ಬೆಂಗಳೂರು : ಭಾರತದ ಕೃಷಿ ವ್ಯವಸ್ಥೆಯಲ್ಲಿ “ಎಂಎಸ್ಪಿ” ಎಂಬ ಪದವು ವರ್ಷಗಳಿಂದ ಭರವಸೆಯ ಸಂಕೇತವಾಗಿ ಬಳಸಲ್ಪಡುತ್ತಿದೆ. ಆದರೆ ವಾಸ್ತವದಲ್ಲಿ, ಅದು ರೈತರ ಬದುಕಿಗೆ ಭದ್ರತೆ ನೀಡುವ ಕಾನೂನು ಹಕ್ಕಾಗಿಲ್ಲ. ಇದೇ ಕಾರಣಕ್ಕೆ ಇಂದು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಖಾತರಿ ಕಾನೂನು ರೈತರ ಹೋರಾಟದ ಕೇಂದ್ರಬಿಂದುವಾಗಿದೆ. ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಖಾತರಿ ಮಾಡುವ ಕಾನೂನನ್ನು ರೂಪಿಸಿಯೇ ತೀರಬೇಕೆಂದು ದೇಶದ ರೈತರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ಆಯೋಜಿಸಿದ್ದಾರೆ.

ಆ ಮೂಲಕ ರೈತರ ಮತ್ತೊಂದು ಬೃಹತ್ ಹೋರಾಟಕ್ಕೆ ದೇಶವು ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಇದು ಕೇವಲ ಮತ್ತೊಂದು ಪ್ರತಿಭಟನಾ ಕಾರ್ಯಕ್ರಮವಾಗಿ ಪರಿಗಣಿಸದೆ ಭಾರತದ ಕೃಷಿ ನೀತಿಯ ಮೂಲಭೂತ ದೌರ್ಬಲ್ಯಗಳನ್ನು ಪ್ರಶ್ನಿಸುವ ರಾಜಕೀಯ–ಆರ್ಥಿಕ ಸವಾಲಾಗಿ ಬದಲಾಗುವ ಎಲ್ಲಾ ಸಾಧ್ಯತೆಗಳು ಇದಕ್ಕಿದೆ. ಸರ್ಕಾರ ಪ್ರತಿವರ್ಷ 23 ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಘೋಷಿಸುತ್ತದೆ. ಆದರೆ ಈ ಘೋಷಣೆಗೆ ಕಾನೂನು ಬಲವಿಲ್ಲ. ಸರ್ಕಾರ ಖರೀದಿಸದಿದ್ದರೆ ಅಥವಾ ಮಾರುಕಟ್ಟೆಯಲ್ಲಿ ಖರೀದಿ ವ್ಯವಸ್ಥೆ ವಿಫಲವಾದರೆ, ರೈತ ಎಂಎಸ್ಪಿಗಿಂತ ಕಡಿಮೆ ಬೆಲೆಗೆ ತನ್ನ ಬೆಳೆ ಮಾರಲು ಬಾಧ್ಯಸ್ಥನಾಗುತ್ತಾನೆ.
ಕಾನೂನು ಇಲ್ಲದೆ ಘೋಷಿತ ಬೆಲೆ ರೈತನಿಗೆ ಹೇಗೆ ರಕ್ಷಣೆ ನೀಡುತ್ತದೆ?
ಬಹುತೇಕ ರಾಜ್ಯಗಳಲ್ಲಿ ಎಂಎಸ್ಪಿ ಕೇವಲ ಕಾಗದದಲ್ಲೇ ಉಳಿಯುತ್ತಿದೆ. ಖರೀದಿ ಕೇಂದ್ರಗಳ ಕೊರತೆ, ಮಧ್ಯವರ್ತಿಗಳ ಪ್ರಾಬಲ್ಯ ಮತ್ತು ಮಾರುಕಟ್ಟೆ ಬೆಲೆ ಕುಸಿತ ಎಲ್ಲವೂ ರೈತರ ಕೊರಳನ್ನು ಹಿಂಡುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ರೈತರ ಬೇಡಿಕೆ ಅತಿರೇಕವೇ? ಅಥವಾ ಬದುಕಿನ ಅಗತ್ಯವೇ? ರೈತ ಸಂಘಟನೆಗಳ ಅಂದಾಜು ಪ್ರಕಾರ, ಎಂಎಸ್ಪಿ ಖಾತರಿ ಇಲ್ಲದ ಕಾರಣ ದೇಶದ ರೈತರಿಗೆ ವರ್ಷಕ್ಕೆ ಸುಮಾರು ₹15 ಲಕ್ಷ ಕೋಟಿ ನಷ್ಟವಾಗುತ್ತಿದೆ. ಈ ನಷ್ಟವು ಕೇವಲ ಸಂಖ್ಯೆಯಲ್ಲ. ಅದು ಸಾಲ, ಬಡ್ಡಿ, ಭೂಮಿ ಕಳೆದುಕೊಳ್ಳುವಿಕೆ ಮತ್ತು ಕೆಲ ಸಂದರ್ಭಗಳಲ್ಲಿ ಆತ್ಮಹತ್ಯೆಗಳಾಗಿ ಹೊರಹೊಮ್ಮುತ್ತದೆ.
ಇದನ್ನೂ ಓದಿ : ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?
ರೈತರು ಕೇಳುತ್ತಿರುವುದು ಏನು?
ಎಲ್ಲಾ ಪ್ರಮುಖ ಬೆಳೆಗಳಿಗೆ ಕಾನೂನುಬದ್ಧ ಎಂಎಸ್ಪಿ
ಉತ್ಪಾದನಾ ವೆಚ್ಚ (C2) + ಕನಿಷ್ಠ 50% ಲಾಭದ ಸೂತ್ರ
ಖರೀದಿ ವ್ಯವಸ್ಥೆಯ ವಿಸ್ತರಣೆ ಮತ್ತು ಪಾರದರ್ಶಕತೆ
ಮಾರುಕಟ್ಟೆ ತಜ್ಞರ ಪ್ರಕಾರ ಇವುಗಳಲ್ಲಿ ಯಾವುದೂ ಅತಿರೇಕದ ಬೇಡಿಕೆಗಳಲ್ಲ. ಇವು ಕೃಷಿಯನ್ನು ಕನಿಷ್ಠ ಮಟ್ಟದಲ್ಲಿ ಲಾಭದಾಯಕವಾಗಿಡುವ ಮೂಲಭೂತ ಶರತ್ತುಗಳು..
ಒಂದು ವೇಳೆ ಈ ಸೂತ್ರದಡಿಯಲ್ಲಿ ರೈತರಿಗೆ ತಮ್ಮ ಬೆಳೆಗಳಿಗೆ ಗ್ಯಾರಂಟಿ ಲಭಿಸಿದರೆ, ಕೃಷಿಯು ನಷ್ಟವಿಲ್ಲದ ಉದ್ಯಮವಾಗಿ ಬದಲಾಲಿದೆ. ಅತಿಯಾದ ಖಾಸಗಿಕರಣ, ಕೈಗಾರೀಕರಣದಿಂದಾಗಿ ಈಗಾಗಲೇ ಕುಂಠಿತಗೊಳ್ಳುತ್ತಿರುವ ದೇಶೀಯ ಕೃಷಿ ಚಟುವಟಿಕೆಗಳಿಗೆ ಇದು ಉತ್ತೇಜನಕಾರಿಯಾಗಬಹುದು. ನಿರುದ್ಯೋಗ ತಾಂಡವವಾಡುತ್ತಿರುವ ಭಾರತದಂತಹ ದೇಶದಲ್ಲಿ ಕೃಷಿಗೆ ಪ್ರಾಮುಖ್ಯತೆಯನ್ನು ಕೊಡುವುದರಿಂದ, ಕೃಷಿಯನ್ನು ಲಾಭದಾಐಕ ಉದ್ಯಮವಾಗಿ ಬದಲಾಯಿಸುವುದರಿಂದ ದೇಶದಲ್ಲಿ ಕೃಷಿ ಕಡೆಗೆ ಯುವ ತಲೆಮಾರು ಹೆಚ್ಚು ಗಮನ ಕೊಡಬಹುದು ಎಂದು ಸಹ ಭಾವಿಸಬಹುದು.
