ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಪಂಚ ಯೋಜನೆಗಳನ್ನು ಜಾರಿಗೆ ತಂದು ಜನರ ಮನಗೆಲ್ಲಲು ಪ್ರಯತ್ನಿಸಿದ್ದಾರೆ. ಆದರೆ ಈ ಯೋಜನೆಗಳೇ ಕಾಂಗ್ರೆಸ್ ಸರ್ಕಾರಕ್ಕೆ ಮುಳುವಾಗಿವೆ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳೇ ಸಾಕ್ಷಿಯಾಗಿವೆ.

ಈ ಎಲ್ಲದರ ನಡುವೆಯೇ ಎಂದಿನಂತೆ ನಾಯಕತ್ವದ ಕಿತ್ತಾಟ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮೇ 23, 2023 ಕ್ಕೆ 135 ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆಗಿನಿಂದಲೂ ನಾಯಕತ್ವದ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ಸ್ಫೋಟಗೊಳ್ಳುತ್ತೆ, ಹೈಕಮಾಂಡ್ ನಾಯಕರ ಎಚ್ಚರಿಕೆಗೆ ಮತ್ತೆ ಸೈಲೆಂಟ್ ಆಗಿಬಿಡುತ್ತದೆ.
ಈ ನಡುವೆಯೇ ಕಳೆದ ನವೆಂಬರ್ನಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಉತ್ಸುಕರಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನಕ್ಕೆ ತಲೆ ಕೆಡಿಸಿಕೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಂತಹ ಅಹಿಂದ ನಾಯಕನನ್ನು ಟಚ್ ಮಾಡದಿರಲು ಡಿಸೈಡ್ ಮಾಡಿ ಬಿಟ್ಟಿತ್ತು. ಹೀಗಾಗಿ ಆಗ ಸಿದ್ದರಾಮಯ್ಯ ಅವರ ಕುರ್ಚಿ ಸೇಫ್ ಆದಂತಾಗಿತ್ತು. ಡಿಕೆಶಿಗೆ ನಿರಾಸೆಯಾಗಿತ್ತು.
ಆದರೆ ಇದೀಗ ಮತ್ತೆ ಪಟ್ಟದ ಆಟ ಜೋರಾಗಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಿ ಯಾವಾಗ ಪ್ರಮೋಷನ್ ಪಡೆಯುತ್ತಾರೆ ಎಂಬ ಪ್ರಶ್ನೆಯು ಡಿಸಿಎಂ ನಿಷ್ಠ ಬಣದಲ್ಲಿ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎನ್ನುವ ಬಲವಾದ ಪ್ರತಿಪಾದನೆಯೂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಆದಿಯಾಗಿ ಸಿದ್ದು ಆಪ್ತ ಮಂತ್ರಿಗಳು, ಶಾಸಕರದ್ದಾಗಿದೆ. ಈ ನಡುವೆಯೇ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಮಾಡುತ್ತಲೇ ಇದ್ದಾರೆ. ಕಳೆದ ವಾರದಲ್ಲಿ ದಿಲ್ಲಿಯಿಂದಲೇ ಸಿದ್ದರಾಮಯ್ಯ ಬಣಕ್ಕೆ ಸಂದೇಶ ರವಾನಿಸುವ ನಿಟ್ಟಿನಲ್ಲಿ, ನಾನು ಇಲ್ಲಿಗೆ ಬರುವುದೇ ರಾಜಕಾರಣಕ್ಕಾಗಿಯೇ, ಏನು ಹೇಳಬೇಕು ಎಲ್ಲವನ್ನೂ ಹೇಳಿದ್ದೇನೆ ಎನ್ನುವ ಮೂಲಕ ಟ್ರಬಲ್ ಶೂಟರ್ ಸಿಎಂ ಬಣಕ್ಕೆ ಹೊಸ ಟೆನ್ಷನ್ ಶುರುವಾಗುವಂತೆ ಮಾಡಿತ್ತು.
ಇದನ್ನೂ ಓದಿ : 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ: ಧಾರವಾಡದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
ಇನ್ನೂ ಇದೀಗ ಮತ್ತೆ ಕುರ್ಚಿ ಕದನ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಯಾವುದೇ ಕಠಿಣ ಅಂಕುಶ ಹಾಕುವಲ್ಲಿ ಸಕ್ಸಸ್ ಆಗುತ್ತಿಲ್ಲ. ಒಂದೆರಡು ಬಾರಿ, ಬಾಯಿ ಮುಚ್ಚಿಕೊಂಡು ಇರಬೇಕಷ್ಟೇ ಎಂಬ ಎಚ್ಚರಿಕೆ ನೀಡಿದ್ದರೂ ಸಹ ಇಬ್ಬರು ನಾಯಕರ ಬಣ ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಡಿಕೆ ಸುರೇಶ್ ಹೇಳುವ ಕೊಟ್ಟ ಮಾತಿನ ಅಸಲಿಯತ್ತೇನು..?
