ಪರಿಸರ ನಾಶ ಎಲ್ಲರನ್ನೂ ವಿನಾಶದತ್ತ ಕೊಂಡೊಯ್ಯುತ್ತಿದೆ. ಈ ಮಧ್ಯೆಯು ಅಭಿವೃದ್ದಿಯ ಹೆಸರಿನಲ್ಲಿ ಅಲ್ಪ ಸ್ವಲ್ಪವಾದರೂ ಜೀವಂತವಿರುವ ಸಸ್ಯ ಸಂಕುಲವನ್ನು ಸರ್ಕಾರಗಳು ಯೋಜನೆಗಳ ಹೆಸರಿನಲ್ಲಿ ನಾಶ ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬಹಳಷ್ಟು ಬಾರಿಗೆ ಈ ವಿಚಾರ ಮುನ್ನೆಲೆಗೆ ಬಂದಿದ್ದರೂ, ಲಾಭ ನಷ್ಟದ ಲೆಕ್ಕಾಚಾರದಲ್ಲಿರುವವರ ವ್ಯವಸ್ಥಿತ ಪಿತೂರಿಯಿಂದ ಎಲ್ಲಾ ಹೋರಾಟಗಳು ಸರಿಯಾದ ಫಲ ನೀಡುತ್ತಿಲ್ಲ.
ಇನ್ನು ಲಾಕ್ಡೌನ್ ಅನ್ನೇ ನೆಪವಾಗಿಟ್ಟುಕೊಂಡು ನೂರಾರು ಪರಿಸರ ವಿರೋಧಿ ಸರ್ಕಾರಿ ಯೋಜನೆಗಳಿಗೆ ಅಂಕಿತ ಬಿದ್ದಿದೆ. ಶರಾವತಿ ಭೂಗರ್ಭ ವಿದ್ಯುತ್ ಸ್ಥಾವರ ಯೋಜನೆ, ಹುಬ್ಬಳ್ಳಿ ಅಂಕೋಲ ರೈಲು ಮಾರ್ಗ ಯೋಜನೆ, ಗಣಿಗಾರಿಕೆಗಳಿಗೆ ಪರವಾನಗೆ ಹೀಗೆ ಹತ್ತು ಹಲವು ಯೋಜನೆಗಳಿಗೆ ಕಳೆದ ಮೂರು ನಾಲ್ಕು ತಿಂಗಳಲ್ಲಿ ಅನುಮೋದನೆ ದೊರೆತಿದೆ.
Also Read: ಪ್ರಭಾವಿ ಲಾಬಿಯ ಮುಂದೆ ಮಂಡಿಯೂರಿದರೆ ಪರಿಸರ ತಜ್ಞರು?
ಈ ವಿಚಾರದಲ್ಲಿ ಪರಿಸರ ಸಂರಕ್ಷಣಾ ಇಲಾಖೆ, ವನ್ಯ ಜೀವಿ ಮಂಡಳಿ ಹಾಗೂ ಪರಿಸರ ಪರವಾಗಿ ಕೆಲಸ ಮಾಡಬೇಕಿದ್ದ ಸರ್ಕಾರದ ಅನೇಕ ಇಲಾಖೆಗಳು ಒಟ್ಟಿಗೆ ಕೈಜೋಡಿಸಿವೆ. ಈ ಕುರಿತು ಪ್ರತಿಧ್ವನಿ ಈಗಾಗಲೇ ಬಹಳಷ್ಟು ವರದಿಗಳನ್ನು ಪ್ರಕಟಿಸಿದೆ.
Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?
