ನಟ ಕಂ ರಾಜಕಾರಣಿ ಕಮಲ್ ಹಾಸನ್ ರಾಷ್ಟ್ರವ್ಯಾಪಿ ಜಾರಿಗೊಳಿಸಲಾದ 21 ದಿನಗಳ ಲಾಕ್ಡೌನ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕರೋನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ವಿಧಿಸಲಾದ ಲಾಕ್ಡೌನ್ ಕುರಿತು ತಮ್ಮ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ಬರೆದಿರುವ ಪತ್ರದ ಸಾರಾಂಶ ಹೀಗಿದೆ.
ರಿಗೆ,
ಗೌರವಾನ್ವಿತ ಪ್ರಧಾನ ಮಂತ್ರಿಗಳು
ಗಣರಾಜ್ಯ ಭಾರತ
ಗೌರವಾನ್ವಿತರೇ,
ಇದು ನಾನು ನಿಮಗೆ ಬರೆಯುತ್ತಿರುವ ಎರಡನೇ ಪತ್ರವಾಗಿದೆ. ಈ ಹಿಂದೆ ಮಾರ್ಚ್ 23 ರಂದು ಈ ದೇಶದ ಓರ್ವ ನಾಗರಿಕನಾಗಿ ಪತ್ರ ಬರೆದಿದ್ದೆ. ಇಧಿಗ ಮತ್ತೊಮ್ಮೆ ದೇಶದ ನಾಗರಿಕನಾಗಿ ಆದರೆ ನಿರಾಶನಾಗಿ ಈ ಬಹಿರಂಗ ಪತ್ರ ನಿಮ್ಮ ಮುಂದಿಡುತ್ತಿದ್ದೇನೆ. ನನ್ನ ಪ್ರಥಮ ಪತ್ರದಲ್ಲಿ ನಾನು ಸಮಾಜದಲ್ಲಿರುವ ದೀನ ದಲಿತರ, ದುರ್ಬಲರ ಹಾಗೂ ಅವಲಂಬಿತರ ಬಗ್ಗೆ ಯಾವುದೇ ನಿರ್ಲಕ್ಷ್ಯ ಮಾಡದಿರಿ ಅಂತಾ ಒತ್ತಾಯಿಸಿದ್ದೆ. ಅದರ ಮರುದಿನವೇ ದೇಶಾದ್ಯಂತ ಕಟ್ಟುನಿಟ್ಟಿನ ಹಾಗೂ ತತ್ ಕ್ಷಣವೇ ಜಾರಿಗೆ ಬರುವಂತೆ ಲಾಕ್ಡೌನ್ ಘೋಷಿಸಲಾಯಿತು. ಇದು ಹೇಗಿತ್ತೆಂದರೆ ಬಹುತೇಕ ನೋಟ್ ಅಪಮೌಲ್ಯಗೊಳಿಸಿದ ರೀತಿಯಲ್ಲಿಯೇ ಇತ್ತು. ಆದರೂ ನಾನು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೆನು, ಏಕೆಂದರೆ ನಾನು ಆಯ್ಕೆ ಮಾಡಿದ ನಾಯಕ ನೀವು, ಮತ್ತು ಭರವಸೆ ಇಡಬಹುದಾದ ನಾಯಕರೂ ಆಗಿದ್ದೀರಿ. ನೋಟ್ ಅಪಮೌಲ್ಯಗೊಳಿಸಿದ್ದ ಸಂದರ್ಭದಲ್ಲೂ ನಾನು ನಿಮ್ಮ ಮೇಲೆ ಅತಿಯಾದ ಭರವಸೆ ಹೊಂದಿದ್ದೆ, ಆದರೆ ಕಾಲಾನಂತರ ನನ್ನ ಭರವಸೆ ತಪ್ಪು ಅನ್ನೋದಾಗಿ ಗೊತ್ತಾಯಿತು. ಮಾತ್ರವಲ್ಲದೇ ನೀವು ಕೂಡಾ ತಪ್ಪಾಗಿದ್ದೀರಿ ಅನ್ನೋದನ್ನು ಕಾಲವೇ ತಿಳಿಸಿತು ಸರ್..
ನಾನು ಈಗಲೂ ನಂಬಿದ್ದೇನೆ, ನೀವು ಈಗಲೂ 1.4 ಬಿಲಿಯನ್ ಭಾರತೀಯರ ನಾಯಕನಾಗಿದ್ದೀರಿ ಎಂದು. ಅದರಲ್ಲೂ ಇಂತಹ ಸಂದಿಗ್ಧ ಸ್ಥಿತಿಯಲ್ಲೂ ನಿಮ್ಮನ್ನು ನಿಜವಾಗಿಯೂ ಅನುಸರಿಸುವವರ ನಾಯಕನಾಗಿದ್ದೀರಿ ಎಂದು. ಜೊತೆಗೆ ಜಗತ್ತಿನಲ್ಲಿ ನಿಮ್ಮಂತಹ ಪ್ರಭಾವಿ ನಾಯಕ ಯಾರೂ ಇಲ್ಲ ಎಂದೇ ಭಾವಿಸಿದ್ದೇನೆ ಕೂಡಾ. ನೀವು ಏನೇ ಹೇಳಿದರೂ, ಅದನ್ನು ಪಾಲಿಸುತ್ತಿದ್ದಾರೆ. ಇಂದಿಗೂ ಅದೆಷ್ಟರ ಮಟ್ಟಿಗೆ ನಿಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ ಅಂದರೆ ನೀವು ಚಪ್ಪಾಳೆ ತಟ್ಟಿ ಅಂದಾಗ ಅಸಂಖ್ಯಾತ ಆರೋಗ್ಯ ಸಿಬ್ಬಂದಿಗಳಿಗೆ ದೇಶಾದ್ಯಂತ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಲಾಯಿತು. ನಾವು ನಿಮ್ಮ ವಿಚಾರ ಹಾಗೂ ಆದೇಶಗಳನ್ನು ಪಾಲಿಸಿದ್ದೇವೆ ಆದರೆ ನಮ್ಮ ಮಾತುಗಳು ಮಾತ್ರ ಕೇವಲ ನಮಗೆ ಸೀಮಿತವಾಗಬಾರದಲ್ಲವೇ. ಜನರ ಜೊತೆ ಬೆರೆಯುವ ಓರ್ವ ನಾಯಕನಾಗಿ ನನ್ನಲ್ಲೂ ಒಂದಿಷ್ಟು ಪ್ರಶ್ನೆಗಳಿವೆ.
ನನ್ನ ಆತಂಕವೇನೆಂದರೆ ನೋಟು ಅಪಮೌಲ್ಯಗೊಳಿಸಿದ ಸದರ್ಭದಲ್ಲಾದ ತೊಂದರೆ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಎದುರಾಗುವ ಸಾಧ್ಯತೆಯಿದೆ. ನೋಟು ಅಪಮೌಲ್ಯಗೊಳಿಸಿದ ಸಂದರ್ಭದಲ್ಲಿ ಬಡ ಮಂದಿಯ ಉಳಿತಾಯ ಮತ್ತು ಜೀವನ ಆಧಾರದ ಮೇಲೆ ಬಹುದೊಡ್ಡ ಪರಿಣಾಮ ಬೀರಿತ್ತು. ಅಂತಹದ್ದೇ ಪರಸ್ಥಿತಿಯನ್ನ ನಾವು ಮತ್ತೊಮ್ಮೆ ಎದುರು ನೋಡುತ್ತಿದ್ದೇವೆ. ಯೋಜನಾಬದ್ಧವಲ್ಲದ ಈ ಲಾಕ್ಡೌನ್ನಿಂದಾಗಿ ಬಡವರ್ಗದ ಮಂದಿ ಮತ್ತೊಮ್ಮೆ ಸಂಕಷ್ಟ ಪಡುತ್ತಿದ್ದಾರೆ. ಆದರೂ ಆ ಬಡವ ವರ್ಗಕ್ಕೆ ನಿಮ್ಮ ಹೊರತು ಯಾರೂ ಕಾಣಲಾರರು. ಒಂದು ಕಡೆ ನೀವು ಶ್ರೀಮಂತರಲ್ಲಿ ದೀಪ ಬೆಳಗಿಸುವ ಮೂಲಕ ಚಮತ್ಕಾರ ತೋರಿಸುತ್ತಿದ್ದರೆ, ಇನ್ನೊಂದೆಡೆ ಬಡವರು ತಾವು ಹೊಂದಿರುವ ದುಸ್ಥಿತಿಯ ನಾಚಿಕೆಗೇಡಿನ ಚಮತ್ಕಾರ ಕಾಣುವಂತಾಗಿದೆ.
ಮಾತ್ರವಲ್ಲದೇ ನಿಮ್ಮ ಜಗತ್ತು ಅನ್ನೋದು ಬಾಲ್ಕನಿಯಲ್ಲಿ ಎಣ್ಣೆ ಸುರಿದು ದೀಪ ಹಚ್ಚೋದರಲ್ಲಿ ನಿರತರಾಗಿದ್ದರೆ, ಅದೇ ಇನ್ನೊಂದು ಕಡೆ ಬಡವರು ತಮ್ಮಲ್ಲಿರೋ ಎಣ್ಣೆಯಲ್ಲಿ ಎಷ್ಟು ದಿನ ರೋಟಿ ಕಾಯಿಸಬಹುದು ಅಂತಾ ಲೆಕ್ಕ ಹಾಕುತ್ತಿದ್ದಾರೆ.
ನಿಮ್ಮ ಕಳೆದ ಎರಡು ಭಾಷಣದಲ್ಲಿ ನೀವು ಅಗತ್ಯ ಸೌಕರ್ಯ ಬೇಕಿರುವ ಜನರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದೀರಿ. ಆದರೆ ಅದಕ್ಕಿಂತಲೂ ಮುಖ್ಯವಾದ ವಿಚಾರವಿದೆ. ನಿಮ್ಮ ಸೈಕೋಥೆರಪಿ ತಂತ್ರಗಾರಿಕೆಯ ಮಾತುಗಳಿಗೂ ಮುನ್ನ ಬಾಲ್ಕನಿ ಮೇಲೆ ನಿಂತು ಚಿಯರ್ ಮಾಡುವವರ ಸಮಸ್ಯೆಗಳನ್ನು ಆಲಿಸಬೇಕಿದೆ. ಬಾಲ್ಕನಿ ಇದ್ದವರು ದೀಪ ಹಚ್ಚಿ ಅಭಿನಂದನೆ ತಿಳಿಸಿರಬಹುದು. ಆದರೆ ತಲೆ ಮೇಲೆ ಮೇಲ್ಛಾವಣಿಯೇ ಇಲ್ಲದವರ ಬಗ್ಗೆ ಆಲೋಚಿಸಿ. ನನಗೆ ಖಂಡಿತಾವಾಗಿಯೂ ಭರವಸೆಯಿದೆ, ನಿಮ್ಮದು ಕೇವಲ ಬಾಲ್ಕನಿ ಹೊಂದಿರುವವರ ಸರಕಾರವಾಗಲಾರಿರಿ. ಬದಲಾಗಿ ಈ ದೇಶದಲ್ಲಿ ವಾಸಿಸುವ ಬಾಲ್ಕನಿ ರಹಿತ ಬಹುದೊಡ್ಡ ಸಮಾಜದ ಸರಕಾರವೂ ಆಗುವಿರಿ ಎಂದು ನಂಬಿದ್ದೇನೆ. ಈ ದೇಶದ ವ್ಯವಸ್ಥೆ ಹಾಗೂ ನಿರ್ಮಾಣ ಅನ್ನೋದು ಮಧ್ಯಮ ವರ್ಗದವರಿಂದ ಆಗಿದೆ ಅನ್ನೋದೇನೋ ನಿಜ. ಸ್ಥಿತಿವಂತರು ಮತ್ತು ಶ್ರೀಮಂತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ಆದರೆ ಬಡವರ್ಗದ ಮಂದಿ ಯಾವತ್ತೂ ಸಮಾಜದ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಲಾರರು. ಹಾಗಂತ ದೇಶದ ಬೆಳವಣಿಗೆ ಮತ್ತು ಜಿಡಿಪಿಯಲ್ಲಿ ಅವರ ಪಾತ್ರವೇ ಇಲ್ಲ ಎಂದು ನಿರ್ಲಕ್ಷಿಸಲಾಗದು. ಕೆಳಸ್ತರವನ್ನು ವಿನಾಶಗೊಳಿಸಲು ಹೊರಟರೆ, ಅದು ಮೇಲುಸ್ತರದ ನಾಶಕ್ಕೂ ಕಾರಣವಾಗುತ್ತದೆ ಅನ್ನೋದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಇದನ್ನ ವಿಜ್ಞಾನ ಕೂಡಾ ಒಪ್ಪುತ್ತದೆ!
ಆದರೆ ಪ್ರಸ್ತುತ ಎದುರಾಗಿರುವ ಬಿಕ್ಕಟ್ಟು ಯಾರನ್ನೂ ಬಿಟ್ಟಿಲ್ಲ. ಸಮಾಜದಲ್ಲಿರುವ ಮೇಲ್ವರ್ಗದ ಮಂದಿಯಿಂದ ಹಿಡಿದು ಕೆಳವರ್ಗದ ಮಂದಿವರೆಗೂ ಯಾರನ್ನೂ ಬಿಟ್ಟಿಲ್ಲ. ಆದ್ದರಿಂದ ಪ್ರತಿಯೊಬ್ಬರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕಿದೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಸ್ಥರು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಮತ್ತು ಅಸಹಾಯಕ ವಲಸೆ ಕಾರ್ಮಿಕರು ಇವರೆಲ್ಲರೂ ಸುರಂಗದ ಕೊನೆಯಲ್ಲಿ ಬೆಳಕು ಕಾಣುತ್ತದೆಯೋ ಅನ್ನೋ ಹುಡುಕಾಟದಲ್ಲಿದ್ದರೆ, ನಾವು ಸುರಕ್ಷಿತವಾಗಿರುವ ಮಧ್ಯಮ ವರ್ಗವನ್ನಷ್ಟೇ ನೋಡುತ್ತಿದ್ದೇವೆ. ಅದನ್ನು ನಾನು ತಪ್ಪೆಂದು ಹೇಳಲಾರೆ. ಆದರೆ ನನ್ನ ಪ್ರಕಾರ ಈ ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗುವ ಸ್ಥಿತಿ ಬರಕೂಡದು ಅನ್ನೋದಾಗಿದೆ. ಕೋವಿಡ್-19 ಗಿಂಲೂ ಭವಿಷ್ಯದಲ್ಲಿ ಹಸಿವು, ಬಳಲುವಿಕೆ ಹಾಗೂ ಕೊರತೆ HED-20 (Hunger, Exhaustion, Deprivation) ಹೆಚ್ಚಿನ ಸಂತ್ರಸ್ತರನ್ನು ಹುಟ್ಟು ಹಾಕಲಿದೆ.
ಪ್ರತೀ ಬಾರಿಯೂ ನೀವು ಚುನಾವಣಾ ರೀತಿಯನ್ನೇ ಭಾವಿಸಿಕೊಂಡು ಮಾತನ್ನಾಡುತ್ತೀರಿ. ಆದ್ದರಿಂದ ನೀವು ನಾಗರಿಕ ಹಾಗೂ ರಾಜ್ಯ ಸರಕಾರಗಳಿಗೆ ಜವಾಬ್ದಾರಿ ವಹಿಸಿಕೊಡುತ್ತಿದ್ದೀರಿ. ಈ ಮೂಲಕ ನೀವು ವರ್ತಮಾನ ಮತ್ತು ಭವಿಷ್ಯದ ದಿನಗಳನ್ನು ಚಾಣಕ್ಷತನದಿಂದ ಸಮಯ ಕಳೆಯುವಂತೆ ತೋರುತ್ತಿದೆ. ನೀವೇನಾದರೂ ನಿಮ್ಮನ್ನು ಹಾಗೂ ಸರಕಾರವನ್ನು ಚಾಣಕ್ಷ ಅಂತಾ ಅಂದ್ಕೊಂಡಿದ್ದರೆ ಕ್ಷಮಿಸಿ ಬಿಡಿ. ಪೆರಿಯಾರ್ ಹಾಗೂ ಗಾಂಧಿ ಅನುಯಾಯಿಯಾಗಿ ನಾನು ಚೆನ್ನಾಗಿ ಅರಿತಿದ್ದೇನೆ, ಅವರಷ್ಟು ಬುದ್ಧಿವಂತರು ಯಾರೂ ಇರಲಾರರು. ಅವರು ಈ ಸಮಾಜಕ್ಕೆ ನೀತಿ, ಸಮಾನತೆ ಮತ್ತು ಸಮೃದ್ಧಿಯನ್ನು ತೋರಿಸಿಕೊಟ್ಟವರು.
ಗೊತ್ತು ಗುರಿಯಿಲ್ಲದ ವಿಚಾರಗಳಿಂದಾಗಿ ಜೀವ ಉಳಿಸುವಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಕಾನೂನು ಉಲ್ಲಂಘಿಸಿ ಗುಂಪು ಗೂಡುವ ಮೂರ್ಖ ಜನರು, ರೋಗ ಹರಡಲೂ ಕಾರಣರಾಗುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡರೆ ಯಾರು ಹೊಣೆ?
ಚೀನಾ ಸರಕಾರ ವಿಶ್ವ ಆರೋಗ್ಯ ಸಂಸ್ಥೆಗೆ ಒದಗಿಸಿದ ಮಾಹಿತಿ ಪ್ರಕಾರ, ಡಿಸೆಂಬರ್ 8 ನೇ ತಾರೀಕಿಗೆ ಚೀನಾದಲ್ಲಿ ಮೊದಲ ಕರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಜಗತ್ತಿಗೆ ಇದರ ಪರಿಣಾಮವನ್ನು ತಿಳಿದುಕೊಳ್ಳಲು ಸಮಯ ಬೇಕಾಯಿತು. ಭಾರತದಲ್ಲಿ ಜನವರಿ 30 ಕ್ಕೆ ಪ್ರಥಮ ಸೋಂಕು ಪತ್ತೆಯಾಯಿತಾದರೂ ಇಟೆಲಿಯಲ್ಲಾದ ದುರಂತದವರೆಗೂ ನಾವು ಎಚ್ಚೆತ್ತುಕೊಂಡಿರಲಿಲ್ಲ. ಆದರೆ ಮಾರ್ಚ್ 23 ರಂದು 4 ಗಂಟೆಯೊಳಗಾಗಿ ದೇಶವನ್ನೇ ಲಾಕ್ಡೌನ್ ಮಾಡಲು ತಿಳಿಸಿದಿರಿ. ಆ ಆದೇಶ 1.4 ಬಿಲಿಯನ್ ಜನಸಂಖ್ಯೆ ಹೊಂದಿದ ಇಡೀ ರಾಷ್ಟ್ರಕ್ಕಾಗಿತ್ತು.
