ಭಾರತದಲ್ಲಿ ಕರೋನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ ಗತಿಯಲ್ಲಿ ಸಾಗುತ್ತಿದೆ. ಇದನ್ನು ಅಂಕಿಸಂಖ್ಯೆಗಳೇ ಸಾಬೀತು ಮಾಡುತ್ತಿವೆ. ಪ್ರಪಂಚದ ಕರೋನಾ ಲೆಕ್ಕಚಾರದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ 20,77,653 ಜನರು ಸೋಂಕಿತರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ 7,87,489 ಜನರಿಗೆ ಸೋಂಕು ಹರಡಿದೆ. ಇನ್ನೂ ಮೂರನೇ ಸ್ಥಾನದಲ್ಲಿ 5,02,436 ಜನ ಕೋವಿಡ್ ರೋಗಿಗಳನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ಇದೀಗ ಬ್ರಿಟನ್ ಹಿಂದಿಕ್ಕಿರುವ ಭಾರತ ನಾಲ್ಕನೇ 2,97,535 ಜನ ಸೋಂಕಿತರನ್ನು ಹೊಂದುವ ಮೂಲಕ ಸ್ಥಾನಕ್ಕೇರಿದೆ. 2,91,409 ಜನ ಸೋಂಕಿತರನ್ನು ಹೊಂದಿರುವ ಬ್ರಿಟನ್ ನಾಲ್ಕನೇ ಸ್ಥಾನದಿಂದ 5ಕ್ಕೆ ಇಳಿದಿದೆ.
ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಸೋಂಕು ಹರಡುವುದಕ್ಕೆ ಶುರುವಾಗಿದ್ದು ಇದೀಗ. ಸೋಂಕಿನ ಹರುಡುವಿಕೆ ತೀವ್ರವಾಗಿದ್ದು, ಸೋಂಕಿನ ಏರುಗತಿ ಬಗ್ಗೆ ತಜ್ಞರು ಅಂದಾಜು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಯಾವ ದಿನ ಎಷ್ಟು ಪ್ರಮಾಣದಲ್ಲಿ ಕೋವಿಡ್ 19 ಏರಿಕೆಯಾಗುತ್ತೆ ಎನ್ನುವ ಬಗ್ಗೆ ಬಿಡುಗಡೆಯಾಗಿರುವ ಅಂಕಿ ಸಂಖ್ಯೆ ಭಾರತೀಯರಾದ ನಮ್ಮಲ್ಲೆರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಸರಿಯಾಗಿ ಇನ್ನೊಂದು ತಿಂಗಳ ವೇಳೆಗೆ ಭಾರತದಲ್ಲಿ ಕರೋನಾ ಆಟ ಶುರುವಾಗಲಿದ್ದು, ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗುತ್ತಾ ಎನ್ನುವ ಭೀತಿಯನ್ನು ಸೃಷ್ಟಿಸಿದೆ.
ಭಾರತದಲ್ಲಿ ಹೆಚ್ಚಾಗುತ್ತಾರೆ ಲಕ್ಷ ಲಕ್ಷ ಸೋಂಕಿತರು..!
ಭಾರತದಲ್ಲಿ ಜೂನ್ 15ಕ್ಕೆ 3 ಲಕ್ಷದ 42 ಸಾವಿರ ಜನರಿಗೆ ಸೋಂಕು ಬರಲಿದೆ ಎನ್ನುವ ಮಾಹಿತಿಯನ್ನು ತಜ್ಙರು ತಿಳಿಸಿದ್ದಾರೆ. ಅದೇ ರೀತಿ ಜೂನ್ 30ರ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗಲಿದ್ದು 5 ಲಕ್ಷದ 82 ಸಾವಿರ ಜನರಿಗೆ ಮುಟ್ಟಲಿದೆ. ಇನ್ನೂ, ಮುಂದಿನ ತಿಂಗಳ ಜುಲೈ 15ರ ಹೊತ್ತಿಗೆ ಸುಮಾರು 10 ಲಕ್ಷ ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದಿದ್ದಾರೆ ಆರೋಗ್ಯ ತಜ್ಙರು. ಇನ್ನೂ ನಮ್ಮ ದೇಶಾದ್ಯಂತ ಆಸ್ಪತ್ರೆಯಲ್ಲಿದೆ 3 ಲಕ್ಷ ಐಸೋಲೇಷನ್ ಬೆಡ್ ವ್ಯವಸ್ಥೆಯಿದೆ. ಆಕ್ಸಿಜನ್ ಸಪೋರ್ಟ್ ಮಾಡಬಲ್ಲ ಬೆಡ್ ಇರೋದು 1 ಲಕ್ಷದ 20 ಸಾವಿರ ಮಾತ್ರ. ಹಾಸ್ಪಿಟಲ್ಗಳಲ್ಲಿ 32,000 ಐಸಿಯೂ ಬೆಡ್ ಮಾತ್ರ ಇವೆ. 21,494 ವೆಂಟಿಲೇಟರ್ ಸೌಲಭ್ಯವುಳ್ಳ ಬೆಡ್ ವ್ಯವಸ್ಥೆ ಇದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ದೆಹಲಿಯ ಕರೋನಾ ಲೆಕ್ಕವೇ ಆಪತ್ತಿನ ಸೂಚನೆ..!
