ನವದೆಹಲಿ: ಕೇಂದ್ರ ಸರ್ಕಾರ(Central Government) ಹಣಕಾಸು ನೆರವು ನೀಡದ ಹಿನ್ನೆಲೆಯಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್(Indian Science Congress Association) ಪ್ರತಿವರ್ಷ ಆಯೋಜನೆ ಮಾಡುತ್ತಿದ್ದ ವಾರ್ಷಿಕ ಕಾರ್ಯಕ್ರಮ ಸ್ಥಗಿತಗೊಂಡಿದೆ.
ವಿಜ್ಞಾನ ಕಾಂಗ್ರೆಸ್ಗೆ ಬದಲಾಗಿ ಕೇಂದ್ರ ಸರ್ಕಾರವು, ವಿಜ್ಞಾನ ಭಾರತಿಯ ‘ಭಾರತೀಯ ಅಂತರಾಷ್ಟ್ರೀಯ ವಿಜ್ಞಾನ ಮೇಳ’ವನ್ನು 2015ರಿಂದ ಆಯೋಜಿಸುತ್ತಿದೆ. ಈ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿ ಸರ್ಕಾರ ಮತ್ತು ಐಎಸ್ಸಿಎ ನಡುವೆ ಕಳೆದ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯ ಇದೆ. ‘ವಿಜ್ಞಾನ ಭಾರತಿ’ಯು ಸಂಘ ಪರಿವಾರದ ಜೊತೆ ನಂಟು ಇರುವ ಸಂಸ್ಥೆಯಾಗಿದೆ. ಇದರ ವಾರ್ಷಿಕ ಸಭೆಯು ಹರಿಯಾಣದ ಫರೀದಾಬಾದ್ನಲ್ಲಿ ಈ ತಿಂಗಳು ನಡೆಯಲಿದೆ. 1914ರಿಂದ ಭಾರತೀಯ ವಿಜ್ಞಾನ ಕಾಂಗ್ರೆಸ್ನ್ನು ಆಯೋಜಿಸಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಭಾರತದ ಪ್ರಧಾನ ಮಂತ್ರಿಗಳು ವಿಜ್ಞಾನಿಗಳ ವಾರ್ಷಿಕ ಕೂಟವನ್ನು ಉದ್ಘಾಟಿಸುತ್ತಿದ್ದರು. ಈ ಸಭೆಯು ಪ್ರಧಾನಿಯವರ ವರ್ಷದ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿರುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮ ನಡೆಯುತ್ತಿಲ್ಲ.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದ 2021 ಮತ್ತು 2022ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. 108ನೇ ವಿಜ್ಞಾನ ಕಾಂಗ್ರೆಸ್ ಅನ್ನು ಕಳೆದ ವರ್ಷ ನಾಗ್ಪುರದಲ್ಲಿ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಇದನ್ನು ಉದ್ಘಾಟಿಸಿದ್ದರು. ಈ ಬಾರಿ ಜನವರಿ 3 ರಿಂದ 5ರವರೆಗೆ ಜಲಂಧರ್ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ (LPU) 109ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ್ನು (ISC) ಆಯೋಜಿಸಲು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ (ISCA) ತೀರ್ಮಾನಿಸಿತ್ತು. ಆದರೆ ಸೆಪ್ಟೆಂಬರ್ 2023ರಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ISC ಮತ್ತು ಈವೆಂಟ್ಗೆ ಯಾವುದೇ ಸರ್ಕಾರಿ ಧನಸಹಾಯ ನೀಡಲು ನಿರಾಕರಿಸುವುದರಿಂದ ಸಮ್ಮೇಳನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಸಂಘಟಕರು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ಸರ್ಕಾರದ ಅನುಮೋದನೆಯಿಲ್ಲದೆ ‘ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್’ ಏಕಪಕ್ಷೀಯವಾಗಿ ಲಕ್ನೋದಿಂದ ಜಲಂಧರ್ಗೆ ಕಾರ್ಯಕ್ರಮ ಸ್ಥಳಾಂತರಿಸಿದೆ ಎಂದು ಆರೋಪಿಸಿದೆ. ಸ್ಥಳವನ್ನು ಆಯ್ಕೆ ಮಾಡಲು ತನ್ನ ಕಾರ್ಯಕಾರಿ ಸಮಿತಿಗೆ DST ಯಿಂದ ಅನುಮತಿ ಅಗತ್ಯವಿಲ್ಲ ಎಂದು ISCA ಪ್ರತಿವಾದಿಸಿದೆ. ಆದರೆ ಸ್ಥಳವನ್ನು ಆಯ್ಕೆ ಮಾಡುವ ಸಮಯದಲ್ಲಿ ಡಿಎಸ್ಟಿ ಪ್ರತಿನಿಧಿಯೊಬ್ಬರು ಹಾಜರಿದ್ದರು ಎಂದು ಕೂಡ ಹೇಳಿದೆ.
ISCA ಆಯೋಜಿಸುವ ವಾರ್ಷಿಕ ಕಾರ್ಯಕ್ರಮವು ಈಗಾಗಲೇ ವೈಜ್ಞಾನಿಕತೆಯನ್ನು ಕಳೆದುಕೊಂಡಿದೆ ಮತ್ತು ಕಾರ್ಯಕ್ರಮದ ಆಯೋಜನೆಯಲ್ಲಿ ವೃತ್ತಿಪರ ವಿಧಾನವನ್ನು ಹೊಂದಿಲ್ಲ ಎಂದು ಆರೋಪಿಸಲಾಗಿದೆ. ಆದರೆ ವಿಜ್ಞಾನ ಕಾಂಗ್ರೆಸ್ನ ಕಾರ್ಯಚಟುವಟಿಕೆ ಕುರಿತು ಸರ್ಕಾರಕ್ಕೆ ಅಸಮಾಧಾನ ಇದ್ದಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಬಹುದಿತ್ತು. ಅದರ ಕಾರ್ಯಕ್ರಮ ನಡೆಸಲು ನಿರಾಕರಿಸಿರುವುದು ಪ್ರಶ್ನೆಗೆ ಕಾರಣವಾಗಿದೆ. ಸಾವಿರಾರು ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳಿಂದ ಅಧ್ಯಾಪಕರು ಮತ್ತು ಶಾಲಾ ಮಕ್ಕಳು ಸಾಮಾನ್ಯವಾಗಿ ISCಯ ವಾರ್ಷಿಕ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ISC ಯೊಂದಿಗೆ ನಿಕಟವಾಗಿರುವ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಅದರ ವಾರ್ಷಿಕ ಅಧಿವೇಶನಗಳ ವಿಷಯವನ್ನು ಸುಧಾರಿಸಬೇಕೆನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಕಾರ್ಯಕ್ರಮವನ್ನೇ ನಡೆಯದಂತೆ ಹುನ್ನಾರ ನಡೆಸಿರುವುದರ ಹಿಂದೆ ಸರಕಾರವನ್ನು ಟೀಕಿಸಿದ್ದಾರೆ. ISC ಗೆ ಸರ್ಕಾರದ ಹಣವನ್ನು ನಿರಾಕರಿಸುವ DST ನಿರ್ಧಾರವನ್ನು ISC ಯ ಸಮ್ಮೇಳನವನ್ನು ದುರ್ಬಲಗೊಳಿಸಲು ಸರ್ಕಾರವು ನಡೆಸಿದ ಪ್ರಯತ್ನಗಳ ಫಲಿತಾಂಶವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸ್ವದೇಶಿ ಮನೋಭಾವದೊಂದಿಗೆ ವಿಜ್ಞಾನ ಆಂದೋಲನದ ಕಾರಣ ಮುಂದಿಟ್ಟು ‘ಇಂಡಿಯಾ–ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್’ ಆಯೋಜಿಸಲಾಗುತ್ತಿದೆ. IISF ಗಾಗಿ ಸರ್ಕಾರ 20 ರಿಂದ 25 ಕೋಟಿ ರೂಪಾಯಿಗಳು ಬಜೆಟ್ನಲ್ಲಿ ನೀಡುತ್ತಿದೆ. ISC ಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ 5 ಕೋಟಿ ರೂಪಾಯಿಗಳಿಗೆ ಮಾತ್ರ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.