
—-ನಾ ದಿವಾಕರ—
ಮಾನವ ಸಂವೇದನೆಯೇ ಕಾಣದ ಸಮಾಜಗಳಲ್ಲಿ ಲಿಂಗತ್ವ ಸೂಕ್ಷ್ಮತೆ ಕಾಣುವುದು ಹೇಗೆ ?
ವರುಷಗಳ ಮುನ್ನ ಅತ್ಯಾಚಾರಕ್ಕೊಳಗಾಗಿ ಇನ್ನೂ ನ್ಯಾಯಾಂಗದ ಹೊಸ್ತಿಲಲ್ಲಿ ನಿಂತು ನ್ಯಾಯದಾನಕ್ಕಾಗಿ ಬೇಡುತ್ತಿರುವ ಮಹಿಳೆ ಅಥವಾ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ಹೆಣ್ಣು ಮಗಳ ವೃದ್ಧ ತಾಯಿ ನನಗೆ ನ್ಯಾಯ ಕೊಡಿಸಿ ಎಂದು ಕೇಳುವ ಪ್ರಸಂಗ, ಇವೆರಡೂ ಏನನ್ನು ಸೂಚಿಸುತ್ತದೆ ? 1990ರ ದಶಕದಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಇಂದಿಗೂ ಅಂತಿಮ ನ್ಯಾಯದ ಕನಸು ಕಾಣುತ್ತಿರುವ ರಾಜಸ್ಥಾನದ ಭಾವರಿದೇವಿ ಅವರನ್ನು ನಮ್ಮ ನಡುವೆ ನಿಲ್ಲಿಸಿ ಈ ಪ್ರಶ್ನೆಗಳನ್ನು ಕೇಳಿದರೆ, ಉತ್ತರಿಸುವವರು/ಉತ್ತರಿಸಬೇಕಾದವರು ಯಾರು ? ಆಳುವ ವರ್ಗಗಳೋ, ಇಷ್ಟು ವರ್ಷಗಳಲ್ಲಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಥಕ್ಕೆ ಸಾರಥಿಗಳಾಗಿರುವ ರಾಜಕೀಯ ಪಕ್ಷಗಳೋ ಅಥವಾ ನಾವು ʼ ಪ್ರಜ್ಞಾವಂತ-ಸಂವೇದನಾಶೀಲʼ ಎಂದು ಪರಿಭಾವಿಸಿರುವ ನಾಗರಿಕತೆಯ ಪ್ರತಿನಿಧಿ ಸಮಾಜವೋ ?
2012ರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ-ಹತ್ಯೆಗೀಡಾದ, ಸೌಜನ್ಯ ಎಂಬ ಅಪ್ರಾಪ್ತ ಹೆಣ್ಣು ಮಗಳಿಗಾಗಿ ಇಡೀ ರಾಜ್ಯದ ಎಚ್ಚೆತ್ತ ಮನಸ್ಸುಗಳು ನ್ಯಾಯ ಕೇಳುತ್ತಿವೆ. ಈ ನಡುವೆ 60 ವರ್ಷದ ವೃದ್ಧ ಮಹಿಳೆ ಸುಜಾತಾ ಭಟ್ ತಮ್ಮ ಮಗಳು ಅನನ್ಯ ಭಟ್ 2003ರಲ್ಲೇ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಮರುಜೀವ ಕೊಟ್ಟಿದ್ದು, ಕಳೆದುಹೋದ ಕರುಳ ಕುಡಿಯ ಬಗ್ಗೆ ಮಾಹಿತಿ ಕೋರಿ ದೂರು ಸಲ್ಲಿಸಿದ್ದಾರೆ. ಈ ತಾಯಿಯ ಹೆತ್ತಕರುಳಿಗೆ ಸ್ಪಂದಿಸಲು ಅಂದಿನ ಪೊಲೀಸ್ ಇಲಾಖೆ ನಿರಾಕರಿಸಿದೆ, ಈ ಘಟನೆಯ ದೂರುದಾಖಲಿಸಲು ಮುಂದಾದ ಆಕೆಯ ಮೇಲೆ ಹಲ್ಲೆಯೂ ನಡೆದಿದೆ. ಆನಂತರದ 22 ವರ್ಷಗಳಲ್ಲಿ ರಾಜ್ಯವನ್ನಾಳಿದ ಮೂರು ಪ್ರಧಾನ ರಾಜಕೀಯ ಪಕ್ಷಗಳಿಗೆ ಇದು ಅನಗತ್ಯ ವಿಚಾರವಾಗಿ ಕಂಡಿದೆ. ಆ ವೃದ್ಧ ಮಹಿಳೆ ಈಗ ನ್ಯಾಯ ಕೇಳುತ್ತಿರುವುದು ಯಾರಿಂದ ? ಇಲ್ಲಿ ನ್ಯಾಯಾಂಗದ ಪ್ರಶ್ನೆಯೇ ಕಾಣುವುದಿಲ್ಲ. ಏಕೆಂದರೆ ಕಾನೂನು ವ್ಯವಸ್ಥೆಯ ಹೊಸ್ತಿಲಲ್ಲೇ ಈ ತಾಯಿಯ ಆಕ್ರಂದನವನ್ನು ಅಡಗಿಸಲಾಗಿದೆ.
