ಮತ್ತೆ ಬಂದಿರಾ ಬಾಪು, ಏಳು ವರ್ಷದ ಹಿಂದೆ ನಿಮ್ಮ 150ನೆಯ ಜನ್ಮದಿನದಂದು ನಿಮ್ಮನ್ನು ಕಂಡ ನೆನಪು. ನಿಮ್ಮ ಒಡೆದ ಕನ್ನಡಕದಿಂದ ಕಂಡ ನೆಲದ ವಾಸ್ತವಗಳಿಗೆ ಬೆಚ್ಚಿದ್ದಿರಿ. ಹೌದು ಬಾಪು ಆ ಶುಭದಿನದಂದು ನಾವೆಲ್ಲರೂ ನಿಮ್ಮ ನೆನಪಿನಲ್ಲಿ ಪೊರಕೆ ಹಿಡಿದಿದ್ದೆವು, ಸ್ವಚ್ಛಗೊಳಿಸಲು. ಸ್ವಚ್ಛ ಭಾರತ ಅಭಿಯಾನದ ಕಾಲಾಳುಗಳಾಗಿದ್ದೆವು. ಈ ಅವಧಿಯಲ್ಲಿ ಭಾರತ ಸ್ವಚ್ಛವಾಗಿರಬಹುದು ಎಂಬ ಭ್ರಮೆಯಲ್ಲೇ ಈಗ ಬಂದಿರುವ ಹಾಗಿದೆ. ನಿಮ್ಮ ಮಂದಹಾಸ ಅದನ್ನೇ ಸೂಚಿಸುತ್ತಿದೆ. ಅಡ್ಡಿಯಿಲ್ಲ ಬನ್ನಿ ಬಾಪು, ರಸ್ತೆಗಳು, ಉದ್ಯಾನಗಳು, ಸುಂದರ ನಗರಗಳು ಸ್ವಚ್ಛವಾಗಿವೆ. ಇಮಾರತುಗಳ ಹಿಂದೆ, ಕೊಳೆಗೇರಿಗಳ ಅಂಗಳದಲ್ಲಿ ? ನಿಮ್ಮಿಂದ ಈ ಪ್ರಶ್ನೆ ಬರಲೇಬೇಕಲ್ಲವೇ ?

ಹೌದು ಬಾಪು ಬಯಲು ಶೌಚದಿಂದ ಇನ್ನೂ ಭಾರತ ಮುಕ್ತವಾಗಿಲ್ಲ. ಶೌಚಾಲಯಗಳನ್ನು ಕಟ್ಟಲಾಗಿದೆ. ಬಳಸಲು ಯೋಗ್ಯವಾಗಿಲ್ಲ. ಅದಿರಲಿ, ಬಾಪು ನಿಮ್ಮ ಕನಸಿನ ಭಾರತದ ಕೇಂದ್ರ ಧಾತು ಗ್ರಾಮಗಳಲ್ಲವೇ ? ಒಮ್ಮೆ ಪರ್ಯಟನ ಮಾಡಿ. ಪ್ಯಾಸೆಂಜರ್ ರೈಲುಗಳಲ್ಲಿ ಓಡಾಡಿ ಬಾಪು, ಸಣ್ಣ ಪುಟ್ಟ ಊರುಗಳ ಹೊರವಲಯದಲ್ಲಿ ಇಕ್ಕೆಲಗಳಲ್ಲೂ ನೀವು ʼ ಸ್ವಚ್ಛʼ ಭಾರತದ ಚಿತ್ರಣ ನೋಡಬಹುದು. ಬಯಲು ಬಹಿರ್ದೆಶೆಯ ದೃಶ್ಯಗಳು ಕಣ್ಣಿಗೆ ಬಿದ್ದರೆ ಬೇಸರಿಸಬೇಡಿ ಬಾಪು, ಆಳ್ವಿಕೆಯಲ್ಲಿ ಘೋಷಣೆಗೂ ಅನುಷ್ಠಾನಕ್ಕೂ ಇರುವ ಅಂತರ ಇನ್ನೂ ಕಡಿಮೆಯಾಗಿಲ್ಲ. ಇವೆಲ್ಲವನ್ನೂ ಸಹಿಸಿಕೊಂಡು ಓಡಾಡಿ.