ಬದಲಾಗುತ್ತಿರುವ ದುನಿಯಾ, ಝಮಾನದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ಆರ್ಥಿಕ ಅಸ್ಥಿರತೆಯ ನಡುವೆ ಕೃಷಿಯ ಕಡೆಗೆ ಯುವ ಸಮೂಹ ಅಸಡ್ಡೆ ತೋರುತ್ತಲೇ ಬಂದಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚಾಗುತ್ತಲೇ ಇದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಎಂಎಸ್ಪಿಯನ್ನು ಸಮರ್ಪಕವಾಗಿ, ವೈಜ್ಞಾನಿಕವಾಗಿ ಜಾರಿಗೆ ತಂದರೆ, ಕಾನೂನಿನ ಭದ್ರತೆಯನ್ನು ನೀಡಿದರೆ ಕೃಷಿ ಚಟುವಟಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ದೇಶೀಯ ಅರ್ಥ ಚಟುವಟಿಕೆಯಲ್ಲೂ ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಸುಪ್ರೀಂ ಕೋರ್ಟ್ ಮತ್ತು ಸಂಸದೀಯ ಸಮಿತಿಗಳ ವರದಿ:
ರೈತರ ಹೋರಾಟವನ್ನು “ರಾಜಕೀಯ ಪ್ರೇರಿತ” ಎಂದು ತಳ್ಳಿಹಾಕಲು ಸರ್ಕಾರ ಪ್ರಯತ್ನಿಸಿದರೂ, ಅಧಿಕೃತ ಸಂಸ್ಥೆಗಳ ವರದಿಗಳು ಬೇರೆ ಕಥೆ ಹೇಳುತ್ತವೆ. ಜಗಜಿತ್ ಸಿಂಗ್ ದಲೈವಾಲಾ ನಡೆಸಿದ 131 ದಿನಗಳ ಉಪವಾಸ ಸತ್ಯಾಗ್ರಹದ ಬಳಿಕ, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ರಚಿಸಲಾದ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯ ಸಮಿತಿ ಎಂಎಸ್ಪಿ ಖಾತರಿ ಕಾಯ್ದೆ ಅಗತ್ಯ ಎಂದು ಶಿಫಾರಸು ಮಾಡಿದೆ.
ಕೃಷಿಗೆ ಸಂಬಂಧಿಸಿದ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯೂ ಇದೇ ನಿಲುವು ವ್ಯಕ್ತಪಡಿಸಿದೆ.
ಆದರೂ ಕೇಂದ್ರ ಈ ಬಗ್ಗೆ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಸ್ವಂತ ಸಂಸದೀಯ ಸಮಿತಿ ಮತ್ತು ನ್ಯಾಯಾಂಗ ಸೂಚನೆಗಳನ್ನು ನಿರ್ಲಕ್ಷಿಸುವುದು ಯಾವ ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಸೇರುತ್ತದೆ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ.
ಇದನ್ನೂ ಓದಿ : ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ
ಸರ್ಕಾರ ಎಂಎಸ್ಪಿ ಖಾತರಿ ಕಾನೂನು ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದಕ್ಕೆ ಎರಡು ಪ್ರಮುಖ ಕಾರಣಗಳು ಹೇಳಲಾಗುತ್ತಿವೆ.
ಮೊದಲನೆಯದು, ಆರ್ಥಿಕ ಹೊರೆ. ಎಲ್ಲಾ ಬೆಳೆಗಳಿಗೆ ಕಾನೂನುಬದ್ಧ ಎಂಎಸ್ಪಿ ಜಾರಿಯಾದರೆ ಬಜೆಟ್ ಮೇಲೆ ದೊಡ್ಡ ಒತ್ತಡ ಬೀಳಬಹುದು ಎಂಬ ವಾದ.
