ಧಾರವಾಡದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದ ಪ್ರಕರಣ ಬೇಧಿಸಿದ್ದಾರೆ. ಲೋಕಸಭಾ ಚುನಾವಣೆಗೆ ಹಣದ ಹೊಳೆ ಹರಿಸಲು ಸಂಗ್ರಹ ಮಾಡಿದ್ದ ಬರೋಬ್ಬರಿ 18 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೊದಲಿಗೆ 2 ಕೋಟಿ ಹಣವನ್ನು ಸೀಜ್ ಮಾಡಿದ್ದರು. ಆ ಬಳಿಕ 18 ಕೋಟಿ ಹಣ ಪತ್ತೆಯಾಗಿದೆ. ಇದು ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ.
ಅಕ್ರಮವಾಗಿ ಮದ್ಯ ಸಂಗ್ರಹ ಮಾಡಲಾಗಿದೆ ಅನ್ನೋ ಮಾಹಿತಿ ಚುನಾವಣಾ ಅಧಿಕಾರಿಗಳಿಗೆ ಬಂದಿತ್ತು. ಆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಆ ವೇಳೆ ಮನೆಗಳಲ್ಲಿದ್ದ ಚೀಲಗಳನ್ನು ಪರಿಶೀಲನೆ ಮಾಡಿದಾಗ ಚೀಲಗಳಲ್ಲಿ ಏನೂ ಸಿಕ್ಕಿರಲಿಲ್ಲ. ಕೊನೆಗೆ ತಿಜೋರಿ ಓಪನ್ ಮಾಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. 6 ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ 20ಕ್ಕೂ ಅಧಿಕಾರಿಗಳು 18 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡದ (Dharawada) ಕುಂದಗೋಳದ ರಾಮನಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಂಗಪ್ಪ ಜಟಾದ್ ಎಂಬುವರ ಮನೆಯಲ್ಲಿ ಬರೋಬ್ಬರಿ 2 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿತ್ತು. ಈಗ 18 ಕೋಟಿ ಹಣ ಸಿಕ್ಕಿದ್ದು, ಬಸವರಾಜು (Basavaraj)ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಸವರಾಜ್ ಯು.ಬಿ ಶೆಟ್ಟಿ ಅವರ ಅಕೌಂಟೆಂಟ್ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಬೆಂಗಳೂರಿನ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ದಾಖಲೆ ನೀಡಿದ್ದಾರೆ ಎನ್ನಲಾಗ್ತಿದೆ.
ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿ ಬಸವರಾಜ್ ದತ್ತನವರ್ ಫ್ಲಾಟ್ ಇದೆ. ಫ್ಲಾಟ್ – 303ರ ಮೇಲೆ ದಾಳಿ ಮಾಡಿದಾಗ ಕಂತೆ ಕಂತೆ ಹಣಗಳ: ರಾಶಿಯೇ ಕಂಡು ಬಂದಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ. ಹಣ ಯಾರಿಗೆ ಸೇರಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸಂಗ್ರಹ ಮಾಡಿದ್ದ ಉದ್ದೇಶ ಏನು..? ಇಷ್ಟು ದೊಡ್ಡ ಮೊತ್ತ ಬಂದಿದ್ದು ಎಲ್ಲಿಂದ..? ಅನ್ನೋ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.