ಈಗ ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ನೌಕರಿಯಲ್ಲಿದ್ದ ವ್ಯಕ್ತಿಯೊಬ್ಬರು, ತಾವು ಕಳೆದ ಮೂರು-ನಾಲ್ಕು ದಶಕಗಳಲ್ಲಿ, ಸೇವೆಯಲ್ಲಿದ್ದಾಗಲೇ ಅತ್ಯಾಚಾರ-ಕೊಲೆಗೀಡಾದ ನೂರಾರು ಅಮಾಯಕರ ದೇಹವನ್ನು ಮಣ್ಣು ಮಾಡಿರುವುದಾಗಿ ದೂರು ದಾಖಲಿಸಿ, ತಮ್ಮ ಹೇಳಿಕೆಗೆ ಸಾಕ್ಷ್ಯಾಧಾರಗಳನ್ನು ಒದಗಿಸುವುದಾಗಿ ಹೇಳಿರುವುದು ರಾಜ್ಯದ ಕಾನೂನು ವ್ಯವಸ್ಥೆಯನ್ನು ಬಡಿದೆಬ್ಬಿಸಿದಂತಾಗಿದೆ. ಈ ದೂರುದಾರ ವ್ಯಕ್ತಿಯೂ ಈಗ ಜೀವಬೆದರಿಕೆಯ ನಡುವೆಯೇ ಇರುವುದು ಏನನ್ನು ಸೂಚಿಸುತ್ತದೆ ? ಸಾಮಾನ್ಯವಾಗಿ ರಾಜಕೀಯ ಪಕ್ಷಗಳು, ಯಾವುದೇ ಅನ್ಯಾಯಗಳ ವಿರುದ್ಧ ಹೋರಾಡುವಾಗ (ವಿರೋಧ ಪಕ್ಷ ಆಗಿದ್ದಾಗ ಮಾತ್ರ !!!), ನ್ಯಾಯಾಂಗವು ಪ್ರಕರಣವನ್ನು ಸ್ವಪ್ರೇರಣೆಯಿಂದ (Suo motto) ಕೈಗೆತ್ತಿಕೊಳ್ಳುವಂತೆ ಆಗ್ರಹಿಸುತ್ತವೆ. ಈ ಸ್ವಪ್ರೇರಣೆಯ ಆಯ್ಕೆ ಆಡಳಿತಾರೂಢ ಸರ್ಕಾರಗಳಿಗೂ ಇರುತ್ತದೆ ಅಲ್ಲವೇ ? ಹೌದು ಎಂದಾದಲ್ಲಿ ಕಳೆದ ಹಲವು ದಶಕಗಳಲ್ಲಿ , ಒಂದೇ ಪ್ರದೇಶದಲ್ಲಿ ನಡೆದ ಅತ್ಯಾಚಾರ-ಕೊಲೆಗಳನ್ನು ಯಾವ ಸರ್ಕಾರವೂ ಏಕೆ ಸ್ವ ಪ್ರೇರಣೆಯಿಂದ, ಗಂಭೀರವಾಗಿ ಪರಿಗಣಿಸಿಲ್ಲ ? ನಾಗರಿಕ ಜಗತ್ತು ಇದಕ್ಕೆ ರಾಜಕೀಯ ಉತ್ತರ ಅಪೇಕ್ಷಿಸುತ್ತದೆ.
