ಬೆಂಗಳೂರು : 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತನ ಮಾದರಿಯ ಸಿಎಂ ಕಪ್ 2026 ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಸಿಎಂ ಸಿದ್ದರಾಮಯ್ಯ ಬುಧವಾರ ಅನಾವರಣಗೊಳಿಸಿದರು. ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಕಪ್ 2026ರ ಲೋಗೋ ಬಿಡುಗಡೆ ಮಾಡಿ, ಪಂದ್ಯಾವಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಎಸಿಪಿ ಪರಮೇಶ್ವರ್, ಚಿತ್ರರಂಗದ ಇಮ್ರಾನ್ ಸರ್ದಾರಿಯಾ, ಕವಿತಾ ಲಂಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲ್ಲದೆ ಸಿಎಂ ಕಪ್ ಆಯೋಜಕರಾದ ಮಂಜುನಾಥ್ ಗೌಡ, ಸುನೀಲ್ ಧರ್ಮಸ್ಥಳ, ಸನತ್ ರೈ, ತೇಜಸ್ ಪವಾಸ್, ಬಾಲು, ಆಶಿಕ್ ಶೆಟ್ಟಿ ಇತರರಿದ್ದರು. ಜನಪ್ರತಿನಿಧಿಗಳು, ಐಎಎಸ್/ಐಪಿಎಸ್, ಸರ್ಕಾರಿ ಅಧಿಕಾರಿಗಳು, ಚಲನಚಿತ್ರ ನಟ-ನಟಿಯರು, ಮಾಧ್ಯಮ ಕ್ಷೇತ್ರದಲ್ಲಿರುವವರು ಒಟ್ಟಾಗಿ ಆಡುತ್ತಿರುವ ಸಿಎಂ ಕಪ್ ಫೈನಲ್ ಪಂದ್ಯ ಇದೇ ಫೆಬ್ರವರಿ 21 ಮತ್ತು 22ರಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನಲ್ಲಿ ನಡೆಯಲಿದೆ.
ಇನ್ನೂ ಈ ಸಿಎಂ ಕಪ್ ಕ್ರೀಡಾಕೂಟಕ್ಕೆ ಪ್ರತಿಧ್ವನಿಯೂ ಡಿಜಿಟಲ್ ಪ್ರಮೋಷನ್ ಪಾರ್ಟನರ್ ಆಗಿದ್ದು ಸಂತಸದ ಸಂಗತಿಯಾಗಿದೆ. ಸಿಎಂ ಕಪ್ ಎತ್ತಿ ಹಿಡಿಯಲು ಈಗಾಗಲೇ ತಂಡಗಳು ತಮ್ಮದೇ ಆದ ರೀತಿಯಲ್ಲಿ ತಾಲೀಮಿನಲ್ಲಿ ತೊಡಗಿದ್ದು, ಅಂತಿಮವಾಗಿ ಯಾರ ಮಡಿಲಿಗೆ ಸೇರಲಿದೆ ಸಿಎಂ ಕಪ್ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.