ಎರಡನೆಯದು, ಮಾರುಕಟ್ಟೆ ಆಧಾರಿತ ಕೃಷಿ ನೀತಿ. ಸರ್ಕಾರ ಕೃಷಿಯನ್ನು ನಿಧಾನವಾಗಿ ಮುಕ್ತ ಮಾರುಕಟ್ಟೆಗೆ ಒಪ್ಪಿಸುವ ದಿಕ್ಕಿನಲ್ಲಿ ಸಾಗುತ್ತಿದೆ. ಎಂಎಸ್ಪಿ ಖಾತರಿ ಕಾನೂನು ಈ ದಿಕ್ಕಿಗೆ ಅಡ್ಡಿಯಾಗಬಹುದು ಎಂಬ ಆತಂಕವೂ ಇದೆ.
ಉದಾಹರಣೆಗೆ, ಬೃಹತ್ ಕಾರ್ಪೊರೇಟ್ ಕುಳಗಳು ದೇಶದ ಕೃಷಿಯ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಈ ಹಿಂದಿನ ಕೃಷಿ ಕಾಯ್ದೆಗಳನ್ನು ತರಲಾಗಿತ್ತು ಎಂಬ ಆರೋಪವೂ ಸರ್ಕಾರದ ಮೇಲಿತ್ತು. ಎಂಎಸ್ಪಿ ಜಾರಿಯಾದರೆ, ಕೃಷಿ ಮೇಲೆ ತನ್ನ ಕಣ್ಣಿಟ್ಟಿರುವ ಅಂಬಾನಿಯಂತಹ ಶ್ರೀಮಂತರ ಹಿತಾಸಕ್ತಿಗೆ ಪೆಟ್ಟು ಬೀಳಲಿದೆ ಎಂದು ಹೇಳಲಾಗಿದ್ದು, ಎಂಎಸ್ಪಿ ಪರ ಸರ್ಕಾರ ಆಸಕ್ತಿ ವಹಿಸದೇ ಇರಲು ಇದೂ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ ದೇಶವ್ಯಾಫಿ ಯಾತ್ರೆಗೆ ರೈತ ಸಂಘಟನೆಗಳು ಮುಂದಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿರುವ ರೈತ ಜಾಗೃತಿ ಯಾತ್ರೆ, ಸರ್ಕಾರಕ್ಕೆ ಒಂದು ಎಚ್ಚರಿಕೆಯ ಸಂದೇಶವಾಗಿದ್ದು, ಇದು ಕೇವಲ ಸಹಿ ಸಂಗ್ರಹವಲ್ಲ; ಇದು ಗ್ರಾಮಾಂತರ ಭಾರತದ ಅಸಮಾಧಾನವನ್ನು ರಾಷ್ಟ್ರದ ರಾಜಕೀಯ ಅಜಂಡಾದ ಮೇಲೆ ತರುವ ಪ್ರಯತ್ನವಾಗಿ ವಿಶ್ಲೇಷಿಸಲಾಗುತ್ತಿದೆ.
ರೈತ ಜಾಗೃತಿ ಯಾತ್ರೆ ಕುರಿತು..
ದೆಹಲಿ ಗಡಿಯಲ್ಲಿ ರೈತರು ದೀರ್ಘಕಾಲ ಚಳುವಳಿ ನಡೆಸಿ ಸರ್ಕಾರದ ಗಮನ ಸೆಳೆದರೂ ಎಂಎಸ್ಪಿ ಖಾತರಿ ಕುರಿತು ಸ್ಪಷ್ಟ ಕಾನೂನು ಜಾರಿಯಾಗಿಲ್ಲ ಎಂಬ ಅಸಮಾಧನದಲ್ಲಿರುವ ರೈತರು, ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 7ರಿಂದ ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ನಡೆಸಲಿದ್ದಾರೆ.
ಕೇರಳ, ಪುದುಚೇರಿ, ತಮಿಳುನಾಡು ಮೂಲಕ ಕರ್ನಾಟಕ ಪ್ರವೇಶಿಸುವ ಯಾತ್ರಾ ತಂಡ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಮಾರ್ಗ ಮಧ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಂದ ಸಹಿ ಸಂಗ್ರಹಿಸಲಾಗುವುದು. ಸುಮಾರು 40 ದಿನಗಳ ಯಾತ್ರೆ ಕಾಶ್ಮೀರ ತಲುಪಲಿದೆ. ಮಾರ್ಚ್ 19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ರೈತರ ಬೃಹತ್ ಸಮಾವೇಶ ನಡೆಯಲಿದ್ದು, ಸಂಗ್ರಹಿಸಿದ ಸಹಿಗಳ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸುವ ಪ್ಲ್ಯಾನ್ ನಲ್ಲಿ ರೈತ ಸಂಘಟನೆಗಳು ಇವೆ.
