
ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಡಬೇಕು ಎಂದು ರಾಜ್ಯ ಸರ್ಕಾರ ಪದೇ ಪದೇ ದಾಳಿ ಮಾಡುತ್ತಲೇ ಇರುತ್ತದೆ. ಕೇಂದ್ರ ಪರಿಸರ ಇಲಾಖೆಯಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಒಪ್ಪಿಗೆ ಕೊಡಿಸಬೇಕು ಎಂದು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ ಶಿವಕುಮಾರ್ ಆಗ್ರಹ ಮಾಡಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಮಾತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ರಾಮನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.

ಅದೇನೋ ಮೇಕೆದಾಟು, ಮೇಕೆದಾಟು ಅಂತಾರೆ, ಈಗ ನಟ್ಟು, ಬೋಲ್ಟು ಟೈಟ್ ಅಂತಾರೆ. ನಿಮಗೆ 136 ಜನ ಕೊಟ್ಟಿರೋದು ಏಕೆ..? ಮೇಕೆದಾಟು ಮಾಡೋದಕ್ಕಲ್ವಾ..? ಮಾಡಿ. ನಿಮ್ಮ ಪಾರ್ಟ್ನರ್ ಪಾರ್ಟಿ ತಮಿಳುನಾಡಿನಲ್ಲಿ ಸರ್ಕಾರ ಮಾಡ್ತಿದೆ. ಮೊದಲು ಅಲ್ಲಿಂದ ಅನುಮತಿ ತೆಗೆದುಕೊಂಡು ಬನ್ನಿ. ಆ ಬಳಿಕ 10 ನಿಮಿಷದಲ್ಲಿ ಪ್ರಧಾನಿಗಳ ಬಳಿ ನಾನು ಪರ್ಮಿಷನ್ ಕೊಡಿಸ್ತೀನಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ. ರಾಜ್ಯದಲ್ಲಿ ದುಡ್ಡಿಗೆ ಸಮಸ್ಯೆ ಇಲ್ಲ, ರೈತರ ಸಾಲಮನ್ನಾ ಮಾಡಿ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಇವರಿಗ್ಯಾಕೆ ಅದು ಆಗ್ತಿಲ್ಲ. ಜನರ ತರಿಗೆ ಹಣವನ್ನ ಲೂಟಿ ಮಾಡಿಕೊಂಡು ಕೂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನ ಯಾಕೆ ಇದನ್ನ ಸಹಿಸಿಕೊಳ್ತಿದ್ದೀರಿ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಶಾಲೆಗೆ ಶಿಕ್ಷಕರ ನೇಮಕ ಮಾಡ್ತಿಲ್ಲ, ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಹುದ್ದೆ ಖಾಲಿ ಇಟ್ಕೊಂಡಿದ್ದೀರಿ. ಪ್ರಶ್ನೆ ಪತ್ರಿಕೆಗೆ ಎಷ್ಟು ಹಣ ನಿಗಧಿ ಮಾಡಿದ್ದೀರಿ. ಇದೆಲ್ಲ ಸಿದ್ದರಾಮಯ್ಯನವರ ಅವಧಿಯಲ್ಲಿ ಆಗ್ತಿರೋದು. ಈ ಸರ್ಕಾರ ಬಂಡ ಬಿದ್ದು ಹೋಗಿದೆ. ಮಾನ ಮರ್ಯಾದೆ ಏನು ಇಲ್ಲ, ಎಷ್ಟು ಮಾತನಾಡಿದ್ರು ಅಷ್ಟೇ ಎಂದು ಅಕ್ಕೂರು ಗ್ರಾಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಇದಕ್ಕೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಮೇಕೆದಾಟಿಗಾಗಿ ಡಿಎಂಕೆ ಪಕ್ಷವನ್ನ ಒಪ್ಪಿಸಲಿ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಯಾವುದೇ ಮೈತ್ರಿ ಆಗೋದು ಸ್ಥಳೀಯ ವಿಚಾರಗಳಿಗೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಷ್ಟ್ರ ಮಟ್ಟದ ತೀರ್ಮಾನಕ್ಕೆ ಬದ್ದವಾಗಿರಲ್ಲ. ಆಯಾ ರಾಜ್ಯದ ಹಿತಾಸಕ್ತಿಗೆ ಬದ್ದವಾಗಿರುತ್ತವೆ. ಕುಮಾರಸ್ವಾಮಿ ಮೈಸೂರು ಪಾದಯಾತ್ರೆಗೆ ಯಾಕೆ ವಿರೋಧಿಸಿದ್ರು..? ಶಾಸಕರ ಭವನದಿಂದ ನಡೆದ ಪಾದಯಾತ್ರೆಗೆ ವಿರೋಧ ಮಾಡಿದ್ರು. ಮಾಜಿ ಸಿಎಂ ಆದವರು ಯೋಚನೆ ಮಾಡಿ ಹೇಳಿಕೆ ಕೊಡಬೇಕು. ನನ್ನನ್ನ ಎಂಪಿ ಮಾಡಿದ್ರೆ ಐದು ನಿಮಿಷದಲ್ಲಿ ಮೇಕೆದಾಟಿಗೆ ಅನುಮತಿ ಕೊಡುಸ್ತೀನಿ ಅಂತ ಮಂಡ್ಯದಲ್ಲಿ ಹೇಳಿದ್ರು. ಆಗ ಏನಾದ್ರು ಕಂಡಿಷನ್ ಹಾಕಿ ಆ ಮಾತನ್ನ ಹೇಳಿದ್ರಾ..? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಂಡಿಷನ್ ಇಲ್ಲದೆ ಮಂಡ್ಯದಲ್ಲಿ ಭರವಸೆ ಕೊಟ್ಟಿದ್ರು. ಒಬ್ಬರು ಮಾಜಿ ಸಿಎಂ ಈ ರೀತಿ ಹೇಳಿಕೆ ಕೊಡುವುದನ್ನ ನಿಲ್ಲಿಸಬೇಕು. ಇದೆಲ್ಲಾ ಅವರಿಗೆ ಗೌರವ ತರುವುದಿಲ್ಲ. ನಾನು ಮಾತನಾಡಿದ್ದು ಸತ್ಯ, ಮೋದಿ ಹತ್ತಿರ ನನ್ನ ಮಾತು ನಡೆಯುತ್ತಿಲ್ಲ ಅಂತ ಹೇಳಲಿ. ನಾವು ಏನೂ ಕೇಳಲ್ಲ. ಇಲ್ಲ ಅಂದ್ರೆ ವಿಜಯೇಂದ್ರಣ್ಣನೋ, ಅಶೋಕಣ್ಣನ ಕರೆದುಕೊಂಡು ಹೋಗಿ ಒಪ್ಪಿಸಿಕೊಂಡು ಬರುವ ಕೆಲಸ ಮಾಡಲಿ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.