ರಾಜ್ಯದಲ್ಲಿ ಕರೋನಾ ದಿನದಿಂದ ದಿನಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದ್ದು, ಒಂದು ಕಡೆ ಮತ್ತೆ ಲಾಕ್ ಡೌನ್ ಹೇರಿಕೆ ಅನಿವಾರ್ಯ ಎಂಬ ವಾದ ಜೋರಾಗುತ್ತಿದ್ದರೆ, ಮತ್ತೊಂದು ಕಡೆ ಲಾಕ್ ಡೌನ್ ನಿಂದ ಸೋಂಕು ಸಂಪೂರ್ಣ ತಡೆಯಲು ಸಾಧ್ಯವಿಲ್ಲ, ಕೇವಲ ಹರಡುವಿಕೆಯನ್ನು ಮುಂದೂಡಬಹುದಷ್ಟೆ. ಹಾಗಾಗಿ ಅದರ ಬದಲಾಗಿ ವ್ಯಾಪಕ ಪರೀಕ್ಷೆ ಮತ್ತು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಹೆಚ್ಚಳದ ಮೂಲಕ ಜಾಗತಿಕ ಮಹಾಮಾರಿಯನ್ನು ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಈ ನಡುವೆ ಕಳೆದ ಹತ್ತು ದಿನಗಳಿಂದ ಕರ್ನಾಟಕವೂ ಸೇರಿದಂತೆ ದೇಶವ್ಯಾಪಿ ಕರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ವೈರಾಣು ಪರೀಕ್ಷೆಯ ತನ್ನ ಮಾನದಂಡಗಳನ್ನು ಪರಿಷ್ಕರಿಸಿರುವ ದೇಶದ ಮುಂಚೂಣಿ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್, ಸೋಂಕು ಲಕ್ಷಣ ಕಂಡುಬರುವ ಪ್ರತಿಯೊಬ್ಬರನ್ನೂ ಪರೀಕ್ಷೆಗೊಳಪಡಿಸಬೇಕು ಎಂದು ಸೂಚನೆ ನೀಡಿದೆ. ಈ ಮೊದಲು ಮೇ ಮಧ್ಯಂತರದಲ್ಲಿ ನೀಡಿದ್ದ ಸೂಚನೆಯ ಪ್ರಕಾರ, ಸೋಂಕಿತರ ಸಂಪರ್ಕಕ್ಕೆ ಬಂದವರು, ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಹಾಗೂ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮುಂತಾದ ಕರೋನಾ ಮುಂಚೂಣಿ ಹೋರಾಟಗಾರರು ಮತ್ತಿತರರಲ್ಲಿ ಸೋಂಕು ಲಕ್ಷಣ ಕಂಡುಬಂದಲ್ಲಿ ವೈರಾಣು ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿತ್ತು. ಇದೀಗ ಇಡೀ ದೇಶವ್ಯಾಪಿ ಯಾವುದೇ ವ್ಯಕ್ತಿಗೆ, ಯಾವುದೇ ಪ್ರದೇಶದಲ್ಲಿ ಸೋಂಕು ಲಕ್ಷಣ ಕಂಡುಬಂದರೂ ಪರೀಕ್ಷೆ ನಡೆಸುವಂತೆ ಪರಿಷ್ಕೃತ ಸೂಚನೆಯನ್ನು ಮಂಗಳವಾರ ಹೊರಡಿಸಲಾಗಿದೆ.
ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಸದ್ಯದ ವಾಸ್ತವ ಸ್ಥಿತಿ ಬೇರೆಯೇ ಇದೆ. ಒಂದು ಕಡೆ ಕೈಮೀರಿ ಹೋಗುತ್ತಿರುವ ಆತಂಕಕಾರಿ ಪ್ರಮಾಣದಲ್ಲಿ ಏರುತ್ತಿರುವ ಕರೋನಾ ಸೋಂಕು, ಮತ್ತೊಂದು ಕಡೆ ಸೋಂಕಿತರಿಂದ ತುಂಬಿತುಳುಕುತ್ತಿರುವ ಆಸ್ಪತ್ರೆ ಮತ್ತು ಐಸೋಲೇಷನ್ ವಾರ್ಡುಗಳು, ಹೆಚ್ಚುತ್ತಿರುವ ಸೀಲ್ ಡೌನ್ ಪ್ರದೇಶಗಳು, ಹೀಗೆ ಹಲವು ಆತಂಕಕಾರಿ ಸನ್ನಿವೇಶದ ನಡುವೆ ಐಸಿಎಂಆರ್ ನ ಹೊಸ ಮಾರ್ಗಸೂಚಿ ಪಾಲಿಸಿ ವೈರಾಣು ಪರೀಕ್ಷೆ ನಡೆಸುವ ಬದಲಿಗೆ ಕಳೆದ ಹತ್ತು-ಹನ್ನೆರಡು ದಿನಗಳಿಂದ ಪರೀಕ್ಷೆಗಳ ಇಳಿಮುಖವಾಗಿದೆ!
ಈ ಮೊದಲು ಮೇ ಮತ್ತು ಜೂನ್ ಮೊದಲ ವಾರದ ವರೆಗೆ ಏರುಗತಿಯಲ್ಲಿದ್ದ ದೈನಿಕ ಪರೀಕ್ಷಾ ಪ್ರಮಾಣ, ಜೂನ್ 9ರ ಬಳಿಕ ದಿಢೀರ್ ಕುಸಿತ ಕಂಡಿದೆ. ಮೇ 30ರಂದು ಬರೋಬ್ಬರಿ 15,728 ಮಂದಿಗೆ ಕರೋನಾ ಪರೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲಿ ದಾಖಲೆಯ ಪರೀಕ್ಷೆ ನಡೆಸಲಾಗಿತ್ತು. ಈವರೆಗೂ ಆ ಪ್ರಮಾಣದ ಪರೀಕ್ಷೆ ಮತ್ತೆ ನಡೆದಿಲ್ಲ. ಬಳಿಕ ಜೂನ್ ಮೊದಲ ವಾರದಲ್ಲಿ ದಿನವೊಂದಕ್ಕೆ ಸರಿಸುಮಾರು 15-13 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ, ಜೂನ್ 9ರ ಹೊತ್ತಿಗೆ ದೈನಿಕ ಪರೀಕ್ಷೆ ಪ್ರಮಾಣದಲ್ಲಿ ಶೇ.50ರಷ್ಟು ಕುಸಿತ ಕಂಡಿದ್ದು, 9ರಂದು ಕೇವಲ 7,036 ಮಂದಿಗೆ ಪರೀಕ್ಷೆ ನಡೆಸಲಾಗಿದ್ದರೆ, 10ರಂದು 8249 ಮಂದಿಗೆ, 11ರಂದು 8000 ಮಂದಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಬಳಿಕ ಒಂದೆರಡು ದಿನ ಹತ್ತು ಸಾವಿರದ ಆಸುಪಾಸಿನಲ್ಲಿದ್ದ ಪರೀಕ್ಷಾ ಪ್ರಮಾಣ, ಜೂನ್ 15ರ ಹೊತ್ತಿಗೆ ಕೇವಲ 5362 ಪರೀಕ್ಷೆಗಳೊಂದಿಗೆ ಕಳೆದ ಒಂದು ತಿಂಗಳಲ್ಲೇ ಅತ್ಯಂತ ಕಡಿಮೆ ಪರೀಕ್ಷೆ ಮಾಡಲಾಗಿದೆ.