ಕರೋನಾ ಸೋಂಕು ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಅತಿಕ್ರಮಣ ಶುರು ಮಾಡಿದೆ. ಸದ್ಯಕ್ಕೆ 32,810 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜುಲೈ ಅಂತ್ಯದ ವೇಳೆಗೆ ಐದೂವರೆ ಲಕ್ಷ ಜನರಿಗೆ ಸೋಂಕು ಹರಡಲಿದೆ ಎನ್ನುವ ಅಂದಾಜನ್ನು ದೆಹಲಿ ಸರ್ಕಾರವೇ ಬಿಡುಗಡೆ ಮಾಡಿದೆ. ಐದೂವರೆ ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡರೆ 80 ಸಾವಿರ ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಬೇಕಿದೆ. ಆದರೆ, ಸದ್ಯಕ್ಕೆ ದೆಹಲಿಯಲ್ಲಿ ಇರುವುದು ಕೇವಲ 20 ಸಾವಿರ ಬೆಡ್ ಸೌಲಭ್ಯ ಅಷ್ಟೆ. ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ 10 ಸಾವಿರ ಹಾಗೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆ ವ್ಯವಸ್ಥೆ ಇದೆ.
ಇನ್ನೂ 60 ಸಾವಿರ ಬೆಡ್ಗಳು ಬೇಕಿದ್ದು, ಕೊರತೆ ಇರುವ ಬೆಡ್ಗಳನ್ನು ಕಲ್ಪಿಸಲು ದೆಹಲಿ ಸರ್ಕಾರ ನಿರ್ಧಾರ ಮಾಡಿದೆ. ಇದೀಗ ಸದ್ಯಕ್ಕೆ 12.6 ದಿನಕ್ಕೆ ಸೋಂಕು ಡಬಲ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಕರೋನಾ ಸೋಂಕು ಏರಿಕೆಯಾಗುತ್ತೆ ಎನ್ನುವ ಮಾಹಿತಿ ಸಿಗುತ್ತಿದ್ದ ಹಾಗೆ ಖಾಸಗಿ ಆಸ್ಪತ್ರೆ ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದೆ. ಶೇಕಡ 20ರಷ್ಟು ಹಾಸಿಗೆ ಕಾಯ್ದಿರಿಸುವಂತೆ ಸರ್ಕಾರ ಆದೇಶ ಮಾಡಿದೆ. 50 ಹಾಸಿಗೆಗಿಂತಲೂ ಮೇಲ್ಪಟ್ಟು ಹಾಸಿಗೆ ವ್ಯವಸ್ಥೆ ಹೊಂದಿರುವ 117 ಆಸ್ಪತ್ರೆಗಳಿಗೆ ನೋಟಿಸ್ ಕೊಡಲಾಗಿದೆ. 52 ದಿನಗಳಲ್ಲಿ 60 ಸಾವಿರ ಹಾಸಿಗೆ ಹೊಂದಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಾ ಇದೆ.
ಜೂನ್ 15ಕ್ಕೆ ಅಂದಾಜು 44 ಸಾವಿರ ಜನರಿಗೆ ಸೋಂಕು ಬರಲಿದ್ದು, 6,600 ಜನರಿಗೆ ಆಸ್ಪತ್ರೆ ಅವಶ್ಯಕತೆ ಇದೆ. ಜೂನ್ 30ಕ್ಕೆ ಸೋಂಕು 1 ಲಕ್ಷ ಮುಟ್ಟಲಿದ್ದು, 15 ಸಾವಿರ ಜನರಿಗೆ ಬೆಡ್ ಬೇಕಿದೆ. ಮುಂದಿನ ತಿಂಗಳು ಜುಲೈ 15ಕ್ಕೆ 2.25 ಲಕ್ಷ ಜನರಿಗೆ ಸೋಂಕು ತಗುಲುವ ಸಾಧ್ಯತೆಯಿದೆ 33 ಸಾವಿರ ಜನರಿಗೆ ಹಾಸ್ಪಿಟಲ್ ಬೆಡ್ ಅವಶ್ಯಕತೆ ಇದೆ ಎನ್ನಲಾಗಿದೆ. ಇನ್ನೂ ಜುಲೈ 30ರ ವೇಳೆಗೆ 5.5 ಲಕ್ಷ ಜನ ದೆಹಲಿ ಒಂದರಲ್ಲೇ ಸೋಂಕು 80 ಸಾವಿರ ಜನರಿಗೆ ಆಸ್ಪತ್ರೆ ಚಿಕಿತ್ಸೆ ಬೇಕಿದೆ ಎಂದು ಅಂದಾಜು ಮಾಡಲಾಗಿದೆ.