ಆದರೆ, ಇತ್ತೀಚಿನ ಒಂದು ಘಟನೆ, ಇನ್ನೂ ಪರಿಸರ ಪರ ಹೋರಾಟಗಳು ಸತ್ತಿಲ್ಲ ಎಂಬುದನ್ನು ನಿರೂಪಿಸುವಂತಿವೆ. ಕೇವಲ 12 ವರ್ಷ ವಯಸ್ಸಿನ ಪುಟ್ಟ ಪೋರಿ ರಿಧಿಮಾ ಪಾಂಡೆ, ಎಂ ಕವಿಯಾ ಮತ್ತು ಇನ್ನೂ ಕೆಲವು ಮಕ್ಕಳ ತಂಡ ಪರಿಸರ ಸಂರಕ್ಷಣೆಗಾಗಿ ಪಣತೊಟ್ಟಿದೆ. ಪರಿಸರ ಪರ ಹೋರಾಟದಲ್ಲಿ ಕೇವಲ ಹಿರಿಯರಷ್ಟೇ ಅಲ್ಲದೇ, ದೇಶದ ಭವಿಷ್ಯವಾಗಿರುವ ಮಕ್ಕಳೂ ಕೂಡಾ ಸಣ್ಣ ವಯಸ್ಸಿನಲ್ಲಿಯೇ ಹೋರಾಟಕ್ಕೆ ಧುಮುಕುತ್ತಿರುವುದು ನಿಜಕ್ಕೂ ಧೈರ್ಯ ತುಂಬುವ ಸಂಗತಿ. ಅಂದಹಾಗೆ, ಅವರ ಹೋರಾಟಕ್ಕೆ ಫಲವೂ ದೊರೆಯುತ್ತಿದೆ.
Also Read: ಎತ್ತಿನಹೊಳೆ ಕಾಮಗಾರಿಗೂ ಮೊದಲು ಪರಿಸರ ಹಾನಿ ವರದಿ ಏಕೆ ಮಾಡಿಲ್ಲ?
23 ಜನ ಮಕ್ಕಳು ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸುಪ್ರಿಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಪರಿಸರ ವಿಜ್ಞಾನ ತಜ್ಞರ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವ ಕುರಿತಾಗಿ ಆರು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಉಳಿವಿಗಾಗಿ ಆಯಾ ರಾಜ್ಯಗಳಿಗೆ ನೋಟೀಸ್ ಜಾರಿ ಮಾಡಿದೆ.
Also Read: ಪರಿಸರ ಉಳಿಸಿ ಎಂಬ ಘೋಷಣೆ ಸಾಕು..!
ಪ್ರಕೃತಿಯನ್ನು ಉಳಿಸಲೇಬೇಕಾದ ತುರ್ತು ಮುಂದಿದೆ ಎಚ್ಚೆತ್ತುಕೊಳ್ಳಿ..!
ಈ ಅರ್ಜಿ ವಿಚಾರಣೆಯ ವಿಚಾರದಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ 23 ಅರ್ಜಿದಾರರಲ್ಲಿ 7 ಜನರು 18ಕ್ಕಿಂತಲೂ ಕಡಿಮೆ ವಯಸ್ಸಿನವರು. ಗೋವಾ ಮತ್ತು ಕೇರಳದ NGOಗಳ ಸದಸ್ಯರೂ ಈ ತಂಡದಲ್ಲಿದ್ದಾರೆ. 23 ಜನರೂ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದ ನೀಲಗಿರಿಯ ಎಂ ಕವಿಯಾ ಎಂಬ ಹುಡುಗಿಯ ಅರ್ಜಿಯನ್ನು ಮುಖ್ಯವಾಗಿ ಪರಿಗಣಿಸಲಾಗಿದೆ.
