• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್​ ಮ್ಯಾಸರ್​

ನಾ ದಿವಾಕರ by ನಾ ದಿವಾಕರ
May 15, 2023
in ಅಂಕಣ
0
ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್​ ಮ್ಯಾಸರ್​
Share on WhatsAppShare on FacebookShare on Telegram

ತಮ್ಮ ಪ್ರಥಮ ಸಂಕಲನದಲ್ಲೇ ಯುವ ಕವಿಯ ಮನದಾಳದ ಅಭಿವ್ಯಕ್ತಿ ಸ್ಫುಟವಾಗಿದೆ

ADVERTISEMENT

ಕವಿತೆಯೇ ಆಗಲೀ ಒಂದು ಸಣ್ಣ ಕತೆಯೇ ಆಗಲೀ , ಕಲೆ ಮತ್ತು ಸಾಹಿತ್ಯದ ಯಾವುದೇ ಅಭಿವ್ಯಕ್ತಿಯಾಗಲೀ ಶೂನ್ಯದಲ್ಲಿ ಉಗಮಿಸುವುದಿಲ್ಲ. ಕವಿ  ಅಥವಾ ಸಾಹಿತಿಯ ಅಭಿವ್ಯಕ್ತಿಯ ಕಣ್ಣೋಟ ಸುತ್ತಲಿನ ನಿರ್ವಾತಗಳನ್ನು ದಾಟಿ ಯಾರಿಗೂ ಗೋಚರಿಸದಂತಹ ಕೆಲವು ಸೂಕ್ಷ್ಮ ತಂತುಗಳನ್ನು ಹಿಡಿದಿಟ್ಟುಬಿಡುತ್ತದೆ. ಅದಕ್ಕಾಗಿಯೇ ಪಾರಂಪರಿಕವಾಗಿ ನಂಬಿಕೊಂಡು ಬಂದಂತಹ ಒಂದು ಮಾತೆಂದರೆ ಕವಿಯಾದವನು ಸಮಾಜದ ಸೂಕ್ಷ್ಮಗಳಿಗೆ ಸದಾ ಕಿವಿಯಾಗಿರಬೇಕು. ಹಾಗೆಯೇ ಯಾರಿಗೂ ಗೋಚರಿಸದ ಸಾಮಾಜಿಕ—ಸಾಂಸ್ಕೃತಿಕ ವಿದ್ಯಮಾನಗಳಿಗೆ, ನಿಕೃಷ್ಠತೆಗೆ ತಳ್ಳಲ್ಪಟ್ಟ ಅಪಾರ ಜನಸಮೂಹಗಳ ಜಟಿಲ ಸಿಕ್ಕುಗಳಿಗೆ, ಅವಕಾಶವಂಚಿತ ಸಮುದಾಯಗಳಿಗೆ ಹಾಗೂ ಈ ಜನವೃಂದದ ನೋವು-ಸಂಕಟ ಹಾಗೂ ಸಂವೇದನೆಗಳಿಗೆ ಕಣ್ಣಾಗಿರುವುದೂ ಸಾಹಿತ್ಯಕ ಅಭಿವ್ಯಕ್ತಿಯ ಒಂದು ಮಾನದಂಡ. ಇದು ಸಾಧ್ಯವಾಗದೆ ಹೋದರೆ ನಾವು ಅಕ್ಷರಗಳಲ್ಲಿ ಮೂಡಿಸುವ ಲೋಕಾಭಿರಾಮ ನುಡಿಗಳೆಲ್ಲವೂ ಕೇವಲ ಹಾಳೆಗಳನ್ನು ಅಲಂಕರಿಸುವ ರಂಗೋಲಿಗಳಂತೆ ಕಾಣುತ್ತವೆ.

