ಭಾರತದಲ್ಲಿ ಯಾವುದೇ ವಿಚಾರ ಎದುರಾದರೂ ಕೋಮು ಸಂಘರ್ಷಕ್ಕೆ ಒಳಗಾಗುತ್ತಿದೆ. ಇದೀಗ ಕರೋನಾ ವೈರಸ್ ಕೂಡ ಕೋಮು ದ್ವೇಷವನ್ನು ಹುಟ್ಟು ಹಾಕುತ್ತಿದೆ. ದೆಹಲಿಯ ನಿಜಾಮುದ್ದೀನ್ ಮರ್ಕಾಜ್ನಲ್ಲಿ ಮುಸ್ಲಿಂ ಸಮುದಾಯದ ತಬ್ಲಿಘಿ ಜನರು ಸಭೆ ಸೇರಿದ್ದರು. ಆ ಬಳಿಕ ಭಾರತದಾದ್ಯಂತ ಹರಿದು ಹಂಚಿ ಹೋಗಿದ್ದರು. ಅದರಲ್ಲಿ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ದೇಶದಲ್ಲಿ ಕೋಮು ಭಾವನೆ ಮೂಡಿಸುವ ಸುದ್ಧಿಗಳು ಪ್ರಚಲಿತಕ್ಕೆ ಬಂದವು. ಕೆಲವು ನಾಯಕರು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡಲು ಮುಂದಾದರು. ಮುಸ್ಲಿಮರು ಉದ್ದೇಶ ಪೂರ್ವಕವಾಗಿಯೇ ಕರೋನಾ ವೈರಸ್ ಹರಡಿಸುತ್ತಿದ್ದಾರೆ ಎನ್ನುವ ಮಾತುಗಳೂ ಅಲ್ಲಲ್ಲಿ ಕೇಳಿ ಬಂದವು. ಇದೀಗ ದೆಹಲಿಯಲ್ಲಿ ಓರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅದೂ ಕೂಡ ಕರೋನಾ ವೈರಸ್ ಸೋಂಕಿತ ಎನ್ನುವ ಅನುಮಾನದಲ್ಲಿ ಹಲ್ಲೆ ಮಾಡಿದ್ದಾರೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಬುಧವಾರ ದೆಹಲಿಯ ವಾಯುವ್ಯ ಜಿಲ್ಲೆಯ ಬವನ ನಗರದ ಹರೇವಾಳಿ ಹಳ್ಳಿಯ ಮೆಹಬೂಬ್ ಅಲಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. 22 ವರ್ಷದ ಮೆಹಬೂಬ ಅಲಿ, ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, 45 ದಿನಗಳ ಪ್ರವಾಸದ ಬಳಿಕ ತರಕಾರಿ ಸಾಗಿಸುವ ಟ್ರಕ್ನಲ್ಲಿ ದೆಹಲಿಗೆ ಬಂದಿಳಿದಿದ್ದ. ದೆಹಲಿಯ ಅಜಾದ್ಪುರ ತರಕಾರಿ ಮಾರ್ಕೆಟ್ನಲ್ಲಿ ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ಬಳಿಕ ಆತನನನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಆತ ತನ್ನ ಹುಟ್ಟೂರಿಗೆ ಹೋಗಿದ್ದ. ಈ ವೇಳೆ ಕರೋನಾ ವೈರಸ್ ಹರಡಲು ಮೆಹಬೂಬ ಅಲಿ ಬಂದಿದ್ದಾನೆ ಎನ್ನುವ ಬಗ್ಗೆ ವದಂತಿ ಹರಡಿತ್ತು. ಜನರು ಗುಂಪುಗೂಡಿ ಮೆಹಬೂಬ ಅಲಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಬಳಿಕ ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೊನಾ ವೈರಸ್ ಸೋಂಕಿನ ಶಂಕೆಯೂ ಇರುವು ಕಾರಣ ಐಸೊಲೇಟ್ ವಾರ್ಡ್ನಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಆದರೆ ಇಲ್ಲೀವರೆಗೂ ಕರೋನಾ ವೈರಸ್ನ ಯಾವುದೇ ಲಕ್ಷಣ ಕಂಡು ಬಂದಿಲ್ಲ, ಮಾರಣಾಂತಿಕ ಹಲ್ಲೆಯಾಗಿರುವುದರಿಂದ ಮೆಹಬೂಬ ಅಲಿ ಸಾವನ್ನಪ್ಪಿದ್ದಾನೆ ಎಂದು PTI ಸುದ್ದಿಸಂಸ್ಥೆ ವರದಿ ಮಾಡಿತ್ತು. ಆದರೆ ಆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೋನಾ ವೈರಸ್ ಹರಡಿಸುತ್ತಿದ್ದಾನೆ ಎಂದು ವದಂತಿ ಮೇಲೆ ಹಲ್ಲೆ ಮಾಡಿದ ನವೀನ್, ಪ್ರಶಾಂತ್, ಪ್ರಮೋದ್ ಎಂಬ ಮೂವರು ಯುವಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಘಟನೆ ಇಡೀ ದೇಶದ ಆತಂಕಕ್ಕೆ ಕಾರಣವಾಗಿದೆ. ನಿಜಾಮುದ್ದೀನ್ ಮರ್ಕಾಜ್ನ ತಬ್ಲಿಘಿ ಸಭೆಯಲ್ಲಿ ಭಾಗಿಯಾದವರು ಕೇವಲ ದೆಹಲಿಯ ಮುಸ್ಲಿಮರು ಮಾತ್ರವಿಲ್ಲ. ಸಾವಿರಾರು ಜನ ಭಾಗಿಯಾಗಿದ್ದರು. ದೇಶಾದ್ಯಂತ ಎಲ್ಲರು ಛಿದ್ರವಾಗಿದ್ದಾರೆ. ಎಲ್ಲೆಲ್ಲಿ ಧರ್ಮ ಪ್ರಚಾರ ನಡೆಸಲು ತೆರಳಿದ್ದರು ಅಲ್ಲಿಲ್ಲ ಅವರನ್ನು ಅಲ್ಲಿನ ಸರ್ಕಾರಗಳೇ ಕ್ವಾರಂಟೈನ್ ಮಾಡಿವೆ. ನೂರಾರು ಜನರಿಗೆ ಈಗಾಗಲೇ ಕರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಚಿಕಿತ್ಸೆಯೂ ನಡೆಯುತ್ತಿದೆ. ಇನ್ನೂ ಸಾಕಷ್ಟು ಮಂದಿ ತಬ್ಲಿಘಿ ಸಭೆಯಲ್ಲಿ ಭಾಗಿಯಾಗಿದ್ದವರು ಯಾಱರು ಎನ್ನುವ ಬಗ್ಗೆ ಪತ್ತೆ ಹಚ್ಚುವ ತನಿಖೆ ನಡೆಯುತ್ತಲೇ ಇದೆ. ಸಾಕಷ್ಟು ಮಂದಿ ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಗಾಗುವ ಮನಸ್ಸು ತೋರಿಲ್ಲ. ಚಿಕಿತ್ಸೆಗಾಗಿ ಕರೆತಂದವರ ಪೈಕಿ ಕೆಲವರು ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದ್ದೂ ಇದೆ. ಒಟ್ಟಾರೆ ಮುಸ್ಲಿಂ ಸಮುದಾಯದದ ತಬ್ಳಿಘಿಗಳು ನಡೆದುಕೊಂಡ ರೀತಿ, ಚಿಕಿತ್ಸೆ ಪಡೆಯಲು ನೆರವಾಗದ ವರ್ತನೆ ಜನರಲ್ಲಿ ಮತ್ತಷ್ಟು ಆಕ್ರೋಶವನ್ನು ಹುಟ್ಟುಹಾಕಿದೆ.
ಕರ್ನಾಟಕದಲ್ಲೂ ಮುಸ್ಲಿಮರನ್ನು ಕಂಡರೆ ದ್ವೇಷ ಹುಟ್ಟಿಸುವ ಕೆಲಸಗಳು ಜೋರಾಗಿಯೇ ನಡೆಯುತ್ತಿದೆ. ಜನಪ್ರತಿನಿಧಿಗಳು ಮನಸೋ ಇಚ್ಛೆ ದ್ವೇಷ ಕಾರುತ್ತಿದ್ದಾರೆ. ಅದನ್ನು ದೂರ ಮಾಡುವ ಸಲುವಾಗಿ ಸಿಎಂ ಯಡಿಯೂರಪ್ಪ ಸಮುದಾಯವನ್ನು ಗುರಿಯಾಗಿಸಬೇಡಿ ಎಂದಿದ್ದು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾಡಲು ಬಂದಿದ್ದ ಮುಸ್ಲಿಂ ವ್ಯಕ್ತಿಯನ್ನು ಓಡಿಸಲಾಗಿದೆ. ಇನ್ನೂ ಹಲವಾರು ಕಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಮುಸ್ಲಿಂ ವ್ಯಾಪಾರಿ ಕೊಟ್ಟಿದ್ದ ನೋಟುಗಳು ಎಂದು 2 ಸಾವಿರ ಹಾಗೂ 500 ಮುಖಬೆಲೆಯ ನೋಟುಗಳನ್ನು ಸೋಪ್ ನೀರಿನಿಂದ ತೊಳೆದ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಮುಸ್ಲಿಮರಿಂದ ಏನೂ ಖರೀದಿ ಬೇಡೆ ಎಂಬ ಸಂದೇಶ ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಇದೀಗ ಜನಪ್ರತಿನಿಧಿಗಳು ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳು ಯಶಸ್ವಿಯಾದರೆ ಕೋಮುಗಲಭೆ ನಡೆಯುವುದರಲ್ಲಿ ಅನುಮಾನವಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು. ಯಾರೋ ಒಬ್ಬ ಧರ್ಮಾಂಧ ವಿಡಿಯೋ ಮಾಡಿರಬಹುದು. ಆದರೆ ಎಲ್ಲರೂ ಧರ್ಮಾಂಧರಾಗಿ ಇರುವುದಿಲ್ಲ. ಮಾನವ ಧರ್ಮ ಅಷ್ಟೇ ಶ್ರೇಷ್ಠ. ಯಾವುದೇ ಬಾವುಟ ಹಾರಿಸಿ ಮೆರೆದಾಡಿದರೂ ಕೊನೆಗೆ ಹೋಗುವುದು ಮಣ್ಣಿಗೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ.