ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಹಗರಣದಲ್ಲಿ ಸಿಲುಕಿ ಬಳಲುತ್ತಿದ್ದು ಬಿಜೆಪಿ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಬಿಜೆಪಿ ಸರ್ಕಾರದ ವಿರುದ್ಧ 22 ಹಗರಣವನ್ನು ಪಟ್ಟಿ ಸಮೇತ ಸದನದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಸಂಜೆ 4 ಗಂಟೆಗೆ ತುರ್ತು ಸುದ್ದಿಗೋಷ್ಟಿ ನಡೆಸಿ ವಾಲ್ಮೀಕಿ ಹಗರಣಕ್ಕೆ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ವಾಲ್ಮೀಕಿ ಹಗರಣಕ್ಕೆ ನಿಗಮದ ಅಧ್ಯಕ್ಷರು, ಸಚಿವರು ಹೊಣೆಗಾರರಲ್ಲ. ಎಂಡಿ ಪದ್ಮನಾಭ ಹಗರಣದ ಹೊಣೆಗಾರ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ 33 ಲಕ್ಷ ಹಣ ಇತ್ತು. MG ರಸ್ತೆಯ ಬ್ರಾಂಚ್ನ ಮೂವರು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಣ ವರ್ಗಾವಣೆ ಯಾಕೆ ಆಯ್ತು..? ಅನ್ನೋದು ಗೊತ್ತಾಗಬೇಕಿದೆ. ಸುಮಾರು 18 ಅಕೌಂಟ್ಗಳಿಗೆ ಹಣ ಹೋಗಿದೆ. ಅಕೌಂಟ್ ಸೂಪರಿಂಟೆಂಡೆಂಟ್ ಆಗಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಗಮನಕ್ಕೆ ವಿಚಾರ ಬರುತ್ತಿದ್ದಂತೆ SIT ರಚನೆ ಮಾಡಿ ಆದೇಶ ಮಾಡಿದ್ದೇವೆ ಎಂದಿದ್ದಾರೆ. ಬಿಜೆಪಿ ವಿರುದ್ಧದ ಹಗರಣಗಳ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್ 22 ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.
- 2020-2021 ರಲ್ಲಿ APMC ಹಗರಣ ನಡೆದಿದೆ. ಸಿಎಂ ಆಗಿ ಯಡಿಯೂರಪ್ಪ ಇದ್ದರೆ ಸಚಿವರಾಗಿ ಬಸವರಾಜ ಬೊಮ್ಮಾಯಿ ಇದ್ದರು. ಹಗರಣದ ಮೊತ್ತ ಬರೋಬ್ಬರಿ ₹47.16 ಕೋಟಿ ರೂಪಾಯಿ ಎಂದಿದ್ದಾರೆ.
- 2021-2022ರಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲೂ ಹಗರಣ ನಡೆದಿದ್ದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರು, ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದರು, ಒಟ್ಟು ₹87 ಕೋಟಿಗೂ ಹೆಚ್ಚು ಹಣ ಹಗರಣ ಆಗಿದೆ
- 2022-2023 ರಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ನಲ್ಲಿ ಹಗರಣ ನಡೆದಿದ್ದು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಬಿ. ಶ್ರೀರಾಮುಲು ಸಚಿವರಾಗಿದ್ದರು. ಹಗರಣದ ಮೊತ್ತ ಬರೋಬ್ಬರಿ ₹50 ಕೋಟಿಗೂ ಹೆಚ್ಚು.
- 2021-2022ರಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಸಿಎಂ ಆಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಇದ್ದರು. ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಇದ್ದರು. ಹಗರಣದ ಮೊತ್ತ ಬರೋಬ್ಬರಿ ₹430 ಕೋಟಿಗೂ ಹೆಚ್ಚು ಎಂದು ಉಲ್ಲೇಖಿಸಲಾಗಿದೆ.
