ನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ ಅನಿರೀಕ್ಷಿತ ಘಟನೆ ನಡೆದಿದೆ. ಸ್ವತಃ ತಮ್ಮ ಪರವಾಗಿ ವಾದ ಮಂಡಿಸುತ್ತಿದ್ದ ಅರ್ಜಿದಾರನೊಬ್ಬ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದಲ್ಲದೆ, ನ್ಯಾಯಾಲಯದೊಳಗೆ ದಾಖಲೆಗಳ ಕಟ್ಟುಗಳನ್ನು ಗಾಳಿಗೆ ಎಸೆದು ಗದ್ದಲ ಸೃಷ್ಟಿಸಿದ್ದಾನೆ.ಈ ಘಟನೆ ಬಳಿಕ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಆರೋಪಿಯನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಆದರೆ, ಆತನ ವರ್ತನೆ ಅಸಹಜ ಹಾಗೂ ಅಸಂಬದ್ಧವಾಗಿರುವುದನ್ನು ಪರಿಗಣಿಸಿದ ನ್ಯಾಯಾಲಯ, ಬಳಿಕ ಹೆಚ್ಚಿನ ಕ್ರಮ ಕೈಗೊಳ್ಳದೆ ಬಿಡುಗಡೆ ಮಾಡಿದೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, ವೈಯಕ್ತಿಕವಾಗಿ ನಡೆದ ಅವಮಾನವನ್ನು ಕಡೆಗಣಿಸಿ, ಸಾಂವಿಧಾನಿಕ ಸಂಸ್ಥೆಗಳ ಗೌರವವನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು.
“ಬಿಡಿ… ಯುವಕರು ಕೆಲವೊಮ್ಮೆ ಹೀಗೆ ವರ್ತಿಸುತ್ತಾರೆ. ಆದರೆ ನಮ್ಮ ದೇಶದ ಸಾಂವಿಧಾನಿಕ ಸಂಸ್ಥೆಗಳ ಘನತೆ ಮತ್ತು ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರೂ ಆ ಹೊಣೆಗಾರಿಕೆಯನ್ನು ನಿಭಾಯಿಸಬೇಕು,” ಎಂದು ಸಿಜೆಐ ಹೇಳಿದರು.
ಘಟನೆ ಹೇಗೆ ನಡೆಯಿತು?
ಲಖನೌ ಮೂಲದ ಪ್ರಬಲ್ ಪ್ರತಾಪ್ ಎಂಬ ಅರ್ಜಿದಾರರು, ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠದ ಮುಂದೆ ಸ್ವತಃ ವಾದ ಮಂಡಿಸುತ್ತಿದ್ದರು. ಕಪ್ಪು ಕೋಟ್ ಮತ್ತು ಬಿಳಿ ಶರ್ಟ್ ಧರಿಸಿದ್ದ ಅವರು, ನ್ಯಾಯಾಲಯವನ್ನು ಉದ್ದೇಶಿಸಿ “ಮಿಸ್ಟರ್ ಜ್ಯುಡಿಷಿಯಲ್ ಸರ್ವೆಂಟ್” ಎಂದು ಸಂಬೋಧಿಸಿ, ಲಖನೌನ ಎಸಿಪಿ ಹಾಗೂ ಡುಪ್ಲೆಕ್ಸ್ ಟೆಕ್ನಾಲಜೀಸ್ ಸರ್ವೀಸಸ್ ಲಿಮಿಟೆಡ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು, “ನೀವು ನಮಗೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರೂ, ಅವರು ನೇರ ಉತ್ತರ ನೀಡದೆ ತಮ್ಮ ವಾದ ಮುಂದುವರಿಸಿದರು.

ತಮ್ಮ ವಾದದ ವೇಳೆ ಡುಪ್ಲೆಕ್ಸ್ ಟೆಕ್ನಾಲಜೀಸ್ ಸಂಸ್ಥೆಯು ದೇಶಾದ್ಯಂತ ಸೈಬರ್ ಅಪರಾಧ ಜಾಲ ನಡೆಸುತ್ತಿದೆ ಎಂದು ಆರೋಪಿಸಿದ ಅವರು, “ನನ್ನ ಪರವಾಗಿ ಹೇಳುವುದೆಲ್ಲ ಮುಗಿದಿದೆ. ಎಲ್ಲ ದಾಖಲೆಗಳು ನ್ಯಾಯಾಲಯದ ಮುಂದೆ ಇವೆ,” ಎಂದು ಹೇಳಿದರು.
ಆದರೆ, ಅದಾದ ತಕ್ಷಣವೇ ದಾಖಲೆಗಳ ಕಟ್ಟುಗಳನ್ನು ಗಾಳಿಗೆ ಎಸೆದು, ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದರೆಂದು ತಿಳಿದುಬಂದಿದೆ.

ಘಟನೆಯ ಬಳಿಕ ನ್ಯಾಯಾಲಯದಲ್ಲಿದ್ದ ದೆಹಲಿ ಪೊಲೀಸ್ ಸಿಬ್ಬಂದಿ ಕೂಡಲೇ ಮಧ್ಯಪ್ರವೇಶಿಸಿ ಪ್ರಬಲ್ ಪ್ರತಾಪ್ ಅವರನ್ನು ಹೊರಗೆ ಕರೆದೊಯ್ದು ವಶಕ್ಕೆ ಪಡೆದರು. ನಂತರ ಅವರ ವರ್ತನೆ ಅಸಂಬದ್ಧವಾಗಿದ್ದುದನ್ನು ಗಮನಿಸಿದ ನ್ಯಾಯಾಲಯ, ಕಠಿಣ ಕ್ರಮ ಕೈಗೊಳ್ಳದೆ ಅವರನ್ನು ಬಿಡುಗಡೆ ಮಾಡಿತು.
ಈ ಘಟನೆ ಬಳಿಕ ಸಿಜೆಐ ಸೂರ್ಯಕಾಂತ್ ನೀಡಿದ ಪ್ರತಿಕ್ರಿಯೆ ವ್ಯಾಪಕ ಗಮನ ಸೆಳೆದಿದ್ದು, ವೈಯಕ್ತಿಕ ಅವಮಾನಕ್ಕಿಂತ ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ಕಾಪಾಡುವ ಸಂದೇಶಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.






