ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಬ್ರದರ್ಸ್ ಆರ್ಭಟ ಕಡಿಮೆ ಏನಿಲ್ಲ. ರಾಜಕೀಯ ಹಿಡಿತ ಸಾಧಿಸಿರುವ ಡಿಕೆ ಬ್ರದರ್ಸ್, ಅಲ್ಲಿನ ನಾಯಕರನ್ನೂ ಅಷ್ಟೇ ಬಿಗಿಯಾಗಿ ಇಟ್ಟುಕೊಂಡಿದ್ದಾರೆ. ಜೊತೆಗೆ ತನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನೂ ಮಾಡಿದ್ದಾರೆ. ಕಳೆದ ಬಾರಿ ಕೊರೊನಾ ಸಮಯದಲ್ಲಿ ರೈತರ ನೆರವಿಗೆ ನಿಂತಿದ್ದ ಡಿ.ಕೆ ಸುರೇಶ್, ಸಾಕಷ್ಟು ರೈತರ ತೋಟದಿಂದಲೇ ತರಕಾರಿಗಳನ್ನು ಖರೀದಿಸಿ, ಬಡವರಿಗೆ ಹಂಚಿಕೆ ಮಾಡುವ ಕೆಲಸ ಮಾಡಿದ್ದರು. ಸಾಕಷ್ಟು ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವುದು, ಕೋವಿಡ್ನಿಂದ ಸತ್ತವರ ಅಂತ್ಯಕ್ರಿಯೆ, ಹೀಗೆ ಸಾಕಷ್ಟು ವಿಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಆದರೂ ಸೋಲಿನ ಭೀತಿಯಲ್ಲಿ ಡಿಕೆ ಬಳಗ ಇದೆ.
![](https://pratidhvani.com/wp-content/uploads/2024/04/1000110242-1024x729.jpg)
ಡಿಕೆ ಬ್ರದರ್ಸ್ ಬಳಿ ಮೋದಿಗೂ ಸೋಲುಣಿಸುವ ಶಕ್ತಿ !!
ಡಿ.ಕೆ ಸುರೇಶ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಎದುರಾಳಿ ಆಗಿದ್ದರೂ ಲೆಕ್ಕವಿಡದೆ ಗೆದ್ದು ಬಿಡುವ ಹುಂಬತನವಿತ್ತು. ನರೇಗಾ ಯೋಜನೆಯಲ್ಲೂ ಸಾಕಷ್ಟು ಕೆಲಸ ಮಾಡಿಸಿರುವ ಸುರೇಶ್, ಜನರು ನನ್ನ ಕೈಹಿಡಿಯುತ್ತಾರೆ. ನಾನು ಮಾಡಿರುವ ಕೆಲಸಗಳೇ ನನಗೆ ಆಧಾರ. ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡಿದ್ದರು. ಅದು ಸತ್ಯವೂ ಆಗುತ್ತಿತ್ತು. ಆದರೆ ಇದೀಗ ಡಿ.ಕೆ ಕೋಟೆಗೆ ಲಗ್ಗೆ ಹಾಕಿರುವುದು ಹೃದ್ರೋಗ ತಜ್ಞ ಡಾ ಸಿ.ಎನ್ ಮಂಜುನಾಥ್. ಮೂಲತಃ ರಾಜಕಾರಣಿ ಅಲ್ಲದ ಡಾ ಸಿ.ಎನ್ ಮಂಜುನಾಥ್, ಡಿಕೆ ಕೋಟೆಗೆ ಬಾಂಬ್ ಇಟ್ಟಿದ್ದಾರೆ ಎನ್ನಬಹುದು. ಮಾನವೀಯತೆ ಅನ್ನೋ ಬಾಂಬ್ ಎಲ್ಲಿ ಹೇಗೆ ಸಿಡಿಯುತ್ತೆ ಅನ್ನೋದನ್ನು ಕಾಣದೆ ಡಿಕೆ ಬ್ರದರ್ಸ್ ಚಡಪಡಿಸುತ್ತಿದ್ದಾರೆ.
ಮಾನವೀಯತೆ ಪ್ರತೀಕ ಡಾ ಸಿ.ಎನ್ ಮಂಜುನಾಥ್..!