ನಿಮಗೆ ಗೊತ್ತಲ್ಲವೇ ಬಾಪು, ಕಳೆದ ಹತ್ತು ವರ್ಷಗಳಿಂದ ನಿಮ್ಮ ಪ್ರತಿಮೆಗಳು ಅಪಾಯದಲ್ಲಿವೆ. ಕೆಡವುತ್ತಾರೆ, ಕೆಡಿಸುತ್ತಾರೆ, ತುಂಡರಿಸುತ್ತಾರೆ, ಮಲಿನಗೊಳಿಸುತ್ತಾರೆ. ಏನು ಮಾಡುವುದು, ನಿಮ್ಮ ಹಂತಕನ ಆರಾಧಕರಿಗೆ ಈಗ ಅಸ್ತಿತ್ವವಷ್ಟೇ ಅಲ್ಲ ಸ್ಥಾನಮಾನವೂ ಸಿಕ್ಕಿಬಿಟ್ಟಿದೆ ಬಾಪು. ಈಗ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಬಾಪು, ನಿಮ್ಮ ಹೆಸರನ್ನೂ ಅಳಿಸಲು ಆರಂಭಿಸಿದ್ದೇವೆ. ನಿಮ್ಮ ಕನಸಿನ ಗ್ರಾಮಗಳಲ್ಲಿ ಬೆವರಿನ ದುಡಿಮೆಗೆ ನಿಮ್ಮ ಹೆಸರು ಕೊಂಡಿಯಾಗಿತ್ತು. ಮಾರುಕಟ್ಟೆ ಪರಿಭಾಷೆಯಲ್ಲಿ ಅದು ಉದ್ಯೋಗ, ವ್ಯಕ್ತಿಗತ ನೆಲೆಯಲ್ಲಿ ಅದು ಬದುಕು. ಅದಕ್ಕೆ ಅಂಟಿಸಿದ್ದ ನಿಮ್ಮ ಹೆಸರನ್ನು ಅಳಿಸಿಹಾಕಲಾಗಿದೆ ಬಾಪು. ಖೇದವಿಲ್ಲ ತಾನೇ ?

ಸ್ವಚ್ಛ ಭಾರತದ ಕಲ್ಪನೆಯಲ್ಲಿ
ನಾವು ಎಲ್ಲವನ್ನೂ ಗುಡಿಸಿಹಾಕಿದ್ದೇವೆ ಬಾಪು, ನಾವೇ ಬಿಸಾಡುವ ತ್ಯಾಜ್ಯ, ನಾವೇ ವಿಸರ್ಜಿಸುವ ಮಲಮೂತ್ರ ಎಲ್ಲವನ್ನೂ. ಇಲ್ಲಿ ʼ ನಾವು ʼ ಎಂದಾಗ ಅಚ್ಚರಿಪಡಬೇಡಿ. ಎಲ್ಲರೂ ಅಲ್ಲ ಅದಕ್ಕಾಗಿಯೇ ನಮ್ಮ ಸಮಾಜದಲ್ಲಿ ಒಂದು ಜಾತಿಯನ್ನು ಗುರುತಿಸಿದ್ದೇವಲ್ಲವೇ ? ಅವರು. ಹೌದು ಬಾಪು ಅವರ ಕೇರಿಗಳಿಗೊಮ್ಮೆ ಹೋಗಿ ಬನ್ನಿ. ಕಿರಿದಾದ ಓಣಿಗಳು, ಪುಟ್ಟಪುಟ್ಟ ಮನೆಗಳು, ರಸ್ತೆಯಲ್ಲೇ ಆಟೋಟ ಆನಂದಿಸುವ ಹೈಕಳು ಎಲ್ಲವನ್ನೂ ಕಾಣಬಹುದು. ಹಾಗೆಯೇ ನಿಮ್ಮ ಗಾಜನ್ನು ಒಮ್ಮೆ ಒರೆಸಿಕೊಂಡು ನೋಡಿ, ಹಸಿವು, ಬಡತನ, ನಿರುದ್ಯೋಗ, ಅನಕ್ಷರತೆ ಇವೆಲ್ಲವೂ ಕಾಣುತ್ತದೆ. ಅವರ ಪಾದ ತೊಳೆದು ಸನ್ಮಾನಿಸುತ್ತೇವೆ ಬಾಪು, ಪ್ರಶಸ್ತಿಗಳನ್ನು ನೀಡುತ್ತೇವೆ ಆದರೆ ಭವಿಷ್ಯದ ಅಡಿಗಲ್ಲುಗಳು ನಿಮಗೆ ಕಾಣದಿರಬಹುದು. ಇದು ಡಿಜಿಟಲ್ ಯುಗ ಬಾಪು, ಉಳ್ಳವರ ಜಗತ್ತು.

ನಿಮಗೆ ಗೊತ್ತೇ ಬಾಪು, ನವ ಭಾರತದಲ್ಲಿ ಸ್ವಚ್ಛಗೊಳಿಸಲು ಎರಡು-ಮೂರು ಮಾದರಿಯ ಕಸಬರಿಗೆಗಳಿವೆ. ಒಂದರ ಬಗ್ಗೆ ತಿಳಿದುಕೊಂಡಿರಲ್ಲವೇ ? ಇನ್ನೊಂದು ನಿಮಗೆ ಅಚ್ಚರಿ ಮೂಡಿಸುವಂತಹುದು. ಅದು ಬೌದ್ಧಿಕ ಕಸಬರಿಗೆ. ಹೌದು ಬಾಪು ನೀವು ವಿಶ್ವವಿದ್ಯಾಲಯಗಳಿಗೆ ಹೋಗಿ, ಬೌದ್ಧಿಕ ಕೇಂದ್ರಗಳಿಗೆ (Academic Centres) ಭೇಟಿ ನೀಡಿ, ಅಲ್ಲಿ ಈ ಬೌದ್ಧಿಕ ಕಸಬರಿಗೆಯ ಪ್ರಯೋಗ ಕಾಣುತ್ತದೆ. ನವ ಭಾರತದ ವಿದ್ವತ್ ವಲಯದ ಒಂದು ವರ್ಗ ಇದನ್ನು ಬಳಸುತ್ತಲೇ, ಚರಿತ್ರೆಯನ್ನು ಗುಡಿಸಿಹಾಕುತ್ತಿದೆ, ಚರಿತ್ರೆಯ ಉಜ್ವಲ ಅಧ್ಯಾಯಗಳ ಮೇಲೆ ಕಸ ಹೇರುತ್ತಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ವರ್ತಮಾನ ಭಾರತಕ್ಕೆ ಅಡಿಪಾಯ ಹಾಕಿದ ಚಾರಿತ್ರಿಕ ವ್ಯಕ್ತಿಗಳನ್ನೂ ಇಲ್ಲಿ ಗುಡಿಸಿ, ಸಪಾಟು ಮಾಡಲಾಗುತ್ತದೆ.

ಗಾಬರಿಯಾಗಬೇಡಿ ಬಾಪು, ಅದರಲ್ಲಿ ನಿಮ್ಮ ಹೆಸರೂ ಇದೆ. ನಿಜ ನಿಮ್ಮನ್ನು ಸ್ಮರಿಸುತ್ತೇವೆ, ವೈಷ್ಣವ ಜನತೋ ಎಂದು ಭಜಿಸುತ್ತೇವೆ ಆದರೆ ಅಂತರಾಳದಲ್ಲಿ ನೀವಿರುವುದಿಲ್ಲ. ಗೋಡ್ಸೆ ಇಣುಕಿ ನೋಡುತ್ತಿರುತ್ತಾನೆ. ಅಥವಾ ಸಾವರ್ಕರ್ ನೆನಪಾಗುತ್ತಿರುತ್ತಾರೆ. ನೀವು ನಿಮಿತ್ತವಾಗುತ್ತೀರಿ. ನೀವು ʼ ಹೇ ರಾಮ್ ʼ ಎಂದ ಈ ದಿನವನ್ನು , ಜನವರಿ 30 , ಹುತಾತ್ಮ ದಿನ ಎಂದು ಆಚರಿಸುತ್ತೇವೆ. ಸೌಹಾರ್ದ ದಿನ ಎಂದೂ ಕರೆಯುತ್ತೇವೆ. ಹಿತ್ತಲಲ್ಲಿ ಸೌಹಾರ್ದ ಸಮಾಜವನ್ನು ಕಟ್ಟುವ ಎಲ್ಲ ಉಪಕರಣಗಳನ್ನೂ ಗುಡಿಸಿ ಹಾಕುವ ಕೆಲಸ ನಡೆಯುತ್ತಲೇ ಇರುತ್ತದೆ. ನಿಮ್ಮ ಅಸಂಖ್ಯಾತ ಪ್ರತಿಮೆಗಳ ಮೇಲೆ ಕಾಣುವ ಹೂ ಹಾರಗಳ ನಡುವೆ, ಅಗೋಚರ ಮುಳ್ಳುಗಳಿರುತ್ತವೆ ಬಾಪು. ಬೇಸರವಾಯಿತೇ ?
