋಪ ಇತ್ತು, ಮುಂದೆಯೂ ನಡೆಯಬಹುದು. ಅವಕಾಶವಾದಿ ರಾಜಕಾರಣ ಜೆಡಿಎಸ್ನ ನೈಜ ಸಿದ್ಧಾಂತ, ಇದನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಮುಂದುವರೆಸಿದ್ದಾರೆ ಎಂದಿದ್ದಾರೆ.
ಇನ್ನು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ ಬೆಂಗಳೂರು ಗಲಭೆ ಪ್ರಕರಣದ ಆರೋಪಿ ಸಂಪತ್ರಾಜ್ ಬಂಧನದ ಕುರಿತಂತೆಯೂ ಮಾತನಾಡಿದ ಸಿದ್ದರಾಮಯ್ಯ, ಸಂಪತ್ರಾಜ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆಯಷ್ಟೆ, ವಿಚಾರಣೆ ನಡೆಯುವ ಮೊದಲೆ ಅವರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಧರಿಸಲಾಗುವುದಿಲ್ಲ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಈ ಹಂತದಲ್ಲಿ ನಾವು ಅವರ ಪರವೂ ಇಲ್ಲ, ವಿರುದ್ಧವೂ ಇಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಪತ್ ರಾಜ್ ಡಿಕೆಶಿ ಬಣದವನಾಗಿದ್ದು, ಸಿದ್ದರಾಮಯ್ಯ ಮೇಲಿನ ಪೈಪೋಟಿಯಲ್ಲಿ ಗಲಭೆ ನಡೆಸಲಾಗಿದೆ ಎಂದು ಆರೋಪಿಸಿದ್ದರು.