ಈ ರಂಗೋಲಿಯ ಗೆರೆಗಳ ಸಹವಾಸವೇ ನನಗೆ ಬೇಡ ಎಂಬ ಛಲದೊಂದಿಗೆ ಎಳೆಯ ವಯಸ್ಸಿನಲ್ಲೇ ಸಮಾಜದ ಅಷ್ಟ ದಿಕ್ಕುಗಳಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ, ತಾರತಮ್ಯ ಮತ್ತು ಅಮಾನುಷ ವರ್ತನೆಗಳತ್ತ ದೃಷ್ಟಿ ನೆಡುತ್ತಾ ತಮ್ಮ ಮನದಾಳದ ಆಕ್ರೋಶ, ಹತಾಶೆ ಮತ್ತು ನೋವು ತುಂಬಿದ ಅಂತರಾಳದ ಧ್ವನಿಯನ್ನು ಅಕ್ಷರಗಳಾಗಿ ಪರಿವರ್ತಿಸುವ ಒಬ್ಬ ಯುವ ಕವಿ ನಮ್ಮ ನಡುವೆ ಇರುವುದು ಹೆಮ್ಮೆಯ  ವಿಚಾರವೇ. ಅವರೇ ಆತ್ಮೀಯ ಗೆಳೆಯ ವಿಶಾಲ್‌ ಮ್ಯಾಸರ್.‌ ಸಾಹಿತ್ಯ ವಿದ್ಯಾರ್ಥಿಯಾದವನಿಗೆ ಮಾರ್ಗದರ್ಶಕರು ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾದದ್ದು, ಹಿರಿಯರು ಅಥವಾ ಅನುಭವಿಗಳು ಸೂಚಿಸುವ ಲೋಪಗಳನ್ನು ಸರಿಪಡಿಸಿಕೊಳ್ಳುವ ವ್ಯವಧಾನ ಮತ್ತು ವಿಶಾಲ ಮನೋಭಾವ. ತಮ್ಮ ಹೆಸರಿನಲ್ಲೇ ಇರುವ ʼವಿಶಾಲʼ ಗುಣವನ್ನು ರೂಢಿಗತಮಾಡಿಕೊಂಡಿರುವುದರಿಂದಲೇ ಯುವ ಕವಿ ಮ್ಯಾಸರ್‌ ತಮ್ಮ ಅಕ್ಷರ ಕೃಷಿಯನ್ನು ತಿದ್ದಿ ತೀಡಿ ಮೊನಚುಗೊಳಿಸುತ್ತಾ ಬಂದಿದ್ದಾರೆ. ಈ ಮೊನಚು ಅವರ “ಬಟ್ಟೆಗಂಟಿದ ಬೆಂಕಿ” ಕವನ ಸಂಕಲನದಲ್ಲಿ ನೇರವಾಗಿಯೇ ಓದುಗರನ್ನು, ಸಮಾಜವನ್ನು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಇರಿಯುತ್ತದೆ.

ಸಹಜವಾಗಿಯೇ ಸಮಕಾಲೀನ ಸಮಾಜದ ಹಾಗೂ ವರ್ತಮಾನದ ಸಾಂಸ್ಕೃತಿಕ ಸಿಕ್ಕುಗಳ ನಡುವಿನ ತಲ್ಲಣಗಳು ಕವಿ ವಿಶಾಲ್‌ ಅವರ ಮನಸ್ಸನ್ನು ನಾಟಿದೆ. ಬಹುತೇಕ ಕವಿತೆಗಳಲ್ಲಿ ಅವರ ಮನಸ್ಸನ್ನು ತಟ್ಟಿದ, ಎದೆಗೆ ನಾಟಿದ ತೀಕ್ಷ್ಣ ವಿಚಾರಗಳೇ ಪ್ರಧಾನ ವಸ್ತುವಾಗಿರುವುದು ಇದನ್ನೇ ಸೂಚಿಸುತ್ತದೆ. ಕನ್ನಡದ ಕಾವ್ಯ ಪರಂಪರೆ ಒಂದು ಮನ್ವಂತರದ ಹಾದಿಯಲ್ಲಿ ಸಾಗುತ್ತಿರುವಾಗ ಛಂದಸ್ಸು, ಪ್ರಾಸ ಮತ್ತು ಗೂಡಾರ್ಥಗಳ ಪ್ರಭಾವಳಿಯಿಂದ ಮುಕ್ತವಾಗುತ್ತಿರುವ ಸಂದರ್ಭದಲ್ಲಿ ವಿಶಾಲ್‌ ಮ್ಯಾಸರ್‌ ಅವರ “ಬಟ್ಟೆಗಂಟಿದ ಬೆಂಕಿ” ಹೊಸ ಕಾವ್ಯ ಭಾಷೆಗೆ ಪೂರಕವಾದ ಒಂದು ಸಾಹಿತ್ಯಕ ಅಭಿವ್ಯಕ್ತಿಯನ್ನು ಕಟ್ಟಿಕೊಡುತ್ತದೆ.

