
ಬೆಂಗಳೂರು ; ಮಹತ್ವದ ತೀರ್ಪೊಂದರಲ್ಲಿ ಕರ್ನಾಟಕ ಭೂಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆ 2011ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿರುವ ಕರ್ನಾಟಕದ ಹೈಕೋರ್ಟ್ ಕೊಡವ ಕುಟುಂಬಗಳ ಹಿತದೃಷ್ಟಿಯಿಂದ ಈ ತಿದ್ದುಪಡಿಯಾಗಿದೆ ಎಂದು ದೃಢಪಡಿಸಿದೆ. ಈ ತಿದ್ದುಪಡಿಯು ಕೊಡವ ಸಂಸ್ಕೃತಿ, ಸಂಪ್ರದಾಯಗಳನ್ನು ಅಡ್ಡಿಪಡಿಸುವ ಬದಲು ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಯ ಮೇಲಿನ ಮಾಲೀಕತ್ವದ ಹಕ್ಕುಗಳನ್ನು ಹೆಚ್ಚಿಸುತ್ತದೆ ಎಂದು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದೆ.
ಜುಲೈ 25 ರಂದು ತೀರ್ಪು ನೀಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, “ತಿದ್ದುಪಡಿಯು( Amendment)ಎಲ್ಲಾ ರೀತಿಯ ಜಮೀನು ಹೊಂದಿರುವವರು ಸೇರಿದಂತೆ ಕೊಡವ ಕುಟುಂಬಗಳಿಗೆ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ನೀಡುತ್ತದೆ, ಆದರೆ ಈ ಹಿಂದೆ ಭೂಮಿಯ ಹಕ್ಕು ಸರ್ಕಾರಕ್ಕೂ ಸೇರಿದ್ದು ಎಂದು ಪ್ರತಿಪಾದಿಸಲಾಗಿತ್ತು.” ಈ ಬದಲಾವಣೆಯು ಕೊಡವ ಸಂಪ್ರದಾಯಗಳಿಗೆ ವಿರುದ್ಧವಾಗಿರುವ ಬದಲಿಗೆ ಹೆಚ್ಚಾಗಿ ಹೊಂದಿಕೆಯಾಗುತ್ತದೆ ಎಂದು ನ್ಯಾಯಮೂರ್ತಿ ಒತ್ತಿ ಹೇಳಿದರು.
1964ರ ಕರ್ನಾಟಕ ಭೂಕಂದಾಯ (ಕೆಎಲ್ಆರ್) ಕಾಯ್ದೆಯ ಸೆಕ್ಷನ್ 2 ಮತ್ತು 80ರ ತಿದ್ದುಪಡಿಯನ್ನು ಪ್ರಶ್ನಿಸಿ ಬ್ರಿಗೇಡಿಯರ್ ಮಾಳೇಟಿರ ಎ.ದೇವಯ್ಯ (ನಿವೃತ್ತ) ಮತ್ತು ಇತರ 42 ಕೊಡವರು ಸಲ್ಲಿಸಿದ್ದ ಅರ್ಜಿಗಳ ಗುಂಪನ್ನು ನ್ಯಾಯಾಲಯದ ತೀರ್ಪು ವಜಾಗೊಳಿಸಿದೆ. ಜಮ್ಮಾ ಬಾಣೆ ಜಮೀನು ಸೇರಿದಂತೆ ಭೂದಾಖಲೆಗಳಲ್ಲಿ ಕೊಡವ ಕುಟುಂಬಗಳ ಎಲ್ಲ ಕುಟುಂಬದ ಸದಸ್ಯರ ಹೆಸರನ್ನು ಭೂ ಒತ್ತುವರಿದಾರರೆಂದು ನಮೂದಿಸುವ ಕುರಿತು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತರಲಾದ ತಿದ್ದುಪಡಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.ಅವರ ನಡುವೆ ವಿಭಜನೆಯನ್ನು ಮಾಡದೆಯೇ ಹೆಸರು ಸೇರ್ಪಡೆ ಮಾಡಬಹುದು ಅಥವಾ ಪ್ರತಿಯೊಬ್ಬ ಕುಟುಂಬದ ಸದಸ್ಯರ ಪಾಲಿಗೆ ಬರುವ ಪ್ರದೇಶಕ್ಕೆ ಸಂಬಂಧಿಸಿದಂತೆ 11-ಇ ಸ್ಕೆಚ್ ಅನ್ನು ಪಡೆಯಬಹುದು ಎಂದು ನ್ಯಾಯಾಲಯವು ಹೇಳಿದೆ.
