(ಜಂತರ್ ಮಂತರ್ ಮತ್ತು ಸಾಮಾಜಿಕ ಅಂತರ್ ಮಂಥನ- ಲೇಖನದ ಮುಂದುವರಿಕೆ)
ವರ್ತಮಾನ ಭಾರತದ ಸಂದರ್ಭದಲ್ಲಿ ಆಗಬೇಕಿರುವುದು ಚರಿತ್ರೆಯ ಭಜನೆ ಅಲ್ಲ ಅಥವಾ ಭವಿಷ್ಯದ ಕನಸುಗಳ ನಿರ್ಮಾಣವೂ ಅಲ್ಲ. ಈಗ ಆಗಬೇಕಿರುವುದು ನಾವು ಕಂಡ ಕನಸುಗಳು ಭಗ್ನವಾಗಿದ್ದೇಕೆ ಎಂಬ ಸ್ವಯಂ ವಿಮರ್ಶಾತ್ಮಕ ವಿಶ್ಲೇಷಣೆ . ಬಹುಶಃ ಐದಾರು ದಶಕಗಳ ಸಾಮಾಜಿಕ ಹೋರಾಟಗಳು ಮತ್ತು ಬೌದ್ಧಿಕ ಸಂಕಥನಗಳ ಭಾಗಿದಾರರು (Stakeholders) ಈ ದೃಷ್ಟಿಯಿಂದ ಯೋಚಿಸಿದ್ದರೆ , ನಾವು ನಡೆದುಬಂದ ಹಾದಿಯಿಂದಲೇ ಭವಿಷ್ಯದ ದಿಕ್ಸೂಚಿಗಳನ್ನು ಮರುಸೃಷ್ಟಿ ಮಾಡಬಹುದಿತ್ತು. ಗತದಲ್ಲಿ ವಿಫಲವಾದ ಅಥವಾ ಭಾಗಶಃ ಸಫಲವಾದ ಹೋರಾಟಗಳನ್ನೆ ಪುನರ್ ನವೀಕರಿಸುವುದಕ್ಕಿಂತಲೂ ಸಿದ್ಧಮಾದರಿಗಳನ್ನು ದಾಟಿ ಯೋಚಿಸಿ ಡಿಜಿಟಲ್ ಯುಗದ ಯುವ ಜನಾಂಗಕ್ಕೆ ತಲುಪುವಂತಹ ಹೋರಾಟದ ಮಾದರಿಗಳನ್ನು ರೂಪಿಸಬಹುದಿತ್ತು.

ಇದು ಸಾಧ್ಯವಾಗಿಲ್ಲ ಎನ್ನುವುದು ನಿರ್ವಿವಾದ ಸತ್ಯ. ಹಾಗಾಗಿಯೇ NEET ಹಗರಣದ ಸಂದರ್ಭದಲ್ಲಿ ನಿರ್ವಾತ (Vacuum) ಸೃಷ್ಟಿಯಾಗಿದ್ದು , ಯುವ ಜನರಿಂದಲೇ ಕೂಡಿದ ಕಾಕ್ರೋಚ್ ಜನತಾ ಪಕ್ಷ (CJP) ಉಗಮಿಸಿದೆ. ಈ ಉಗಮಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಹೇಳಿಕೆಯೊಂದೇ ಪ್ರಚೋದನೆಯಲ್ಲ. ಭಾರತದ ರಾಜಕಾರಣದಲ್ಲಿ, ಸಾಮಾಜಿಕ ಚಳುವಳಿಗಳಲ್ಲಿ ಒಂದು ಹೊಸ ಯುವ ದನಿಯ ಅವಶ್ಯಕತೆ ಇತ್ತು. ಭತ್ತದ ಕಣದಲ್ಲಿ ಚೆಲ್ಲಿದ ಒಣಗಿದ ಪೈರುಗಳನ್ನು ಬಡಿದುಬಡಿದು ಅಕ್ಕಿಯನ್ನು ಹೊರತರುವ ರೀತಿಯಲ್ಲಿ, ಭಾರತೀಯ ಸಮಾಜದಲ್ಲಿ ಹಂಚಿಹೋಗಿದ್ದ ಯುವ ಜನಾಂಗದ ದನಿಯ ಒಳಹೊಕ್ಕು ನೋಡುವ ಮೂಲಕ, ಅಲ್ಲಿನ ತಳಮಳ, ಆತಂಕ, ಹತಾಶೆಗಳನ್ನು ಭವಿಷ್ಯದ ಹೋರಾಟಗಳಿಗೆ ದಿಕ್ಸೂಚಿಯ, ವೇದಿಕೆಯ ಅವಶ್ಯಕತೆ ಇತ್ತು. ಆದರೆ ಇದು ಸಾಧ್ಯವಾಗಿಲ್ಲ.