- 2021-2022 ರಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಹಗರಣ ನಡೆದಿದ್ದು, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಸಚಿವರಾಗಿ ಸಿ ಪಿ ಯೋಗೇಶ್ವರ್ ಇದ್ದರು. ಹಗರಣದ ಮೊತ್ತ ₹2.47 ಕೋಟಿ ರೂಪಾಯಿ ಆಗಿದೆ.
- 2019-2023ರ ಅವಧಿಯಲ್ಲಿ ಕಿಯೊನಿಕ್ಸ್ ಹಗರಣ ನಡೆದಿದ್ದು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಿಎಂ ಆಗಿದ್ದರು. ಡಾ. ಅಶ್ವತ್ಥನಾರಾಯಣ ಸಚಿವರಾಗಿದ್ದರು. ಹಗರಣದ ಮೊತ್ತ ಸುಮಾರು ₹500 ಕೋಟಿ ರೂಪಾಯಿ ಎಂದಿದ್ದಾರೆ.
- 2019-2023ರ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದ್ದು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಸಚಿವರಾಗಿ ಡಾ. ಕೆ ಸುಧಾಕರ್, ಬಿ. ಶ್ರೀರಾಮುಲು ಇದ್ದರು. ಹಗರಣದ ಮೊತ್ತ 40 ಸಾವಿರ ಕೋಟಿಗೂ ಹೆಚ್ಚು ಎನ್ನಲಾಗಿದೆ.
- ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ 2019-2023 ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದಿರುವುದು ₹2 ಸಾವಿರ ಕೋಟಿಗೂ ಹೆಚ್ಚು ಎಂದು ದಾಳಿ ಮಾಡಿದೆ.
- PSI ಮತ್ತು ಇತರೆ ನೇಮಕಾತಿ ಹಗರಣ 2019-2023 ರ ನಡುವೆ ನಡೆದಿದ್ದು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದರು. ಹಗರಣದ ಮೊತ್ತ ನೂರಾರು ಕೋಟಿ ಆಗಿದೆ
- ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಗರಣ 2022-2023ರ ಅವಧಿಯಲ್ಲಿ ನಡೆದಿದ್ದು, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಸಚಿವರಾಗಿ ವಿ. ಸುನಿಲ್ ಕುಮಾರ್ ಇದ್ದರು. ಹಗರಣದ ಮೊತ್ತ ₹11 ಕೋಟಿಗೂ ಹೆಚ್ಚು
- ಬಿಟ್ ಕಾಯಿನ್ ಹಗರಣ 2021-2023 ರ ಅವಧಿಯಲ್ಲಿ ಪತ್ತೆಯಾಗಿತ್ತು. ಸಿಎಂ ಆಗಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇದ್ದರು. ಹಗರಣದ ಮೊತ್ತ ಸಾವಿರಾರು ಕೋಟಿ
- ಯಡಿಯೂರಪ್ಪ ಅಕ್ರಮ ಆಸ್ತಿ 2021 ರಲ್ಲಿ ₹750 ಕೋಟಿ
- B.S ಯಡಿಯೂರಪ್ಪ ಹಾಗು ವಿಜಯೇಂದ್ರ ಅಕ್ರಮ ಆಸ್ತಿ ನೂರಾರು ಕೋಟಿ
- 2021ರಲ್ಲಿ B.S ಯಡಿಯೂರಪ್ಪ ವಿರುದ್ಧ ದೂರು
- 2019-2021ರಲ್ಲಿ ಅಬಕಾರಿ ಅಕ್ರಮ ನಡೆದಿದ್ದು, ಸಿಎಂ ಆಗಿ ಯಡಿಯೂರಪ್ಪ ಇದ್ದರು. ಸಚಿವರಾಗಿ ಹೆಚ್. ನಾಗೇಶ್ ಕೆಲಸ ಮಾಡಿದ್ರು. ಹಗರಣದ ಮೊತ್ತ ನೂರಾರು ಕೋಟಿ
- KKRDB ಹಗರಣ 2019-2023 ರ ನಡುವೆ ನಡೆದಿದ್ದು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಸಚಿವರಾಗಿ ಮುನಿರತ್ನ ಇದ್ದು, ಹಗರಣದ ಮೊತ್ತ 200 ಕೋಟಿಗೂ ಹೆಚ್ಚು.