ತಿದ್ದುಪಡಿಯ ಮೂಲಕ, ಜಮ್ಮಾ ಬಾಣೆ ಜಮೀನು ಸೇರಿದಂತೆ ಒಡೆತನದ ಆಸ್ತಿಗೆ ಸಂಬಂಧಿಸಿದಂತೆ ಇಡೀ ಕುಟುಂಬದ ಹಕ್ಕುಗಳನ್ನು ಗುರುತಿಸಲು ಆರ್ಟಿಸಿಯ ಕಾಲಂ 9 ರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ನಮೂದಿಸಲಾಗುವುದು.ಅವಿಭಕ್ತ ಕುಟುಂಬದ ಭೂಮಾಲೀಕರ ಹೆಸರನ್ನು ಕಂದಾಯ ದಾಖಲೆಗಳಿಗೆ ತಿದ್ದುಪಡಿಗೆ ಅನುಗುಣವಾಗಿ ನಮೂದಿಸುವ ಪ್ರಕ್ರಿಯೆಯನ್ನು ವಿವರವಾಗಿ ತಿಳಿಸಲು ಮತ್ತು ಸ್ಪಷ್ಟತೆ ನೀಡುವ ಸುತ್ತೋಲೆ ಹೊರಡಿಸಲು ಕೊಡಗು ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚಿಸಿದೆ.
ಅವಿಭಕ್ತ ಕುಟುಂಬದ ಆಸ್ತಿಯನ್ನು ಪರಭಾರೆ ಮಾಡದಂತೆ ಕೊಡವರ ಸಾಂಪ್ರದಾಯಿಕ ಕಾನೂನು ನಿರ್ಬಂಧಿಸುತ್ತದೆ ಮತ್ತು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಕುಟುಂಬದ ಯಾವುದೇ ಸದಸ್ಯರಿಗೆ ವೈಯಕ್ತಿಕ ಹಕ್ಕು ಇಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.ಆಕ್ಷೇಪಾರ್ಹ ತಿದ್ದುಪಡಿಯ ಮೂಲಕ ರಾಜ್ಯವು ಕೊಡವರ ಸಂಸ್ಕೃತಿಯನ್ನು ತೊಡೆದುಹಾಕಿದೆ, ಆ ಮೂಲಕ ಸಂವಿಧಾನದ 51-ಎ (ಎಫ್) ಅನ್ನು ಉಲ್ಲಂಘಿಸಿದೆ ಎಂದು ಅವರು ಅರ್ಜಿದಾರರು ಪ್ರತಿಪಾದಿಸಿದ್ದರು.ಈ ತಿದ್ದುಪಡಿಯು ಹಕ್ಕಿಗೆ ಅಡ್ಡಿಪಡಿಸುತ್ತದೆ ಎಂದು ಅರ್ಜಿದಾರರು ವಾದಿಸಿದರು.
ಕೊಡವ ಕುಟುಂಬ ವ್ಯವಸ್ಥೆಯು ಭೂ ವಿಭಜನೆಯ ಅಗತ್ಯವನ್ನು ಉಂಟುಮಾಡುತ್ತದೆ, ಇದು ಅವರ ಅವಿಭಕ್ತ ಕುಟುಂಬದ ಪದ್ಧತಿಯ ಸದಸ್ಯರ ನಡುವೆ ಸಂಘರ್ಷ ಕ್ಕೆ ಕಾರಣವಾಗುತ್ತದೆ ಎಂದು ಅವರು ವಾದಿಸಿದ್ದರು.ಜಮ್ಮಾ ಬಾಣೆ ಭೂಹಿಡುವಳಿಗೆ ಸಂಬಂಧಿಸಿದ ಐತಿಹಾಸಿಕ ಸಂದರ್ಭ ಮತ್ತು ನ್ಯಾಯಾಂಗದ ಪೂರ್ವನಿದರ್ಶನಗಳನ್ನು ಪರಿಶೀಲಿಸಿದ ನ್ಯಾಯಾಲಯವು ಕೊಡವ ಕುಟುಂಬಗಳಲ್ಲಿ ಆಸ್ತಿಯನ್ನು ವಿಭಜಿಸುವ ಅಥವಾ ಮಾರಾಟದ ವಿರುದ್ಧ ಎಂದಿಗೂ ಪೂರ್ಣ ನಿಷೇಧವಿಲ್ಲ ( blanket ban) ಎಂದು ತೀರ್ಮಾನಿಸಿದೆ.
