ಕರೋನಾ ಸೋಂಕು ನೇರವಾಗಿ ಹಳ್ಳಿಗಳ ಮಟ್ಟಕ್ಕೆ ಹರಡಿಲ್ಲ. ಆದರೆ, ಕರೋನಾ ತಡೆಯ ಲಾಕ್ ಡೌನ್ ಪರಿಣಾಮ ನಗರಕ್ಕಿಂತಲೂ ಭೀಕರವಾಗಿ ಹಳ್ಳಿಯ ಬದುಕಿನ ಮೇಲೆ ಬರೆ ಎಳೆದಿದೆ.
ಮುಖ್ಯವಾಗಿ ಹಣ್ಣು- ತರಕಾರಿ ಬೆಳೆಯುವ ಗ್ರಾಮೀಣ ಭಾಗದಲ್ಲಿ ರೈತರು, ಕೃಷಿ ಕೂಲಿಗಳು, ಚಿಕ್ಕಪುಟ್ಟ ಹಣ್ಣು-ತರಕಾರಿ ವ್ಯಾಪಾರಿಗಳು, ಸರಕೆ ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ ಬದುಕು ದಿಕ್ಕೆಟ್ಟಿದೆ. ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯ ಅನಾನಸು- ಶುಂಠಿ ಬೆಳೆಗಾರರಿಗೆ ಇದು ಕೊಯ್ಲು ಮತ್ತು ಬಿತ್ತನೆಯ ಹಂಗಾಮ. ಸಾವಿರಾರು ಟನ್ ಅನಾನಸು ಹಣ್ಣಾಗಿ ಹೊಲದಲ್ಲೇ ನೆಲಕ್ಕೊರಗುತ್ತಿದೆ. ಹಣ್ಣು ಕೊಯ್ಡು ಮಾರುಕಟ್ಟೆಗೆ ಸಾಗಿಸಲು ಮಾರುಕಟ್ಟೆ ತೆರೆದಿಲ್ಲ. ಪ್ರಮುಖವಾಗಿ ಇತರ ರಾಜ್ಯಗಳಿಗೆ ಹೋಗುವ ಈ ಉತ್ಪನ್ನಕ್ಕೆ ಈಗ ಎಲ್ಲೂ ಮಾರುಕಟ್ಟೆ ಇಲ್ಲ. ಪರಿಣಾಮವಾಗಿ ಬೆಳೆಗಾರನಿಂದ ಕೂಲಿಗಳವರೆಗೆ, ಸಾಗಣೆ ಲಾರಿ- ಲಜೇಜು ವಾಹನಗಳಿಂದ ಹಿಡಿದು ರಸ್ತೆಬದಿ ನೂರಾರು ಹಣ್ಣು ಇಟ್ಟುಕೊಂಡು ಮಾರಾಟಮಾಡುತ್ತಿದ್ದ ಹಳ್ಳಿಯ ಹುಡುಗರವರೆಗೆ ಎಲ್ಲರ ಬದುಕು ತತ್ತರಿಸಿದೆ.