ಆದರೆ ಈ ಬಾರಿ ನೀವು ಈ ವಿಚಾರದಲ್ಲಿ ವಿಫಲರಾಗಿದ್ದೀರಿ ಅಂತ ಹೇಳಲು ನನಗೆ ವಿಷಾದವಿದೆ. ನಿಮ್ಮ ಸರಕಾರ ಹಾಗೂ ಸರಕಾರದ ಪ್ರತಿನಿಧಿಗಳು ಟೀಕೆಗಳಿಗೆ ಉತ್ತರಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ. ದೇಶದ ಹಿತದೃಷ್ಟಿಯಿಂದ ಯಾರದರೂ ಮಾತನಾಡಿದರೆ ಅವರನ್ನು ಮೂದಲಿಸಿ ಟ್ರೋಲ್ ಮಾಡುವ ನಿಮ್ಮ ಪಡೆ ಅವರನ್ನು ʼದೇಶ ವಿರೋಧಿʼ ಎಂದು ಕರೆಯುತ್ತಿದೆ.
ಅಂತವರಿಗೆಲ್ಲ ನಾನು ಬಹಿರಂಗವಾಗಿ ಸವಾಲು ಒಡ್ಡುತ್ತೇನೆ ಈ ಸಮಯದಲ್ಲಿ ನನ್ನನ್ನು ದೇಶ ವಿರೋಧಿ ಎಂದು ಕರೆಯಲಿ. ಇಂತಹ ಸಂಧಿಗ್ಧತೆಗೆ ಸಾಮಾನ್ಯ ಜನರು ಸರಕಾರವನ್ನು ದೂರಲಾರರು. ಆದರೆ ನೀವು ಅವರನ್ನು ದೂರುವಂತೆ ಮಾಡುತ್ತಿದ್ದೀರಿ. ಏಕೆಂದರೆ ಜನರೂ ತಮ್ಮ ಸುರಕ್ಷಿತ ಜೀವನಕ್ಕೆ ಸರಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು ಸರಕಾರಕ್ಕೆ ಪಾವತಿ ಮಾಡುವವರೂ ಆಗಿದ್ದಾರೆ.
ಸರ್, ಇದು ನಿಜಕ್ಕೂ ಕಾಳಜಿ ತೋರಬೇಕಾದವರ ಮಾತುಗಳನ್ನ ಆಲಿಸುವ ಸಮಯ. ನಾನೂ ಕಾಳಜಿ ವಹಿಸುತ್ತಿದ್ದೇನೆ. ಈ ಸಮಯದಲ್ಲಿ ಎಲ್ಲರನ್ನೂ ನೀವು ಸಹಾಯಕ್ಕಾಗಿ ಕೇಳಿಕೊಳ್ಳಬೇಕಿದೆ . ಈ ದೇಶದ ಬಹುದೊಡ್ಡ ಆಸ್ತಿಯೆಂದರೆ ಈ ದೇಶದ ಮಾನವ ಸಾಮರ್ಥ್ಯ. ಈ ಹಿಂದೆಯೂ ನಾವು ದೊಡ್ಡ ದೊಡ್ಡ ಸಂಷ್ಟಗಳನ್ನು ಈ ಮೂಲಕ ಎದುರಿಸಿದ್ದೇವೆ. ಜೊತೆಗೆ ಎಲ್ಲರನ್ನೂ ಒಂದುಗೂಡಿಸಿ, ಯಾವುದೇ ಒಂದು ಕಡೆಗೆ ವಾಲದೆ ಇದ್ದರೆ ಇದರಲ್ಲೂ ನಾವು ಜಯಗಳಿಸುತ್ತೇವೆ.
ನಿಮ್ಮ ಮೇಲೆ ಕೋಪವಿದೆ, ಆದರೂ ನಿಮ್ಮ ಜೊತೆಗಿದ್ದೇನೆ. ಜೈ ಹಿಂದ್.
ಕಮಲ್ ಹಾಸನ್,
ಅಧ್ಯಕ್ಷ, ಮಕ್ಕಳ್ ನೀದಿ ಮೈಯಾಮ್
.