ಮೌಲ್ಯಗಳ ಹುಡುಕಾಟದಲ್ಲಿ ಭಾರತ
ಚಿಂತಿಸಬೇಡಿ, ನವ ಭಾರತ ಕಥನ ಇಲ್ಲಿಗೇ ನಿಲ್ಲುವುದಿಲ್ಲ ಬಾಪು. ಮತ್ತೊಂದು ಮಾದರಿಯ ಕಸಬರಿಗೆಯೂ ಬಂಡವಾಳಶಾಹಿ ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣದ ಜಂಟಿ ಪ್ರಾಯೋಜಕತ್ವದಲ್ಲಿ ಬಳಕೆಯಾಗುತ್ತಿದೆ. ಇದು ಅಗೋಚರ ವಸ್ತುಗಳನ್ನೂ ಗುಡಿಸಿಹಾಕುತ್ತಿದೆ. ಅರ್ಥವಾಗಲಿಲ್ಲವೇ ಬಾಪು, ಈ ಏಳು ದಶಕಗಳಲ್ಲಿ ನಾವು ಕಲಿತಿರುವುದು ಹೀಗೆ ಅರ್ಥವಾಗದ ಪರಿಭಾಷೆಗಳನ್ನೇ . ನಿಮ್ಮ ಬದುಕಿನ ಹೆಜ್ಜೆ ಹೆಜ್ಜೆಯಲೂ ಗುರುತಿಸಬಹುದಾದ ಜೀವನ ಮೌಲ್ಯಗಳು, ಸಾಮಾಜಿಕ ಆದರ್ಶಗಳು, ರಾಜಕೀಯ ತತ್ವಗಳು, ಸಾಂಸ್ಕೃತಿಕ ಸಂಹಿತೆಗಳು ಇವೆಲ್ಲವೂ ಅಗೋಚರವಲ್ಲವೇ ಬಾಪು ?

ಇವುಗಳನ್ನು ಗುಡಿಸಿಹಾಕುವ ಬೌದ್ಧಿಕ ಕಸಬರಿಗೆಗಳನ್ನು ಮಾರುಕಟ್ಟೆಯಲ್ಲಿ ತಯಾರಿಸಲಾಗಿದೆ. ನಿಮ್ಮ ಜೀವಮಾನದಲ್ಲಿ ನೀವು ಒಂದೇ ಒಂದು ಚಲನಚಿತ್ರ ವೀಕ್ಷಿಸಿದ್ದಿರಿ. 1943ರಲ್ಲಿ ವಿಜಯ್ ಭಟ್ ನಿರ್ದೇಶಿಸಿದ ʼ ರಾಮರಾಜ್ಯ ʼ . ಈಗ ರಜತ ಪರದೆಗಳ ಮೇಲೆ ಪಾತ್ರಗಳು ಬಿಚ್ಚಿಕೊಳ್ಳುವುದಿಲ್ಲ ಬಾಪು, ಕಡತಗಳು (ಫೈಲ್ಸ್) ತೆರೆದುಕೊಳ್ಳುತ್ತವೆ. ಪುಟಪುಟಗಳಲ್ಲೂ ಮಿಥ್ಯೆಯನ್ನೇ ಸತ್ಯವಾಗಿಸುವ ಕಥನಗಳು, ಚರಿತ್ರೆಯನ್ನು ಮಿಥ್ಯೆಯಾಗಿಸುವ, ಪುರಾಣವನ್ನು ಸತ್ಯವಾಗಿಸುವ, ಕಡತಗಳು ಅಂದರೆ ʼ ಫೈಲ್ ʼ ಗಳು ಕಾಶ್ಮೀರದಿಂದ ಕೇರಳದವರೆಗೂ ಚಲನಚಿತ್ರವಾಗಿ ನಮ್ಮ ಮುಂದಿವೆ ಬಾಪು. ನೀವು ನೋಡಲಾರಿರಿ ಬಿಡಿ. ಸುಮ್ಮನೆ ತಿಳಿದಿರಲಿ ಎಂದು ಹೇಳಿದೆ.