ಇನ್ನು ಶುಂಠಿ ಬೆಳೆಗಾರರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಪ್ರಮುಖವಾಗಿ ಉತ್ತರಭಾರತ ಹಾಗೂ ಮುಂಬೈ ಮೂಲಕ ವಿದೇಶದ ಮಾರುಕಟ್ಟೆಗೆ ಹೋಗುವ ಇಲ್ಲಿನ ಶುಂಠಿ ಬೆಳೆ ಕೀಳಲು ಮತ್ತು ಈಗಾಗಲೇ ಕಿತ್ತು ಒಣಗಿಸಿರುವ ಶುಂಠಿ ಮಾರಾಟದ ಹಂಗಾಮಿದು. ಜೊತೆಗೆ ಮುಂದಿನ ವರ್ಷದ ಬೆಳೆ ನಾಟಿಗೂ ಮಾರ್ಚ್ ಮತ್ತು ಏಪ್ರಿಲ್ ಹಂಗಾಮು. ಆದರೆ, ಕೃಷಿ ಕೂಲಿಗಳು ಮತ್ತು ಬೆಳೆಗಾರರಿಗೆ ಈಗ ಲಾಕ್ ಡೌನ್ ನಿಯಂತ್ರಣ ಬಿದ್ದಿದೆ. ಹಾಗಾಗಿ ಶುಂಠಿ ಬೆಳೆ ಹೊಲದಲ್ಲಿದ್ದದ್ದು ಅಲ್ಲಿಯೇ, ಬೀಜ ಶುಂಠಿ ಮನೆಯಲ್ಲಿದ್ದದ್ದು ಮನೆಯಲ್ಲಿಯೇ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬಾಳೆ ಬೆಳೆಗಾರರ ಸ್ಥಿತಿ ಇನ್ನಷ್ಟು ಶೋಚನೀಯ. ಗೊನೆಗಳು ಬಲಿತು ಕೊಯ್ಲಿಗೆ ಬಂದು ಗಿಡದಲ್ಲಿ ಹಣ್ಣಾಗಿ ಉದುರುತ್ತಿದ್ದರೂ ಕಟಾವು ಮಾಡಿ ಮಾರಾಟ ಮಾಡಲಾಗದ ದುರಂತ ಬೆಳೆಗಾರರದ್ದು. ಸಾವಿರಾರು ಟನ್ ಬಾಳೆ ಹೊಲದಲ್ಲಿಯೇ ಮಣ್ಣುಪಾಲಾಗುತ್ತಿದ್ದು, ಮಾರುಕಟ್ಟೆಯ ಭಾಗ್ಯವಿಲ್ಲದೆ ಸಾಲ ಮಾಡಿ ಬೆಳೆ ಬೆಳೆದ ರೈತ ದಿಕ್ಕೆಟ್ಟು ಆಕಾಶ ನೋಡತೊಡಗಿದ್ದಾನೆ. ಈಗಾಗಲೇ ಹಲವು ರೈತರು ಲಾಕ್ ಡೌನ್ ಅನಾಹುತದಿಂದ ಬದುಕು ಕಳೆದುಕೊಂಡು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಉತ್ತರಕರ್ನಾಟಕದಲ್ಲಿಯೂ ದ್ರಾಕ್ಷಿ, ತೊಗರಿ, ಹಣ್ಣು ತರಕಾರಿ ಬೆಳೆಗಾರರು ಕಂಗಾಲಾಗಿದ್ದಾರೆ. ಲೋಡುಗಟ್ಟಲೆ ಫಸಲನ್ನು ಕೆರೆ-ಕಾಲುವೆಗಳಿಗೆ ಸುರಿಯತೊಡಗಿದ್ದಾರೆ.
ಹೈನುಗಾರರು ಕೂಡ ಈ ದುರಂತದಿಂದ ಹೊರತಾಗಿಲ್ಲ. ನಿತ್ಯ ಲಕ್ಷಾಂತರ ಲೀಟರು ಹಾಲನ್ನು ಕೊಳ್ಲಲಾಗದೆ ಹಾಲು ಒಕ್ಕೂಟಗಳು ತಿರಸ್ಕರಿಸುತ್ತಿವೆ. ಪರಿಣಾಮ ರೈತರು ಹೊಳೆ-ಕರೆಗಳಿಗೆ ಹಾಲು ಸುರಿದು ಹತಾಶೆಗೊಳಗಾಗುತ್ತಿದ್ದಾರೆ. ಕುಕ್ಕಟ ಉದ್ಯಮ ಕೂಡ ಈ ಕರೋನಾ ಏಟಿಗೆ ಬಸವಳಿದಿದ್ದು, ಜೊತೆಗೆ ಹಕ್ಕಿಜ್ವರದ ಆತಂಕದ ಹಿನ್ನೆಲೆಯಲ್ಲಿ ಕೋಳಿ ಮಾರುಕಟ್ಟೆ ಸಂಪೂರ್ಣ ಸ್ಥಗಿತವಾಗಿದೆ. ಪರಿಣಾಮವಾಗಿ ದಾವಣಗೆರೆ, ಶಿವಮೊಗ್ಗ, ಹಾವೇರಿಯಂಥ ರಾಜ್ಯದ ಕುಕ್ಕಟೋದ್ಯಮದ ಕೇಂದ್ರದಲ್ಲೇ ನೂರಾರು ಕಕ್ಕುಟೋದ್ಯಮಿಗಳು ಮತ್ತು ಚಿಕ್ಕಪುಟ್ಟ ರೈತರು ಸುಧಾರಿಸಿಕೊಳ್ಳಲಾಗದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದು ಸದ್ಯಕ್ಕೆ ಮೇಲ್ನೋಟಕ್ಕೆ ಕಾಣುವ ಕೃಷಿ, ಕುಕ್ಕುಟೋದ್ಯಮ ಮತ್ತು ಹೈನುಗಾರಿಕೆ ವಲಯದ ಬಿಕ್ಕಟ್ಟು. ಆದರೆ, ನೇರವಾಗಿ ಒಂದು ಬೆಳೆ, ಒಂದು ಕೃಷಿ ಪೂರಕ ಚಟವಟಿಕೆಗಳಿಗೆ ಬಿದ್ದ ಪೆಟ್ಟು ಇದು ಎಂದು ಮೇಲ್ನೋಟಕ್ಕೆ ಕಂಡುಬಂದರೂ, ವಾಸ್ತವವಾಗಿ ಆ ಬೆಳೆ- ಉದ್ಯಮ ಅವಲಂಬಿ ಕೃಷಿ ಕೂಲಿಗಳು, ಚಿಕ್ಕಪುಟ್ಟ ಹಳ್ಳಿಯ ವ್ಯಾಪಾರ ವಹಿವಾಟು, ಸರಕು ಸಾಗಣೆದಾರರು, ವ್ಯಾಪಾರಿಗಳು ಮತ್ತು ದಲ್ಲಾಲರು, ಹೀಗೆ ದೊಡ್ಡ ಜಾಲವೇ ದಿಢೀರ್ ಸಂಕಷ್ಟಕ್ಕೆ ಸಿಲುಕಿದೆ. ಆ ಮೂಲಕ ಹಳ್ಳಿಗಳು ಇಡಿಯಾಗಿ ದಿವಾಳಿಯಾಗುವ, ದೀರ್ಘಾವಧಿಯಲ್ಲಿ ಅನುಭವಿಸಬೇಕಾದ ಅಪಾಯಕ್ಕೆ ಈಡಾಗಿವೆ. ಆದರೆ, ದೂರಗಾಮಿ ದುಷ್ಪರಿಣಾಮಗಳಲ್ಲಿ ಸದ್ಯಕ್ಕೆ ಈಗ ಕಾಣುತ್ತಿರುವುದು ನೇರವಾಗಿ ಲಾಕ್ ಡೌನ್ ಏಟಿಗೆ ಗುರಿಯಾಗಿರುವವರ ಸಂಕಟ ಮಾತ್ರ. ಇದು ಕೂಡ ಒಂದು ರೀತಿಯ ಆರ್ಥಿಕ ಬಿಕ್ಕಟ್ಟಿನ, ಭೀಕರ ಹಣಕಾಸು ಮುಗ್ಗಟ್ಟಿನ ಮಹಾಮಾರಿಯ ಆರಂಭಿಕ ಲಕ್ಷಣಗಳು ಮಾತ್ರ. ಮುಂದೆ ಇದರ ಪರಿಣಾಮಗಳು ರೋಗ ಉಲ್ಬಣವಾದಂತೆ ಇನ್ನಷ್ಟು ಭೀಕರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿವೆ. ಹಳ್ಳಿಯ ಸೂಕ್ಷ್ಮ ಆರ್ಥಿಕ ಜಾಲಕ್ಕೆ ಈ ಲಾಕ್ ಡೌನ್ ಕೊಟ್ಟಿರುವ ಪೆಟ್ಟಿನ ನಿಜ ಸ್ವರೂಪ ಗೊತ್ತಾಗಲೂ ಇನ್ನೂ ಒಂದೆರಡು ತಿಂಗಳು ಹಿಡಿಯಬಹುದು.
