ಬೆಂಗಳೂರು : ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ವಿಧೌಸೌಧದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ರಾಜ್ಯದ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರಿಗೆ ಇಸ್ರೇಲ್ ಸೇರಿದಂತೆ ವಿವಿಧ ಮಧ್ಯಪ್ರಾಚ್ಯ ದೇಶಗಳಲ್ಲಿ ಲಭ್ಯವಿರುವ ಗುತ್ತಿಗೆ ಕೆಲಸಗಳ ಅವಕಾಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಬಗ್ಗೆ ನಡೆದ ಆರಂಭಿಕ ಹಂತದ ಸಭೆ ಇದಾಗಿದ್ದು, ಇದರ ಕಾರ್ಯಸಾಧ್ಯತೆ ಬಗ್ಗೆ ವಿವರವಾದ ವರದಿ ನೀಡುವಂತೆ ಅಧಿಕಾರಿಗಳಿಗೆ ಸಂತೋಷ್ ಲಾಡ್ ಸೂಚಿಸಿದ್ದಾರೆ.
ಕಾರ್ಮಿಕ ಕಲ್ಯಾಣಕ್ಕಾಗಿ ಸದಾ ಹೊಸದನ್ನೇನಾದರೂ ಯೋಚಿಸುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಸದ್ಯ ಇಸ್ರೇಲ್ ಸೇರಿದಂತೆ ಇತರ ಮುಂದುವರಿದ ಮಧ್ಯಪ್ರಾಚ್ಯ ದೇಶಗಳಲ್ಲಿ ಕೌಶಲ್ಯಯುತ ಕಾರ್ಮಿಕರಿಗೆ ಭಾರೀ ಬೇಡಿಕೆ ಇದ್ದು, ಅದರಲ್ಲೂ ಕನ್ಸ್ಟ್ರಕ್ಷನ್ ವಲಯದಲ್ಲಂತೂ ನುರಿತ ಕಾರ್ಮಿಕರಿಗೆ ತುಸು ಹೆಚ್ಚೇ ಬೇಡಿಕೆ ಇರುವುದನ್ನು ಮನಗಂಡು ಇಲ್ಲಿನ ನುರಿತ ಕಟ್ಟಡ ಕಾರ್ಮಿಕರನ್ನು ಇಸ್ರೇಲ್ ಗೆ ಗುತ್ತಿಗೆ ಆಧಾರದಲ್ಲಿ ಕಳುಹಿಸುವ ಮಹತ್ವದ ಪರಿಕಲ್ಪನೆಯೊಂದಿಗೆ ಮುಂದಡಿಯಿಟ್ಟಿದ್ದಾರೆ.
ಇದನ್ನೂ ಓದಿ : ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು ಆಸ್ತಿ ಹೊಂದಿದ್ದಾರೆ ಗೊತ್ತೆ ?
ಕೌಶಲ್ಯಪೂರ್ಣತೆ, ಅತ್ಯಂತ ಕಡಿಮೆ ಕ್ರೈಮ್ ರೇಟ್, ಬೇರೆ ಪ್ರದೇಶಗಳಲ್ಲಿ ಹೊಂದಿಕೊಂಡು ಕೆಲಸ ಮಾಡುವ ಸ್ವಭಾವ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯದ ಕಾರ್ಮಿಕ ವರ್ಗಕ್ಕೆ ತನ್ನದೇ ಆದ ಹೆಸರಿದೆ. ಹೀಗಾಗಿ ಬೇಡಿಕೆಯೂ ಸಹಜವಾಗಿದೆ. ಆದರೆ ಮಾಹಿತಿ ಕೊರತೆ, ಏಜನ್ಸಿಗಳ ಹಾವಳಿಯಿಂದ ವಿದೇಶಕ್ಕೆ ತೆರಳಿ ಕೆಲಸ ಮಾಡಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಸಂತೋಷ್ ಲಾಡ್ ಅವರು ಇಸ್ರೇಲ್ ಕಾನ್ಸುಲೇಟ್ ಅಧಿಕಾರಿಗಳೊಂದಿಗೆ ಇಂದು ನಡೆಸಿದ ಆರಂಭಿಕ ಹಂತದ ಸಭೆ ಮಹತ್ವ ಪಡೆದುಕೊಂಡಿದೆ.
ಶ್ರಮಿಕರ ಹಿತಕ್ಕಾಗಿ ಹಲವು ದಿಟ್ಟ ಹೆಜ್ಜೆಗಳನ್ನಿಡುತ್ತಿರುವ ಸಚಿವ ಸಂತೋಷ್ ಲಾಡ್ ಅವರು ಈ ಹೊಸ ಪರಿಕಲ್ಪನೆಯನ್ನು ಹೇಗೆ ಕಾರ್ಯರೂಪಕ್ಕೆ ತರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.