ಯುವ ದನಿಯ ಹೊಸ ಆಯಾಮ
ಈ ಅವಶ್ಯಕತೆಯನ್ನು ಪೂರೈಸಲು ಅಲ್ಲದಿದ್ದರೂ, ಅದರ ಇರುವಿಕೆಯನ್ನು ಸಮಾಜದ ಮುಂದೆ ತೆರೆದಿಡುವ ರೀತಿಯಲ್ಲಿ ಅಭಿಜಿತ್ ದೀಪ್ಕೆ ಎಂಬ ದಲಿತ ಯುವಕ ಮತ್ತು ಆತನ ಸಂಗಡಿಗರು ಸಿಜೆಪಿ ಪಕ್ಷದ ಉಗಮಕ್ಕೆ ಕಾರಣರಾಗಿದ್ದಾರೆ. ಆತನ ಮೇಲೆ ನೀಲಿ ಮಸಿಯನ್ನು ಎರಚಿದ ಮಹಿಳೆ ಸಾಂಪ್ರದಾಯಿಕ ಭಾರತೀಯ ಸಮಾಜದ ಪ್ರತಿಮೆಯಾಗಿ ಮಾತ್ರ ಕಾಣುತ್ತಾಳೆ. ಆಕೆಯ ಕೃತ್ಯದ ಹಿಂದೆ ಅಸಹನೆ, ದ್ವೇಷ, ಆಕ್ರೋಶ ಎಲ್ಲವೂ ಅಡಗಿದೆ. ಇವೆಲ್ಲವನ್ನೂ ನಿಗ್ರಹಿಸುವ ಅಮೂರ್ತ ಶಕ್ತಿಯೂ ಇದೆ. ತನ್ನ ಮೇಲೆ ಎರಚಲಾದ ನೀಲಿ ಬಣ್ಣದ ಶಾಯಿಯನ್ನು ಸೈದ್ಧಾಂತಿಕ ತಳಹದಿಯ ಸಂಕೇತವನ್ನಾಗಿ ನೋಡುವ ಮೂಲಕ ಅಭಿಜಿತ್ ದೀಪ್ಕೆ ದಲಿತ ಪ್ರಜ್ಞೆಯ ಒಂದು ಛಾಯೆಯನ್ನು ಪ್ರದರ್ಶಿಸಿದ್ದಾರೆ.
NEET ಅಕ್ರಮಗಳ ವಿರುದ್ಧ, ಸರ್ಕಾರದ ಉತ್ತರದಾಯಿತ್ವಕ್ಕಾಗಿ ಆರಂಭವಾದ ಯುವ ಜನಾಂಗದ ಹೋರಾಟಕ್ಕೆ ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಮತ್ತು ತದನಂತರದ ಅವರ ಬಂಧನ ಹೊಸ ಆಯಾಮವನ್ನು ನೀಡಿದೆ. ಹೋರಾಟವನ್ನು ಮುಂದುವರೆಸಲು ನಿರ್ಧರಿಸಿರುವ ವಿದ್ಯಾರ್ಥಿ ಮುಖಂಡರು ಪುನಃ ಉಪವಾಸ ಸತ್ಯಾಗ್ರಹವನ್ನೇ ಕೈಗೊಂಡಿರುವುದು ಅಪೇಕ್ಷಣೀಯವಲ್ಲ. ಸಿಜೆಪಿ ಮತ್ತಿತರ ವಿದ್ಯಾರ್ಥಿ ಸಂಘಗಳ ಈ ನಿರ್ಧಾರ ಹೋರಾಟವನ್ನು ತಳಮಟ್ಟದಿಂದ ದೂರೀಕರಿಸಿ ಸಾಂಕೇತಿಕವಾಗಿಸುವ ಅಪಾಯ ಇದೆ. ಪ್ರಭುತ್ವ ಮತ್ತು ಆರ್ಥಿಕತೆಯ ವಾರಸುದಾರರ ಪ್ರಬಲ ಶಕ್ತಿಯ ವಿರುದ್ಧ ನಡೆಸುವ ಹೋರಾಟಗಳಿಗೆ ನೆಲದ ವಾಸ್ತವಗಳ (Ground Realities) ಅರಿವು ಮತ್ತು ತಳಮಟ್ಟದ ಸಾಂಘಿಕ ಬೆಂಬಲ ಮುಖ್ಯವಾಗುತ್ತದೆ. ಜಂತರ್ ಮಂತರ್ನಲ್ಲಿ ಮೊಳಗುವ ಪ್ರತಿರೋಧದ ದನಿಗಳು ಇದರಿಂದ ಕ್ರಮೇಣ ವಿಮುಖವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಏಕೆಂದರೆ ಈ ಹೋರಾಟದ ಮುಂಚೂಣಿಯಲ್ಲಿರುವ ಕಾಕ್ರೋಚ್ ಪಕ್ಷ ಕಾರ್ಯಕರ್ತರ ಪಡೆಗಳನ್ನು ಆಧರಿಸಿ ಕಟ್ಟಿದ ಒಂದು ರಾಜಕೀಯ ಪಕ್ಷ ಅಲ್ಲ. ಪಕ್ಷ ಎಂದು ಹೆಸರಿದ್ದರೂ ಅದೊಂದು ಯುವಜನರ ಸಂಘಟನೆ. ಮೂಲತಃ Back office ನಿರ್ದೇಶನಗಳ ಮೂಲಕ ನಡೆಯುವ ಸಂಘಟನೆಯಾಗಿ ಸಿಜೆಪಿ ನಿರ್ದೇಶನ ಮತ್ತು ಮಾರ್ಗದರ್ಶನದ (Direction and Guidance) ಕೊರತೆಯನ್ನು ಖಂಡಿತವಾಗಿಯೂ ಎದುರಿಸುತ್ತದೆ. ಈ ಕೊರತೆಯನ್ನು ನೀಗಲು ಸಿಜೆಪಿಯನ್ನು ಪ್ರತಿನಿಧಿಸುವ ಯುವಸಮೂಹಗಳು ದೇಶಾದ್ಯಂತ ತಳಮಟ್ಟದ ಸಮಾಜವನ್ನು ಸಂಪರ್ಕಿಸಿ, ಸಂವಾದಿಸಿ ಜಾಗೃತಿ ಮೂಡಿಸಬೇಕಾಗುತ್ತದೆ. ಸದ್ಯದ ಸನ್ನಿವೇಶದಲ್ಲಿ ಈ ಲಕ್ಷಣಗಳು ಕಾಣುತ್ತಿಲ್ಲ.