ಮುಖ್ಯವಾಗಿ ಹಣ್ಣು-ತರಕಾರಿ ಬೆಳೆಗಳು ಕಟಾವಾಗಿ ಮಾರುಕಟ್ಟೆಗೆ ಬರುವ ಈ ಹೊತ್ತಿನಲ್ಲಿ; ಜಾರಿಗೆ ಬಂದ ಲಾಕ್ ಡೌನ್ ಹಳ್ಳಿಯ ಜಮೀನಿನಿಂದ ನಗರದ ಮಾರುಕಟ್ಟೆಗೆ ಇರುವ ಪೂರೈಕೆ ಮತ್ತು ಬೇಡಿಕೆಯ ನಡುವಿನ ಸರಪಳಿಯನ್ನೇ ತುಂಡುಮಾಡಿದೆ. ಹಾಗಾಗಿ ಕೊಯ್ಲಿಗೆ ಬಂದ ಬೆಳೆ ಕೊಯ್ಲು ಕಾಣದೆ ಹೊಲದಲ್ಲೇ ಮಣ್ಣಾಗುತ್ತಿದ್ದರೆ, ಮಾರುಕಟ್ಟೆಯ ಬಾಗಿಲು ತೆರೆಯದೆ, ಬಳಕೆದಾರನಿಗೆ ತಲುಪದೆ ಮತ್ತೊಂದು ತುದಿಯಲ್ಲಿ ವಿಪರೀತ ಬೆಲೆ ಏರಿಕೆಯಾಗಿದೆ. ಒಂದು ಕಡೆ ಟೊಮ್ಯಾಟೋ ಕೊಳ್ಳುವವರಿಲ್ಲದೆ ರೈತರು ಕೆರೆ-ಕಾಲುವೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ಪಟ್ಟಣಗಳಲ್ಲಿ ದುಬಾರಿ ಬೆಲೆಗೆ ಮಾರಾಟ (ಕೆಲವೇ ಕೆಲವು ನಿಗದಿತ ಮಾರಾಟಗಾರರು ಮತ್ತು ಸರ್ಕಾರಿ ಹಾಪ್ ಕಾಮ್ಸ್ ಮಳಿಗೆಗಳಲ್ಲಿ) ಮಾಡಲಾಗುತ್ತಿದೆ.
ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುವುದಾಗಿ ಹೇಳಿರುವ ಸಿಎಂ ಯಡಿಯೂರಪ್ಪ ಅವರು, ತರಕಾರಿ ಮತ್ತು ಹಣ್ಣು ಸೇರಿದಂತೆ ಹೆಚ್ಚು ದಿನ ಬಾಳಿಕೆ ಬರದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡುವುದಾಗಿ ಬುಧವಾರ ಹೇಳಿದ್ದಾರೆ. ಇದು ಕೃಷಿಕರಿಗೆ ಮತ್ತು ಆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೃಷಿ ಕೂಲಿಗಳು, ಸಾಗಣೆದಾರರು, ದಲ್ಲಾಲರು, ವ್ಯಾಪಾರಿಗಳಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ತರಕಾರಿ ಮಂಡಿಗಳಿಗೆ, ಮಾರುಕಟ್ಟೆಗಳಿಗೆ ಜನರು ಹೋಗುವ ಅವಕಾಶವೇ ಇಲ್ಲದೆ, ವ್ಯಾಪಾರಿಗಳಿಗೆ ಇಂತಹ ವಸ್ತುಗಳನ್ನು ಖರೀದಿಸಲು ಹೇಗೆ ಧೈರ್ಯಬರಲಿದೆ? ಎಂಬುದು ಪ್ರಶ್ನೆ.