ಮೌಲ್ಯ, ಆದರ್ಶ ಎಂದೆನಲ್ಲವೇ ? ನೀವು ಹತ್ತು ಕನ್ನಡಕ ಧರಿಸಿದರೂ ಕಾಣಿಸಲಾರದ ಹಾಗೆ ಗುಡಿಸಿ ಹಾಕಿದ್ದೇವೆ ಬಾಪು. ನಿಮ್ಮ ಮಿತ್ರ ಅಂಬೇಡ್ಕರ್ ಹೇಳುತ್ತಿದ್ದ ಸಾಂವಿಧಾನಿಕ ಮೌಲ್ಯಗಳಾಗಲೀ, ನೀವು ಬೋಧಿಸಿದ ಜೀವನ ಮೌಲ್ಯಗಳಾಗಲೀ ಎಲ್ಲವನ್ನೂ ಈ ಕಸಬರಿಗೆ ಗುಡಿಸಿಹಾಕಿದೆ ಬಾಪು. ಸಂಸತ್ತಿನಿಂದ ಗ್ರಾಮ/ಮಂಡಲ ಪಂಚಾಯತ್ವರೆಗೆ ಬೇಕಾದರೆ ಟೂರ್ ಮಾಡಿನೋಡಿ. ಪ್ರಾಮಾಣಿಕತೆ, ಜನನಿಷ್ಠೆ, ಕರ್ತವ್ಯ ಶ್ರದ್ಧೆ, ನಿಸ್ವಾರ್ಥ ಸೇವೆ, ಜನಪರ ಕಾಳಜಿ ಇದಾವುದನ್ನೂ ನೀವು ಕಾಣಲಾರಿರಿ ಬಾಪು. ಕಂಡರೂ ಫ್ಲೆಕ್ಸ್ಗಳಲ್ಲಿ, ಬ್ಯಾನರ್ಗಳಲ್ಲಿ, ರಾಜಕೀಯ ಘೋಷಣೆ/ಭಾಷಣಗಳಲ್ಲಿ ಕಾಣಬಹುದು. ಹೆಚ್ಚೆಂದರೆ ಸೆಮಿನಾರ್ ಹಾಲ್ಗಳಲ್ಲಿ ಹರಿಯುವ ಪ್ರವಚನಗಳಲ್ಲಿ ಕಾಣಬಹುದು.
ತೆರೆಮರೆಯ ಕರಾಳ ಜಗತ್ತಿನ ನಡುವೆ
ನೀವು ಬಂದಿರುವುದರಿಂದ ಎಲ್ಲವೂ ಸುಂದರವಾಗಿ ಕಾಣುವಂತೆ, ಮಹಾಭಾರತದ ಮಯಸಭೆಯಂತೆ ಏರ್ಪಾಡು ಮಾಡಿರುತ್ತೇವೆ ಬಾಪು. ನಿಮಿಷಕ್ಕೊಂದರಂತೆ ನಡೆಯುವ ಅತ್ಯಾಚಾರ, ಮಹಿಳಾ ದೌರ್ಜನ್ಯ, ಗಂಟೆಗೆ ಆರರಂತೆ ನಡೆಯುವ ದಲಿತರ ಮೇಲಿನ ಜಾತಿ ದೌರ್ಜನ್ಯಗಳು ಇದಾವುದೂ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಅಂಕಿಅಂಶಗಳಲ್ಲಿ ಸುಭದ್ರವಾದ ಕಪಾಟುಗಳಲ್ಲಿರುತ್ತವೆ. ಬಲೂನು ಮಾರುವ ಒಂಬತ್ತು ವರ್ಷದ ಅಲೆಮಾರಿ ಕೂಸು ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗುತ್ತದೆ ಬಾಪು. ನೀವು ಸಂವಾದಿಸುವ ಸಮಾಜಕ್ಕೆ ಇದರ ನೆನಪೂ ಇರುವುದಿಲ್ಲ. ಇದ್ದರೂ ಅದೊಂದು ದುರ್ಘಟನೆಯಾಗಿ ಕಾಣುತ್ತದೆ. ಪುರುಷಾಧಿಪತ್ಯದ ಸ್ತಂಭಗಳು ಗಟ್ಟಿಯಾಗುತ್ತಿವೆ ಬಾಪು, ಸ್ತ್ರೀ ಸಂವೇದನೆಯ ತಂತುಗಳು ಅಳಿಸಿಹೋಗುತ್ತಿವೆ. ಎಲ್ಲವನ್ನೂ ಸ್ವಚ್ಛ ಮಾಡುತ್ತಿದ್ದೇವೆ ಅಷ್ಟೇ !
