ಕಾಡಿ ಬೇಡಿ ಕೆಪಿಸಿಸಿ ಅಧ್ಯಕ್ಷಗಾದಿ ಪಡೆದ ಡಿ.ಕೆ. ಶಿವಕುಮಾರ್ ಅವರಿಗೆ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಗಾಗಿ ಅದ್ಧೂರಿಯಾಗಿ ಅಧಿಕಾರ ಸ್ವೀಕರಿಸಬೇಕೆಂಬ ಕನಸು ಭಗ್ನಗೊಂಡಿತ್ತು. ಈಗ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವುದಕ್ಕೂ ಅವರು ಭಾರೀ ಕಸರತ್ತು ನಡೆಸಬೇಕಾಯಿತು. ಅಂತೂ ಇಂತೂ ಮೂರುವರೆ ತಿಂಗಳ ಬಳಿಕ ಪದಗ್ರಹಣವಾಗಿದೆ. ಇನ್ನು ಡಿ.ಕೆ. ಶಿವಕುಮಾರ್ ಮುಂದೆ ಸಾಗಬೇಕಾದ ಹಾದಿ ಬಗ್ಗೆ ನೋಡಬೇಕಿದೆ. ಅವರ ಬೆಂಬಲಿಗರು ಮತ್ತು ಸಲಹೆಗಾರರು ‘ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ಭ್ರಮೆಗೆ ಸಿಲುಕಿ, ಡಿ.ಕೆ. ಶಿವಕುಮಾರ್ ಅವರಲ್ಲೂ ಭ್ರಮೆ ಹುಟ್ಟುಹಾಕಿರುವಂತೆ ಕಾಣುತ್ತದೆ. ಆದರೆ ಡಿ.ಕೆ. ಶಿವಕುಮಾರ್ ಮುಂದಿವೆ ಈ ಎಂಟು ಸವಾಲುಗಳು.
1) ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಕೊಡಲು ಪರಿಗಣಿಸಿರುವ ಪ್ರಮುಖ ಮಾನದಂಡವೆಂದರೆ ಜಾತಿ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಾರಣಕ್ಕೆ ಅಹಿಂದ ಮತಗಳು ಪಕ್ಷಕ್ಕೆ ಬರಲಿವೆ. ಇದರೊಂದಿಗೆ ಅಧಿಕಾರ ಹಿಡಿಯಲು ಬೇಕಿರುವಷ್ಟು ಶಾಸಕರನ್ನು ಗೆದ್ದುಕೊಳ್ಳಲು ಲಿಂಗಾಯತ ಅಥವಾ ಒಕ್ಕಲಿಗ ಮತಗಳ ಪೈಕಿ ಒಂದು ಸಮುದಾಯದ ಮತಗಳಲ್ಲಿ ಒಂದಷ್ಟಾದರೂ ಗಳಿಸಬೇಕು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದರಿಂದ ಲಿಂಗಾಯತ ಸಮುದಾಯದ ಮತಗಳನ್ನು ಚದುರಿಸುವುದು ಕಷ್ಟ. ದೇವೇಗೌಡರಿಗೆ ವಯಸ್ಸಾಯಿತು. ಕುಮಾರಸ್ವಾಮಿ ಅವರಿಗೆ ಮೊದಲಿನ ವರ್ಚಸ್ಸು ಇಲ್ಲ. ಅದರಿಂದ ಒಕ್ಕಲಿಗ ನಾಯಕನನ್ನೇ ರಾಜ್ಯ ಕಾಂಗ್ರೆಸ್ ಸಾರಥಿಯನ್ನಾಗಿ ಮಾಡುವುದು ಸೂಕ್ತ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಮಣೆ ಹಾಕಲಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ಒಳಗೆ ಇನ್ನೂ ಆಳಕ್ಕೆ ಬೇರು ಬಿಡಬೇಕಾಗಿದೆ.