ರೈತರಿಂದ ಖರೀದಿಸಿದ ಹಣ್ಣು-ತರಕಾರಿ ಮಾರುಕಟ್ಟೆಯ ಮೂಲಕ ಅಥವಾ ನೇರವಾಗಿ ಗ್ರಾಹಕರ ಕೈಸೇರಿದರೆ ಮಾತ್ರ ವಹಿವಾಟು ಸುಸೂತ್ರ. ಈ ಸರಪಳಿಯಲ್ಲಿ ಯಾವುದೇ ಒಂದು ಕೊಂಡಿ ತುಂಡಾದರೂ ಇಡೀ ವ್ಯವಸ್ಥೆಯೇ ಸ್ಥಗಿತಗೊಳ್ಳಲಿದೆ. ಈಗ ಸಂಪೂರ್ಣ ಲಾಕ್ ಡೌನ್ ಕಾರಣಕ್ಕೆ ಗ್ರಾಹಕರು ಮುಕ್ತವಾಗಿ ರಸ್ತೆಗಳಿಯುವಂತಿಲ್ಲ. ಕೆಲವು ಕಡೆ ದ್ವಿಚಕ್ರ ಮತ್ತು ಕಾರು ಬಳಕೆಗೂ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಿರುವಾಗ ಮುಕ್ತ ವ್ಯಾಪಾರ- ವಹಿವಾಟಿಗೆ ಅವಕಾಶವೆಲ್ಲಿ? ಕೆಲವು ಕಡೆ ನಗರದ ಜನವಸತಿ ಪ್ರದೇಶಗಳಲ್ಲಿ ಮನೆಮನೆಗೆ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ವ್ಯವಸ್ಥೆ ಮಾಡಲಾಗಿದ್ದರೆ, ಮತ್ತೆ ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಪ್ಸ್ ಕಾಮ್ಸ್ ಮಳಿಗೆ ಮತ್ತು ಬೆಳಗಿನ ತರಕಾರಿ ಸಂತೆಗಳಲ್ಲಿ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಯಾವ ವ್ಯವಸ್ಥೆಯೂ ಮುಕ್ತ ವಹಿವಾಟಿನ ಶೇ.40ರಷ್ಟು ವಹಿವಾಟಿಗೂ ಅವಕಾಶ ನೀಡುವುದಿಲ್ಲ. ಗ್ರಾಹಕ ಕೂಡ ಈಗ ತೀರಾ ಅನಿವಾರ್ಯದ ಮಟ್ಟಿಗೆ ತರಕಾರಿ-ಹಣ್ಣು ಖರೀದಿಗೆ ತನ್ನ ಬೇಡಿಕೆ ಸೀಮಿತಗೊಳಿಸಿಕೊಂಡಿದ್ದಾನೆ. ಹೀಗಿರುವಾಗ, ರೈತನ ಹೊಲದ ಬೆಳೆ ಇಡಿಯಾಗಿ ಗ್ರಾಹಕದ ತಟ್ಟೆಗೆ ತಲುಪುವುದು ಸಾಧ್ಯವೇ ಇಲ್ಲ. ಇನ್ನು ಅಂತಾರಾಜ್ಯ ಮತ್ತು ವಿದೇಶಿ ವಹಿವಾಟು ಕೂಡ ಬಹುತೇಕ ಸ್ಥಗಿತವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಸಿಎಂ ಅವರು ನೀಡಿದ ಭರವಸೆ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆಯಾಗಬಹುದೇ ವಿನಃ, ಕೃಷಿಕರು ಎದುರಿಸುತ್ತಿರುವ ಪತನದ ಭೀತಿಯಿಂದ ಅವರನ್ನು ಇಡಿಯಾಗಿ ಪಾರು ಮಾಡಲಾಗದು.
ಈ ದಿಸೆಯಲ್ಲಿ ಒಂದಿಷ್ಟು ಪ್ರಯೋಜನಕಾರಿಯಾಗಬಹುದಾದ ಮಾರ್ಗವೆಂದರೆ; ಬಹುಶಃ ಈಗಾಗಲೇ ಉತ್ತರಕನ್ನಡ ಜಿಲ್ಲೆ ಸೇರಿದಂತೆ ಅಲ್ಲಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ತರಕಾರಿ-ಹಣ್ಣು ಮುಂತಾದ ದಿನಬಳಕೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಆನ್ ಲೈನ್ ಸೇವಾ ವ್ಯವಸ್ಥೆ. ಸ್ವಯಂಸೇವಾ ಸಂಸ್ಥೆಗಳು, ಕೆಲವು ಆನ್ ಲೈನ್ ಸೇವಾ ಕಂಪನಿಗಳ ಸಹಯೋಗದಲ್ಲಿ ನೇರವಾಗಿ ಬೆಳೆಗಾರರಿಂದ ಗ್ರಾಹಕರಿಗೆ ಹಣ್ಣು-ತರಕಾರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಬಹುದು. ಅದು ಸ್ಥಳೀಯ ಮಟ್ಟದಲ್ಲಿಯೇ; ಗ್ರಾಮ ಪಂಚಾಯ್ತಿ, ತಾಲೂಕು ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯ. ಈ ವ್ಯವಸ್ಥೆಯಲ್ಲಿ ಗ್ರಾಮ ಮಟ್ಟದ ತರಕಾರಿ- ಹಣ್ಣು ವ್ಯಾಪಾರಿಗಳನ್ನೂ ಒಳಗೊಳ್ಳಬಹುದು.