ನಿಮ್ಮ ಕನಸಿನ ಭಾರತ ಎಲ್ಲಿ ಬಾಪು ? ಬಲಿಷ್ಠ ರಾಷ್ಟ್ರವಾಗಿದ್ದೇವೆ, ಮಿಲಿಟರಿ ಸಾಮರ್ಥ್ಯದ ಮೂಲಕ. ಆದರೆ ಒಳಗೆ ಬಂದು ನೋಡಿ ಬಾಪು. ಎಷ್ಟು ಶಿಥಿಲವಾಗಿದ್ದೇವೆ. ದಬ್ಬಾಳಿಕೆ-ಯಜಮಾನಿಕೆಯ ಊಳಿಗಮಾನ್ಯ ವ್ಯವಸ್ಥೆ ನಿಮ್ಮ ಹಿಂದೆಯೇ ಕೊನೆಯಾಯಿತು ಎಂದು ಭಾವಿಸಿದ್ದೀರಾ ? ಇಲ್ಲ ಬಾಪು ಅವೆಲ್ಲವೂ ಮರುಕಳಿಸುತ್ತಿವೆ. ಶ್ರಮಜೀವಿಗಳ ದುಡಿಮೆಯ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ. ಶ್ರಮಿಕರನ್ನೂ ಮಾರುಕಟ್ಟೆ ಸರಕಿನಂತೆ ಬಳಸಿ ಬಿಸಾಡುವ ಒಂದು ಸಮಾಜವನ್ನು ನಾವು ಕಟ್ಟುತ್ತಿದ್ದೇವೆ. ನಿಮ್ಮ ಹೆಸರಿನಲ್ಲೇ ಇದ್ದಂತಹ ʼ ಉದ್ಯೋಗ ಖಾತರಿ ʼ ಸಹ ಈಗ ಸರ್ಕಾರದ ಮರ್ಜಿಗೆ ಒಳಗಾಗಿದೆ ಬಾಪು. ನಿಮ್ಮ ಹೆಸರು ಅಳಿಸಿಹೋಗಿದೆ, ಬೇಸರಿಸಬೇಡಿ ಭಾಷಣಗಳಲ್ಲಿ ನಿಮ್ಮನ್ನು ಮರೆಯುವುದಿಲ್ಲ.

