ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ನಿಫಾ ವೈರಸ್(Nipah virus) ಮತ್ತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಘೋಷಿಸಿದೆ. ಈ ವೈರಸ್ ರಾಜ್ಯಕ್ಕೆ ಪ್ರವೇಶಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಂಕಿತ ಪ್ರಕರಣಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಿಫಾ ವೈರಸ್ ಮುಖ್ಯವಾಗಿ ಸೋಂಕು ಇರುವ ಬಾವಲಿಗಳು ತಿಂದ ಹಣ್ಣುಗಳನ್ನು ಸೇವಿಸುವುದರಿಂದ, ಹಾಗೆಯೇ ಹಂದಿಗಳ ಮಾಂಸ ಅಥವಾ ಅವುಗಳ ಸಂಪರ್ಕದಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸಹ ಈ ವೈರಸ್ ವರ್ಗಾವಣೆ ಆಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣ ಶೇ. 60ರಿಂದ 75ರಷ್ಟು ಇರುವುದೇ ಆತಂಕಕಾರಿ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜ್ವರ, ತಲೆನೋವು, ಮೈ ಕೈ ನೋವು, ತೀವ್ರ ಸುಸ್ತು, ಶೀತ, ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು, ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ ಸೇರಿದಂತೆ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅನಗತ್ಯ ಓಡಾಟ ತಪ್ಪಿಸಿ. ಮರಗಳಿಂದ ತಯಾರಿಸುವ ತೆರೆದ ನೀರಾಗಳ ಸೇವನೆ ಮಾಡಬೇಡಿ. ಬಾವಲಿಗಳು ಕಚ್ಚಿದ ಅಥವಾ ತಿಂದ ಹಣ್ಣುಗಳನ್ನು ಸೇವಿಸಬೇಡಿ. ಹಂದಿಗಳ ಸಂಪರ್ಕ ಅಥವಾ ಸರಿಯಾಗಿ ಬೇಯಿಸದ ಹಂದಿ ಮಾಂಸ ಸೇವನೆ ತಪ್ಪಿಸಿ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಸಲಹೆ ನೀಡಿದೆ. ಅಲ್ಲದೇ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ವರದಿ ಮಾಡುವಂತೆ ಇಲಾಖೆ ಸೂಚಿಸಿದೆ.