ಒಕ್ಕಲಿಗರ ಹಿತ ಕಾಯುತ್ತೇನೆ ಎಂಬ ವಿಶ್ವಾಸ ಹುಟ್ಟಿಸಬೇಕಾಗಿದೆ. ರಾಜಕೀಯವಾಗಿ ಒಕ್ಕಲಿಗರನ್ನು ಬೆಳೆಸುವ ಭರವಸೆ ಮೂಡಿಸಬೇಕಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಈಗಾಗಲೇ ಒಂದು ಹಂತಕ್ಕೆ ಬೆಳೆದಿರುವ ಕೃಷ್ಣಭೈರೇಗೌಡ, ಎಂ. ಕೃಷ್ಣಪ್ಪ ಮತ್ತಿತರೊಂದಿಗೇ ಉತ್ತಮ ಸಂಬಂಧ ಹೊಂದಿಲ್ಲ. ಇದಲ್ಲದೆ ಇನ್ನೂ ಕೆಲವರನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪವೂ ಡಿ.ಕೆ. ಶಿವಕುಮಾರ್ ಮೇಲಿದೆ. ಸಹೋದರ ಡಿ.ಕೆ. ಸುರೇಶ್ ಅವರನ್ನು ಸಂಸದರನ್ನಾಗಿ, ಷಡಕ ಡಾ. ರಂಗನಾಥ್ ಅವರನ್ನು ಶಾಸಕರನ್ನಾಗಿ, ಸಹೋದರ ಮಾವನ ಮಗ ರವಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದಂತೆ ಸಂಬಂಧಿಕರಲ್ಲದ ಮತ್ತೊಬ್ಬರಿಗಾಗಿ ಡಿ.ಕೆ. ಶಿವಕುಮಾರ್ ರಾಜಕೀಯವಾಗಿ ರಿಸ್ಕ್ ತೆಗೆದುಕೊಂಡ ಉದಾರಣೆಗಳು ವಿರಳ. ಈ ಅಪವಾದದಿಂದ ಹೊರಗೆ ಬರಬೇಕಾಗಿದೆ. ಒಕ್ಕಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.
2) ಡಿ.ಕೆ. ಶಿವಕುಮಾರ್ ಮೇಲೆ ‘ಬುಲ್ಡೋಜರ್ ನೇಚರ್’ ಎಂಬ ಆರೋಪವೂ ಇದೆ. ಇತರೆ ಸಮುದಾಯದ ನಾಯಕರ ಸೊಲ್ಲಡಗಿಸುತ್ತಾರೆ ಎಂಬ ದೂರಿದೆ. ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಎಂದರೆ ಎಲ್ಲರ ಪಕ್ಷ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಒಂದೊಮ್ಮೆ ಒಕ್ಕಲಿಗ ಓಲೈಕೆ ಹೆಚ್ಚಾಯಿತು, ಆ ಮತಗಳು ಹೆಚ್ಚಿಗೆ ಬರುತ್ತವೆ ಎನ್ನುವ ಸಂದರ್ಭದಲ್ಲಿ ಇತರೆ ಹಿಂದುಳಿದ ವರ್ಗಗಳ ಮತಗಳು ಕೈ ಜಾರುವ ಸಂಭವ ಇರುತ್ತದೆ. ಈ ತೆಳುವಾದ ಎಳೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು.

3) ಡಿ.ಕೆ. ಶಿವಕುಮಾರ್ ಸುದೀರ್ಘ ಕಾಲ ಸಚಿವರಾಗಿದ್ದವರು. ಕೆಲ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರು. ಆದರೆ ಅವರು ಸಿದ್ದರಾಮಯ್ಯ ಅವರಂತೆ ಇಡೀ ರಾಜ್ಯ ಸುತ್ತಿಲ್ಲ. ಅವರದೇ ಬೆಂಬಲಿಗರ ಪಡೆ ಹೊಂದಿಲ್ಲ. ಬೆಂಗಳೂರು, ರಾಮನಗರ, ಕನಕಪುರಕ್ಕೆ ಹೆಚ್ಚು ಸೀಮಿತರಾಗಿದ್ದಾರೆ. ಈಗಲಾದರೂ ಅವರು ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಪಕ್ಷ ಕಟ್ಟಬೇಕು. ಅದರಲ್ಲೂ ಒಕ್ಕಲಿಗರಿಲ್ಲದ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಿ ಅಲ್ಲಿನ ಸಮೀಕರಣಗಳಿಗೆ ಸೂಕ್ತವಾಗುವಂತಹ ನಾಯಕರನ್ನು, ಅಭ್ಯರ್ಥಿಗಳನ್ನು ಹುಡುಕಿ ಬೆಳೆಸಬೇಕು.
4) ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹೊಡೆತ ಬಿದ್ದಿದ್ದೇ ಬೆಳಗಾವಿ ರಾಜಕಾರಣದ ಮೂಲಕ. ಲಕ್ಷ್ಮಿ ಹೆಬ್ಬಾಳ್ಕರ್ ಒಬ್ಬರಿಂದಾಗಿ ಕಾಂಗ್ರೆಸಿನ 14 ಶಾಸಕರು ಪಕ್ಷ ಬಿಟ್ಟರು. ಅಷ್ಟೂ ಜನರೂ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣಕ್ಕಾಗಿಯೇ ಇಲ್ಲದಿರಬಹುದು. ಆದರೆ ಪ್ರಹಸನ ಅಲ್ಲಿಂದ ಶುರುವಾಗಿ ಸರ್ಕಾರ ಪತನದಲ್ಲಿ ಅಂತ್ಯಗೊಂಡಿತು. ಬಳ್ಳಾರಿ ಜಿಲ್ಲಾ ರಾಜಕಾರಣದಲ್ಲೂ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದ ಮಾತು ಕೇಳಿಬಂದಿತ್ತು. ಈಗ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರು. ಅವರು ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು ಹುಟ್ಟುಹಾಕಬಾರದು.
5) ಡಿ.ಕೆ. ಶಿವಕುಮಾರ್ ಕೆಲವು ಉಪ ಚುನಾವಣೆಗಳ ಉಸ್ತುವಾರಿ ಹೊತ್ತು ಯಶಸ್ವಿಯಾಗಿದ್ದಾರೆ. ಗುಜರಾತ್ ಶಾಸಕರನ್ನು ರೆಸಾರ್ಟಿನಲ್ಲಿ ಕಾದು ಹೈಕಮಾಂಡ್ ಮನ ಗೆದ್ದಿದ್ದಾರೆ. ಎಸ್.ಎಂ. ಕೃಷ್ಣ ಕಾಲದಲ್ಲಿ ಅವರು ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಮುಖಾಂತರ ಯಶಸ್ವಿ ‘ಟಾಸ್ಕ್ ಮಾಸ್ಟರ್’ ಎಂದು ನಿರೂಪಿಸಿದ್ದಾರೆ. ಮುಂದೆ ಅವರು ಸಾಬೀತು ಪಡಿಸಬೇಕಿರುವುದು ಯಶಸ್ವಿ ನಾಯಕ ಎಂದು.
6) ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲು ತೊಡಕಾಗುವುದು ಕುಮಾರಸ್ವಾಮಿಯೂ ಅಲ್ಲ, ಯಡಿಯೂರಪ್ಪ ಅವರೂ ಅಲ್ಲ. ಅದು ಸಿದ್ದರಾಮಯ್ಯ. ಡಿ.ಕೆ. ಶಿವಕುಮಾರ್ ಪಾಲಿಗೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರಿಗಿಂತ ಹೆಚ್ಚು ಅಪಾಯ ಇರುವುದು ಸಿದ್ದರಾಮಯ್ಯ ಅವರಿಂದಲೇ. ಸದ್ಯ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳುತ್ತಿರಬಹುದು. ಆದರೆ ಅವರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶ ಇದ್ದೇ ಇದೆ. ಪೂರಕವಾಗಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಕೂಡ ಇದೆ. ನೇರವಂತಿಕೆಯ ಕಾರಣದಿಂದ ಸಿದ್ದರಾಮಯ್ಯ ಶಾಸಕರು ಮತ್ತು ಹೈಕಮಾಂಡಿಗೆ ಹತ್ತಿರ ಇದ್ದಾರೆ. ಡಿ.ಕೆ. ಶಿವಕುಮಾರ್ ಬಳಿ ಅಪಾರ ಪ್ರಮಾಣದ ದುಡ್ಡಿದೆ. ಆದರೆ ಅವರು ಯಾರಿಗೂ ಆರ್ಥಿಕವಾಗಿ ನೆರವು ನೀಡುವುದಿಲ್ಲ. ಸಿದ್ದರಾಮಯ್ಯ ಬಳಿ ವೈಯಕ್ತಿಕವಾಗಿ ಹಣ ಇಲ್ಲ. ಆದರೆ ಹಣ ಇರುವವರು ಸಿದ್ದರಾಮಯ್ಯ ಬಳಿ ದಂಡಿಯಾಗಿದ್ದಾರೆ. ಅಗತ್ಯಬಿದ್ದಾಗ ಸಿದ್ದರಾಮಯ್ಯ ಸೂಚಿಸಿದವರಿಗೆ ಸಂಪನ್ಮೂಲ ಸಹಕಾರ ನೀಡುತ್ತಾರೆ. ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಗಿಂತ ಸಿದ್ದರಾಮಯ್ಯ ಹೆಚ್ಚು ಪಳಗಿದ್ದಾರೆ. ಡಿ.ಕೆ. ಶಿವಕುಮಾರ್ ಗೆ ಇರುವ ಏಕೈಕ ಆಯ್ಕೆ ಸಿದ್ದರಾಮಯ್ಯ ಅವರೊಂದಿಗೆ ಹೊಂದಿಕೊಂಡು ಹೋಗುವುದು. ಏಕೆಂದರೆ ಸ್ವಲ್ಪ ಚಮತ್ಕಾರ ತೋರಿದರೂ ಸೆಟೆದು ನಿಲ್ಲುವ ವ್ಯಕ್ತಿತ್ವ ಸಿದ್ದರಾಮಯ್ಯ ಅವರದು. ಉದಾಹರಣೆಗೆ ಈ ವಿಡಿಯೋ ನೋಡಬಹುದು.
7) ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಎಲ್ಲವನ್ನೂ ಅತಿಯಾಗಿ ಮಾಡುತ್ತಾರೆ. ಪ್ರಚಾರಕ್ಕಾಗಿ ಮಾಡುತ್ತಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಶಾಸಕರು ವಾಪಸ್ ಬರುವುದಿಲ್ಲ, ಹೊಟೆಲ್ ಒಳಗೆ ಹೋಗಲು ಪೊಲೀಸರು ಅನುಮತಿ ನೀಡುವುದಿಲ್ಲ ಎಂಬುದು ಗೊತ್ತಿದ್ದೂ ಡಿ.ಕೆ. ಶಿವಕುಮಾರ್ ಮುಂಬೈಗೆ ಹೋಗಿ ಡ್ರಾಮಾ ಮಾಡಿದರು. ತನ್ನ ಪ್ರಯತ್ನ ಹೈಕಮಾಂಡ್ ಗೆ ಮುಟ್ಟುವಂತೆ ನೋಡಿಕೊಂಡರು. ವಲಸೆ ಕಾರ್ಮಿಕರ ವಿಷಯದಲ್ಲೂ ಹೀಗೆ ಆಯಿತು. ಹೀಗೆ ಪ್ರತಿ ವಿಷಯದಲ್ಲೂ ಪ್ರಚಾರ ಪಡೆಯಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಕೆಲ ಗಿಮಿಕ್ ಮಾಡುತ್ತಾರೆ ಎನ್ನಲಾಗುತ್ತಿದೆ. ನಾಯಕನಾದವನಿಗೆ ವಿಶ್ವಾಸಾರ್ಹತೆಯೇ ಮುಖ್ಯ ಎಂಬುದನ್ನು ಮನಗಾಣಬೇಕಿದೆ.
8) ಪಕ್ಷನಿಷ್ಟನಾಗಿ ಕಟಿಬದ್ದವಾಗಿ ನಿಂತಿದ್ದಕ್ಕಾಗಿಯೇ ತಾನು ಜೈಲಿಗೆ ಹೋಗಬೇಕಾಯಿತು ಎಂದು ಬಿಂಬಿಸುವಲ್ಲಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನ ಸೋನಿಯಾ ಗಾಂಧಿಯವರ ಬಣ ಈ ವಾದವನ್ನು ನಂಬಿದೆ. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಋಣದಲ್ಲಿರುವ ಅಹಮದ್ ಪಟೇಲ್ ಮತ್ತಿತರರು ನಂಬಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ಬಣಕ್ಕೆ ಈಗಲೂ ಡಿ.ಕೆ. ಶಿವಕುಮಾರ್ ಎಂದರೆ ಅಷ್ಟಕ್ಕಷ್ಟೇ. ಇಲ್ಲಿ ಸಂಬಂಧ ಸುಧಾರಿಸಿಕೊಳ್ಳಬೇಕಾದ ಅಗತ್ಯ ಕೂಡ ಡಿ.ಕೆ. ಶಿವಕುಮಾರ್ ಗಿದೆ.





