ಚಂದ್ರಯಾನ 3 ಯೋಜನೆ ಯಶಸ್ಸಿನ ಬಳಿಕ ಮೊದಲ ಬಾರಿಗೆ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಇಲ್ಲಿಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಇಲ್ಲಿರುವ ಪೌರ್ಣಮಿ-ಭದ್ರಕಾಳಿ ದೇವಸ್ಥಾನಕ್ಕೆ ಆಗಮಿಸಿದ ಸೋಮನಾಥ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಎಸ್.ಸೋಮನಾಥ್, ಭಾರತದ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರದೃಷ್ಟಿಯಿದ್ದು, ಅದನ್ನು ನನಸಾಗಿಸಲು ಇಸ್ರೋ ಸಿದ್ಧವಾಗಿದೆ. ಭಾರತವು ಮತ್ತಷ್ಟು ಅಂತರಗ್ರಹ ಯೋಜನೆಗಳನ್ನು ನಡೆಸಲು ಸಮರ್ಥವಾಗಿದ್ದು ಬಾಹ್ಯಾಕಾಶ ಕ್ಷೇತ್ರದ ವಿಸ್ತರಣೆಯ ಮೂಲಕ ದೇಶದ ಒಟ್ಟಾರೆ ಪ್ರಗತಿಯು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಚಂದ್ರನ ಮೇಲೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸೇರಿದಂತೆ ಚಂದ್ರಯಾನ-3 ಯೋಜನೆಯು ಸಂಪೂರ್ಣ ಯಶಸ್ಸು ಕಂಡಿದೆ. ಈ ಕುರಿತು ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಸೂರ್ಯನ ಅಧ್ಯಯನದ ‘ಆದಿತ್ಯ-ಎಲ್1’ ಕುರಿತು ಮಾಹಿತಿ ನೀಡಿದ ಸೋಮನಾಥ್, ಸೆಪ್ಟೆಂಬರ್ ಮೊದಲ ವಾರದಲ್ಲಿ ಯೋಜನೆ ಕೈಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ದಿನಾಂಕ ಘೋಷಿಸುವುದಾಗಿ ಸೋಮನಾಥ್ ಹೇಳಿದರು.