ನವದೆಹಲಿ : ಎಐ ಆಧಾರಿತ ಜಗತ್ತಿನಲ್ಲಿ ಮಾನವೀಯತೆಯ ಕಲ್ಯಾಣಕ್ಕಾಗಿ ಮಾನವ್ (MANAV) ವಿಷನ್ ಒಂದು ಪ್ರಮುಖ ಕೊಂಡಿಯಾಗಲಿದೆ. ಮಾನವ್ ಎಂದರೆ ಮನುಷ್ಯ ಮತ್ತು ಮಾನವ ಕಲ್ಯಾಣದೊಂದಿಗೆ ಈ ಸಂಪರ್ಕಕ್ಕೆ ಮಾನವ್ ದೃಷ್ಟಿಕೋನವು ಅಡಿಪಾಯ ಹಾಕುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿನ ಭಾರತ್ ಮಂಟಪದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ. ಮಾನವ್ ದೃಷ್ಟಿಕೋನದ ಅರ್ಥವನ್ನು ತಿಳಿಸಿದ್ದಾರೆ. ಎಐ ಒಂದು ಪರಿವರ್ತನಾ ಶಕ್ತಿ. ಅದರ ಜೊತೆಗೆ ಹೇಗೆ ಸಾಗಬೇಕು ಎಂಬ ದಿಕ್ಕಿಲ್ಲದಿದ್ದರೆ ಅದು ಬದುಕಿಗೆ ಅಡ್ಡಿಯಾಗುತ್ತದೆ. ಇದಕ್ಕಾಗಿ ಸರಿಯಾದ ದಿಕ್ಕು ಕಂಡುಕೊಂಡರೆ, ಆ ಸಮಸ್ಯೆ ಪರಿಹಾರವಾಗುತ್ತದೆ. ಎಐ ಅನ್ನು ಯಂತ್ರ ಕೇಂದ್ರಿತವಾಗಿಸುವುದಕ್ಕಿಂತ ಮಾನವ ಕೇಂದ್ರಿತವಾಗಿ ಮಾಡುವುದು ಹೇಗೆ, ಅದನ್ನು ಸೂಕ್ಷ್ಮ ಮತ್ತು ಸ್ಪಂದಿಸುವಂತೆ ಮಾಡುವುದು ಹೇಗೆ, ಇದು ಈ ಜಾಗತಿಕ ಎಐ ಶೃಂಗಸಭೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಎಐ (Artificail Intelligence) ಯಂತ್ರಗಳನ್ನು ಹೆಚ್ಚು ಬುದ್ಧಿವಂತರನ್ನಾಗಿ ಮಾಡುತ್ತಿರಬಹುದು ಆದರೆ ಅದನ್ನು ಮೀರಿಯೂ, ಎಐ ಮಾನವ ಸಾಮರ್ಥ್ಯಗಳನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಒಂದೇ ಒಂದು ವ್ಯತ್ಯಾಸವಿದ್ದು, ಈ ಬಾರಿ ವೇಗ ಅಭೂತಪೂರ್ವವಾಗಿದೆ ಮತ್ತು ಅದರ ಪ್ರಮಾಣವು ನಿರೀಕ್ಷೆ ಮೀರಿದೆ. ಹಿಂದೆ, ತಂತ್ರಜ್ಞಾನದ ಪ್ರಭಾವವು ಗೋಚರಿಸಲು ದಶಕಗಳೇ ಬೇಕಾಯಿತು. ಇಂದು, ಯಂತ್ರ ಆಧಾರಿತ ಕಲಿಕೆಯಿಂದ ಕಲಿಕಾ ಯಂತ್ರಗಳವರೆಗಿನ ಪ್ರಯಾಣವು ಎಂದಿಗಿಂತಲೂ ವೇಗವಾಗಿ, ತಳಮಟ್ಟದಿಂದ ಗಟ್ಟಿಯಾಗಿದ್ದು, ಅಲ್ಲದೆ ಅದು ವಿಶಾಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಯುವಕರು ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿರುವ ಮತ್ತು ಅದರ ಕಾರ್ಯಶೈಲಿಯನ್ನು ಅತ್ಯಂತ ಜವಾಬ್ದಾರಿಯಿಂದ ತೆಗೆದುಕೊಳ್ಳುತ್ತಿರುವ ವೇಗವು ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದ್ದಾರೆ.
ಮಾನವ್ ಎಂದರೆ ಏನು..?
M – AI ಆಧರಿತವಾಗದ ನೈತಿಕ ವ್ಯವಸ್ಥೆಗಳು
A – ಜವಾಬ್ದಾರಿಯುತ ಆಡಳಿತ ಎಂದರೆ ಪಾರದರ್ಶಕ ನಿಯಮಗಳು ಮತ್ತು ದೃಢವಾದ ಮೇಲ್ವಿಚಾರಣೆ.
