ವಿಶ್ವಕಪ್ ಸಮರ ಶುರುವಾಗಿದೆ. ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವಿನ ಮೂಲಕ ವಿಶ್ವಕಪ್ ಆರಂಭ ಮಾಡಿದೆ. ಅದರಲ್ಲೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ನ್ಯೂಜಿಲ್ಯಾಂಡ್ ಟೀಂ, 9 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಿವೀಸ್ ಪಡೆ, 282 ರನ್ಗಳಿಗೆ ಆಂಗ್ಲರ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. 283 ರನ್ ಟಾರ್ಗೆಟ್ ಗುರಿ ಬೆನ್ನತ್ತಿದ ಕಿವೀಸ್ ಪಡೆಗೆ ಕನ್ನಡಿಗ ನೆರವಾಗಿದ್ದಾನೆ.
ಕಿವೀಸ್ ಪಡೆ ಕಿಲಕಿಲಕ್ಕೆ ಕನ್ನಡಿಗನೇ ಕಾರಣ..
ಇಂಗ್ಲೆಂಡ್ ನೀಡಿದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪರ ಡಿವೋನಾ ಕಾನ್ವೆ ಹಾಗೂ ಆಲ್ರೌಂಡರ್ ಆಟಗಾರ ಕನ್ನಡಿಗ ರಚಿನ್ ರವೀಂದ್ರ ಅಬ್ಬರದ ಆಟ ಪ್ರದರ್ಶನ ಮಾಡಿದ್ರು. ದಾಖಲೆಯ 2ನೇ ವಿಕೆಟ್ ಜೊತೆಯಾಟ ಆಡಿದ ಉಭಯ ಆಟಗಾರರು ನ್ಯೂಜಿಲೆಂಡ್ಗೆ ಸುಲಭದಲ್ಲಿ ಜಯ ತಂದುಕೊಟ್ಟಿದ್ದಾರೆ. ಡಿವೋನಾ ಕಾನ್ವೆ ಅಜೇಯ 152 ಗಳಿಸಿದ್ರೆ ಕನ್ನಡಿಗ ರಚಿನ್ ರವೀಂದ್ರ ಅಜೇಯ 123 ರನ್ ಗಳಿಸಿದ್ರು. ಇದಕ್ಕೂ ಮೊದಲು 10 ಓವರ್ ಬೌಲಿಂಗ್ ಮಾಡಿದ್ದ ರಚಿನ್ ರವೀಂದ್ರ ಒಂದು ವಿಕೆಟ್ ಪಡೆದು 76 ರನ್ ಕೊಟ್ಟಿದ್ರು. ಬ್ಯಾಟ್ ಹಿಡಿದು ನಿಂತಾಗ ರನ್ ಹೊಡೆಸಿಕೊಂಡಿದ್ದ ಕೋಪವನ್ನೆಲ್ಲಾ ಶಮನ ಮಾಡಿಕೊಂಡ ಕನ್ನಡಿಗ ರಚಿನ್ ರವೀಂದ್ರ.
ಕನ್ನಡಿಗ ನ್ಯೂಜಿಲೆಂಡ್ ಆಟಗಾರ ಆಗಿದ್ಹೇಗೆ..?
ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸಿದ 23 ವರ್ಷದ ರಚಿನ್ ರವೀಂದ್ರ. ಕರ್ನಾಟಕ ಮೂಲದವರು. ರಚಿನ್ ತಂದೆ ರವೀಂದ್ರ ಕೃಷ್ಣಮೂರ್ತಿ 1990ರ ದಶಕದಲ್ಲಿ ನ್ಯೂಜಿಲೆಂಡ್ಗೆ ವಲಸೆ ಹೋಗಿದ್ದರು. ಕೃಷ್ಣಮೂರ್ತಿ ಅವರು ಕ್ಲಬ್ ಕ್ರಿಕೆಟಿಗರಾಗಿದ್ದರು. ರಚಿನ್ ರವೀಂದ್ರ ಅವರ ಅಜ್ಜ ಪ್ರೊಫೆಸರ್ ಆಗಿದ್ದು, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಜೀವಶಾಸ್ತ್ರ ಕಲಿಸುತ್ತಿದ್ದ ಬಾಲಕೃಷ್ಣ ಅಡಿಗ ಅವರ ಮೊಮ್ಮಗ. ನ್ಯೂಜಿಲೆಂಡ್ಗೆ ವಲಸೆ ಹೋಗಿದ್ದ ತಂದೆ, ಅಲ್ಲೇ ಕ್ರಿಕೆಟ್ ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಮಗನಿಗೆ ತನ್ನಷ್ಟಕ್ಕೆ ತಾನೇ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯುತ್ತ ಹೋಗಿತ್ತು. ಇದೀಗ ಕ್ರಿಕೆಟ್ನಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಕಮಾಲ್ ಮಾಡ್ತಿದ್ದಾರೆ.
ಕೃಷ್ಣಮಣಿ