ಬಹುನಿರೀಕ್ಷಿತ ‘ಗ್ರಾಮಾಯಣ’ ಚಿತ್ರದ ಬಿಡುಗಡೆ ಬೆನ್ನಲ್ಲೇ ಚಿತ್ರ ಕಾನೂನು ವಿವಾದಕ್ಕೆ ಸಿಲುಕಿದೆ. ಚಿತ್ರದ ಮೊದಲ ನಿರ್ಮಾಪಕರಾದ ದಿವಂಗತ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರ ಮಕ್ಕಳು ಚಿತ್ರದ ಹಕ್ಕು ವರ್ಗಾವಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
‘ಗ್ರಾಮಾಯಣ’ ಚಿತ್ರಕ್ಕೆ ಆರಂಭದಲ್ಲಿ ಎನ್. ಲಕ್ಷ್ಮೀನರಸಿಂಹ ಮೂರ್ತಿ ಮುಹೂರ್ತ ನೆರವೇರಿಸಿದ್ದರು. ಆದರೆ, ಬಳಿಕ ನಿರ್ಮಾಪಕ ಹಾಗೂ ನಿರ್ದೇಶಕ ದೇವನೂರು ಚಂದ್ರು ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಸಿನಿಮಾ ಸ್ಥಗಿತಗೊಂಡಿತ್ತು.
ಈ ನಡುವೆ ನಿರ್ಮಾಪಕ ಲಕ್ಷ್ಮೀನರಸಿಂಹ ಮೂರ್ತಿ ನಿಧನರಾದರು.ನಂತರ ಅವರ ಪತ್ನಿ ಲತಾ ಶ್ರೀ ಮೂರ್ತಿ ಅವರು ಚಿತ್ರದ ಎಲ್ಲಾ ಹಕ್ಕುಗಳನ್ನು ನಿರ್ದೇಶಕ ದೇವನೂರು ಚಂದ್ರು ಅವರಿಗೆ ಹಸ್ತಾಂತರಿಸಿದರು. ಬಳಿಕ ಲಹರಿ ಸಂಸ್ಥೆ ಚಿತ್ರವನ್ನು ತನ್ನ ವಶಕ್ಕೆ ಪಡೆದು ಮತ್ತೊಮ್ಮೆ ಮುಹೂರ್ತ ನೆರವೇರಿಸಿ ನಿರ್ಮಾಣ ಪೂರ್ಣಗೊಳಿಸಿತು. ಸುಮಾರು ಎರಡು ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದ ಬಳಿಕ ಚಿತ್ರ ಜುಲೈ 3ರಂದು ಬಿಡುಗಡೆಯಾಯಿತು.ಆದರೆ ಇದೀಗ, ಮೊದಲ ನಿರ್ಮಾಪಕರ ಮಕ್ಕಳಾದ 18 ವರ್ಷದ ಎಲ್. ಮನೋಹರ್ ಕೃಷ್ಣ ಹಾಗೂ 10 ವರ್ಷದ ಕುಮಾರಿ ಎಲ್. ಸಂಸ್ಕೃತಿ, ತಮ್ಮ ತಾಯಿ ತಮ್ಮ ಒಪ್ಪಿಗೆ ಪಡೆಯದೇ ಚಿತ್ರದ ಹಕ್ಕುಗಳನ್ನು ರಹಸ್ಯ ‘ಅಸೈನ್ಮೆಂಟ್ ಅಗ್ರಿಮೆಂಟ್’ ಮೂಲಕ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಕ್ಕು ವರ್ಗಾವಣೆಯಿಂದ ತಮಗೆ ಸಿಗಬೇಕಿದ್ದ ಆರ್ಥಿಕ ಹಕ್ಕುಗಳಿಂದ ವಂಚಿತರಾಗಿದ್ದೇವೆ ಎಂದು ಅವರು ದೂರಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು, “ನಾವು ಚಿತ್ರದ ಹಕ್ಕುಗಳನ್ನು ಲತಾ ಶ್ರೀ ಮೂರ್ತಿ ಅವರಿಂದ ಸಂಪೂರ್ಣ ಕಾನೂನುಬದ್ಧವಾಗಿ ಪಡೆದುಕೊಂಡಿದ್ದೇವೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಒಪ್ಪಂದ ಮಾಡಿಕೊಂಡಿದ್ದೇವೆ. ಯಾವುದೇ ಕಾನೂನುಬಾಹಿರ ಕ್ರಮ ಕೈಗೊಂಡಿಲ್ಲ. ಇಲ್ಲಿಯವರೆಗೆ ನಮ್ಮ ವಿರುದ್ಧ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ. ಮುಂದಿನ ಎಲ್ಲಾ ವಿಚಾರಗಳನ್ನು ನಮ್ಮ ಕಾನೂನು ತಂಡ ನೋಡಿಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಈ ಕಾನೂನು ವಿವಾದ ಶುರುವಾಗಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದ್ದು, ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಗಮನ ನೆಟ್ಟಿದೆ.