ಬದಲಾಗುತ್ತಿರುವ ಭಾರತದಲ್ಲಿ ಎಲ್ಲವೂ ಢಾಳಾಗಿ ಗೋಚರಿಸುತ್ತಿದೆ. ಇಡೀ ಜಗತ್ತನ್ನೇ ಅಂಗೈ ಅಗಲದ ಮೊಬೈಲ್‌ನಲ್ಲಿ ನೋಡುವ ಅವಕಾಶ ಜನಕೋಟಿಗೆ ಲಭಿಸಿದೆ. ಆದರೂ ನಮ್ಮೊಳಗಿಂದ ಏನೋ ಕಾಣೆಯಾಗಿದೆ ಎನ್ನುವ ಭಾವ ಪ್ರಜ್ಞಾವಂತರನ್ನು ಸೂಕ್ಷ್ಮ ಮನಸುಗಳನ್ನು ಕಾಡುತ್ತಲೇ ಇರುತ್ತದೆ. ಬಟ್ಟೆಗೆ ಬೆಂಕಿ ಅಂಟಿಸುವ ಕವಿ ವಿಶಾಲ್‌ಗೆ ಈ ಕಾಣೆಯಾಗಿರುವುದನ್ನು ಹುಡುಕುವ ತವಕ  ಇರುವುದನ್ನು “ ಕಾಣೆಯಾಗಿದ್ದಾರೆ ಹೇಳಿಬಿಡು ” ಕವಿತೆಯ ಕೊನೆಯ ಸಾಲುಗಳಲ್ಲಿ ಕಾಣಬಹುದು :

“ ಆದರೆ ಕಟ್ಟರ್‌ ಮಾನವೀಯತೆ ಉಳ್ಳವರು

ಎಲ್ಲಾದರೂ ಕಂಡರೆ ಹೇಳಿಬಿಡು ”

ಇಡೀ ಸಂಕಲನದ ಮೂಲ ಸ್ಥಾಯಿಭಾವವನ್ನು ಆರಂಭಿಕ ಪದ್ಯದಿಂದಲೇ ಗುರುತಿಸಿಬಿಡಬಹುದು.  ಕವಿ ವಿಶಾಲ್‌ ಏನನ್ನೋ ಹುಡುಕುತ್ತಲೇ ಇದ್ದಾರೆ.  ಇಡೀ ಸಮಾಜವನ್ನು ಒಂದು ಜಾತ್ರೆಯ ರೂಪಕದ ಮೂಲಕ ನೋಡುವ ಕವಿ “ ಹಿಂದಣ ನದಿಯ ನಾಡಲ್ಲಿ ” ಎಂಬ ಕವಿತೆಯಲ್ಲಿ ಮತ್ತೊಮ್ಮೆ ಮನುಜ ಸಂವೇದನೆಯನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಆಳುವ ವರ್ಗಗಳ ದರ್ಪ ದಬ್ಬಾಳಿಕೆ ಮತ್ತು ಶೋಷಕ ಸಮಾಜದ ಎಲ್ಲ ಮಜಲುಗಳನ್ನೂ ಈ ಕವಿತೆ ಒಮ್ಮೆಲೆ ಹೊರಗೆಡಹಿಬಿಡುತ್ತದೆ.

ಅಭಿವೃದ್ಧಿಯ ಶಿಖರದ ಮೇಲೆ ನಿಂತರೂ ಢಾಳಾಗಿ ಕಾಣುವಂತಹ ಅತೀವ ಶೋಷಣೆ ಎದುರಿಸುತ್ತಿರುವ ಆದಿವಾಸಿಗಳನ್ನು, ಈ ದೇಶದ ಮೂಲ ನಿವಾಸಿಗಳನ್ನು ದೇಶಕಟ್ಟಲು ಕರೆಯುವ                           “ಕೂಗಿ ಹೇಳಿ ” ಕವಿತೆಯ ಬೆನ್ನಲ್ಲೇ ದೇಶವನ್ನು ಕಾಡುತ್ತಿರುವ ಸಾಂಸ್ಕೃತಿಕ ತಲ್ಲಣಗಳಿಗೆ ಅಂತಿಮವಾಗಿ ಸಾಂತ್ವನ ದೊರೆಯುವುದು ಬುದ್ಧಪ್ರಜ್ಞೆಯಲ್ಲೇ ಎನ್ನುವ ಇಂಗಿತವನ್ನೂ ಕವಿ ವಿಶಾಲ್‌ “ನಗುವನು ಬುದ್ಧ” ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ.