![](https://pratidhvani.com/wp-content/uploads/2024/04/1000110241-1024x744.jpg)
ಡಾ ಮಂಜುನಾಥ್ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಜಾರಿಮಾಡಿದ ಕ್ರಮಗಳು ಹಾಗು ಚಿಕಿತ್ಸೆ ವಿಚಾರದಲ್ಲಿ ಜನತೆಗೆ ಸ್ಪಂದಿಸಿದ ರೀತಿ ನೀತಿಗಳು ಜನರ ಮನಸೂರೆಗೊಂಡಿವೆ. ಡಿ.ಕೆ ಸುರೇಶ್ ಬಡವರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಹೇಳಲಾಗದು. ಆದರೆ ಅಷ್ಟೇ ಪ್ರಮಾಣದಲ್ಲಿ ಡಿ.ಕೆ ಸುರೇಶ್ ಹಾಗು ಬೆಂಬಲಿಗರಿಂದ ನೊಂದವರೂ ಇದ್ದಾರೆ. ಆದರೆ ಡಾ ಮಂಜುನಾಥ್ ವಿಚಾರದಲ್ಲಿ ನೊಂದವರು ಕಾಣಿಸುವುದಿಲ್ಲ. ಎಲ್ಲಿಯೇ ಪ್ರಚಾರಕ್ಕೆ ಹೋದರೂ ಜನರು ಯಾವಾಗಲೋ ಹೃದಯ ಸಂಬಂಧಿ ಚಿಕಿತ್ಸೆಗೆ ಬಂದಿದ್ದನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ನೀವು ನಮಗೆ ಸಹಾಯ ಮಾಡಿದ್ರಿ, ನಾವು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ಹಣಕಾಸಿನ ವಿಚಾರದಲ್ಲೂ ಸಹಕಾರ ಕೊಟ್ಟಿದ್ರಿ ಎಂದು ನೆನಪು ಮಾಡಿಕೊಳ್ತಿದ್ದಾರೆ. ಇದು ಪಕ್ಷವನ್ನೂ ಮೀರಿದ ಶಕ್ತಿ ಡಾ ಮಂಜುನಾಥ್ಗೆ ಸಿಗ್ತಿರೋದು ಡಿ.ಕೆ ಕೋಟೆ ಅಲುಗಾಡುವಂತೆ ಮಾಡಿದೆ.
ಪಕ್ಷವನ್ನು ಮೀರಿದ ಶಕ್ತಿ ಕೆಲಸ ಮಾಡುವ ಆತಂಕ..!
![](https://pratidhvani.com/wp-content/uploads/2024/04/1000110243-1024x536.jpg)
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗು ಆನೇಕಲ್ ಸೇರುತ್ತವೆ. ಈ ಮೂರೂ ಕ್ಷೇತ್ರಗಳು ನಗರ ಪ್ರದೇಶದ ಜನರು ವಾಸ ಮಾಡುವುದರಿಂದ ಬಿಜೆಪಿ ಕಡೆಗೆ ಒಲವು ಹೊಂದಿರುತ್ತಾರೆ ಎನ್ನುವುದು ದೋಸ್ತಿ ನಾಯಕರ ಲೆಕ್ಕಾಚಾರ. ಬಿಜೆಪಿಯ ಕಮಲದ ಗುರುತಿಗೆ ಮತ ನೀಡ್ತಾರೆ ಅನ್ನೋದು ನಂಬಿಕೆ. ಅದೇ ಕಾರಣಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡಿಸಿದ್ದಾರೆ. ಆದರೆಡಾ ಮಂಜುನಾಥ್ ಪರವಾಗಿ ಪಕ್ಷವನ್ನು ಮೀರಿದ ಶಕ್ತಿಯೊಂದು ಕೆಲಸ ಮಾಡುತ್ತಿದೆ. ಡಾ ಮಂಜುನಾಥ್ ಚಿಕಿತ್ಸೆ ಮೊದಲು ಬಿಲ್ ನಂತರ ಅನ್ನೋ ಘೋಷವಾಕ್ಯ ಎಷ್ಟೋ ಜನರಿಗೆ ಅನುಕೂಲಕರವಾಗಿತ್ತು. ಈ ಕೆಲಸ ಪಕ್ಷಾತೀತವಾಗಿ ಡಾ ಮಂಜುನಾಥ್ ಪರ ಮತವಾಗಿ ಬದಲಾಗುವ ಆತಂಕ ಡಿಕೆ ಬ್ರದರ್ಸ್ ಕಾಡ್ತಿದೆ. ಎಲ್ಲಿ ಹೋದರೂ ಜನರು ಚಿಕಿತ್ಸೆ ಬಗ್ಗೆ ಮೆಚ್ಚುಗೆ ಮಾತನಾಡ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಸೇರಿಕೊಂಡಿದ್ದಾರೆ ಎನ್ನುವುದು ವಿಶೇಷ. ಡಿ.ಕೆ ಸುರೇಶ್ ಜೊತೆಯಲ್ಲೇ ರಾಜಕಾರಣ ಮಾಡ್ತಿರೋ ಬೆಂಬಲಿಗರೂ ಡಾ ಮಂಜುನಾಥ್ಗೆ ಮತ ಚಲಾಯಿಸಿದರೂ ಅಚ್ಚರಿಯಿಲ್ಲ.
![](https://pratidhvani.com/wp-content/uploads/2024/04/Screenshot_2024-04-15-06-53-26-399_com.android.chrome-edit-1024x632.jpg)
ಕೃಷ್ಣಮಣಿ