2011ರಲ್ಲಿ ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್ ಅವರ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟದ ಉಳಿವಿಗಾಗಿ ಗಣಿಗಾರಿಕೆ, ಕ್ವಾರಿ ಮತ್ತು Z-ಕೆಟಗರಿಯ ಕೈಗಾರಿಕೆಗಳನ್ನು ನಿಯಂತ್ರಿಸಬೇಕೆಂದು ವರದಿ ನೀಡಿತ್ತು. ಆದರೆ, ಆ ವರಿದಿಯು ಮೂಲೆಗುಂಪಾಗಿದ್ದು, ಯಾವ ರಾಜ್ಯಗಳೂ ಅದರ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಮತ್ತೆ ಆ ವರದಿಯ ಅನುಷ್ಠಾನಕ್ಕೆ ಒತ್ತು ನೀಡಲಾಗಿದ್ದು ಪರಿಸರ ಉಳಿಸುವ ನಿಟ್ಟಿನಲ್ಲಿ ಗಾಡ್ಗಿಲ್ ವರದಿ ಜಾರಿಯಾಗಲೇಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
Also Read: ಕೋಟಿ ಬೆಲೆಬಾಳುವ ಜಮೀನಿನಲ್ಲಿ ಕಾಡು ಬೆಳೆಸಿದ ಪರಿಸರ ಪ್ರೇಮಿ
ಗಾಡ್ಗಿಲ್ ವರದಿಯ ಪ್ರಕಾರ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ Eco Sensitive Zone (ESZ)ಗಳನ್ನು ಗುರುತಿಸಬೇಕು ಹಾಗೂ ಜನವಸತಿಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ESZಗಳಲ್ಲಿ ಯಾವುದೇ ರೀತಿಯ ಕೈಗಾರಿಕಾ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಬೇಕು. ಅದು ಹೈಡ್ರೋ ಯೋಜನೆಗಳಿರಲಿ, ವಿಂಡ್ ಮಿಲ್, ರಸ್ತೆ ನಿರ್ಮಾಣ ಅಥವಾ ಬೇರಾವುದೇ ರೀತಿಯ ನಿರ್ಮಾಣ ಕಾರ್ಯವನ್ನು ಇಲ್ಲಿ ಕೈಗೊಳ್ಳುವ ಹಾಗಿಲ್ಲ.
ಹೀಗೆ ಮಾಡಿದಲ್ಲಿ ಮಾತ್ರ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಬಹುದು ಎಂಬುದು ಗಾಡ್ಗಿಲ್ ವರದಿಯ ನಿಲುವಾಗಿತ್ತು. ಆದರೆ, ಇಂತಹ ವರದಿಯನ್ನು ಜಾರಿಗೊಳಿಸಿದಲ್ಲಿ ಎಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳು ಸರ್ಕಾರಗಳ ವಿರುದ್ದ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತದೋ ಎನ್ನುವ ಭಯ ಈವರೆಗೆ ವರದಿಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ. ಬಂಡವಾಳಶಾಹಿಗಳ ಎದುರು ಪರಿಸರ ಬರಡಾಗುತ್ತಿದೆ.
ಇಂತಹ ಸಂದರ್ಭದಲ್ಲಿ 23 ಜನ ಮಕ್ಕಳು ತೋರಿದಂತಹ ಪರಿಸರ ಪ್ರೇಮ ನಿಜಕ್ಕೂ ಶ್ಲಾಘನೀಯ. ಈ ರೀತಿಯಾದರೂ, ಸರ್ಕಾರಗಳು ಕೈಗಾರಿಕೆಗಳ ಪರ ವಕಾಲತ್ತು ವಹಿಸುವುದನ್ನು ಬಿಟ್ಟು ನಿಜವಾಗಿಯೂ ಪರಿಸರ ಪರವಾದ ಕಾಳಜಿಯನ್ನು ತೋರಿದ್ದಲ್ಲಿ ಮಾತ್ರ ಪಶ್ಚಿಮ ಘಟ್ಟಗಳ ಅಪಾರ ಸಸ್ಯ ಸಮೃದ್ದಿಯನ್ನು ಉಳಿಸಿಕೊಳ್ಳಬಹುದು. ಇಲ್ಲವಾದಲ್ಲಿ ಅತಿವೃಷ್ಟಿ, ಅನಾವೃಷ್ಟಿಯ ಹಾವಳಿಗೆ ಸಿಲುಕಿ, ಕೇಂದ್ರದ ಅನುದಾನ, ರಾಜ್ಯದ ಅನುದಾನಗಳ ಗೊಂದಲದ ನಡುವೆ ದೇಶದ ಜನರ ಪರಿಸ್ಥಿತಿ ಚಿಂತಾಜನಕವಾಗುವುದರಲ್ಲಿ ಸಂಶಯವಿಲ್ಲ.