ಆಸ್ಪದ ಮತ್ತು ಅವಕಾಶಗಳ ನಡುವೆ
ಇಲ್ಲಿ ಪುನಃ ನಿರ್ವಾತದ (Vacuum) ಪ್ರಶ್ನೆಯನ್ನು ಕೈಗೆತ್ತಿಕೊಂಡರೆ, ಕಾಕ್ರೋಚ್ ಪಕ್ಷದ ಉದಯ ಮತ್ತು ಮುನ್ನಡೆಯ ಒಳಸೂಕ್ಷ್ಮಗಳನ್ನು ಗ್ರಹಿಸಲು ಸಾಧ್ಯ. ಭಾರತದ ರಾಜಕೀಯ-ಸಾಮಾಜಿಕ ಹೋರಾಟಗಳಲ್ಲಿ ಯುವ ಜನಾಂಗದ ದನಿ ಇಲ್ಲ ಅಥವಾ ಇರಲಿಲ್ಲ ಎಂದು ಹೇಳಲಾಗುವುದಿಲ್ಲ. ಪ್ರಾದೇಶಿಕ ಹಾಗೂ ಎಡಪಕ್ಷಗಳನ್ನೂ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಯುವ ಜನಾಂಗದ ಸಂಘಟನೆಯನ್ನು ಕಟ್ಟಲಾಗಿದೆ. ಸಮಸ್ಯೆ ಇರುವುದು ಕಾರ್ಯಾಚರಣೆಯಲ್ಲಿ. ಈ ಎಲ್ಲ ಪಕ್ಷಗಳೂ ಕಾರ್ಯನಿರ್ವಹಿಸುವುದು Top down method ನಲ್ಲಿ . ಅಂದರೆ ಮೇಲ್ ಸ್ತರದಿಂದ (ಹೈಕಮಾಂಡ್, ಪಾಲಿಟ್ಬ್ಯುರೋ, ಮುಖ್ಯ ಕಚೇರಿ ಇತ್ಯಾದಿ) ಬರುವ ಆದೇಶಗಳನ್ನು ಯುವ ಸಂಘಟನೆಗಳು ಕೆಳಸ್ತರದಲ್ಲಿ ಪಾಲಿಸುತ್ತವೆ.
ಡಿಜಿಟಲ್ ಯುಗದ ಯುವ ಜನಾಂಗದ ದೃಷ್ಟಿಯಿಂದ ನೋಡಿದಾಗ ಇಲ್ಲಿ ಈ ಯುವ ಪೀಳಿಗೆಗೆ ಅಗತ್ಯವಾದ ಸ್ವಾಯತ್ತತೆ (Atonomy), ಕಾರ್ಯಾಚರಣೆಯ ಸ್ವಾತಂತ್ರ್ಯ (Operational Freedom) ಇಲ್ಲದಿರುವುದು ಗೋಚರಿಸುತ್ತದೆ. ಪ್ರತಿಯೊಂದು ಪಕ್ಷ-ಚಳುವಳಿಗಳ ಸಂಘಟನೆಯಲ್ಲೂ ಯುವ ಜನಾಂಗಕ್ಕೆ ಆಸ್ಪದ ಮತ್ತು ಅವಕಾಶ (Opportunity and Space) ಇರುವುದಾದರೂ ಕಾರ್ಯನಿರ್ವಹಣೆಯ ಅಥವಾ ನಿರ್ಧಾರ ತೆಗೆದುಕೊಳ್ಳುವ (Decision Making) ಸೀಮಿತ ಅಧಿಕಾರವೂ ಇರುವುದಿಲ್ಲ. ಡಿಜಿಟಲ್ ಯುಗದ ಯುವ ಜನಾಂಗ ಈ ನಿರ್ವಾತವನ್ನು ಎದುರಿಸುತ್ತಲೇ ಬಂದಿದೆ. ಕಾಕ್ರೋಚ್ ಪಕ್ಷ ಇದನ್ನು ತುಂಬುವ ಭರವಸೆ ಮೂಡಿಸಿದೆ. ಎಡಪಂಥೀಯ ಪಕ್ಷ-ಸಂಘಟನೆಗಳಲ್ಲಿ , ಯುವ ಜನರ ಮತ್ತು ಮಹಿಳೆಯರ ಪ್ರಾತಿನಿಧ್ಯದ ಕೊರತೆ ಇರುವುದನ್ನು ಈ ಬೆಳವಣಿಗೆಗಳು ಸ್ಪಷ್ಟವಾಗಿ ಸೂಚಿಸುತ್ತವೆ.