ಕರ್ನಾಟಕ್ಕೆ ಫೆಬ್ರವರಿ 10ರಂದು ಪ್ರವೇಶಿಸಲಿರುವ ರೈತ ಜಾಗೃತಿ ಯಾತ್ರೆಯು ಚಾಮರಾಜನಗರದಿಂದ ರಾಜ್ಯಕ್ಕೆ ಎಂಟ್ರಿಯಾಗಿ, 11ರಂದು ಮೈಸೂರು, ಮಂಡ್ಯ, ರಾಮನಗರ ಹಾಗೂ 12ರಂದು ಬೆಂಗಳೂರು, ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರ ಪ್ರದೇಶಕ್ಕೆ ತೆರಳಲಿದೆ. 2020–21ರ ರೈತ ಹೋರಾಟವು ಸರ್ಕಾರವನ್ನು ಕೃಷಿ ಕಾನೂನುಗಳನ್ನು ಹಿಂಪಡೆಯಲು ಕಾರಣವಾಗಿತ್ತು. ಈಗಿನ ಹೋರಾಟವೂ ಅದೇ ನೆನಪನ್ನು ಜೀವಂತವಾಗಿಡುತ್ತಿದೆ.
ಎಂಎಸ್ಪಿ ಖಾತರಿ ಕಾನೂನು ಜಾರಿಯಾದರೆ ಆಹಾರ ಉತ್ಪಾದನೆ ಸ್ಥಿರವಾಗುತ್ತದೆ, ಗ್ರಾಮೀಣ ಆರ್ಥಿಕತೆ ಬಲಪಡುತ್ತದೆ, ನಗರ–ಗ್ರಾಮ ಅಸಮಾನತೆ ಕಡಿಮೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ರೈತ ಕೃಷಿಯನ್ನು ತ್ಯಜಿಸಿದರೆ ಆಹಾರ ಭದ್ರತೆ ಅಪಾಯಕ್ಕೆ ಸಿಲುಕುತ್ತದೆ. ಇದು ಪ್ರತಿಯೊಬ್ಬ ನಾಗರಿಕನ ಬದುಕಿನ ಪ್ರಶ್ನೆಯಾಗಿ ಬದಲಾಗುವುದರಿಂದ ರೈತರ ಬೇಡಿಕೆಗಳಿಗೆ ಸಾಮಾನ್ಯರು ಕೈ ಜೋಡಿಸುವುದು ಅನಿವಾರ್ಯವಾಗಲಿದೆ.
ರೈತರು ಇಂದು ದಾನ ಕೇಳುತ್ತಿಲ್ಲ. ಅವರು ಕೇಳುತ್ತಿರುವುದು ಕಾನೂನುಬದ್ಧ ಭದ್ರತೆ. ಎಂಎಸ್ಪಿ ಖಾತರಿ ಕಾನೂನು ರೈತರ ಬೇಡಿಕೆಯಲ್ಲ; ಅದು ಕೃಷಿ ಕ್ಷೇತ್ರದ ಸ್ಥಿರತೆಗೆ ಅಗತ್ಯವಾದ ನೀತಿ ಸಾಧನ. ಸರ್ಕಾರ ಇನ್ನೆಷ್ಟು ಕಾಲ ಮೌನದಿಂದ ಈ ಬೇಡಿಕೆಯನ್ನು ಎದುರಿಸಲಿದೆ? ಎಂಎಸ್ಪಿಯನ್ನು ಘೋಷಣೆಯಲ್ಲೇ ಉಳಿಸಿಕೊಳ್ಳುತ್ತದೆಯೇ, ಅಥವಾ ರೈತನ ಹಕ್ಕನ್ನಾಗಿ ಪರಿಗಣಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ ನೀಡುವ ಹೊಣೆ ಈಗ ಸಂಪೂರ್ಣವಾಗಿ ಸರ್ಕಾರದ ಮೇಲಿದೆ.