ಮಹಿಳೆ ವಯೋಮಿತಿಯ ಗೆರೆಗಳನ್ನು ಮೀರಿ, ಅತ್ಯಾಚಾರ, ದೌರ್ಜನ್ಯ, ದಹನ, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ಕೆಲಸದ ಸ್ಥಳಗಳಲ್ಲಿ ಕಿರುಕುಳ ಇವೇ ಮುಂತಾದ ಅನ್ಯಾಯಗಳಿಗೆ ಗುರಿಯಾಗುವುದು ಪಿತೃಪ್ರಧಾನ ವ್ಯವಸ್ಥೆಯ ಪುರುಷಾಧಿಪತ್ಯದಲ್ಲಿ ಸಾಮಾನ್ಯ ಸಂಗತಿ. ವಿಪರ್ಯಾಸವೆಂದರೆ, ಭಾರತ ವಿಕಾಸದತ್ತ ದಾಪುಗಾಲು ಹಾಕುತ್ತಿರುವ ಡಿಜಿಟಲ್ ತಂತ್ರಜ್ಞಾನ-ವೈಜ್ಞಾನಿಕ ಯುಗದಲ್ಲಿ ಈ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇರುವುದು. ಇದರಲ್ಲಿ ಸೌಜನ್ಯ ಏಕಾಂಗಿಯಲ್ಲ, ಅನನ್ಯ ಭಟ್ ಒಬ್ಬಂಟಿಯಲ್ಲ ಅಥವಾ ಧರ್ಮಸ್ಥಳವೊಂದೇ ಭೂ ವಲಯ ಅಲ್ಲ. ಮಹಿಳಾ ಹೋರಾಟಗಳ ಅವಿರತ ಪರಿಶ್ರಮದ ಫಲವಾಗಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನುಗಳು ಶಾಸನಾತ್ಮಕವಾಗಿ ಜಾರಿಯಾಗಿದ್ದರೂ, ಈ ದೌರ್ಜನ್ಯಗಳು ಕಡಿಮೆಯಾಗಿಲ್ಲ, ಬದಲಾಗಿ ದಿನೇದಿನೇ ಹೆಚ್ಚಾಗುತ್ತಿವೆ. 13 ವರ್ಷಗಳ ಜನಪರ ಹೋರಾಟ-ಹಕ್ಕೊತ್ತಾಯಗಳ ಪರಿಣಾಮ ರಾಜ್ಯ ಸರ್ಕಾರ ನಿದ್ರಾವಸ್ಥೆಯಿಂದ ಎದ್ದು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲು ನಿರ್ಧರಿಸಿದೆ.

ಕ್ರೌರ್ಯ ಹಿಂಸೆಯ ವಿವಿಧ ರೂಪಗಳು
ಈ ನಡುವೆ ದೇಶದ ಇತರೆಡೆಗಳಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ಘಟನೆಗಳನ್ನು ಗಮನಿಸಿದಾಗ, ನಾವು ಎಲ್ಲಿದ್ದೇವೆ, ಎತ್ತಸಾಗಿದ್ದೇವೆ, ನಮ್ಮ ಸಮಾಜ ಮುಂಚಲನೆಯಲ್ಲಿದೆಯೋ ಅಥವಾ ಹಿಂದಕ್ಕೆ ಜಾರುತ್ತಿದೆಯೋ ಎಂಬ ಪ್ರಶ್ನೆಗಳು , ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇರಿಸುವ ಪ್ರತಿ ವ್ಯಕ್ತಿಯ ಆತ್ಮ ವಿಶ್ವಾಸವನ್ನು ಕಾಡುತ್ತವೆ.
ಒಡಿಷಾದ ಪುರಿ ಜಿಲ್ಲೆಯ ಬಲಾಂಗಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ 15 ವರ್ಷದ ಬಾಲಕಿಯೊಬ್ಬಳನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿ, ಆಕೆಯನ್ನು ಹೊರವಲಯದ ಭಾರ್ಗವಿ ನದಿ ತೀರಕ್ಕೆ ಕರೆದೊಯ್ದು ಅಲ್ಲಿ ಜೀವಂತ ದಹನ ಮಾಡಲು ಪ್ರಯತ್ನಿಸಿದ್ದಾರೆ. ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ತನಿಖೆ ಜಾರಿಯಲ್ಲಿದ್ದು, ಬಾಲಕಿಯ ದೇಹ ಶೇಕಡಾ 75ರಷ್ಟು ಸುಟ್ಟಿರುವುದಾಗಿ ವೈದ್ಯಕೀಯ ವರದಿಗಳು ಹೇಳುತ್ತವೆ. ಸಾವಿನೊಡನೆ ಸೆಣಸಾಡುತ್ತಿರುವ ಹುಡುಗಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಕೆಲವು ದಿನಗಳ ಹಿಂದೆ ಒಡಿಷಾದ ಬಲಸೋರ್ನ ಫಕೀರ್ ಮೋಹನ್ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಯೊಬ್ಬರು, ಪ್ರಾಧ್ಯಾಪಕರೊಬ್ಬರಿಂದ ಅನುಭವಿಸುತ್ತಿದ್ದ ಲೈಂಗಿಕ ಕಿರುಕುಳಕ್ಕೆ ಬೇಸತ್ತು, ಪ್ರಾಂಶುಪಾಲರ ಕಚೇರಿಯ ಎದುರೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಆಕೆ ವ್ಯಾಸಂಗ ಮಾಡುವ ವಿಭಾಗದ ಮುಖ್ಯಸ್ಥರಾದ ಸಮೀರ್ ಕುಮಾರ್ ಸಾಹು ಹಲವು ತಿಂಗಳುಗಳಿಂದ ಹೀಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆಕೆ ತನ್ನ ಗೆಳತಿಯರ ಬಳಿ ಹೇಳಿಕೊಂಡಿರುವುದು ದಾಖಲಾಗಿದೆ. ರಾಜ್ಯ ಸರ್ಕಾರ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿ ತನಿಖೆ ಮುಂದುವರೆಸಿದೆ.

ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಬಾಘ್ಪಟ್ನಲ್ಲಿ 28 ವರ್ಷದ ಗೃಹಿಣಿಯೊಬ್ಬರು ತನ್ನ ಪತಿ ಮತ್ತು ಅವರ ಕುಟುಂಬದವರಿಂದ ಹಲವು ವರ್ಷಗಳಿಂದ ವರದಕ್ಷಿಣೆಗಾಗಿ ಕಿರುಕುಳ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ, ಆಕೆಯ ಕೈಕಾಲುಗಳ ಮೇಲೆ, ಹೊಟ್ಟೆಯ ಮೇಲೆ ತಮ್ಮ ಆರೋಪಗಳನ್ನು ಬರೆದು, ಅತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. 2023ರಲ್ಲಿ ಕುಂದನ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದ ಈ ಮಹಿಳೆ ಪತಿ ಮತ್ತು ಆತನ ಕುಟುಂಬದಿಂದ ಅನುಭವಿಸುತ್ತಿದ್ದ ಮಾನಸಿಕ ಚಿತ್ರಹಿಂಸೆ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ರಾಜ್ಯದ ಬುಲಂದ್ಶಹರ್ಬಳಿಯ ಗ್ರಾಮವೊಂದರಲ್ಲಿ, ಮೂವರು ಅಪ್ರಾಪ್ತ ಬಾಲಕರು 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ವರದಿಯಾಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಬಾಲಕಿ ಆತಹತ್ಯೆಗೆ ಶರಣಾಗಿದ್ದಾಳೆ.
ಕರ್ನಾಟಕದಲ್ಲಿ ನಡೆದ ಘಟನೆಯೊಂದರಲ್ಲಿ, ಮೂಡಬಿದ್ರಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು, ತನ್ನ ಇಬ್ಬರು ಪ್ರಾಧ್ಯಾಪಕರು ಹಾಗೂ ಅವರ ಗೆಳೆಯನೊಬ್ಬನಿಂದ ಹಲವು ಬಾರಿ ಅತ್ಯಾಚಾರಕ್ಕೊಳಗಾಗಿದ್ದು, ವಿಷಯವನ್ನು ಗುಟ್ಟಾಗಿಡುವಂತೆ ಜೀವ ಬೆದರಿಕೆಯನ್ನೂ ಎದುರಿಸಿದ್ದಾರೆ. ಆಕೆಯ ಪೋಷಕರೊಡನೆ ವಿಷಯವನ್ನು ತಿಳಿಸಿ ದೂರು ದಾಖಲಿಸಿದ್ದ ನತದೃಷ್ಟ ಬಾಲಕಿ, ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಮೂಡಬಿದ್ರಿ ಕಾಲೇಜಿನ ಇಬ್ಬರು ಅಧ್ಯಾಪಕರನ್ನು ಮತ್ತು ಅವರ ಬೆಂಗಳೂರಿನಲ್ಲಿದ್ದ ಅವರ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ನೆಲೆಯಲ್ಲಿ ದೌರ್ಜನ್ಯಗಳು
ಈ ಘಟನೆಗಳು ಏನನ್ನು ಸೂಚಿಸುತ್ತವೆ ? ನಿರ್ಭಯಾ ಪ್ರಕರಣದ ಅನಂತರ ಜಾರಿಯಾದ ಕಠಿಣ ಕಾನೂನುಗಳು ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುತ್ತವೆ ಎಂಬ ಭ್ರಾಮಕ ಮನಸ್ಥಿತಿಯಿಂದ ಹೊರಬಂದು ನೋಡಿದಾಗ ರಾಜಧಾನಿ ದೆಹಲಿಯಿಂದ ಕರ್ನಾಟಕದ ಧರ್ಮಸ್ಥಳದವರೆಗೂ, ಹೆಣ್ಣುಮಕ್ಕಳು ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವುದನ್ನು ಕಳೆದ ಒಂದು ದಶಕದಲ್ಲೇ ಕಂಡಿದ್ದೇವೆ. ಒಂದು ಬದಲಾವಣೆ ಎಂದರೆ ಈಗ ಅತ್ಯಾಚಾರಗಳು ಊರಾಚೆಯ ಬಯಲಲ್ಲಿ , ಹೊಲಗದ್ದೆಗಳಲ್ಲಿ, ಕಾಡುಮೇಡುಗಳಲ್ಲಿ, ಬೆಟ್ಟದ ತಪ್ಪಲಲ್ಲಿ ನಡೆಯುತ್ತಿಲ್ಲ. ಬದಲಾಗಿ ಹೆಣ್ಣುಮಕ್ಕಳ ಶೋಷಣೆ ಮತ್ತು ಅವರ ಮೇಲಿನ ಅತ್ಯಾಚಾರಗಳು ಮನೆಯ ನಾಲ್ಕು ಗೋಡೆಗಳ ನಡುವೆ, ಅಧ್ಯಾತ್ಮ ಕೇಂದ್ರಗಳ ಭದ್ರಕೋಟೆಗಳಲ್ಲಿ, ಧಾರ್ಮಿಕ ಸ್ಥಳಗಳ ಪವಿತ್ರ (?) ತಾಣಗಳಲ್ಲಿ, ವಿಶ್ವವಿದ್ಯಾಲಯದ ಕ್ಯಾಂಪಸ್ಗಳಲ್ಲಿ, ಆಸ್ಪತ್ರೆಗಳ ಕೊಠಡಿಗಳಲ್ಲಿ, ವಸತಿ ನಿಲಯಗಳ ಕತ್ತಲ ಕೋಣೆಗಳಲ್ಲಿ ನಡೆಯುತ್ತಿವೆ.

ಈ ಹೀನ ಕೃತ್ಯಗಳು ಅಪರಿಚಿತರಿಂದ ಮಾತ್ರ ನಡೆಯುತ್ತಿಲ್ಲ, ಕುಟುಂಬ ಸದಸ್ಯರಿಂದ, ಆಪ್ತ ವಲಯದವರಿಂದ, ಶೈಕ್ಷಣಿಕ ಬೋಧಕರಿಂದ, ಆಸ್ಪತ್ರೆಯ ಚಿಕಿತ್ಸಕರಿಂದ, ಅಧ್ಯಾತ್ಮ-ಧರ್ಮ ಬೋಧಕರಿಂದ ನಡೆಯುತ್ತಿವೆ. ಇದನ್ನು ಎರಡು ಮಜಲುಗಳಲ್ಲಿ ನಿರ್ವಚಿಸಬಹುದು. ಮೊದಲನೆಯದಾಗಿ, ಕದ್ದು ಮುಚ್ಚಿ ಎಸಗಲಾಗುತ್ತಿದ್ದ ಹೀನಾಪರಾಧಗಳು ಈಗ ಸಾಂಸ್ಥಿಕ ಚೌಕಟ್ಟುಗಳಲ್ಲಿ ಸಂಭವಿಸುತ್ತಿವೆ, ಎರಡನೆಯದಾಗಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆಯನ್ನು ಅಪೇಕ್ಷಿಸುವ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾರೆ. ಇದಕ್ಕೆ ಬಲಿಯಾಗುತ್ತಿರುವುದು ಹೆಚ್ಚಿನ ಸಂಖ್ಯೆಯಲ್ಲಿ ದುರ್ಬಲ ವರ್ಗದ ಶೋಷಿತ ಸಮುದಾಯಗಳು. ಇದನ್ನು ಹೇಗೆ ವ್ಯಾಖ್ಯಾನಿಸುವುದು ? ಪುರುಷಾಧಿಕಾರದ ಹಿಂಸಾತ್ಮಕ ಅಭಿವ್ಯಕ್ತಿಗಳು ಭೌತಿಕವಾಗಿ, ವಿಶಾಲ ಸಮಾಜದ ಸಮ್ಮತಿ ಪಡೆದಿದೆ ಎಂದೋ ಅಥವಾ ಇದೇ ಸಮಾಜವನ್ನು ನಿರ್ದೇಶಿಸಿ ನಿಯಂತ್ರಿಸುವ ಒಂದು ಮೇಲ್ಪದರದ ಸಾಮಾಜಿಕ ವಲಯ ಕುರುಡಾಗಿದೆ ಎಂದೋ ? ಅಥವಾ ಏಳು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಸಂವಿಧಾನವನ್ನು ನಿತ್ಯವೂ ಜಪ ಮಾಡುತ್ತಿರುವ ಆಳ್ವಿಕೆಯ ಕೇಂದ್ರಗಳು, ಅಲ್ಲಿನ ಚುನಾಯಿತ ಜನಪ್ರತಿನಿಧಿಗಳು, ಸಂವಿಧಾನದ ಫಲಾನುಭವಿ ಅಧಿಕಾರಿಗಳು, ಈ ದೌರ್ಜನ್ಯಗಳನ್ನು ಕಂಡೂ ಕಾಣದಂತೆ ತಮ್ಮ ಸ್ವ ಹಿತಾಸಕ್ತಿಯ ಸಾಧನೆಗಾಗಿ ಪ್ರಜಾಪ್ರಭುತ್ವವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೋ ?