ಕರ್ನಾಟಕಕ್ಕೂ ಕಾದಿದೆ ಬಹುದೊಡ್ಡ ಗಂಡಾಂತರ..!?
ಕರ್ನಾಟಕದಲ್ಲೂ ಕರೋನಾ ಸೋಂಕು ತೀವ್ರಗತಿಯಲ್ಲೇ ಏರಿಕೆಯಾಗುತ್ತಿದೆ. ಈ ಗುಟ್ಟನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರೇ ಬಿಚ್ಚಿಟ್ಟಿದ್ದಾರೆ. ಆದರೆ ತಜ್ಞರು ಕೊಟ್ಟಿರುವ ಅಂದಾಜು ಅಂಕಿ ಸಂಖ್ಯೆಯನ್ನು ರಾಜ್ಯ ಸರ್ಕಾರ ಬಹಿರಂಗ ಮಾಡ್ತಿಲ್ಲ. ಆದರೆ 10 ಲಕ್ಷ ಜನರಿಗೆ ಸೋಂಕು ಬಂದರು ಎದುರಿಸಲು ನಾವು ಸಿದ್ಧ ಎನ್ನುತ್ತಿದ್ದಾರೆ. ಸಚಿವರು ಹೇಳಿರುವ ಪ್ರಕಾರ ಸೋಂಕು ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಾ..? ಎನ್ನುವ ಅನುಮಾನವನ್ನು ಮೂಡಿಸುತ್ತಿದೆ.
ದೆಹಲಿ ಸರ್ಕಾರ ಒಂದು ಲೆಕ್ಕಾಚಾರ ಮಾಡಿಕೊಂಡು ಜನರಿಗೆ ಚಿಕಿತ್ಸೆ ನೀಡಲು ಸರ್ವ ಸನ್ನದ್ಧವಾಗುತ್ತಿದೆ. ನಮ್ಮ ಕರ್ನಾಟಕದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸರ್ವ ಶಕ್ತವಾಗಿದೆ ಎಂದು ಹೇಳುತ್ತಿದ್ದಾರೆ. ಅಂಕಿ ಸಂಖ್ಯೆ ಮುಚ್ಚಿಟ್ಟುಕೊಂಡು ಸಂಕಷ್ಟ ಸಿಲುಕುತ್ತಾ ರಾಜ್ಯ ಸರ್ಕಾರ..? ಎನ್ನುವ ಶಂಕೆ ವ್ಯಕ್ತವಾಗಿದೆ. ಕರೋನಾ ಸೋಂಕು ಯಾವ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನುವ ಅಂದಾಜು ಅಂಕಿ ಸಂಖ್ಯೆ ಘೋಷಿಸಿದ್ರೆ, ಸಾರ್ವಜನಿಕರು ಹೆಚ್ಚು ಎಚ್ಚರಿಕೆ ವಹಿಸಿ ಜಾಗೃತರಾಗ್ತಾರೆ. ಅಂದಾಜು ಅಂಕಿ ಸಂಖ್ಯೆ ಮುಚ್ಚಿಟ್ಟರೆ ಅಪಾಯವೇ ಹೆಚ್ಚು ಎನ್ನುವ ಮಾತುಗಳೂ ಕೇಳಿಬರುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿರುವಂತೆ ಸ್ಟೇಡಿಯಂಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ.
ನಿನ್ನೆ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗಿದೆ. ಮೊದಲ ಬಾರಿಗೆ ದಿನವೊಂದರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ನಿನ್ನೆ ಒಂದೇ ದಿನ 10,956 ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕರೋನಾ ಪೀಡಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ. ಇನ್ನೂ ನಿನ್ನೆ ಒಂದೇ ದಿನ ಕರೋನಾ ಸೋಂಕಿನಿಂದ 396 ಜನರು ಸಾವನ್ನಪ್ಪಿರುವುದೂ ಕೂಡ ದಾಖಲೆಯಾಗಿದೆ. ಈವರೆಗೂ ದೇಶದಲ್ಲಿ ಕರೋನಾದಿಂದ ಸತ್ತವರ ಸಂಖ್ಯೆ 8,498 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.