ಕಾಕ್ರೋಚ್ ಪಕ್ಷ ಸೃಷ್ಟಿಸಿರುವ ಯುವ ದನಿ (Youth Voice) ಆಳುವ ವರ್ಗಗಳಲ್ಲಿ ಎಷ್ಟು ಕಂಪನ ಮೂಡಿಸುತ್ತದೆ ಎನ್ನುವುದಕ್ಕೆ ವಾಂಗ್ಚುಕ್ ಅವರ ಬಂಧನ ಮತ್ತು ಮುಷ್ಕರದ ಸ್ಥಳವನ್ನು ತೆರವುಗೊಳಿಸಲು ದೆಹಲಿ ಪೊಲೀಸರು ನೀಡಿರುವ ಆದೇಶವೇ ಸಾಕ್ಷಿ. ತೆರವುಗೊಳಿಸದೆ ಹೋದರೆ ಮತ್ತಷ್ಟು ವಿದ್ಯಾರ್ಥಿ ಮುಂದಾಳುಗಳ ಬಂಧನವಾಗುವ ಸಾಧ್ಯತೆಗಳಿವೆ. ಹೋರಾಟಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ದುರ್ಬಲಗೊಳಿಸಲು ಸರ್ಕಾರಗಳು ಅನುಸರಿಸುವ ತಂತ್ರ ಇದು. ಇದನ್ನು ಮೀರಿ ಈ ಹೋರಾಟವನ್ನು ಜೀವಂತವಾಗಿರಿಸಬೇಕಾದರೆ, ಇದರ ವಿಸ್ತರಣೆ ಅತ್ಯವಶ್ಯ. ತಳಮಟ್ಟದವರೆಗೂ ಈ ಯುವ ದನಿಯನ್ನು ವಿಸ್ತರಿಸಿ, ಅಲ್ಲಿ ಕಾಣಬಹುದಾದ ಅವಕಾಶವಂಚಿತ ಜನಸಮೂಹಗಳೊಂದಿಗೆ ಸೇರಿ , ಯುವ ದನಿಗೆ ರಾಜಕೀಯ ದನಿ (Political voice) ನೀಡುವುದು ವರ್ತಮಾನದ ತುರ್ತು.
ಸ್ಥಾಪಿತ ಪಕ್ಷಗಳ ಜವಾಬ್ದಾರಿಗಳು
ಈ ಪ್ರಕ್ರಿಯೆಗೂ ಮುನ್ನ ಭಾರತದ ಕಮ್ಯುನಿಸ್ಟ್ ಪಕ್ಷಗಳು ಮತ್ತು ಸಂಯೋಜಿತ ಸಂಘಟನೆಗಳು ಕಾಕ್ರೋಚ್ ಪಕ್ಷವು ಆಕ್ರಮಿಸಿಕೊಂಡ ನಿರ್ವಾತದ ಬಗ್ಗೆ ಸ್ವ-ವಿಮರ್ಶೆ ಮಾಡಿಕೊಳ್ಳಬೇಕಿದೆ. ಎಲ್ಲ ಎಡಪಕ್ಷಗಳ ಯುವ-ವಿದ್ಯಾರ್ಥಿ ಅಂಗ ಸಂಸ್ಥೆಗಳೂ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ, ಶಿಕ್ಷಣದ ಕಾರ್ಪೋರೇಟೀಕರಣದ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಬಂದಿವೆ. ಸಾಂದರ್ಭಿಕವಾಗಿ ಐಕ್ಯತೆಯಿಂದಲೂ ಹೋರಾಡಿ ಯಶಸ್ವಿಯಾಗಿವೆ. ಆದರೆ ಈ ಹೋರಾಟಗಳಿಗೆ ರಾಜಕೀಯ ದನಿ ಕಲ್ಪಿಸಬೇಕಾದರೆ, ಮೇಲ್ ಸ್ತರದ ನಾಯಕತ್ವಗಳು ಏಕೀಕೃತ ದನಿಯೊಂದನ್ನು (Unified Voice) ರೂಪಿಸಬೇಕು. ಈಗ ಕೇಳಿಬರುವ ಸಂಘಟಿತ ದನಿ (Organised voice) ತಾತ್ಕಾಲಿಕವಾಗಿ ಪರಿಣಾಮಕಾರಿಯಾಗುತ್ತದೆ ಆದರೆ ದೀರ್ಘಾವಧಿಯಲ್ಲಿ ಇದು ಕ್ಷೀಣಿಸುವ ಸಾಧ್ಯತೆಗಳೇ ಹೆಚ್ಚು.
ಎಡಪಕ್ಷಗಳು ಈ ಎರಡು ದನಿಗಳ ನಡುವಿನ ವ್ಯತ್ಯಾಸವನ್ನು ಈಗಲಾದರೂ ಗಂಭೀರವಾಗಿ ಪರಾಮರ್ಶಿಸಬೇಕಿದೆ. ವಿದ್ಯಾರ್ಥಿ-ಯುವ ಸಂಘಟನೆಗಳ ಸಂಘಟಿತ ದನಿಗೆ, ವಿಶಾಲ ರಾಜಕಾರಣದ (Broader Polics) ಏಕೀಕೃದ ದನಿಯ ರೂಪ ನೀಡಿದಾಗ, ಅದು ತಳಮಟ್ಟದ ಸಮಾಜಗಳನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯ. ಪ್ರಭುತ್ವದ ಕಾನೂನು ಬಿಗಿಹಿಡಿತ ಮತ್ತು ಕೆಲವು ದಮನಕಾರಿ ಕರಾಳ ಶಾಸನಗಳ ಚೌಕಟ್ಟಿನಲ್ಲಿ ನೋಡಿದಾಗ, ಈ ಏಕೀಕೃತ ದನಿಯ ಮೌಲ್ಯ ಮತ್ತು ಪ್ರಸ್ತುತತೆ ಅರಿವಾಗುತ್ತದೆ. ಡಿಜಿಟಲ್ ಯುಗದ ಯುವ ಜನಾಂಗಕ್ಕೆ ಕಾಣುತ್ತಿರುವುದಾದರೂ ಏನು ? ವಿಘಟಿತ ದಲಿತ ಚಳುವಳಿ, ಪ್ರತ್ಯೇಕಿತ ಎಡಪಕ್ಷಗಳು, ಅಸ್ಮಿತೆಯ ರಾಜಕಾರಣ (Identity politics), ಯುವ ಮಹಿಳಾ ಪ್ರಾತಿನಿಧ್ಯದ ಕೊರತೆ ಮತ್ತು ಯುವ ದನಿಗೆ ಶಕ್ತಿ ನೀಡುವಂತಹ ಆಸ್ಪದ-ಅವಕಾಶಗಳ (Oppurtunities and spaces) ಕೊರತೆ.
