ಈವರೆಗೆ ಹೆಸರಿಗೆ ತಕ್ಕಂತೆ ಸದಾ ಆನಂದವಾಗಿ ನಗುನಗುತ್ತಾ ಎಲ್ಲರೊಂದಿಗೂ..ಮಾಧ್ಯಮಗಳೊಂದಿಗೂ ಕೂಡ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ(Sadananda Gowd) ಅವರ ಮುಖದಲ್ಲಿ ನಿನ್ನೆ ನಿಗಿ ನಿಗಿ ಕೋಪ. ಜನಪ್ರತಿನಿಧಿಗಳನ್ನು ಪ್ರಶ್ನಿಸಿರುವ ಮಾಧ್ಯಮಗಳಿಗೆ ಬಾಯಿ ಮುಚ್ಕೊಂಡು ಹೊರಗೆ ಹೋಗಿ ಎನ್ನುವ ಮಟ್ಟಿಗೆ ಡಿ.ವಿ ಸದಾನಂದ ಗೌಡ ಗರಂ ಆಗಿದ್ದು, ತಮ್ಮ ರಾಜಕೀಯ ಒತ್ತಡದಲ್ಲಿ ಮಾಧ್ಯಮಗಳನ್ನು ಮನಬಂದಂತೆ ನಡೆಸಿಕೊಂಡ ಮಾಜಿ ಮುಖ್ಯಮಂತ್ರಿಗಳ ಮೇಲೆ ಇದೀಗ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನು..? ಎನ್ನುವುದರ ವಿವರ ಇಲ್ಲಿದೆ.

ಮಾಜಿ ಮುಖ್ಯಮಂತ್ರಿಗಳ ನೆಮ್ಮದಿ ಕೆಡಿಸಿ ಮಾಸ್ಟರ್ ಆಡಿಯೋ
ಅತ್ತ ಆಡಳಿತರೂಢ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಳೇ ಬದಲಾದರೆ, ಇತ್ತ ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೆಂದೇ ವಿಧಾನಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿ ವಿಜಯೇಂದ್ರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಹೊತ್ತಲ್ಲೇ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಆಡಿಯೋದಲ್ಲಿರುವುದೇನು..?
ವೈರಲ್ ಆಗಿರುವ ಆಡಿಯೋದಲ್ಲಿ, ದೆಹಲಿ ಮಟ್ಟದ ಬಿಜೆಪಿ ನಾಯಕರೊಬ್ಬರೊಂದಿಗೆ ಇಂಗ್ಲಿಷ್ನಲ್ಲಿ ಮಾತುಕತೆ ನಡೆದಿರುವಂತೆ ಕೇಳಿಬರುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ವರೆಗೂ ವಿಜಯೇಂದ್ರ ಮುಂದುವರೆಯಲು ಬಿಡಿ. ನಂತರ ಕಿತ್ತು ಹಾಕಿ. ಈಗಲೇ ಕಿತ್ತು ಹಾಕಿದರೆ ಬಿಜೆಪಿ ಲಿಂಗಾಯತ ವಿರೋಧಿ ಅಂತಾ ಬಿಂಬಿತವಾಗುತ್ತದೆ. ಇದರಿಂದ ಪಕ್ಷಕ್ಕೆ ತೊಂದರೆ ಆಗಲಿದೆ ಎಂದು ಸದಾನಂದಗೌಡ ಹೇಳಿದ್ದಾರೆ ಎನ್ನಲಾಗಿತ್ತು.

ಮುಂದೆ ಆಗಿದ್ದೇನು..?
ಈ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದ್ದು, ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಎಂದು ತೋರಿಸಲಾಗಿತ್ತು. ನೇರವಾಗಿ ಈ ಬಗ್ಗೆ ಡಿ.ವಿ ಸದಾನಂದ ಗೌಡ ಅವರನ್ನೇ ಮಾಧ್ಯಮಗಳು ಸ್ಪಷ್ಟನೆ ಕೇಳಿದ್ದು, ನೋ ಕಾಮೆಂಟ್ಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ ಎಂದಿದ್ದರು.

ಇಷ್ಟಕ್ಕೆ ಮುಗಿಯದೇ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ, ನೀವು ನನ್ನ ಜೊತೆ ವಾದ ಮಾಡಲು ಬಂದಿದ್ದೀರಾ..? ಇಲ್ಲ ನಾನು ಹೇಳುವುದನ್ನು ಕೇಳಲು ಬಂದಿದ್ದೀರಾ..? ಬಾಯಿ ಮುಚ್ಕೊಂಡು ಹೊರಗೆ ಹೋಗಿ. ನಿಮ್ಮ ಕ್ಷುಲ್ಲಕ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಎಲ್ಲರ ಮುಂದೆ ಗರಂ ಆಗಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಚುನಾವಣೆ ಸೇರಿದಂತೆ ಬೇರೆ ಎಲ್ಲಾ ಸಂದರ್ಭಗಳಲ್ಲಿಯೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಜನಪ್ರತಿನಿಧಿಗಳ, ತಮ್ಮ ಮೇಲೆ ಆರೋಪ ಬಂದಾಗ ಕೇಳುವ ಸ್ಪಷ್ಟೀಕರಣಕ್ಕೆ ಯಾಕೆ ಹೀಗೆ ಗರಂ ಆಗುತ್ತಾರೋ ಗೊತ್ತಿಲ್ಲ. ನಾನು ನಿಮ್ಮ ಪ್ರಶ್ನೆಗೆ ಉತ್ತರಿಸಲ್ಲ..ನಾನು ಹೇಳುವುದನ್ನು ಕೇಳಿ ಇಲ್ಲ ಹೊರಗೆ ಹೋಗಿ ಎನ್ನುವ ಒಬ್ಬ ಜನಪ್ರತಿನಿಧಿಯ ನಡವಳಿಕೆ ಎಷ್ಟು ಸರಿ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಯಥಾ ಪ್ರಧಾನಿ ತಥಾ ಪಕ್ಷ
ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಬಿಜೆಪಿಯ ಹೈಕಮಾಂಡ್ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ, ದೇಶದ ಜನರನ್ನು ಉದ್ದೇಶಿಸಿ ಎಷ್ಟು ಗಂಟೆ ಬೇಕಾದರೂ ಮಾತನಾಡುತ್ತಾರೆ. ಆದರೆ ಮಾಧ್ಯಮಗಳೊಂದಿಗೆ ತಮ್ಮ ವೈಯಕ್ತಿಕ ಸಂದರ್ಶನಗಳನ್ನು ಬಿಟ್ಟು ಬೇರೆ ಸಂವಾದ ನಡೆಸುವುದಿಲ್ಲ..ಒಮ್ಮೆ ನಡೆಸಿದರೂ ಕೂಡ ಮಾಧ್ಯಮಗಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ ಎನ್ನುವ ಆರೋಪ ಆಗಾಗ ಜೋರಾಗಿಯೇ ಕೇಳಿಬರುತ್ತದೆ. ಈಗ ಬಿಜೆಪಿಯ ನಾಯಕರು ಕೂಡ ಅದೇ ರೀತಿ ನಡೆದುಕೊಳ್ಳುತ್ತಿದ್ದಾರಾ..? ಅವರು ಹೇಳಿದಷ್ಟೇ ಕೇಳಬೇಕು..ಮಾಧ್ಯಮಗಳು ಪ್ರಶ್ನಿಸಬಾರದು ಎನ್ನುವ ನಿಲುವಿನಲ್ಲಿದ್ದಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.