- ಕಂದಾಯ ಇಲಾಖೆಯಲ್ಲಿ 2019-2023 ರ ಅವಧಿಯಲ್ಲಿ ಅಕ್ರಮ ನಡೆದಿದ್ದು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಸಚಿವರಾಗಿ ಆರ್. ಅಶೋಕ್ ಇದ್ರು. ಕ್ರಿಮಿನಲ್ ಕೇಸ್ ಆದ್ದರಿಂದ ಹಗರಣದ ಮೊತ್ತದ ಬಗ್ಗೆ ಮಾಹಿತಿ ಇಲ್ಲ
- ಕೃಷಿ ಇಲಾಖೆಯಲ್ಲಿ 2021-2023ರಲ್ಲಿ ಹಗರಣ ನಡೆದಿದ್ದು, ಸಿಎಂ ಆಗಿ ಬಸವರಾಜ ಬೊಮ್ಮಾಯಿ ಇದ್ದರು. ಸಚಿವರಾಗಿ ಬಿ ಸಿ ಪಾಟೀಲ್ ಇದ್ದಾಗ ನೌಕರರೇ ಬಿ.ಸಿ ಪಾಟೀಲ್ ವಿರುದ್ಧ ಪತ್ರ ಬರೆದು ಹಗರಣ ಪ್ರಸ್ತಾಪ ಮಾಡಿದ್ದರು.
- ಅಂಗನವಾಡಿ ಮಕ್ಕಳ ಮೊಟ್ಟೆಯಲ್ಲೂ ಬಿಜೆಪಿ ಅಕ್ರಮ ಮಾಡಿದ್ದು, 2019-2021ರ ಅವಧಿಯಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ನಡೆದಿತ್ತು. ಶಶಿಕಲಾ ಜೊಲ್ಲೆ ಸಚಿವರಾಗಿದ್ದರು. ಈ ಹಗರಣ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದಿಟ್ಟಿತ್ತು.
- KIADB ಹಗರಣ 2008-2013ರ ಅವಧಿಯಲ್ಲಿ ನಡೆದಿದ್ದು ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುರುಗೇಶ್ ನಿರಾಣಿ ಭಾಗಿಯಾಗಿದ್ದರು.
- ಗಣಿ ಭೂಮಿ ಡಿ ನೋಟಿಫಿಕೇಶನ್ ಪ್ರಕರಣ 2008-2013ರ ಅವಧಿಯಲ್ಲಿ ನಡೆದಿದೆ. ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದರು. ಹಗರಣದಲ್ಲಿ ಈಗಲೂ ಬಿ.ಎಸ್ ಯಡಿಯೂರಪ್ಪಗೆ ಕಾನೂನು ಕಂಟಕ ಇದೆ.
- ರಾಘವೇಂದ್ರ ಕೊ ಆಪರೇಟಿವ್ ಬ್ಯಾಂಕ್ ಹಗರಣ 2023ರಲ್ಲಿ ನಡೆದಿದ್ದು, ಸಿಎಂ ಆಗಿ ಬಸವರಾಜ ಬೊಮ್ಮಾಯಿ ಇದ್ದರು. ಹಗರಣದ ಮೊತ್ತ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಹಾಗು ಸಚಿವರು, ಅಧ್ಯಕ್ಷರು ಭಾಗಿಯಾಗಿಲ್ಲ. ಕೇವಲ ಬ್ಯಾಂಗ್ ಅಧಿಕಾರಿಗಳು ಹಾಗು ನಿಗಮದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನುವುದು ಸರ್ಕಾರದ ವಾದ. ಇಡಿ ತನಿಖೆ ಬಳಿಕ ಸಂಪೂರ್ಣ ಮಾಹಿತಿ ಹೊರ ಬೀಳಬೇಕಿದೆ.