“ ನಗುವನು ಬುದ್ಧ ಇಷ್ಟರಲ್ಲಿಯೇ ಎಂಬ ನಿರೀಕ್ಷೆಯಲ್ಲಿ

ನಾವು ನಮ್ಮವರು ಕಾದು ಕುಂತಿದ್ದೇವೆ ”

ಈ ಸಾಲುಗಳು ಭಾರತದ ಶೋಷಿತ ಜನಸಮುದಾಯಗಳ ಹಪಹಪಿಯನ್ನು, ಆತಂಕವನ್ನೂ ನಮ್ಮ ಮುಂದಿಡುತ್ತವೆ.

“ಭಗತ್‌ ನೀನಿದ್ದರೆ ಬೇಸಿತ್ತು” ಕವಿತೆ ವರ್ತಮಾನದ ಯುವ ಸಮೂಹಕ್ಕೆ ಅತ್ಯಗತ್ಯವಾಗಿ ಬೇಕಾದ ಭಗತ್‌ ಸಿಂಗ್‌ನ ಕ್ರಾಂತಿಕಾರಕ ಒಳನೋಟವನ್ನು ತೆರೆದಿಡುವಲ್ಲಿ ಕೊಂಚ ಮಟ್ಟಿಗೆ ಸಫಲವಾದರೂ, ಭೇಷ್‌ ಇತ್ತು ಎಂಬ ಪದ ಕೂಡುಪದವಾಗಿ ಬೇಸಿತ್ತು ಆಗಿರುವುದು ಹೊಸ ಪದಪ್ರಯೋಗವೇನೋ ಎನಿಸುತ್ತದೆ. ಹಾಗೆಯೇ ಇದೇ ಕವಿತೆಯ ಕೆಲವು ಸಾಲುಗಳು :

 “ ಸ್ವಾತಂತ್ರ್ಯದ ಹೂವು ಅರಳಿಸಲು

ಬಾಂಬುಗಳನೇ ಬಿತ್ತೋಣ ಎಂದವನು ನೀನು ,,, “

ಬಹುಶಃ ಅರ್ಧಸತ್ಯ ಎನಿಸುತ್ತದೆ. ಏಕೆಂದರೆ ಭಗತ್‌ ಸಿಂಗ್‌ನ ಕ್ರಾಂತಿಕಾರಕ ಚಿಂತನೆಗಳು ಬಾಂಬುಗಳನ್ನು ಅವಲಂಬಿಸಿರಲಿಲ್ಲ. ಬಾಂಬ್‌ ಎಸೆದ ಘಟನೆಯ ಹಿಂದೆ ಬೇರೆಯೇ ಚಾರಿತ್ರಿಕ ಹಿನ್ನೋಟ ಇರಬೇಕಾದ್ದು ಅಗತ್ಯ. ಭಗತ್‌ ಸಿಂಗ್‌ ಹಿಂಸಾವಾದಿ ಆಗಿರಲಿಲ್ಲ ಎನ್ನಲು ಅವರ ಯುದ್ಧವಿರೋಧಿ ಧೋರಣೆಯೇ ಸಾಕ್ಷಿ. ಕವಿ ವಿಶಾಲ್‌ ಮ್ಯಾಸರ್‌ ಇದೇ ಯುದ್ಧವಿರೋಧಿ ಧೋರಣೆಯಲ್ಲೇ ರಚಿಸಿರುವ  “ಯುದ್ಧವೆಂದರೆ ಹೀಗೆ” ಬಹುಶಃ ಭಗತ್‌ ಸಿಂಗ್‌ನ ಚಿಂತನೆಗಳಿಗೆ ನಿಕಟವಾಗಿದೆ ಎನಿಸುತ್ತದೆ.