ಆ ಬಳಿಕ, ನಿಧಾನಗತಿಯಲ್ಲಿ ಏರಿಕೆ ಕಂಡುಬಂದಿದ್ದು, ಜೂನ್ 22ರಂದು 9,204 ಮಂದಿಗೆ ಪರೀಕ್ಷೆ ನಡೆಸಿದ್ದರೆ, 23ರಂದು 10,569 ಮಂದಿಗೆ, 24ರಂದು 12,709 ಮಂದಿಗೆ, 25ರಂದು 14,078 ಮಂದಿಗೆ ಹಾಗೂ ಜೂ 26ರಂದು 14,733 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಆದರೆ, ಏರುತ್ತಿರುವ ಸೋಂಕು ಪ್ರಮಾಣ ಮತ್ತು ಕಂಟೈನ್ಮೆಂಟ್ ಝೋನ್ ಗಳಿಗೆ ಹೋಲಿಸಿದರೆ ಈ ಪರೀಕ್ಷಾ ಪ್ರಮಾಣ ತೀರಾ ಕಡಿಮೆಯೇ! ಅದೇ ಹೊತ್ತಿಗೆ ಅಂದರೆ ಜೂ.22ರಿಂದ ಈಚೆಗೆ ಕಳೆದ ನಾಲ್ಕು ದಿನಗಳಲ್ಲಿ ಸೋಂಕು ಪ್ರಮಾಣ ವ್ಯಾಪಕ ಏರಿಕೆ ಕಂಡಿದೆ. 22ರಂದು 9399ರಷ್ಟಿದ್ದ ಸೋಂಕಿತರ ಸಂಖ್ಯೆ, ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಜೂನ್ 26ರಂದು ಸೋಂಕಿತರ ಪ್ರಮಾಣ 11,005ಕ್ಕೆ ತಲುಪಿದೆ.
ಅದೇ ಹೊತ್ತಿಗೆ, ಒಮ್ಮೆ ಗಂಟಲು ದ್ರವ ಸಂಗ್ರಹಿಸಿದ ಬಳಿಕ ಶಂಕಿತ ಸೋಂಕಿತರು ಸೋಂಕು ದೃಢಪಡಿಸಿಕೊಳ್ಳಲು ಕಾಯುವ ಅವಧಿ ಕೂಡ ಹೆಚ್ಚುತ್ತಿದ್ದು, ಇದು ಸೋಂಕಿತರನ್ನು ಪ್ರತ್ಯೇಕಿಸುವ ಮತ್ತು ಅವರಿಗೆ ಸಕಾಲಿಕ ಚಿಕಿತ್ಸೆ ನೀಡುವ ವಿಷಯದಲ್ಲಿ ದೊಡ್ಡ ತೊಡಕಾಗಿ ಪರಿಣಮಿಸುತ್ತಿದೆ. ಶುಕ್ರವಾರದ ಮಾಹಿತಿ ಪ್ರಕಾರ, ಸುಮಾರು 13,741 ಪರೀಕ್ಷಾ ಮಾದರಿಗಳ ಫಲಿತಾಂಶ ಇನ್ನೂ ಬಾಕಿ ಇದೆ. ಆ ಪೈಕಿ ಬೆಂಗಳೂರಿನ ಬಾಕಿ ಪ್ರಕರಣಗಳ ಸಂಖ್ಯೆ 2,874 ಆಗಿದ್ದರೆ, ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ಕಲಬುರಗಿಯ ಪ್ರಕರಣಗಳ ಸಂಖ್ಯೆ 3,378!
ಈವರೆಗೆ ರಾಜ್ಯದಲ್ಲಿ ಪ್ರತಿ ಹತ್ತು ಲಕ್ಷ ಮಂದಿಗೆ ಪರೀಕ್ಷೆ ನಡೆಸಿದ ಸರಾಸರಿ ಪ್ರಮಾಣ 8,613 ರಷ್ಟಿದ್ದು, ಇದು ಕೇರಳ, ತಮಿಳುನಾಡು ಸೇರಿದಂತೆ ಇತರೆ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ರಾಜ್ಯದ ಒಟ್ಟು 77 ಕರೋನಾ ವೈರಾಣು ಪರೀಕ್ಷಾ ಕೇಂದ್ರಗಳಲ್ಲಿ ಶಂಕಿತರಿಂದ ಸಂಗ್ರಹಿಸಿದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಆ ಪೈಕಿ ಬೆಂಗಳೂರಿನ ನಿಮ್ಹಾನ್ಸ್ ಮತ್ತು ಬಿಎಂಸಿಆರ್ ಐನಂತಹ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಕರೋನಾ ಸೋಂಕಿತರಾದ ಹಿನ್ನೆಲೆಯಲ್ಲಿ ಆ ಕೇಂದ್ರಗಳನ್ನು ಮುಚ್ಚಲಾಗಿದೆ. ರಾಜ್ಯದ ದಿನವಹಿ ಪರೀಕ್ಷಾ ಪ್ರಮಾಣದಲ್ಲಿ ಕುಸಿತ ಕಾಣಲು ಇದೂ ಒಂದು ಕಾರಣ ಎಂದು ಕಾರ್ಯಪಡೆಯ ಸದಸ್ಯರು ಹೇಳಿದ್ದಾರೆ.