ಪ್ರಜಾಪ್ರಭುತ್ವ ಅಥವಾ ಸಂವಿಧಾನ ಮೌಲಿಕವಾಗಿ ಸಾಂಸ್ಥೀಕರಣಗೊಳ್ಳಬೇಕಿರುವುದು ಇದನ್ನು ಪ್ರತಿನಿಧಿಸುವ ಮತ್ತು ವಾರಸುದಾರಿಕೆ ವಹಿಸುವ ವ್ಯಕ್ತಿ-ಪಕ್ಷ-ಸಂಘಟನೆ-ಸಂಸ್ಥೆಯ ಚಿಂತನೆ ಮತ್ತು ಧೋರಣೆಯಲ್ಲಿ ಅಲ್ಲವೇ ? ಇದು ಸಾಧ್ಯವಾಗಿಲ್ಲ ಎನ್ನುವುದು ಸುಡು ವಾಸ್ತವ. ಭಾರತೀಯ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ ಮನಸ್ಥಿತಿ ಮತ್ತು ಇದರಿಂದ ಕೆಲವು ಪುರುಷರಲ್ಲಿ ಸೃಷ್ಟಿಯಾಗುವ ಯಜಮಾನಿಕೆ/ಮೇಲರಿಮೆ/ಅಹಮಿಕೆ ಮತ್ತು ಕಾಮತೃಷೆಗೆ ನವ ಭಾರತದ ಅಸಂಖ್ಯಾತ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಹಾಥ್ರಸ್ನಿಂದ ಬೆಂಗಳೂರಿನವರೆಗೆ ವಿಸ್ತರಿಸಿರುವ ಈ ದೌರ್ಜನ್ಯದ ಸಾಮ್ರಾಜ್ಯದಲ್ಲಿ ಹೆಣ್ಣು ಸುರಕ್ಷತೆಯಿಲ್ಲದೆಯೇ ಬದುಕುವಂತಾಗಿದೆ. ಸಮಾಜದಲ್ಲಿ ಲಿಂಗತ್ವ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೋಧಿಸಬೇಕಾದ, ಮನುಜ ಸಂವೇದನೆಯನ್ನು ಗಟ್ಟಿಗೊಳಿಸಬೇಕಾದ ಬೌದ್ಧಿಕ/ಶೈಕ್ಷಣಿಕ/ಆಧ್ಯಾತ್ಮಿಕ/ಧಾರ್ಮಿಕ ಕೇಂದ್ರಗಳೇ ಈ ದೌರ್ಜನ್ಯಗಳ ಮೂಲ ಕೇಂದ್ರಗಳಾಗುತ್ತಿರುವುದು ವರ್ತಮಾನ ಭಾರತದ ಅತಿ ದೊಡ್ಡ ದುರಂತ.
ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ
ಇಲ್ಲಿ ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಅಂಶವೆಂದರೆ, ಅಧಿಕಾರ ರಾಜಕಾರಣದ ಫಲಾನುಭವಿ ಪಕ್ಷಗಳು ಇಂತಹ ಘಟನೆಗಳಿಗೆ ಪ್ರತಿಕ್ರಿಯಿಸುವಾಗ ತೋರಿಸಬೇಕಾದ ಸಂಯಮ-ಸಂವೇದನೆ ಮತ್ತು ಜವಾಬ್ದಾರಿಯಿಂದ ಸಂಪೂರ್ಣ ವಿಮುಖವಾಗಿರುವುದು. ಕೊಲ್ಕತ್ತಾದ ಘಟನೆಯನ್ನು ಖಂಡಿಸುವ ಬಿಜೆಪಿ-ಹಿಂದುತ್ವ ನಾಯಕರಿಗೆ ಒಡಿಷಾದ ಘಟನೆ ತಟ್ಟುವುದೇ ಇಲ್ಲ. ಉತ್ತರಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ , ದೌರ್ಜನ್ಯಗಳನ್ನು ಖಂಡಿಸುವ ಕಾಂಗ್ರೆಸ್ ನಾಯಕರಿಗೆ, ಕರ್ನಾಟಕದ ಘಟನೆಗಳು ಕೇವಲ ಕಾನೂನು ಸುವ್ಯವಸ್ಥೆಯ ʼ ಸಮಸ್ಯೆ ʼಗಳಾಗಿ ಕಾಣುತ್ತವೆ. “ ಅಪರಾಧಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ,,,, ” , “ ಕಾನೂನು ತನ್ನ ಶಾಸನಾತ್ಮಕ ಪ್ರಕ್ರಿಯೆಯನ್ನು ಮುಂದುವರೆಸುತ್ತದೆ,,,,”, “ ಎಷ್ಟೇ ಪ್ರಭಾವಿಗಳಾದರೂ ರಕ್ಷಣೆ ನೀಡುವುದಿಲ್ಲ ” ಎಂಬ ಸರ್ಕಾರಗಳ ಘೋಷಣೆಗಳು ಕೇವಲ ಅಲಂಕಾರಿಕವಾಗಿ ಕಾಣುತ್ತವೆ. ಇದಕ್ಕೆ ಧರ್ಮಸ್ಥಳದ ಸೌಜನ್ಯ ಪ್ರಕರಣ ಮತ್ತು ಇತರ ಸಾಮೂಹಿಕ ದೌರ್ಜನ್ಯಗಳ ಚರಿತ್ರೆಯೇ ಸಾಕ್ಷಿ.
ಸಮಾಜದಲ್ಲಿ, ವಿಶೇಷವಾಗಿ ಪುರುಷ ಸಮಾಜದಲ್ಲಿ, ಮಿಲೆನಿಯಂ ಮಕ್ಕಳು ಹಾಗೂ ಯುವ ಸಮೂಹದಲ್ಲಿ, ಲಿಂಗತ್ವ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಪಷ್ಟ. ಮಹಿಳಾ ಹೋರಾಟಗಳ, ಪ್ರಗತಿಪರ ಸಂಘಟನೆಗಳ ಪ್ರತಿರೋಧಕ್ಕೆ ಮಣಿದು ಕಾನೂನು ಕ್ರಮಕ್ಕೆ ಮುಂದಾಗುವ ಸರ್ಕಾರಗಳಿಗೆ, ಇದು ಕೇವಲ ಒಬ್ಬ ಮಹಿಳೆಯ ಅಥವಾ ಒಂದು ಸಮಾಜ/ಸಮುದಾಯ/ಪ್ರದೇಶದ ಪ್ರಶ್ನೆ ಅಲ್ಲ ಎನ್ನುವ ವಾಸ್ತವ ಅರಿವಾಗಬೇಕಲ್ಲವೇ ? ಮೇಲೆ ಉಲ್ಲೇಖಿಸಿದ ಮತ್ತು ನಮ್ಮ ನಡುವೆ ನಡೆಯುತ್ತಲೇ ಇರುವ ಅತ್ಯಾಚಾರ, ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಹಿಳಾ ದೌರ್ಜನ್ಯ ಎಂಬ ವಿದ್ಯಮಾನ ಭಾರತೀಯ ಸಮಾಜದಲ್ಲಿ ಒಂದು ವ್ಯಾಧಿಯಾಗಿ ಬೇರೂರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ವ್ಯಾಧಿ ವ್ರಣವಾಗುವ ಮುನ್ನ ಇದನ್ನು ಹೋಗಲಾಡಿಸುವ ಚಿಕಿತ್ಸಕ ಗುಣಗಳನ್ನು ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯಗಳು ಕಳೆದುಕೊಂಡಿವೆ.