N – ರಾಷ್ಟ್ರೀಯ ಸಾರ್ವಭೌಮತ್ವ ಎಂದರೆ ‘ಜಿಸ್ಕಾ ಡೇಟಾ, ಉಸ್ಕಾ ಅಧಿಕಾರ್’ (ನಿಮ್ಮ ಡೇಟಾ, ನಿಮ್ಮ ಹಕ್ಕು)
A – ಪ್ರವೇಶಿಸಬಹುದಾದ ಮತ್ತು ಒಳಗೊಳ್ಳುವ ಅರ್ಥ ಎಐ (AI) ಏಕಸ್ವಾಮ್ಯವಲ್ಲ ಅದು ಗುಣಕವಾಗಿರಬೇಕು.
V – ಕಾನೂನುಬದ್ಧ ಅರ್ಥ ಎಐ (AI) ಅನ್ನು ಕಾನೂನುಬದ್ಧವಾಗಿ ಪರಿಶೀಲಿಸಲು ಸಾಧ್ಯವಾಗಿಸಬೇಕು.
ಇದನ್ನೂ ಓದಿ : Bill Gates: ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಭಾಷಣ ದಿಢೀರ್ ರದ್ದು, ಕಾರಣವೇನು?
ಎಐ (AI) ಮೂಲಕ ಎಲ್ಲರಲ್ಲೂ ಸಂತೋಷ ತರುವುದು ಹಾಗೂ ಬದಲಾವಣೆಯು ನಮ್ಮ ಉದ್ದೇಶವಾಗಿದೆ. ಈ ಶೃಂಗಸಭೆಯ ವಿಷಯವು ಭಾರತವು ಎಐ AI ಅನ್ನು ಯಾವ ದೃಷ್ಟಿಕೋನದಿಂದ ನೋಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ವಿಷನ್ ನಲ್ಲಿ ನೈತಿಕ ಮತ್ತು ನೀತಿಪರ ವ್ಯವಸ್ಥೆಗಳು, ಹೊಣೆಗಾರ ಆಡಳಿತ ಮತ್ತು ರಾಷ್ಟ್ರೀಯ ಸ್ವಾಯತ್ತತೆ ಒಳಗೊಂಡಿವೆ. ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಸಾಧನವಾಗಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ ಯಶಸ್ವಿಯಾಗುವ ಯಾವುದೇ ಎಐ ಮಾದರಿಯನ್ನು ವಿಶ್ವದ ಎಲ್ಲೆಡೆ ಬಳಸಬಹುದು ಎಂದು ಹೇಳಿದರು. ಡೀಪ್ಫೇಕ್ಗಳು ಮತ್ತು ಕೃತಕವಾಗಿ ಸೃಷ್ಟಿಸಲಾದ ವಿಷಯಗಳು ಮುಕ್ತ ಸಮಾಜಗಳಲ್ಲಿ ಅಸ್ಥಿರತೆ ಉಂಟುಮಾಡುತ್ತವೆ. ಕೆಲವರು ಎಐ ಎಂದರೆ ಭಯಪಡುತ್ತಾರೆ, ಕೆಲವರು ಅದರಲ್ಲಿ ಭವಿಷ್ಯವನ್ನು ನೋಡುತ್ತಾರೆ. ಭಾರತ ಎಐಯಲ್ಲೇ ಭವಿಷ್ಯವನ್ನು ನೋಡುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮಾನವ ಇತಿಹಾಸದಲ್ಲಿ ಕೆಲವು ತಿರುವುಗಳು ಶತಮಾನಗಳ ದಿಕ್ಕನ್ನು ನಿರ್ಧರಿಸಿವೆ. ಅವು ನಾಗರಿಕತೆಯ ದಿಕ್ಕನ್ನು ರೂಪಿಸಿ ಅಭಿವೃದ್ಧಿಯ ವೇಗವನ್ನು ಬದಲಿಸಿವೆ. ಕೃತಕ ಬುದ್ಧಿಮತ್ತೆ ಕೂಡ ಅಂತಹ ಮಹತ್ವದ ಪರಿವರ್ತನೆಯಾಗಿದೆ. ಎಐ ಹಂಚಿಕೊಂಡಾಗ ಮಾತ್ರ ಅದರ ಪ್ರಯೋಜನ ಎಲ್ಲರಿಗೂ ಸಿಗುತ್ತದೆ. ಅದನ್ನು ಜಾಗತಿಕ ಸಾಮಾನ್ಯ ಸಂಪತ್ತಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಬೇಕು. ಎಐಗೆ ಆಕಾಶದವರೆಗೆ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು, ಆದರೆ ಅದರ ನಿಯಂತ್ರಣ ನಮ್ಮ ಕೈಯಲ್ಲಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ, ಆಹಾರ ಪ್ಯಾಕೆಟ್ಗಳ ಮೇಲಿರುವ ಪೌಷ್ಟಿಕ ಲೇಬಲ್ಗಳ ಮಾದರಿಯಲ್ಲಿ, ಎಐ ಮೂಲಕ ಸೃಷ್ಟಿಸಲಾದ ವಿಷಯಗಳಿಗೆ ಪ್ರಾಮಾಣಿಕೀಕೃತ ಲೇಬಲ್ಗಳು (authenticity labels) ಇರಬೇಕು ಎಂಬುದರ ಬಗ್ಗೆ ಪ್ರಧಾನಿ ಮೋದಿ ಸೂಚ್ಯವಾಗಿ ತಿಳಿಸಿದ್ದಾರೆ.