ಸ್ಥಾಪಿತ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಈ ವೈಫಲ್ಯವೇ ಪ್ರಜಾಪ್ರಭುತ್ವೀಯ ಹೋರಾಟಗಳಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಲು ಕಾರಣ. ಇದರ ಮತ್ತೊಂದು ಆಯಾಮವನ್ನು ಕಾಕ್ರೋಚ್ ಪಕ್ಷದ ಉಗಮ ಮತ್ತು ತಕ್ಷಣದ ಬೆಳವಣಿಗೆಗಳಲ್ಲೇ ಗುರುತಿಸಬಹುದು. ದಶಕಗಳ ಕಾಲ ದೇಶದ ಪ್ರತಿರೋಧದ ದನಿಗಳಿಗೆ ನೆಲೆಯಾಗಿದ್ದ ನೂರಾರು ಸಂಘಟನೆಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲವು ಪ್ರಗತಿಪರ ಸಂಘಟನೆಗಳೂ ಸಹ ಕಾಕ್ರೋಚ್ ಪಕ್ಷದ ಕೂಗಿಗೆ ತಕ್ಷಣವೇ ಸ್ಪಂದಿಸಿದವು. ಯುವ ಜನರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ಹೋರಾಟಗಾರರು ʼ ನಾನೂ ಕಾಕ್ರೋಚ್ ʼ ಎಂಬ ಲೇಬಲ್ಲುಗಳನ್ನು ಹೊತ್ತು, ಹೊಸ ಬೆಳವಣಿಗೆಗೆ ಸ್ಪಂದಿಸಲಾರಂಭಿಸಿದ್ದರು. ಚಾಲ್ತಿಯಲ್ಲರುವ ಹೋರಾಟಗಳಿಂದ ಭ್ರಮನಿರಸನಗೊಂಡವರೂ, ಆಸ್ಪದ ಮತ್ತು ಅವಕಾಶವಿಲ್ಲದೆ ಇದ್ದವರೂ, ಭವಿಷ್ಯದ ಕನಸನ್ನು ಕಾಣುತ್ತಿದ್ದವರೂ ಈ ಗುಂಪಿನಲ್ಲಿ ಕಾಣುತ್ತಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಮಾವೇಶ ಇದರ ಒಂದು ಝಲಕ್ ಎನ್ನಬಹುದು.
ಐಕ್ಯತೆಯ ಕೊರತೆ ಮತ್ತು ನಿರ್ವಾತ
ಹೋರಾಟಗಳ ದೃಷ್ಟಿಯಿಂದ, ಪ್ರಜಾತಾಂತ್ರಿಕ ಮನಸ್ಸುಗಳ ನೆಲೆಯಲ್ಲಿ ನೋಡಿದಾಗ ಈ ಪರಿಸ್ಥಿತಿಗೆ ಕಾರಣ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. 15 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕಾರ್ಪೋರೇಟೀಕರಣ ಪ್ರಕ್ರಿಯೆ ದೇಶದ ಕೋಟ್ಯಂತರ ವಿದ್ಯಾರ್ಥಿ ಯುವಜನರ ಭವಿಷ್ಯವನ್ನು ಮಸುಕಾಗಿಸುತ್ತಲೇ ಬಂದಿದೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಲೇ ಇದ್ದರೂ , ದೇಶವ್ಯಾಪಿ ವಿದ್ಯಮಾನವಾಗಿ (Pan Indian Phenomenon) ಒಂದು ಏಕೀಕೃತ ರಾಜಕೀಯ ದನಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಈ ಗಂಭೀರ ಸನ್ನಿವೇಶದಲ್ಲೂ ಐಕ್ಯತೆಯ ಪ್ರಶ್ನೆಯನ್ನು ಮುಂಚೂಣಿಗೆ ತರಲು ಸಾಧ್ಯವಾಗದ ಸಂಸದೀಯ ಎಡಪಕ್ಷಗಳ ಹಿಂಜರಿಕೆ-ಮಡಿವಂತಿಕೆ-ವೈಫಲ್ಯವನ್ನು ಇಲ್ಲಿ ಗುರುತಿಸಬಹುದು.
