ಬೆಂಗಳೂರು : ಸರ್ಕಾರಿ ನೌಕರರು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡದೆ ಸರ್ಕಾರದ ಪರವಾಗಿ ಆ ಮೂಲಕ ಜನಪರವಾಗಿ ಕೆಲಸ ಮಾಡಬೇಕು. ತಮ್ಮ ಕೆಲಸಕ್ಕಾಗಿ ದೂರದಿಂದ ಬರುವ ಬಡವರು/ ಸಾರ್ವಜನಿಕರ ಜೊತೆ ತಾಳ್ಮೆ ಇಟ್ಟುಕೊಂಡು ಮಾನವೀತೆಯಿಂದ ವರ್ತಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಕಿವಿ ಮಾತು ಹೇಳಿದ್ದಾರೆ.

ಕಾರ್ಮಿಕ ಇಲಾಖೆ ವ್ಯಾಪ್ತಿಯ ವಿವಿಧ ಇಲಾಖೆ/ ಮಂಡಳಿಗೆ ನೇಮಕವಾದ 85 ನೌಕರರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೇಮಕಾತಿ ಆದೇಶ ವಿತರಿಸಿ ಮಾತನಾಡಿದರು.
ಹೊಸದಾಗಿ ಕೆಲಸಕ್ಕೆ ಸೇರುತ್ತಿರುವ ನಿಮ್ಮೆಲ್ಲರ ಆಯ್ಕೆಯನ್ನು ಬಹಳ ಪಾರದರ್ಶಕತೆಯಿಂದ ಮಾಡಿದ್ದೇವೆ. ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ನಮ್ಮ ನಮ್ಮ ಕೆಲಸಕ್ಕೆ ನಮ್ಗೊಂದು ಹುದ್ದೆ ಇದೆ. ಹಾಗಾಗಿ, ವ್ಯವಸ್ಥೆಯ ಭಾಗವಾಗಿ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಬೆಂಬಲಿಗರಿಗೆ ಡಿ.ಕೆ. ಶಿವಕುಮಾರ್ ವಾರ್ನ್..!
ಕಾರ್ಮಿಕ ಇಲಾಖೆಯಲ್ಲಿ ಬದಲಾವಣೆ ತರಲು ಸಾಕಷ್ಟು ಕೆಲಸ ಮಾಡಲಾಗಿದೆ. ಇದನ್ನು ಅನೇಕರು ಗುರುತಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 45 ಸಾವಿರ ನೇಮಕಾತಿಗಳಾಗಿವೆ. ಇನ್ನೂ 55 ಸಾವಿರ ನೇಮಕಾತಿಗೆ ನಿರ್ಧರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ನೇಮಕಾತಿಯಲ್ಲಿ ಮಹಿಳೆಯರು ಮತ್ತು ವಿಶೇಷಚೇತನರಿಗೆ ಹೆಚ್ಚಿನ ಆದ್ಯತೆ ನೀಡಿ ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ನೌಕರರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ ಫಾಹೀಂ ನೂತನ ನೌಕರರಿಗೆ ಶುಭಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ ಚೆನ್ನಣ್ಣವರ್ ಅವರು ನೇಮಕಕೊಂಡ ನೌಕರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶಾಸಕರಾದ ಕೆ ಎಂ ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯರಾದ ಬಿಲ್ಕೀಸ್ ಬಾನು, ಕಾರ್ಮಿಕ ಆಯುಕ್ತರಾದ ಡಾ. ಎಚ್ ಎನ್ ಗೋಪಾಲಕೃಷ್ಣ, ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರಾದ ಡಾ. ದಿನೇಶ್ ಕುಮಾರ್ ಜೈನ್, ಕಾರ್ಖಾನೆಗಳು ಮತ್ತು ಬಾಯ್ಲರುಗಳು, ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕರಾದ ಕೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.