ಹೀಗಾಗಿ ಕುರ್ಚಿ ಕದನದ ಅಸಲಿಯತ್ತಾದರೂ ಏನು? ಸಿದ್ದರಾಮಯ್ಯ ಸಿಎಂ ಆಗುವಾಗ ಕೊಟ್ಟ ಮಾತೇನು? ಹೈಕಮಾಂಡ್ ಡಿಕೆಶಿಗೆ ನೀಡಿರುವ ಅಭಯವಾದರೂ ಏನು ಎನ್ನುವ ಪ್ರಶ್ನೆಗಳು ಮೂಡುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮಾತ್ರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಪ್ರಿಯಾಂಕಾ, ಸೋನಿಯಾ ಗಾಂಧಿ ಬಳಿ ಇರಬಹುದೇನೋ. ಆದರೆ ಈ ನಾಯಕರು ಯಾರೊಬ್ಬರು ಈ ವಿಚಾರದಲ್ಲಿ ಬಾಯಿ ಬಿಡುತ್ತಿಲ್ಲ, ಸ್ಪಷ್ಟನೆಗೂ ಮುಂದಾಗುತ್ತಿಲ್ಲ ಎನ್ನುವುದು ಕಾಂಗ್ರೆಸ್ ನಾಯಕರ ಬೇಸರಕ್ಕೆ ಕಾರಣವಾಗಿದೆ. ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮಿಸಿ ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡಬೇಕೆಂಬ ಒಪ್ಪಂದವಾಗಿರುವ ಬಗ್ಗೆ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಮಾಜಿ ಸಂಸದ ಹಾಗೂ ಡಿಕೆಶಿ ಸಹೋದರ ಡಿಕೆ ಸುರೇಶ್ ಸಿದ್ದರಾಮಯ್ಯ ಕೊಟ್ಟ ಮಾತನ್ನು ಮರೆಯೋದಿಲ್ಲ ಎಂದು ಆಗಾಗ್ಗೆ ಕುಟುಕುತ್ತಿದ್ದಾರೆ.
ಹೈಕಮಾಂಡ್ ಆಡುತ್ತಿರುವ ಜಾಣ ಆಟದ ಕಾರಣಕ್ಕಾಗಿಯೇ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಸಿಎಂ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಸಂಪುಟ ಪುನರ್ರಚನೆ ಆಯ್ಕೆ ಮಾಡಬಹುದು. ಇಲ್ಲವಾದರೆ ಡಿ ಕೆ ಶಿವಕುಮಾರ್ ಈ ಬಾರಿಯ ಬಜೆಟ್ ಬಳಿಕ ತಮಗೆ ಸಿಎಂ ಕುರ್ಚಿ ಬಿಟ್ಟುಕೊಡಬೇಕೆಂದು ಇನ್ನೊಂದು ಬಾರಿ ಹಕ್ಕು ಮಂಡಿಸುವ ಸಾಧ್ಯತೆಯೂ ಇದೆ. ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ತಮ್ಮ ಬೇಡಿಕೆಯನ್ನು ಇಟ್ಟಿರುವ ಡಿಸಿಎಂ ಕಾದು ನೋಡುವ ತಂತ್ರದ ಮೊರೆ ಹೋಗಿರುವಂತೆ ಕಂಡುಬರುತ್ತಿದೆ.
ಇನ್ನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಗದ್ದುಗೆ ಗುದ್ದಾಟಕ್ಕೆ ಹೈಕಮಾಂಡ್ ಮೌನವೇ ಕಾರಣವಾಗಿದೆ. ಆದರೆ ಈ ನಡುವೆಯೇ ತಮ್ಮ ನಾಯಕನಿಗಾಗಿ ಕೊನೆಯ ಕ್ಷಣದವರೆಗೂ ಕುರ್ಚಿಗಾಗಿ ಜಪ ಮಾಡುತ್ತಿರುವ ಡಿಕೆ ಟೀಂ ಪಟ್ಟಾಭಿಷೇಕಕ್ಕೆ ಸರ್ವಸನ್ನದ್ಧವಾದಂತೆ ಕಂಡುಬರುತ್ತಿದೆ. ಹೀಗಾಗಿ ಮಾರ್ಚ್ ಅಂತ್ಯದ ಬಳಿಕ ಕನಕಪುರದ ಶಾಸಕ ರಾಜ್ಯದ ಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆಗಳು ಮೊಳಕೆಯೊಡೆದಿವೆ. ಅಲ್ಲದೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿರುವ ತ್ಯಾಗವೂ ಅವರ ಕೈ ಹಿಡಿಯಲಿದೆ ಎನ್ನುವ ಮಾತುಗಳೂ ಇವೆ.