ಕಾಕ್ರೋಚ್ ಪಕ್ಷ ಆಕ್ರಮಿಸಿರುವ ನಿರ್ವಾತ ಮರಳಿ ಯಥಾಸ್ಥಿತಿಗೆ ಬರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್, ಆಮ್ ಆದ್ಮಿಯನ್ನೂ ಒಳಗೊಂಡಂತೆ ಸ್ಥಾಪಿತ ರಾಜಕೀಯ ಪಕ್ಷಗಳು ತಮ್ಮ ಭದ್ರನೆಲೆಯನ್ನು ಕಾಪಾಡಿಕೊಳ್ಳಲು ಇಂತಹ ಪಕ್ಷಗಳ ನಾಯಕತ್ವವನ್ನು ತಮ್ಮೊಳಗೆ ಸೆಳೆದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ ನಡೆದ ಹಾದಿಯನ್ನು ಗಮನಿಸಬಹುದು. ಅಭಿಜೀತ್ ದೀಪ್ಕೆ ಮತ್ತು ಅವರ ಸಂಗಡಿಗರಿಗೆ ತಳಮಟ್ಟದ ಕಾರ್ಯಕರ್ತ ಪಡೆಯ ಬುನಾದಿ ಇಲ್ಲದಿರುವುದರಿಂದ, ಸುಲಭವಾಗಿ ಈ ರಾಜಕೀಯ ತಂತ್ರಗಳಿಗೆ ಸುಲಭ ತುತ್ತಾಗುವ ಸಾಧ್ಯತೆಗಳಿವೆ.

ಹೊಸ ರಾಜಕೀಯ ದನಿಗಾಗಿ
ಎಡಪಕ್ಷಗಳನ್ನು ಹೊರತುಪಡಿಸಿ ಮುಖ್ಯವಾಹಿನಿಯ ಯಾವ ಪಕ್ಷವೂ ನವ ಉದಾರವಾದ ಮತ್ತು ಕಾರ್ಪೊರೇಟ್ ಆರ್ಥಿಕತೆಯನ್ನು ವಿರೋಧಿಸುವುದಿಲ್ಲ , ಹಾಗಾಗಿ ಕಾಕ್ರೋಚ್ ಪಕ್ಷ ಈ ಎಲ್ಲೆಗಳನ್ನು ದಾಟಿ ತನ್ನ ತಾತ್ವಿಕ ಬುನಾದಿಯನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಬೇಕಾದ ಸೈದ್ಧಾಂತಿಕ ಅರಿವು, ಆರ್ಥಿಕ ಪರಿಕಲ್ಪನೆ, ಭೌಗೋಳಿಕ ರಾಜಕೀಯ ವಾಸ್ತವಗಳು (Geo Political Realities) ಹಾಗೂ ಭಾರತೀಯ ಸಮಾಜದ ನೆಲದ ವಾಸ್ತವಗಳು (Ground Realities) ಕಾಕ್ರೋಚ್ ಪಕ್ಷದಲ್ಲಿ ಬೌದ್ಧಿಕ ಚಿಂತನ ಮಂಥನಕ್ಕೆ ಅವಕಾಶ ಕಲ್ಪಿಸಬೇಕು. ಡಿಜಿಟಲ್ ಯುಗದ ಹೊಸ ಹೋರಾಟದ ಮಾದರಿಗಳನ್ನು ವಿಸ್ತರಿಸುತ್ತಾ, ಹಿರಿಯ ಪೀಳಿಗೆಯ ಹೋರಾಟಗಾರರನ್ನೂ ಒಳಗೊಳ್ಳುವಂತಹ ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು. ಭಾರತದ ಜಾತಿ ವ್ಯವಸ್ಥೆ, ಪಿತೃಪ್ರಧಾನ-ಊಳಿಗಮಾನ್ಯ ಸಮಾಜ ಮತ್ತು ಅಸಮಾನತೆಯ ನೆಲೆಗಳನ್ನು ತಳಮಟ್ಟದಿಂದಲೇ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ನಡೆಯಬೇಕು.
ಇತರ ಸಂಘಟನೆಗಳಿಂದ, ಹೊರಗಿನಿಂದ ಜಿಗಿದು ಬರುವ ಹೋರಾಟಗಾರರಿಗಿಂತಲೂ ಮುಖ್ಯವಾಗಿ, ವರ್ತಮಾನದ ಬಿಕ್ಕಟ್ಟುಗಳಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವ ಡಿಜಿಟಲ್ ಯುವ ಜನಾಂಗ ಕಾಕ್ರೋಚ್ ಪಕ್ಷದ ಕಾಲಾಳುಗಳಾಗಬೇಕಾಗುತ್ತದೆ. ಇದಕ್ಕೆ ಇರುವ ದೊಡ್ಡ ತಡೆಗೋಡೆ ಎಂದರೆ ಹಿಂದುತ್ವ ಮತ್ತು ನವ ಉದಾರವಾದ. ಈ ಎರಡೂ ಭದ್ರಕೋಟೆಗಳನ್ನು ಭೇದಿಸುವ ಸಾಮರ್ಥ್ಯ, ಜನಬಲ, ಸೈದ್ಧಾಂತಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆ ಕಾಕ್ರೋಚ್ ಪಕ್ಷದ ಯುವ ಸದಸ್ಯರಲ್ಲಿ ಇದೆಯೇ ? ಇಲ್ಲವಾದಲ್ಲಿ ಇದನ್ನು ರೂಪಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ಸಾಧಿಸಲು ಸಾಧ್ಯವಾದರೆ ಸಿಜೆಪಿಯನ್ನು ಅಭಿಜಾತ ಅರ್ಥದಲ್ಲಿ ʼ ಪಕ್ಷ ʼ ಎಂದು ನಿರ್ವಚಿಸಲು ಸಾಧ್ಯ.
ಕಾಕ್ರೋಚ್ ಪಕ್ಷದ ಹಿಂದೆ ಯಾವ ಶಕ್ತಿ ಅಡಗಿದೆ, ಯಾವ ರಾಜಕೀಯ ತಂತ್ರ ಇದೆ ಎಂದು ಯೋಚಿಸುವ ಬದಲು ಮುಖ್ಯವಾಹಿನಿಯ ಪ್ರಜಾಸತ್ತಾತ್ಮಕ ಪಕ್ಷಗಳು, ಎಡಪಕ್ಷಗಳು, ಇಲ್ಲಿ ಉಗಮಿಸಿರುವ ಯುವ ದನಿಯನ್ನು ರಾಜಕೀಯ ದನಿಯನ್ನಾಗಿ ಪರಿವರ್ತಿಸುವ ದಿಕ್ಕಿನಲ್ಲಿ ಯೋಚಿಸಬೇಕಿದೆ ಸ್ಥಾಪಿತ ಎಡಪಕ್ಷಗಳಲ್ಲೂ ಇರುವ ತಾತ್ವಿಕ ಮಡಿವಂತಿಕೆ, ಬೌದ್ಧಿಕ ಭಿನ್ನಮತ, ಆಚರಣಾತ್ಮಕ ಅಸ್ಪೃಶ್ಯತೆಗಳನ್ನು ಬದಿಗಿಟ್ಟು, ಐಕ್ಯತೆಯ ದನಿಯನ್ನು ಗಟ್ಟಿಗೊಳಿಸಿದರೆ, ಸಹಜವಾಗಿ ಹೊಸದಾಗಿ ಉಗಮಿಸುವ ಯಾವುದೇ ಯುವ ಶಕ್ತಿಯನ್ನು ಆಯಸ್ಕಾಂತದಂತೆ ಸೆಳೆಯುವುದು ಸುಲಭವಾಗುತ್ತದೆ. ಈ ಪ್ರಯತ್ನವೇ ಆಳುವ ವರ್ಗಗಳಲ್ಲಿ ಕಂಪನಗಳನ್ನು ಸೃಷ್ಟಿಸುತ್ತದೆ.
ಅಸ್ತಿತ್ವ ಅಸ್ಮಿತೆಗಳನ್ನು ದಾಟಿ
ಇಲ್ಲಿ ಅಡ್ಡಿಯಾಗಬಹುದಾದ ರಾಜಕೀಯ ಅಸ್ತಿತ್ವವಾದವನ್ನು (Political Existentialism) ಮೀರಿ ಯೋಚಿಸದೆ ಹೋದರೆ, ಬಿಜೆಪಿಯ ರಾಜಕೀಯ ಬುಲ್ಡೋಜರ್ ಎಲ್ಲವನ್ನೂ ನೆಲಸಮ ಮಾಡುವ ಅಪಾಯ ಇದೆ. ಕಾಕ್ರೋಚ್ ಪಕ್ಷದ ಬಲವರ್ಧನೆ ನಮ್ಮ ಆದ್ಯತೆಯಾಗಬೇಕಿಲ್ಲ. ಆದರೆ ಅದು ಸೃಷ್ಟಿ ಮಾಡಿರುವ ಒಂದು ಯುವ ದನಿಗೆ (Youth Voice) ರಾಜಕೀಯ ಸ್ಪರ್ಶ ನೀಡುವುದು ನಮ್ಮ ಆಯ್ಕೆಯಾಗಬೇಕು. ಆ ಯುವ ದನಿ ಇಂದಿಗೂ ನಿರ್ವಾತದಲ್ಲೇ ಇದೆ. ಈ ದನಿ ಜಾಗೃತವಾಗುವುದು ಹಿಂದುತ್ವ ರಾಜಕಾರಣಕ್ಕೆ ಅಪಾಯಕಾರಿಯಾಗಿ ಕಾಣುತ್ತದೆ. ಆದರೆ ಭಾರತ ಈಗ ಸಾಗುತ್ತಿರುವ ದುರ್ಗಮ ಹಾದಿಯಿಂದ ಮುಕ್ತವಾಗಲು ಇದು ಸಹಕಾರಿಯಾಗುತ್ತದೆ.
ಈ ಜಾಗೃತಿಗೆ ಮೂಲತಃ ಬೇಕಿರುವುದು ಪ್ರಜಾಪ್ರಭುತ್ವೀಯ ಶಕ್ತಿಗಳ ಭೌತಿಕ-ಬೌದ್ಧಿಕ ಐಕ್ಯತೆ ಮತ್ತು ಆಚರಣಾತ್ಮಕ ಸಮನ್ವಯ. ಎಡಪಕ್ಷಗಳು ತಮ್ಮ ಅಸ್ತಿತ್ವವಾದಿ ಅಸ್ಮಿತೆಗಳನ್ನು ಬದಿಗಿಟ್ಟು ಐಕ್ಯತೆಯ ಬಗ್ಗೆ ಯೋಚಿಸಲು ಇದು ಸಕಾಲ ಮಾತ್ರವಲ್ಲ, ಕೊನೆಯ ಅವಕಾಶವೂ ಹೌದು. ದಲಿತ ಚಳುವಳಿಗಳು ತಮ್ಮೊಳಗಿನ ಭಿನ್ನ ಭೇದಗಳನ್ನು, ತಮ್ಮ ನಡುವಿನ ಗೋಡೆಗಳನ್ನು ಕೆಡವಿ, ಡಾ. ಬಿ.ಆರ್ ಅಂಬೇಡ್ಕರ್ ಕಂಡ ಕನಸಿನ ಕಡೆಗೆ ಸಾಗಲೂ ಇದು ಕೊನೆಯ/ಸದಾವಕಾಶ. ಯುವ-ಮಹಿಳಾ ಪ್ರಾತಿನಿಧ್ಯಕ್ಕೆ ಮಾನ್ಯತೆ ನೀಡುವ ಪ್ರಜಾಸತ್ತಾತ್ಮಕ ಆಲೋಚನೆಗಳಿಗೆ ಜೀವ ತುಂಬುವುದಕ್ಕೂ ಇದು ಸರಿಯಾದ ಸಮಯ. ಘೋಷಣೆಗಳು, ಸಾಂಕೇತಿಕ ಬಣ್ಣಗಳು, ಬಾವುಟ-ಬ್ಯಾನರ್ಗಳು ಕೇವಲ ಪ್ರದರ್ಶನ ವಸ್ತುಗಳಾಗುತ್ತವೆ. ಇದನ್ನೂ ಮೀರಿ ಸಂವಾದಿಸುವ ಕ್ಷಮತೆಯನ್ನು ನಾವು ಇನ್ನಾದರೂ ರೂಢಿಸಿಕೊಳ್ಳಬೇಕಿದೆ.

ಅಂತರ್ ಮಂಥನದ ಕಡೆಗೆ
ಇದನ್ನೇ ನಾನು ಸಾಮಾಜಿಕ ಅಂತರ್ ಮಂಥನ ಎಂದು ವ್ಯಾಖ್ಯಾನಿಸುತ್ತೇನೆ. ವಿಶಾಲ ಸಮಾಜವನ್ನು ಪ್ರತಿನಿಧಿಸುವ ವಿವಿಧ ಸಮಾಜಗಳ-ಸಮುದಾಯಗಳ-ಪಕ್ಷಗಳ-ಸಂಘಟನೆಗಳ-ಗುಂಪುಗಳ ನಡುವೆ ಸಮಾಲೋಚನೆ, ಸಂವಾದ, ಸಂಭಾಷಣೆ ಮತ್ತು ವಸ್ತುನಿಷ್ಠ ಅಭಿಪ್ರಾಯ ಹಂಚಿಕೆಯ ಮೂಲಕ ನಮ್ಮ ವರ್ತಮಾನದ ಚಿಂತನ-ಮಂಥನ ಕಾರ್ಯಸೂಚಿಗಳನ್ನು ಸಾಮಾಜಿಕ-ಅಂತರ್ ಮಂಥನಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿದೆ. ಗಾಂಧಿ-ಅಂಬೇಡ್ಕರ್ ಮತ್ತಿತರ ಸ್ವಾತಂತ್ರ್ಯದ ಪೂರ್ವಸೂರಿಗಳು ಕನಸಿದ ಭಾರತೀಯ ಪ್ರಜಾಪ್ರಭುತ್ವ (Indian Democracy) ಬಹುಶಃ ರೂಪಾಂತರದ ಹಾದಿಯಲ್ಲಿದೆ. ಇದು ಸಂಭವಿಸಿ, ಭಾರತ ತನ್ನ ದಿಕ್ಕು ಬದಲಿಸುವ ಮುನ್ನ ತಡೆಗೋಡೆಗಳನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಅಭಿಜೀತ್ ದೀಪ್ಕೆ ಮತ್ತು ಸಂಗಡಿಗರ ಕಾಕ್ರೋಚ್ ಜನತಾ ಪಕ್ಷ ಈ ನಿಟ್ಟಿನಲ್ಲಿ ಒಂದು ಯುವ ದನಿಯನ್ನು ಹೊಮ್ಮಿಸಿದೆ. ಈ ದನಿಗೆ ದನಿಗೂಡಿಸಿ ಜೀವ ತುಂಬುವ ದೊಡ್ಡ ಜವಾಬ್ದಾರಿಯನ್ನು ನಾವು, ಅಂದರೆ ಹಿರಿಯ ಪೀಳಿಗೆಯ ಚಿಂತನಾ ವಲಯ, ಹೊರಲೇಬೇಕಿದೆ. ಸಿದ್ಧಾಂತಗಳನ್ನು ಗ್ರಾಂಥಿಕ ಚೌಕಟ್ಟುಗಳಿಂದ ನೆಲಕ್ಕಿಳಿಸಿದಾಗ ಸಂಭವಿಸಬಹುದಾದ ವಿಪ್ಲವಕಾಗಿ ಬದಲಾವಣೆಗಳಿಗೆ ಇತಿಹಾಸವೇ ಸಾಕ್ಷಿಯಾಗಿದೆ. ಚರಿತ್ರೆಯ ಭಜನೆ ಮಾಡುವುದರ ಬದಲು ಅದರ ಒಳಸೂಕ್ಷ್ಮಗಳನ್ನು ಅರಿತು ಹೊಸ ಇತಿಹಾಸವನ್ನು ಕಟ್ಟುವ ಹಾದಿಯಲ್ಲಿ ನಾವು ಕ್ರಮಿಸಬೇಕಿದೆ.
Now or Never ಸನ್ನಿವೇಶದಲ್ಲಿ ನಾವಿದ್ದೇವೆ ಎನ್ನುವುದನ್ನು ಮರೆಯದಿರೋಣ.






