
ಮುಡಾ ಸೈಟಿನ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯರಿಗೆ ಈಗ ಗಣಿ ಕಿಕ್ ಬ್ಯಾಕ್ ಹೊಸ ಸಂಕಷ್ಟ ತಂದೊಡ್ಡಿದೆ. 8 ಗಣಿ ಕಂಪನಿಗಳ ನವೀಕರಣದಿಂದ ಸುಮಾರು ₹500 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಡೆದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಎಂಬುವರು ರಾಜ್ಯಪಾಲರಿಗೆ ಪತ್ರ ಬರೆದು, ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಅಂತ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆ ಮತ್ತೊಂದು ಚರ್ಚೆ ಹುಟ್ಟುಹಾಕಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ 8 ಕಂಪನಿಗಳ ಗಣಿ ಗುತ್ತಿಗೆಯಲ್ಲಿ ಕಿಕ್ಬ್ಯಾಕ್ ಪಡೆದ ಆರೋಪ ಸುಳ್ಳು, ಕಾನೂನು ಬದ್ಧವಾಗಿ ಷರತ್ತು ಬದ್ಧ ಅನುಮೋದನೆ ಕೊಟ್ಟಿದ್ದೀವಿ ಎಂದು ಸ್ಪಷ್ಟನೆ ಕೊಟ್ಟಿದ್ದು, ರಾತ್ರೋರಾತ್ರಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನ ಭೇಟಿ ಮಾಡಿ, ಚರ್ಚೆ ಮಾಡಿದ್ದಾರೆ. ಕಿಕ್ಬ್ಯಾಕ್ ಆರೋಪದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ವಿವರಣೆ ಕೊಟ್ಟಿದ್ದಾರೆ ಎನ್ನಲಾಗಿದೆ.
2015ರಲ್ಲಿ ರಾಜ್ಯದ 8 ಗಣಿ ಗುತ್ತಿಗೆಗಳ ನವೀಕರಣ ಆಗಿದೆ.. ಹರಾಜು ಹಾಕುವ ಬದಲಿಗೆ ನವೀಕರಣ ಮಾಡಲಾಗಿದೆ.. ಒಟ್ಟು 2 ಸಾವಿರದ 386 ಎಕರೆ ಭೂಮಿಯನ್ನು 8 ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ನವೀಕರಣದಿಂದ ಸರ್ಕಾರಕ್ಕೆ ₹5000 ಕೋಟಿ ನಷ್ಟವಾಗಿದೆ. ಸುಮಾರು ₹500 ಕೋಟಿ ಕಿಕ್ಬ್ಯಾಕ್ ಪಡೆದು ಸಹಿ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಆದರೆ ಕಿಕ್ಬ್ಯಾಕ್ಗೆ ಸಿಎಂ ಸ್ಪಷ್ಟನೆ ನೀಡಿದ್ದು, 3 ಗಣಿ ಕಂಪನಿಗಳ ಗಣಿಗಾರಿಕೆ ಹಕ್ಕು ನೀಡಿಲ್ಲ, 3 ಕಂಪನಿಗೆ 2020-201ರಲ್ಲಿ ಬಿಜೆಪಿ ಗುತ್ತಿಗೆ ಹಕ್ಕು ಕೊಟ್ಟಿದೆ. 2 ಕಂಪನಿಗೆ 2016-2018ರಲ್ಲಿ ಗಣಿ ಗುತ್ತಿಗೆಗೆ ಒಪ್ಪಿಗೆ ಸಿಕ್ಕಿದೆ. ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆ ನಷ್ಟವಾಗಿಲ್ಲ. ಈಗ ಸುಗ್ರೀವಾಜ್ಞೆ ಮೂಲಕ ಗಣಿ ಗುತ್ತಿಗೆ ಹರಾಜಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರು ಕೂಡ ಗಣಿ ಕಿಕ್ ಬ್ಯಾಕ್ ಬಗ್ಗೆ ಸ್ಪಷ್ಟನೆ ಪಡೆದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ನನ್ನ ವಿರುದ್ಧ ಆರೋಪ ಹೊರಿಸಲಾಗ್ತಿದೆ. ವಿರೋಧ ಪಕ್ಷಗಳ ನಾಯಕರ ಜೊತೆಗೆ ನಮ್ಮದೇ ಪಕ್ಷದ ಪ್ರಭಾವಿಗಳೂ ಸೇರಿಕೊಂಡಿದ್ದಾರೆ. ನಮ್ಮವರೇ ಸಾಥ್ ಕೊಡ್ವತಿರೋದ್ರಿಂದ ವಿರೋಧಿಗಳ ಬಾಯಿಗೆ ಆಹಾರ ಆಗುವಂತೆ ಆಗಿದೆ. ನಮ್ಮ ಪಕ್ಷದಲ್ಲಿ ಯಾರು ಈ ರೀತಿಯ ಚಾರಿತ್ರ್ಯ ವಧೆ ಆಗ್ತಿದೆ ಅನ್ನೋದು ನಮಗೂ ಗೊತ್ತು. ನಿಮಗೂ ಗೊತ್ತಿರುವ ಸಂಗತಿ. ರಾಜ್ಯದಲ್ಲಿ ಉತ್ತಮ ಅಧಿಕಾರ ನಡೆಸಬೇಕಿದ್ದರೆ ನಮ್ಮ ಪಕ್ಷದವರನ್ನು ನಿಯಂತ್ರಣ ಮಾಡಬೇಕಿದೆ ಎಂದಿದ್ದಾರೆ.