ಕಾಂಗ್ರೆಸ್ನ ಪಾಲಿನ ಆಪದ್ಭಾಂಧವ ಈ ಡಿಕೆಶಿ….
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯ ಬಗ್ಗೆ ನಾವು ಗಮನಿಸಿದಾಗ ನೋಡಿದಾಗ, ಪಕ್ಷಕ್ಕಾಗಿ ದುಡಿದಿರುವವರಿಗೆ ಪಕ್ಷ ಯಾವತ್ತೂ ಕೈ ಬಿಡುವುದಿಲ್ಲ ಎಂಬ ಮಾತು ಡಿಕೆಶಿ ವಿಚಾರದಲ್ಲಿ ಈಗಾಗಲೇ ಒಂದು ಬಾರಿ ನನಸಾಗಿದೆ. ಪಕ್ಷದ ಸಂಕಷ್ಟದ ಕಾಲದಲ್ಲಿ ಆಸರೆಯಾಗಿದ್ದ ಡಿಕೆಶಿಗೆ ಕಾಂಗ್ರೆಸ್ ಕೆಪಿಸಿಸಿ ಪಟ್ಟವನ್ನು ಧಾರೆ ಎರೆಯಿತು. ಅದಾದ ಬಳಿಕ ಉಪಮುಖ್ಯಮಂತ್ರಿ ಹುದ್ದೆ ನೀಡಿದೆ. ಇದೀಗ ಸಿಎಂ ಹುದ್ದೆಯನ್ನೂ ನೀಡುತ್ತದೆ ಎನ್ನುವುದು ಡಿಕೆ ಬಣದ ವಾದವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ಮತ್ತು ಪ್ರಭಾವಿ ನಾಯಕರಾಗಿರುವ ಡಿಕೆ ಶಿವಕುಮಾರ್ ಸಮುದಾಯದಲ್ಲೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.

ಅಲ್ಲದೆ ಡಿಕೆಶಿ ಹೈಕಮಾಂಡ್ ಮಟ್ಟದಲ್ಲೂ ಕೂಡ ಸೋನಿಯ ಹಾಗೂ ಪ್ರಿಯಾಂಕಾ ಗಾಂಧಿಗೂ ಆಪ್ತರಾಗಿದ್ದಾರೆ. ಅದರಲ್ಲೂ ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೂ ಬೇಕಾದ ವ್ಯಕ್ತಿಯಾಗಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದಾಗ ಪಕ್ಷದ ಎಲ್ಲ ರೀತಿಯಿ ಸಂಕಟಗಳಲ್ಲೂ ಧಾವಿಸಿ ಕಾಂಗ್ರೆಸ್ನ ಗೌರವ ಕಾಪಾಡುತ್ತ ಬಂದಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿ ಪಕ್ಷಕ್ಕೆ ಅಪಾಯ ಎದುರಾಗುವ ಲಕ್ಷಣಗಳು ಗೋಚರಿಸಿದರೆ ಥಟ್ಟನೇ ಮೇಡಂ ಸೋನಿಯಾ ಅವರಿಗೆ ನೆನಪಾಗೋದೆ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ತನು,ಮನ, ಧನದಿಂದ ಸೇವೆ ಸಲ್ಲಿಸುತ್ತಿರುವ ಡಿಕೆ ಶಿವಕುಮಾರ್ ಪತನವಾಗುವ ಹಂತ ತಲುಪಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮರುಜೀವ ನೀಡಿರುವ ಉದಾಹರಣೆಗಳಿವೆ.