ನ್ಯಾಯಮೂರ್ತಿ ಗೋವಿಂದರಾಜ್ ಅವರು, “ಜಮ್ಮಾ ಬಾಣೆ ಭೂಮಿಯನ್ನು ಕೊಡವ ಪದ್ಧತಿಗಿಂತ ಹೆಚ್ಚಾಗಿ ಭೂ ಹಿಡುವಳಿ ಆಧರಿಸಿ ವರ್ಗೀಕರಿಸಲಾಗಿದೆ” ಎಂದು ಹೇಳಿದರು.ಕೇವಲ ಪದ್ಧತಿಗಳು ಅಥವಾ ಸಂಪ್ರದಾಯಗಳನ್ನು ಉಲ್ಲಂಘಿಸುವ, ಬಾಲ್ಯವಿವಾಹ ಮತ್ತು ವರದಕ್ಷಿಣೆಯ ಮೇಲಿನ ಕಾನೂನುಗಳನ್ನು ಪೂರ್ವನಿದರ್ಶನಗಳಾಗಿ ಉಲ್ಲೇಖಿಸುವ ಆಧಾರದ ಮೇಲೆ ಪ್ರಶ್ನೆಯಲ್ಲಿರುವಂತಹ ಶಾಸನಬದ್ಧ ತಿದ್ದುಪಡಿಗಳನ್ನು ಪ್ರಶ್ನಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಪ್ರತಿಪಾದಿಸಿತು.
ಜಮ್ಮಾ ಬಾಣೆ ಭೂಮಿಗೆ ಸಕ್ರಮೀಕರಣ ಅಥವಾ ಸ್ವಾಧೀನ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಲು ಕೊಡವರಿಗೆ ಅವಕಾಶ ನೀಡುವ ಮೂಲಕ ತಿದ್ದುಪಡಿಯು ಸಮಾನತೆಯನ್ನು ತರುತ್ತದೆ ಎಂದು ತೀರ್ಪು ಎತ್ತಿ ತೋರಿಸಿದೆ, ಈ ಹಿಂದೆ ಕೊಡವರಿಗೆ ಈ ಹಕ್ಕು ಲಭ್ಯವಿರಲಿಲ್ಲ . ಈ ಹೊಸ ನಿಬಂಧನೆಯು ರಾಜ್ಯದ ಇತರ ಭೂ ಒತ್ತುವರಿದಾರರಿಗೆ ಹೋಲಿಸಿದರೆ ಕೊಡವರು ಎದುರಿಸುತ್ತಿರುವ ಅಸಮಾನತೆಯನ್ನು ಸರಿಪಡಿಸುತ್ತದೆ.
ಈ ತಿದ್ದುಪಡಿಯು ಕೊಡವ ಕುಟುಂಬದ ಸದಸ್ಯರಲ್ಲಿ ಭೂ ವಿಭಜನೆಯನ್ನು ಕಡ್ಡಾಯಗೊಳಿಸದಿದ್ದರೂ, ಇಡೀ ಕುಟುಂಬವನ್ನು ಭೂ ದಾಖಲೆಗಳಲ್ಲಿ ಹಕ್ಕುದಾರರೆಂದು ನಮೂದಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ,ಈ ಬದಲಾವಣೆಯು ಈ ಹಿಂದೆ ಸರ್ಕಾರದ ನಿಯಂತ್ರಣದಲ್ಲಿದ್ದ ಮರ ಮತ್ತು ಅರಣ್ಯ ಸಂಬಂಧಿತ ಸಂಪನ್ಮೂಲಗಳನ್ನು ಒಳಗೊಂಡಂತೆ ಈಗ ಕೊಡವ ಕುಟುಂಬಗಳು ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ಖಚಿತಪಡಿಸುತ್ತದೆ.