ಹಾದಿ ತಪ್ಪಿದ ರಾಜಕಾರಣದ ನಡುವೆ
ಸರಳ ಜೀವನ, ಸಹನಶೀಲ ಸಮಾಜ, ಸಹೃದಯ ಮಾನವ ಸಂಬಂಧಗಳ ಕನಸು ಕಂಡಿದ್ದ ನಿಮಗೆ ಅಚ್ಚರಿಯಾಗಬಹುದು ಬಾಪು. ಶಾಸನ ಸಭೆಗಳಲ್ಲಿ ಕೋಟ್ಯಧಿಪತಿಗಳು, ದೊಡ್ಡ ಉದ್ಯಮಿಗಳೇ ತುಂಬಿದ್ದಾರೆ ಬಾಪು. ಸ್ವಚ್ಛ ನಡದೆ, ಸಚ್ಚಾರಿತ್ರ್ಯದ ನಿಮ್ಮ ಭ್ರಮೆಯನ್ನು ಸುಳಿವಿಲ್ಲದ ಹಾಗೆ ಗುಡಿಸಿಹಾಕಿದ್ದೇವೆ ಬಾಪು. ಚುನಾಯಿತ ಜನಪ್ರತಿನಿಧಿಗಳ ಪೈಕಿ ಶೇಕಡಾ 46ರಷ್ಟು ಸಂಸದರು, ಶೇಕಡಾ 45ರಷ್ಟು ಶಾಸಕರು ಅಪರಾಧಗಳ ಹಿನ್ನೆಲೆಯನ್ನು ಹೊಂದಿದ್ದಾರೆ ಬಾಪು . ಕೊಲೆ, ಅತ್ಯಾಚಾರ, ಅಪಹರಣ , ಅಕ್ರಮ ವ್ಯವಹಾರ ಹೀಗೆ ಎಲ್ಲ ರೀತಿಯ ಅಪರಾಧಗಳೂ ಇವರ ನಡುವೆ ಕಾಣಬಹುದು ಬಾಪು. ಇವರೂ ನಿಮ್ಮ ಪ್ರತಿಮೆಗಳ ಮುಂದೆ ಕುಳಿತು ನ್ಯಾಯ ಕೇಳುತ್ತಾರೆ, ಹಕ್ಕೊತ್ತಾಯ ಮಾಡುತ್ತಾರೆ, ಅನ್ಯಾಯದ ವಿರುದ್ಧ ಹೋರಾಡುತ್ತಾರೆ, ಜನಪರ ದನಿಗೆ ದನಿಯಾಗುತ್ತಾರೆ. ಮತ್ತೆಮತ್ತೆ ಚುನಾಯಿತರಾಗುತ್ತಾರೆ. ಏನ್ಮಾಡೋದು ಬಾಪು ?

ನಿಮ್ಮಲ್ಲೇನಾದರೂ ಪರಿಹಾರೋಪಾಯಗಳಿವೆಯೇ ? ನೀವು ಸೂಚಿಸಿದರೂ ಸಿಡಿಮಿಡಿಗೊಳ್ಳುವ ಒಂದು ಸಮಾಜವೂ ಇಲ್ಲಿದೆ ಬಾಪು. ಎತ್ತ ನೋಡಿದರೂ ಗೋಡೆಗಳು ಕಾಣುತ್ತಿವೆ ಅಲ್ಲವೇ ಬಾಪು ? ತಮಿಳುನಾಡಿನಲ್ಲಿದ್ದ ಅಸ್ಪೃಶ್ಯತೆಯ ಗೋಡೆಯನ್ನೇನೋ ಕೆಡವಿಹಾಕಿಬಿಟ್ಟರು, ಆದರೆ ಅಸ್ಪೃಶ್ಯತೆಯೇನೂ ಕೊನೆಯಾಗಿಲ್ಲ. ಈ ಗೋಡೆಗಳು ಯಾವುದು ಎಂದು ಅಚ್ಚರಿಯಾಯಿತೇ ಬಾಪು ? ಎಲ್ಲವೂ ತಾತ್ವಿಕ ಬಾಪು, ಸೈದ್ಧಾಂತಿಕ ಗೋಡೆಗಳು. ಅಂಬೇಡ್ಕರ್-ಗಾಂಧಿ, ಮಾರ್ಕ್ಸ್—ಗಾಂಧಿ, ಮಾರ್ಕ್ಸ್-ಅಂಬೇಡ್ಕರ್ ಹೀಗೆ ನಿಮ್ಮ ಕನಸಿನ ಭಾರತವನ್ನು ಕಟ್ಟಲು ಬೌದ್ಧಿಕ ಮೇಸ್ತ್ರಿಗಳಾಗಬೇಕಾದ ಎಲ್ಲ ದಾರ್ಶನಿಕರ ನಡುವೆಯೂ ಅಗೋಚರ ಗೋಡೆಗಳಿವೆ ಬಾಪು. ಕೆಡವುವುದು ಹೇಗೆ ? ಯಾರು ?