ಸಂಘಟನಾ ಚತುರತೆ, ಮಾತಿನ ಕೌಶಲ್ಯ ಹಾಗೂ ರಾಜಕೀಯ ಅನುಭವ, ಜ್ಞಾನಗಳು ಇಂದಿಗೂ ಡಿಕೆ ಶಿವಕುಮಾರ್ ಕೈ ಹಿಡಿಯುತ್ತಿವೆ. ರಾಜ್ಯದ ವಿಚಾರದಲ್ಲಿಯೂ ಪಕ್ಷದ ಅಧಿಕಾರ ಬರಲು ಡಿಕೆ ಶಿವಕುಮಾರ್ ಸಂಘಟನೆಯ ಸಾಮರ್ಥ್ಯವೇ ಪ್ರಮುಖವಾಗಿದ್ದರೂ, ಸಿದ್ದರಾಮಯ್ಯ ಜನಬೆಂಬಲ, ವೋಟ್ ಬ್ಯಾಂಕ್ಗಳೂ ಕಾರಣವಾಗಿವೆ. ತಾವು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆಶಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮೀಣ ಭಾಗದಿಂದ ನಗರದವರೆಗೂ ಹೊಸ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಯುವಕರನ್ನು ಕೇಂದ್ರಿಕರಿಸಿ ಪಕ್ಷದ ವಿಚಾರಗಳು ತಲುಪುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರದ್ದು ಒಂದು ರೀತಿಯಾದರೆ ಪಕ್ಷದ ಸೇವೆಯಾದರೆ, ಡಿಕೆ ಶಿವಕುಮಾರ್ ಅವರದ್ದು ಮತ್ತೊಂದು ರೀತಿಯದ್ದಾಗಿದೆ. ಈ ಎಲ್ಲ ಕಾರಣಗಳಿಗಾಗಿ ಮುಂಬರುವ ಮಾರ್ಚ್ ತಿಂಗಳ ಅಂತ್ಯದ ಬಳಿಕ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವ ಸಂಭವಗಳಿವೆ ಎನ್ನಲಾಗಿದೆ.
ಉಳಿದೆರಡು ವರ್ಷಗಳಲ್ಲಾದರೂ ಬದಲಾಗುತ್ತಾ ಲಕ್..?
ಮುಂಬರುವ ಮೇ ತಿಂಗಳ 23ಕ್ಕೆ ರಾಜ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಭರ್ತಿ 3 ವರ್ಷಗಳಾಗಲಿದ್ದು, ಇದಾದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವಿನ ಸಾಧ್ಯತೆಗಳು ದಟ್ಟವಾಗಿವೆ. ಯಾವುದೇ ಸರ್ಕಾರವಿದ್ದರೂ ಒಬ್ಬ ಮುಖ್ಯಮಂತ್ರಿಗೆ ಕನಿಷ್ಠ 2 ವರ್ಷವಾದರೂ ಬೇಕಾಗುತ್ತದೆ. 5 ವರ್ಷದಲ್ಲಿ 3 ವರ್ಷ ಬೇರೆಯವರಾದೂ ಇನ್ನುಳಿದ ಅವಧಿಗೆ ಸಿಎಂ ಆಗುವವರಿಗೆ ಸುಗಮ ಆಡಳಿತಕ್ಕಾಗಿ ಕೇವಲ 1 ವರ್ಷವಷ್ಟೇ ಕಾಲಾವಕಾಶ ದೊರೆಯುತ್ತದೆ. ಇನ್ನುಳಿದ 1 ವರ್ಷ ಚುನಾವಣಾ ವರ್ಷವಾಗಿ ಬದಲಾಗಿರುತ್ತದೆ.
ಆ ಅವಧಿಯು ಪಕ್ಷ ಸಂಘಟನೆ, ಅಭ್ಯರ್ಥಿಗಳ ಹುಡುಕಾಟ, ಸಂಪನ್ಮೂಲ ಕ್ರೋಢಿಕರಣ ಹೀಗೆ ಚುನಾವಣೆಗೆ ಮೀಸಲಿಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಳಿಕ 2 ವರ್ಷದ ಅವಧಿಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಬೇಕೆಂಬ ಒತ್ತಾಯಗಳೂ ಇವೆ. ಆದರೆ ರಾಹುಲ್ ಗಾಂಧಿ ಹೇಳಿದರೆ ನಾನು ಕುರ್ಚಿ ಬಿಡುತ್ತೇನೆ ಎಂಬುವುದು ಸಿಎಂ ಮಾತು ಎನ್ನಲಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಸೃಷ್ಟಿಸಿ ಇಬ್ಬರ ನಡುವೆ ಸಂಘರ್ಷಕ್ಕೆ ಹೈಕಮಾಂಡ್ ನಾಂದಿ ಹಾಡಿದೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಇದಾದ ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಲಿವೆಯಾ ಎಂಬುವುದನ್ನು ಕಾದು ನೋಡಬೇಕಿದೆ.






