ಬೆಂಗಳೂರು : ಎಸ್ಐಆರ್ (SIR) ಪ್ರಕ್ರಿಯೆಗೆ ತೆರಳುತ್ತಿದ್ದ ಸಮಯದಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಅಪಘಾತಕ್ಕೀಡಾದ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗೂಳೂರು ಗ್ರಾಮ ಲೆಕ್ಕಾಧಿಕಾರಿ (Village Accountant) ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಅಸುನೀಗಿದ್ದಾರೆ. (Tumakuru)

ಭುವನಾ (26) ಮೃತ ಗ್ರಾಮ ಲೆಕ್ಕಾಧಿಕಾರಿ. ಅಪಘಾತವಾದ ತಕ್ಷಣ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದ ಭುವನಾ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮುಖ್ಯವಾಗಿ ಎಸ್ಐಆರ್ನ ಬಿಎಲ್ಒಗೆ ಸುಪರ್ವೈಸರ್ ಆಗಿದ್ದ ಭುವನಾ ಗೂಳೂರು ಹೋಬಳಿಯಲ್ಲಿ ಮನೆ ಮನೆಗೆ ಎಸ್ಐಆರ್ಗೆ ತೆರಳುವ ವೇಳೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನೂ ಭವನಾ ಅಪಘಾತವಾಗಿ ಆಸ್ಪತ್ರೆಗೆ ಸೇರಿದ ಬಳಿಕ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಶೀಘ್ರದಲ್ಲೇ ಭುವನಾ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ದುರದೃಷ್ಟವಶಾತ್ ಅವರ ಪ್ರಾಣ ಪಕ್ಚಿ ಹಾರಿಹೋಗಿದ್ದು, ಈ ಸಾವಿಗೆ ಯಾರು ಹೊಣೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಆರ್ಯವರ್ಧನ್ ಗುರೂಜಿಗೆ ಮತ್ತೊಂದು ಸಂಕಷ್ಟ: ಈ ಆರೋಪಕ್ಕೆ ಶಂಕರಪುರಂ ಠಾಣೆಯಲ್ಲಿ ದೂರು ದಾಖಲು
ಇನ್ನೊಂದು ಪ್ರಕರಣದಲ್ಲಿ ಬಳ್ಳಾರಿ ತಾಲೂಕಿನ ರೂಪನಗೂಡಿ ಹೋಬಳಿಯ ಗ್ರಾಮ ಆಡಳಿತ ಅಧಿಕಾರಿ ಅತೀಪ್ ನಿನ್ನೆ ರಾತ್ರಿ ಬೈಕ್ ಸ್ಕಿಡ್ ಅಗಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಪ್ರಮುಖವಾಗಿ ಈ ಎಸ್ಐಆರ್ ಪ್ರಕ್ರಿಯೆಯ ವಿಚಾರದಲ್ಲಿ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳಿಂದ ಒತ್ತಡ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒತ್ತಾಯ ಪೂರ್ವಕವಾಗಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತಿದೆ ಎಂಬ ದೂರುಗಳು ಮುಂದುವರೆದಿವೆ.
ಈ ಎಲ್ಲದರ ನಡುವೆಯೇ ರಾಜ್ಯಾದ್ಯಂತ ಎಸ್ಐಆರ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಕೆಲವೆಡೆ ಎಸ್ಐಆರ್ ನಡೆಸುವ ಬಿಎಲ್ಒಗಳು ನಿಯಮಗಳನ್ನ ಗಾಳಿಗೆ ತೂರಿರುವುದು, ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಕುರಿತು ಈಗಾಗಲೇ ದೋಸ್ತಿಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಂಡು ಬಂದಿಲ್ಲ ಮಸೀದಿ, ದೇವಸ್ಥಾನ, ಅಂಗನವಾಡಿ ಹಾಗೂ ರಾಜಕೀಯ ಮುಖಂಡರಿಗೆ ಸೇರಿರುವ ಸ್ಥಳಗಳಲ್ಲಿ ನಡೆಸಲಾಗುತ್ತಿದೆ ಎಂಬ ಆಪಾದನೆಗಳನ್ನು ವಿಪಕ್ಷಗಳು ಮಾಡುತ್ತಿವೆ.
ಆದರೆ ಒತ್ತಡದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಚುನಾವಣಾ ಆಯೋಗ ಅವರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಯೋಚಿಸಬೇಕಿದೆ. ಕೇವಲ ನಿಗದಿತ ಅವಧಿಯ ಮೇಲೆ ಕೇಂದ್ರೀಕರಿಸಿ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ. ಒತ್ತಡ ನೀಡುವಂತೆ ಆಗಬಾರದು ಎಂಬ ಒತ್ತಾಯಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ಎಲ್ಲವುಗಳನ್ನು ಮೀರಿಯೂ ಬಾಳಿ ಬದುಕಬೇಕಿದ್ದ, ಮನೆಯನ್ನು ಬೆಳಗಬೇಕಿದ್ದ, ಕನಸಿನ ಗೋಪುರ ಕಟ್ಟಿಕೊಂಡು ಸರ್ಕಾರಿ ಕೆಲಸದ ಆರಂಭದಲ್ಲೇ ಭುವನಾ ಬದುಕಿನ ಯಾಣ ಮುಗಿಸಿರುವುದು ನಿಜಕ್ಕೂ ವಿಪರ್ಯಾಸವೇ ಸರಿ..!






