ಹಾಸನ : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕವೇನೋ ಫಿಕ್ಸ್ ಆಗಿದೆ. ಆದರೆ ರಾಜಕೀಯ ಪಕ್ಷಗಳಿಗೆ ಇನ್ನು ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸೋದು ಎಂಬ ಗೊಂದಲ ಮಾತ್ರ ಬಗೆಹರಿಯುವಂತೆ ಕಾಣುತ್ತಿಲ್ಲ. ಜೆಡಿಎಸ್ ಪಕ್ಷಕ್ಕೆ ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಈಗಿರುವ ಸವಾಲುಗಳು ಸಾಲದು ಎಂಬಂತೆ ಇದೀಗ ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಎದುರಾಗಿದೆ.
ಹಾಸನದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ಕೋಡೋದಿಲ್ಲ ಹಾಗೂ ಕೆ.ಎಂ ರಾಜೇಗೌಡರಿಗೂ ಚುನಾವಣೆಗೆ ಸ್ಪರ್ಧಿಸಲು ಈ ಬಾರಿ ಅವಕಾಶವಿಲ್ಲ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಡಾಖಂಡಿತವಾಗಿ ಹೇಳಿದ್ದಾರೆ. ಈ ಬೆನ್ನಲ್ಲೇ ಇದೀಗ ಸಹೋದರನಿಗೆ ಠಕ್ಕರ್ ಕೊಡೋಕೆ ಹೆಚ್ಡಿ ರೇವಣ್ಣ ಭರ್ಜರಿ ಪ್ಲಾನ್ ಮಾಡಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಹೆಚ್.ಡಿ ರೇವಣ್ಣ ಹೊಸ ಅಭ್ಯರ್ಥಿಯ ಹೆಸರನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಹೆಚ್.ಕೆ ಮಹೇಶ್ಗೆ ರೇವಣ್ಣ ಇದೀಗ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಹೇಗಾದರೂ ಮಾಡಿ ಸ್ವರೂಪ್ಗೆ ಜೆಡಿಎಸ್ ಟಿಕೆಟ್ ತಪ್ಪಿಸಬೇಕೆಂದು ರೇವಣ್ಣ ಈ ರಣತಂತ್ರ ಹೂಡಿದ್ದಾರೆ.
ಹೆಚ್. ಕೆ ಮಹೇಶ್ ಈ ಹಿಂದೆ ಕೇವಲ 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಎರಡು ಬಾರಿ ಸೋತಿರುವ ಸಿಂಪತಿ ಕೂಡ ಈ ಬಾರಿ ವರ್ಕೌಟ್ ಆಗಬಹುದು. ಅಲ್ಲದೇ ಹಾಲಿ ಶಾಸಕ ಪ್ರೀತಂ ಗೌಡ ವಿರುದ್ಧ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದಂತೆ ಆಗುತ್ತದೆ . ಅಲ್ಲದೇ ತಮ್ಮನ್ನು ಎದುರು ಹಾಕಿಕೊಂಡು ಟಿಕೆಟ್ಗೆ ಲಾಬಿ ನಡೆಸುತ್ತಿರುವ ಸ್ವರೂಪ್ಗೆ ತಕ್ಕ ಪಾಠ ಕಲಿಸಿದಂತೆಯೂ ಆಗುತ್ತೆ ಅನ್ನೋದು ರೇವಣ್ಣ ಕುಟುಂಬದ ಲೆಕ್ಕಾಚಾರವಾಗಿದೆ .