ಸರಕಾರದಿಂದ ಭೂಮಿ ಪಡೆದ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಯಾಕಾಗಿ ಕೋವಿಡ್-19 ಸೋಂಕಿತರಿಗೆ ಕಡಿಮೆ ದರದಲ್ಲಿ ಇಲ್ಲವೇ ಉಚಿತವಾಗಿ ಔಷಧಿ ನೀಡುತ್ತಿಲ್ಲ ಎನ್ನುವುದಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನ ಪ್ರಶ್ನಿಸಿದೆ. ಬುಧವಾರ (ಮೇ 27) ಅಡ್ವಕೇಟ್ ಸಚಿನ್ ಜೈನ್ ಎಂಬವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಹಾಗೂ ಎಎಸ್ ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನ ಖಾಸಗಿ ಆಸ್ಪತ್ರೆಗಳ ಹೆಚ್ಚುವರಿ ಶುಲ್ಕ ವಸೂಲಾತಿ ಕುರಿತು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಈ ಕುರಿತು ಸರಕಾರ ಸೂಕ್ತ ಕಾನೂನು ತಂದು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು. ಅಲ್ಲದೇ ವಾರದೊಳಗಾಗಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಹಾಗೂ ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನ ಗುರುತಿಸಿ ಜನರಿಗೆ ನೆರವಾಗುವಂತೆಯೂ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದಕ್ಕೆ ಒಂದು ವಾರದ ಕಾಲಾವಕಾಶ ಕೇಳಿದ ಸಾಲಿಸಿಟರ್ ಜನರ ತುಷಾರ್ ಮೆಹ್ತಾ ಮನವಿಯನ್ನ ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು, ಒಂದು ವಾರ ಕಾಲ ವಿಚಾರಣೆ ಮುಂದೂಡಿತು.
ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ವಕೀಲ ಶಶಾಂಕ್ದೇವ್ ಸುಧಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಂದು ಕೇಂದ್ರ ಸರಕಾರ ನಿಗದಿಪಡಿಸಿದ್ದ ರೂ. 4500 ಗಳನ್ನೂ ಸ್ವೀಕರಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಆದರೂ ನಿಯಮ ಉಲ್ಲಂಘಿಸಿರುವ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಯೊಬ್ಬನು ಅಸ್ಪತ್ರೆಯಿಂದ ಗುಣಮುಖನಾಗಿ ಹೊರಹೋಗುತ್ತಿದ್ದಂತೆ ಲಕ್ಷಕ್ಕೂ ಮಿಕ್ಕ ಬಿಲ್ಗಳನ್ನ ರೋಗಿಯ ಕುಟುಂದವರ ಕೈಗಿಡುತ್ತಿದೆ ಎನ್ನುವುದಾಗಿ ಅರ್ಜಿದಾರ ಸಚಿನ್ ಜೈನ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾ. ಅಲ್ಲದೇ ಕೋವಿಡ್-19 ಮುಂದಿಟ್ಟು ಖಾಸಗಿ ಆಸ್ಪತ್ರೆಗಳು ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದಿದ್ದರು.
ಜೊತೆಗೆ, ಖಾಸಗಿ ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಿಂದ ಹೊರಬರಬೇಕಾದರೆ 12 ಲಕ್ಷ ರೂಪಾಯಿ ಬಿಲ್ ಮಾಡಿದ್ದನ್ನ ಪ್ರಶ್ನಿಸಿ ಇನ್ಶೂರೆನ್ಸ್ ಕಂಪೆನಿಯೊಂದು ನ್ಯಾಯಾಲಯ ಮೆಟ್ಟಿಲೇರಲು ಮುಂದಾಗಿದ್ದನ್ನೂ ಅರ್ಜಿದಾರರು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇನ್ನು ಉಚಿತ ಭೂಮಿ ಪಡೆದ ಹಾಗೂ ಸರಕಾರದಿಂದ ಅನುದಾನ ಪಡೆಯುತ್ತಿರುವ ಆಸ್ಪತ್ರೆಗಳು ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸಲೇಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚನೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಸದ್ಯ ಖಾಸಗಿ ಆಸ್ಪತ್ರೆಗಳ ಲಕ್ಷಾಂತರ ರೂಪಾಯಿಗಳ ಬಿಲ್ ಕಂಡು ಇನ್ಶೂರೆನ್ಸ್ ಕಂಪೆನಿಗಳಂತೂ ಥಂಡಾ ಹೊಡೆದಿದ್ದಾವೆ. ಕಾರಣ, ಮಾರ್ಚ್-ಎಪ್ರಿಲ್ ತಿಂಗಳಲ್ಲಿ ದಾಖಲಾದ 41 ಅರ್ಜಿದಾರರು ಆರೋಗ್ಯ ವಿಮೆಗಾಗಿ ಸಲ್ಲಿಸಿದ್ದ ಬಿಲ್ ಮೊತ್ತವು ಸರಾಸರಿ 4 ರಿಂದ 5 ಲಕ್ಷವಿರುವುದಾಗಿ ಇನ್ಶೂರೆನ್ಸ್ ಕಂಪೆನಿಯೊಂದು ತಿಳಿಸಿದೆ. ಇದು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಹೆಸರಲ್ಲಿ ಮಾಡುತ್ತಿರುವ ವಸೂಲಿತನಕ್ಕೆ ಸಾಕ್ಷಿಯೆನಿಸುತ್ತಿದೆ.
ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಕೇಂದ್ರ ಸರಕಾರ ಮುಖೇನ ಖಾಸಗಿ ಆಸ್ಪತ್ರೆಗಳ ಹೆಚ್ಚುವರಿ ದರ ವಸೂಲಾತಿಗೆ ಕಡಿವಾಣ ಹಾಕುವಂತೆ ತಿಳಿಸಿದ್ದು, ಕೇಂದ್ರ ಸರಕಾರ ಇದನ್ನ ಯಾವ ರೀತಿ ಜಾರಿಗೆ ತರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.