ಲಿಂಗತ್ವ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆ ಕಲಿಕೆಯ ಅಥವಾ ಬೋಧನೆಯ ವಸ್ತುವಲ್ಲ. ಅದು ಸಮಾಜದಲ್ಲಿ ಅಂತರ್ಗತವಾಗಿ, ಬೆಳೆಯಬೇಕಾದ ನೈತಿಕ ಮೌಲ್ಯ. ಜಗತ್ತನ್ನೇ ಕಾಣದ ಎಳೆಯ ಬಾಲಕಿಯಿಂದ ವಯೋವೃದ್ಧ ಮಹಿಳೆಯವರೆಗೂ ವಿಸ್ತರಿಸುವ ಈ ದೌರ್ಜನ್ಯದ ಹೀನ ಕೃತ್ಯಗಳು ಮತ್ತು ಅದರ ಹಿಂದೆ ಅಡಗಿರುವ ಕ್ರೌರ್ಯ, ಸಮಾಜದ ನೈತಿಕ ಬೇರುಗಳನ್ನೇ ಸಡಿಲಿಸಿ ನಿಸ್ತೇಜಗೊಳಿಸಿಬಿಡುತ್ತವೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಡಳಿತವು, ಶಾಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿ, ಹೆಣ್ಣು ಮಕ್ಕಳ ಮುಟ್ಟಿನ ದಿನವನ್ನು ಲಿಖಿತ ರೂಪದಲ್ಲಿ ದಾಖಲಿಸಲು ಆದೇಶಿಸಿದ್ದು, ಇದನ್ನು “ ಮಿಷನ್ ಸುರಕ್ಷಾ ” ಎಂಬ ಸರ್ಕಾರಿ ಅಭಿಯಾನದ ಅಡಿ ಕೈಗೊಂಡಿರುವುದು, ಈ ಲಿಂಗತ್ವ ಸೂಕ್ಷ್ಮತೆ ಮತ್ತು ಸಂವೇದನೆ ಇಲ್ಲದಿರುವುದನ್ನು ಎತ್ತಿ ತೋರಿಸಿದೆ. ಮಹಿಳಾ ಸಂಘಟನೆಗಳ ಪ್ರತಿರೋಧಕ್ಕೆ ಮಣಿದು ಸುತ್ತೋಲೆಯನ್ನು ಹಿಂಪಡೆಯಲಾಗಿದೆಯಾದರೂ, ವ್ಯಕ್ತಿಗತ ನೆಲೆಯಲ್ಲಿ, ಸಾಂಸ್ಥಿಕ ರೂಪದಲ್ಲಿ ನೆಲೆಗೊಂಡಿರುವ ಈ ಪಿತೃಪ್ರಧಾನ ಮೌಲ್ಯಗಳು ಬದಲಾಗುವುದಿಲ್ಲ.
ಈ ಮೌಲ್ಯಗಳನ್ನು ಬುಡಸಮೇತ ನಿರ್ಮೂಲ ಮಾಡಲುಲೈಂಗಿಕ ಶಿಕ್ಷಣವನ್ನು ವೈಜ್ಞಾನಿಕ ನೆಲೆಯಲ್ಲಿ ಶಾಲಾ ಹಂತದಿಂದಲೇ ಅಳವಡಿಸುವ ಅಗತ್ಯತೆ ಇಂದು ಹೆಚ್ಚಾಗಿದೆ. ಹುಡುಗರು ಮತ್ತು ಹುಡುಗಿಯರಿಗೆ ತಮ್ಮ ದೇಹದ ಅಂಗಾಂಗಗಳ ಅರಿವು ಮೂಡಿಸುವಂತೆಯೇ, ಅವುಗಳ ಜೈವಿಕ ಲಕ್ಷಣಗಳನ್ನೂ, ದೇಹದಲ್ಲಾಗುವ ಜೈವಿಕ ಬದಲಾವಣೆಯ ಕಾರಣ ಮತ್ತು ಪರಿಣಾಮಗಳನ್ನೂ ಮನದಟ್ಟಾಗುವಂತೆ ಹೇಳಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಕ್ರಿಯಾಶೀಲತೆಯಿಂದ, ಹಲವು ಕಾರ್ಯಕ್ರಮ, ಅಭಿಯಾನಗಳನ್ನು ನಡೆಸುತ್ತಿವೆ. ಆದರೆ ಇದು ಮೂಲತಃ ಸಮಾಜದ ಸಾಮಾಹಿಕ ಜವಾಬ್ದಾರಿ. ಈ ಸಮಾಜವನ್ನು ಶಾಸನಾತ್ಮಕವಾಗಿ ಪ್ರತಿನಿಧಿಸುವ ಚುನಾಯಿತ ಸರ್ಕಾರಗಳ ಜವಾಬ್ದಾರಿ. ಕಾನೂನುಗಳು ಲೈಂಗಿಕ ದೌರ್ಜನ್ಯಗಳಿಗೆ ಕಾರಣರಾಗುವ ವ್ಯಕ್ತಿಗಳನ್ನು ದಂಡಿಸುತ್ತವೆ, ತಹಬಂದಿಗೆ ತರುತ್ತವೆ. ಆದರೆ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ ಮೌಲ್ಯಗಳನ್ನು ಹೋಗಲಾಡಿಸಲು ನೆರವಾಗುವುದಿಲ್ಲ. ಇದು ಸಮಾಜದ ಜವಾಬ್ದಾರಿ.
-೦-೦-೦-೦-