ವಯೋ ಸಹಜ ಪ್ರವೃತ್ತಿಯಾಗಿ ಕವಿ ವಿಶಾಲ್‌ ಮ್ಯಾಸರ್‌ ಅವರ ಕಾವ್ಯಕುಂಚದಲ್ಲಿ ಪ್ರೀತಿ, ಪ್ರೇಮಗಳ ಹೊಯ್ದಾಟವೂ ಕಲಾತ್ಮಕವಾಗಿ ಮೂಡಿಬಂದಿದೆ. ಇದು ಸಹಜವೂ ಹೌದು. ಏಕಾಂತದಲ್ಲಿರುವಾಗ ಕವಿ ಮನಸ್ಸಿಗೆ ಸುತ್ತಲಿನ ಸಮಾಜದ ಜಂಜಾಟಗಳಿಂದ ದೂರ ಇರಬೇಕೆನಿಸಿದಾಗ, ಈ ಭಾವಾಭಿವ್ಯಕ್ತಿಗಳು ಉದ್ಧೀಪನಗೊಳ್ಳುತ್ತವೆ. ವಿಶಾಲ್‌ ಮ್ಯಾಸರ್‌ ಅಂತಹ ಕೆಲವು ಕವಿತೆಗಳನ್ನೂ ರಚಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದಾಗ ಯುವ ಕವಿ ವಿಶಾಲ ಮ್ಯಾಸರ್‌ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿರುವ ಪ್ರತಿಭಾವಂತ ಕವಿಯಾಗಿ ಕಾಣುತ್ತಾರೆ. ಕಾವ್ಯ, ಕಲೆ ಮತ್ತು ಸಾಹಿತ್ಯ ಇವೆಲ್ಲವೂ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಅಭಿವ್ಯಕ್ತಿ ಮಾಧ್ಯಮಗಳು. ವಯಸ್ಸು, ಅಂತಸ್ತು ಮತ್ತು ವೃತ್ತಿಪರ ಸ್ಥಾನಮಾನಗಳ ಎಲ್ಲೆಗಳನ್ನು ದಾಟಿ ನಡೆಯುವ ಈ ಅಭಿವ್ಯಕ್ತಿಗಳು ಅಕ್ಷರ ರೂಪ ಪಡೆಯುವಾಗ ಕತೆಯಾಗಿಯೋ, ಕಾವ್ಯವಾಗಿಯೋ, ಪದ್ಯವಾಗಿಯೋ, ಗಪದ್ಯವಾಗಿಯೋ ಹೊರಹೊಮ್ಮುತ್ತದೆ. ವರ್ತಮಾನದ ಸಂದಿಗ್ಧತೆಯ ನಡುವೆ ಇಂತಹ ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿಗಳು ಯಾವುದೆ ರೂಪದಲ್ಲಿ ಹೊರಹೊಮ್ಮಿದರೂ ಸ್ವಾಗತಿಸಬೇಕಾದ್ದೇ. ವಿಮರ್ಶೆ ಎಂಬ ಪಾರಂಪರಿಕ ಅರ್ಥದ ನೆಲೆಯಲ್ಲಿ ನಿಂತು ನೋಡುವುದಕ್ಕಿಂತಲೂ, ಸಮಕಾಲೀನ ಸಂದರ್ಭದ ಅವಶ್ಯಕತೆಗಳ ನೆಲೆಯಲ್ಲಿ ನಿಂತು ನೋಡಿದಾಗ ವಿಶಾಲ್‌ ಮ್ಯಾಸರ್‌ ಅವರ “ ಬಟ್ಟೆಗಂಟಿದ ಬೆಂಕಿ ” ಒಂದು ಉತ್ತಮ ಪ್ರಯತ್ನ ಮತ್ತು ಸಾಧನೆ ಎನಿಸುವುದು ಸಹಜ.ಕವಿ ವಿಶಾಲ್‌ ಮ್ಯಾಸರ್‌ ಕಾವ್ಯಾತ್ಮಕವಾಗಿ ಇನ್ನೂ ಆಳಕ್ಕೆ ಇಳಿದು, ಕಾವ್ಯಾಧ್ಯಯನದಲ್ಲಿ ತೊಡಗಿ ಮತ್ತಷ್ಟು ಸಮಾಜಮುಖಿ ಸಂವೇದನಾಶೀಲ ಕವಿತೆಗಳನ್ನು ಕನ್ನಡದ ಸಾರಸ್ವತ ಲೋಕಕ್ಕೆ ಅರ್ಪಿಸುವಂತಾಗಲಿ ಎಂದು ಹಾರೈಸುತ್ತಾ, ಯುವ ಕವಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

Tags: FreedomNya DiwakarPoet ManadalaYoung Poet
Previous Post

ನಿಖಿಲ್‌ ಸೋಲಿಗೆ ಯಾರು ಕಾರಣ? ಮಗನ ರಾಜಕೀಯ ಭವಿಷ್ಯಕ್ಕೆ ತಾಯಿ ಕೊಳ್ಳಿ.!

Next Post

ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

June 26, 2025
Next Post
ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada