ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯೋಜನೆಯ ಲಾಭ ಅನರ್ಹರಿಗೆ ತಲುಪುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಫಲಾನುಭವಿಗಳ ಮರುಪರಿಶೀಲನೆ ನಡೆಸಿ, ಅರ್ಹ ಮಹಿಳೆಯರಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಭಾನುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಉದ್ದೇಶ ಯಾರನ್ನೂ ಅನಗತ್ಯವಾಗಿ ಯೋಜನೆಯಿಂದ ಹೊರಗಿಡುವುದು ಅಲ್ಲ. ಆದರೆ, ತೆರಿಗೆದಾರರ ಹಣ ನೇರವಾಗಿ ಅರ್ಹ ಮಹಿಳೆಯರ ಕೈಗೆ ತಲುಪಬೇಕು ಎಂಬ ಕಾರಣಕ್ಕಾಗಿ ಬಯೋಮೆಟ್ರಿಕ್ ಅಥವಾ ಫೇಸ್ ಆಥೆಂಟಿಕೇಷನ್ (ಮುಖ ಗುರುತು ದೃಢೀಕರಣ) ಕಡ್ಡಾಯಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ನಿಯಮಗಳು
ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ:
- ಫಲಾನುಭವಿ ಮಹಿಳೆಯ ಹೆಸರಿನ ಮೊಬೈಲ್ ಸಂಖ್ಯೆ ಕಡ್ಡಾಯ. ಬೇರೆ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಲು ಅವಕಾಶ ಇರುವುದಿಲ್ಲ.
- ಫಲಾನುಭವಿ ಮಹಿಳೆಯ ವೈಯಕ್ತಿಕ ಬ್ಯಾಂಕ್ ಖಾತೆ ಇರಬೇಕು. ಗಂಡ, ಮಕ್ಕಳು ಅಥವಾ ಇತರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದಿಲ್ಲ.
- ಬಯೋಮೆಟ್ರಿಕ್ ಅಥವಾ ಫೇಸ್ ಆಥೆಂಟಿಕೇಷನ್ ಮೂಲಕ ಗುರುತು ಪರಿಶೀಲನೆ ಕಡ್ಡಾಯ.
- ಗ್ಯಾರಂಟಿ ತಂಡ ಮನೆ ಮನೆಗೆ ಭೇಟಿ ನೀಡಿ ವಿಶೇಷ ನಮೂನೆಯ ಮೂಲಕ ಮಾಹಿತಿ ಸಂಗ್ರಹಿಸಿ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸಲಿದೆ.
ಈ ಮರುಪರಿಶೀಲನೆ ಕಾರ್ಯಕ್ಕಾಗಿ ಸರ್ಕಾರ ₹20 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.

ರಾಜ್ಯದಲ್ಲಿ ಪ್ರಸ್ತುತ 1.20 ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಸರ್ಕಾರ ನಡೆಸಿದ ಪ್ರಾಥಮಿಕ ಪರಿಶೀಲನೆ ಹಾಗೂ ‘ಆಪರೇಷನ್ ಗೃಹಲಕ್ಷ್ಮಿ’ ಮೂಲಕ ಈಗಾಗಲೇ ಮೃತಪಟ್ಟವರು ಹಾಗೂ ಅನರ್ಹರಾಗಿದ್ದ ಸುಮಾರು 4.30 ಲಕ್ಷ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.ಈ ಕ್ರಮದಿಂದ ಸರ್ಕಾರದ ಖಜಾನೆಗೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಯೋಜನೆಯ ಪ್ರಯೋಜನ ನಿಜವಾದ ಅರ್ಹ ಮಹಿಳೆಯರಿಗೆ ತಲುಪಲಿದೆ ಎಂದು ಸರ್ಕಾರ ತಿಳಿಸಿದೆ.