ಈ ದಿಸೆಯಲ್ಲಿ ಮತ್ತೊಂದು ಸಾಧ್ಯತೆ ಇರುವುದು, ನ್ಯಾಯಬೆಲೆ ಅಂಗಡಿಗಳನ್ನು ಬಳಸಿಕೊಂಡು ಪಡಿತರದೊಂದಿಗೆ ಸ್ವಯಂಸೇವಕರು ಅಥವಾ ಇತರೆ ಸರ್ಕಾರಿ ಸಿಬ್ಬಂದಿ ಬಳಸಿಕೊಂಡು ಹಣ್ಣು-ತರಕಾರಿ ಮಾರಾಟ ವ್ಯವಸ್ಥೆಯನ್ನು ಮಾಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಗ್ರಾಮಮಟ್ಟದಲ್ಲಿ ಬೆಳೆದ ಹಣ್ಣು ತರಕಾರಿಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು ಮತ್ತು ಹಳ್ಳಿಯ ಜನ ತರಕಾರಿ-ಹಣ್ಣು ಖರೀದಿಗಾಗಿ ನಗರ- ಪಟ್ಟಣಗಳಿಗೆ ಹೋಗುವುದನ್ನು ತಡೆಯುವುದು ಕೂಡ ಸಾಧ್ಯ. ಆದರೆ, ಈ ವ್ಯವಸ್ಥೆ ಜಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಜನಪರ ಕಾಳಜಿಯ ಅಗತ್ಯ ಹೆಚ್ಚಿದೆ.
ಇಂತಹ ಪರ್ಯಾಯ ಕ್ರಮಗಳು ಮಾತ್ರ ಒಂದು ಕಡೆ ಕೃಷಿಕರನ್ನು ಮತ್ತೊಂದು ಕಡೆ ಗ್ರಾಹಕರನ್ನುಈ ಲಾಕ್ ಡೌನ್ ಪತನದಿಂದ ಪಾರುಮಾಡಬಲ್ಲವು. ಆಗ ಬೆಳೆಗಾರನಿಗೂ ತಕ್ಕ ಬೆಲೆ, ಗ್ರಾಹಕನಿಗೂ ನ್ಯಾಯಯುತ ಬೆಲೆಗೆ ವಸ್ತು ಸಿಗಲು ಸಾಧ್ಯ. ಒಂದೊಂದು ಹೋಬಳಿಗೆ ನಾಲ್ಕಾರು ಗುಂಪುಗಳು ಇಂತಹ ಕೆಲಸಗನ್ನು ಮಾಡುವುದಾದರೆ; ಆಗ ಹಳ್ಳಿಗಳನ್ನು ದಿವಾಳಿಯ ಪ್ರಪಾತದಿಂದ ಪಾರುಮಾಡುವುದು ಸಾಧ್ಯ.
ಇಂತಹ ಪ್ರಾಯೋಗಿಕವಾಗಿ ಸಾಧ್ಯವಿರುವ ಮತ್ತು ಸೋಂಕು ನಿಯಂತ್ರಣವೂ ಸಾಧ್ಯವಿರುವ ಮಾದರಿಗಳ ಬಗ್ಗೆ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ರಚನಾತ್ಮಕವಾಗಿ ಯೋಚಿಸಿದರೆ ಕೇವಲ ಹಳ್ಳಿಗಳನ್ನಷ್ಟೇ ಅಲ್ಲ; ದೇಶದ ಆರ್ಥಿಕತೆಯನ್ನು ಕೆಲಮಟ್ಟಿಗಾದರೂ ಕಾಪಾಡಬಹುದು.