ಏಕೆ ಖಿನ್ನರಾಗಿಬಿಟ್ಟಿರಿ ಬಾಪು ? ಆಘಾತವಾಯಿತೇ ? ಅಸಮಾಧಾನ ಹೆಚ್ಚಾಯಿತೇ ? ಭಗ್ನ ಕನಸುಗಳ ಅವಶೇಷಗಳು ನಿಮ್ಮ ಕನ್ನಡಕದ ಗಾಜುಗಳನ್ನು ಒಡೆದುಹಾಕಿವೆಯೇ ? ಇನ್ನು ಮುಂದೆ ನೀವು ಬಂದರೆ ಡಿಜಿಟಲ್ ಮಸೂರ ತೊಟ್ಟು ಬರಬೇಕು ಬಾಪು. ನಿಮ್ಮ ಮಿದುಳಿಗೆ ಹೆಚ್ಚು ತ್ರಾಸು ಕೊಡಬೇಡಿ, ಕೃತಕ ಬುದ್ಧಿಮತ್ತೆಯ ಬಳಕೆಯನ್ನು ರೂಢಿಸಿಕೊಳ್ಳಿ. ಮಿಲೆನಿಯಂ ಮಕ್ಕಳಿಗೆ ನಿಮ್ಮ ಪರಿಚಯವೇ ಇಲ್ಲದಂತೆ ಮಾಡಿದ್ದಾರಲ್ಲಾ ಬಾಪು ! ಅವರೊಡನೆ ಸಂಭಾಷಿಸಲು ನಿಮಗೆ ಆಂಡ್ರಾಯ್ಡ್ ಬೇಕು. ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಒಂದು ಸುತ್ತು ಹಾಕಿಬನ್ನಿ. ನಿಮ್ಮ ಸತ್ಯಾನ್ವೇಷಣೆಯ ಹಾದಿಯೇ ಮರೆತುಹೋಗುವಷ್ಟು ಸುಳ್ಳುಗಳು ಹುಟ್ಟಿಕೊಂಡಿವೆ. ಈ ಮಕ್ಕಳು ಅಲ್ಲಿರುತ್ತಾರೆ.

ನಿಜ ಬಾಪು . ನಾವು ಸ್ವಚ್ಛ ಭಾರತದ ಕನಸು ಕಟ್ಟಿಕೊಂಡಿದ್ದೇವೆ. ನಮ್ಮಲ್ಲಿ ವಿಶೇಷ ಕಸಬರಿಗೆಗಳಿವೆ. ಘನ ತಾಜ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯ ಅಲ್ಲಲ್ಲಿ ಕಾಣುತ್ತದೆ. ಆದರೆ ನಿಮಗೆ ಎಲ್ಲಿಯೂ ಕಾಣದೆ ಇರುವುದು ಮಾನವೀಯ ಮೌಲ್ಯಗಳು, ಸೂಕ್ಷ್ಮ ಸಂವೇದನೆಗಳು, ಜೀವನಾದರ್ಶಗಳು. ಇವೆಲ್ಲವನ್ನೂ ಗುಡಿಸಿಹಾಕುತ್ತಿದ್ದೇವೆ. ಬೌದ್ಧಿಕವಾಗಿ, ಭೌತಿಕವಾಗಿ, ಮಾನಸಿಕವಾಗಿ. ಈ ಹಾದಿಯಲ್ಲೇ ವಿಕಾಸದ ಕನಸು ಕಾಣುತ್ತಿದ್ದೇವೆ. 2047ರ ಹೊತ್ತಿಗೆ. ಅಲ್ಲಿಯವರೆಗೂ ನಿಮ್ಮ ಹೆಸರು ಎಲ್ಲಾದರೂ ಕಾಣುವಂತಿದ್ದರೆ ಸಾಕು. ಈ ಪ್ರಾರ್ಥನೆಯೊಂದಿಗೆ ನಿಮ್ಮನ್ನು ಬೀಳ್ಕೊಡುತ್ತೇನೆ.
ಕನ್ನಡಕದ ಗಾಜು ಒರೆಸಿಕೊಳ್ಳಿ, ಒಂದೆರಡು ಹನಿ ಕಾಣುತ್ತಿದೆ. ಸಲಾಂ ಬಾಪು !