ಈ ನಡುವೆ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು, ಸದ್ಯದಲ್ಲೆ ರಾಜ್ಯದ ಕರೋನಾ ಪರೀಕ್ಷೆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದ್ದು, ದಿನವೊಂದಕ್ಕೆ 20-25 ಸಾವಿರ ಪರೀಕ್ಷೆ ನಡೆಸಲಾಗುವುದು ಎಂದಿದ್ದರು. ಆದರೆ, ಅವರು ಹಾಗೆ ಹೇಳಿ 15 ದಿನ ಕಳೆಯುತ್ತಿದ್ದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆಯೇ ವಿನಃ ಪರೀಕ್ಷೆ ಪ್ರಮಾಣ ಮಾತ್ರ ಆಮೆವೇಗದಲ್ಲಿದೆ.
ಸೋಂಕು ಆರಂಭದ ದಿನಗಳಲ್ಲಿ; ಮಾರ್ಚ್ ತಿಂಗಳಲ್ಲೇ ಸರ್ಕಾರ ಹೇಳಿದ್ದ ರ್ಯಾಪಿಡ್ ಟೆಸ್ಟಿಂಗ್, ಮೊಬೈಲ್ ಟೆಸ್ಟಿಂಗ್ ಯುನಿಟ್ ಮುಂತಾದ ಕ್ರಾಂತಿಕಾರಕ ಕ್ರಮಗಳು ಈವರೆಗೆ ಜಾರಿಗೆ ಬಂದಿಲ್ಲ. ಮೊಬೈಲ್ ಪರೀಕ್ಷಾ ಘಟಕಗಳು ವ್ಯಾಪಕ ಪ್ರಮಾಣದಲ್ಲಿ ಬೀದಿಗಿಳಿದಿದ್ದರೆ, ಐಸಿಎಂಆರ್ ಹೇಳಿದಂತೆ ವ್ಯಾಪಕ ಪರೀಕ್ಷೆ ನಡೆಸುವುದು ಸಾಧ್ಯವಿತ್ತು ಮತ್ತು ಅಷ್ಟೇ ವೇಗದಲ್ಲಿ ಪರೀಕ್ಷಾ ಫಲಿತಾಂಶಗಳನ್ನು ನೀಡುವ ಮೂಲಕ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ದೊಡ್ಡ ಮೇಲುಗೈ ಸಾಧಿಸುವ ಅವಕಾಶವಿತ್ತು ಎಂಬುದು ತಜ್ಞರ ಅಭಿಪ್ರಾಯ. ಆದರೆ, ಮಾಹಿತಿ ಪ್ರಕಾರ, ಮೊಬೈಲ್ ಪರೀಕ್ಷಾ ಘಟಕ ಇನ್ನೂ ಅಭಿವೃದ್ಧಿಯ ಹಂತದಲ್ಲೇ ಇದೆ!
ಈ ನಡುವೆ, ಸಾಕಷ್ಟು ಪರೀಕ್ಷಾ ಕೇಂದ್ರಗಳು, ಆಯಾ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ, ಪರೀಕ್ಷಾ ಕಿಟ್ ಪ್ರಮಾಣ ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲ ಎಂದು ಕೋವಿಡ್ ಪರೀಕ್ಷಾ ನೋಡಲ್ ಅಧಿಕಾರಿಯೂ ಆದ ಹೃದ್ರೋಗ ತಜ್ಞ ಡಾ ಸಿ ಎನ್ ಮಂಜುನಾಥ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಏರುತ್ತಿರುವ ಸೋಂಕಿನ ಆತಂಕದ ನಡುವೆಯೂ ಯಾಕೆ ಪರೀಕ್ಷೆಗಳನ್ನು ಹೆಚ್ಚಿಸುತ್ತಿಲ್ಲ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.