ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡಿದ್ರೆ ದೇಶವಿರೋಧಿಗಳು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದರೆ ಹಿಂದೂ ವಿರೋಧಿಗಳು ಎನ್ನುವ ಕಲ್ಪನೆ ಸೃಷ್ಟಿಸಲಾಗಿದೆ. ಇನ್ನೂ ಕೆಲವೊಮ್ಮೆ ಕರ್ನಾಟಕಕ್ಕೆ ಹೋಲಿಕೆ ಮಾಡಿದಾಗ ಮೀನು ಸಾರು ತಿಂದು ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋದರೆ ದೊಡ್ಡ ಮಟ್ಟದ ಚರ್ಚೆ ಮಾಡಲಾಗುತ್ತದೆ. ನಾನು ಮೀನು ತಿಂದಿಲ್ಲ ಎಂದರೂ ಯಾರೂ ಕೇಳಿಸಿಕೊಳ್ಳುವ ವ್ಯವದಾನ ತೋರುವುದಿಲ್ಲ. ಆದರೆ ಅದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಂಸದ ಅಡುಗೆ ಊಟ ಮಾಡಿ, ದೇವರ ಗರ್ಭ ಗುಡಿಯ ಮುಂದೆಯೇ ನಿಂತಿರುವ ವೀಡಿಯೋ ಇದ್ದರೂ ಮಾಧ್ಯಮಗಳಲ್ಲಿ ಸುದ್ದಿ ಅಷ್ಟಕಷ್ಟೆ. ನಾನು ಗೇಟ್ನಲ್ಲೇ ಕೈಮುಗಿದು ಬಂದೆ ಎನ್ನುವ ಸುಳ್ಳು ಹೇಳಿಕೆಗಳನ್ನೇ ಪ್ರಸಾರ ಮಾಡಿ ಅದೇನು ದೊಡ್ಡ ವಿಚಾರ ಅಲ್ಲ ಎನ್ನುವ ರೀತಿಯಲ್ಲಿ ಮಾಧ್ಯಮಗಳೂ ಮಾನಸಿಕತೆಯನ್ನು ಬೆಳೆಸಿಕೊಂಡಿವೆ. ಇನ್ನು ಸಾಹಿತಿ ಭಗವಾನ್ ಶ್ರೀರಾಮಚಂದ್ರ ಮಾಂಸಹಾರಿ ಎಂದು ಬರೆದಿದ್ದಕ್ಕೆ ದೊಡ್ಡ ಗಲಾಟೆ ಆಯ್ತು. ಕಪ್ಪು ಮಸಿ ಬಳಿಯಲಾಯ್ತು. ಆದರೆ ಪ್ರತಿಯೊಂದು ದೇವರ ಬಗ್ಗೆ ಕೆಟ್ಟದಾಗಿ ಬರೆದು ಬಿಜೆಪಿಯ ಮುರುಗೇಶ್ ನಿರಾಣಿ ವಾಟ್ಸ್ಆ್ಯಪ್ನಲ್ಲಿ ಕಳಿಸಿದ್ದು, ಸುದ್ದಿಯೇ ಅಲ್ಲ ಎನ್ನುವಂತ ವಾತಾವರಣ ನಿರ್ಮಾಣ ಆಯ್ತು. ಇದೀಗ ಶ್ರೀರಾಮನ ಹುಟ್ಟೂರು ವಿಚಾರದ ಬಗ್ಗೆ ಮಾತನಾಡೋಣ..
ಉತ್ತರ ಪ್ರದೇಶದಲ್ಲಿ ಶ್ರೀರಾಮ ಬಂಟನಿಗೆ ಅವಮಾನ..!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮಚಂದ್ರ, ಸೀತಾಮಾತೆಯನ್ನು ವಿವಾಹವಾದ ಬಳಿಕ ವನವಾಸಕ್ಕಾಗಿ ದಕ್ಷಿಣ ಭಾರತದ ಕಡೆಗೆ ಬಂದಿದ್ದನು. ಈ ವೇಳೆ ಕರ್ನಾಟಕದ ಕಿಷ್ಕಿಂದೆಯಲ್ಲಿ ಆಂಜನೇಯ ಶ್ರೀರಾಮನಿಗೆ ಸಹಾಯ ಮಾಡಲು ಟೊಂಕ ಕಟ್ಟಿ ನಿಂತಿದ್ದನ್ನು. ಯಾವಾಗ ಶ್ರೀಲಂಕೆಗೆ ಹಾರಿದ ಹನುಮಂತ ಸೀತಾಮಾತೆಯ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದನೋ ಅಂದಿನಿಂದ ಆಂಜನೇಯ ಶ್ರೀರಾಮನ ಬಂಟನಾದನು. ತನ್ನ ಒಡೆಯ ಸಾಕ್ಷಾತ್ ಶ್ರೀರಾಮಚಂದ್ರನೇ ಎಂದು ನಂಬಿದ್ದ ಆಂಜನೇಯ ಶ್ರೀರಾಮ ಎಲ್ಲಿ ಇರುತ್ತಾನೋ ಅಲ್ಲೇ ನನ್ನ ವಾಸ ಎಂದು ಘೋಷಣೆ ಮಾಡಿ ಅಯೋಧ್ಯೆಗೆ ಹೋದನು. ಈ ರೀತಿ ಇರುವಾಗ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಬಂಟ ಆಂಜನೇಯನಿಗೆ ಅಪಮಾನ ಮಾಡಲಾಗಿದೆ. ಬ್ರಹ್ಮಚಾರಿಯಾದ ಆಂಜನೇಯನನ್ನು ನಿಲ್ಲಿಸಿಕೊಂಡು ಯುವತಿಯರು ದೇಹಪ್ರದರ್ಶನ ಮಾಡಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯವರು ಈ ರೀತಿ ಆಂಜನೇಯನಿಗೆ ಅವಮಾನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಖಾರವಾಗಿ ಟೀಕಿಸಿದ್ದಾರೆ.

ಗಂಗಾಜಲದಲ್ಲಿ ಶುದ್ಧಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು..!
ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಹಾಗು ಬಿಜೆಪಿ ಸರ್ಕಾರದ ಆಡಳಿತ ಇರುವ ಉತ್ತರ ಪ್ರದೇಶದಲ್ಲೇ ಈ ರೀತಿಯ ಘಟನೆ ನಡೆದಿರುವ ಆಕ್ರೋಶ ಹೆಚ್ಚಳ ಆಗಲು ಕಾರಣವಾಗಿದೆ. ರಾಜಸ್ಥಾನ ಹಾಗು ಗುಜರಾತ್ ಗಡಿಯಲ್ಲಿರುವ ಉತ್ತರ ಪ್ರದೇಶದ ರತ್ಲಮ್ ಅನ್ನೋ ನಗರದಲ್ಲಿ ರಾಷ್ಟ್ರೀಯ ಬಾಡಿ ಬಿಲ್ಡರ್ಸ್ ಚಾಂಪಿಯನ್ಶಿಪ್ ಆಯೋಜನೆ ಮಾಡಲಾಗಿತ್ತು. ಬಿಜೆಪಿ ನಾಯಕ ಹಾಗು ರತ್ಲಮ್ ನಗರದ ಮೇಯರ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ಆಗಿರುವುದು ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. ಅಷ್ಟೇ ಅಲ್ಲದೆ ಬಾಡಿ ಬಿಲ್ಡಿಂಗ್ ಸ್ಪರ್ಧೆ ಆಯೋಜನ ಎ ಮಾಡಿದ್ದ ಸ್ಥಳವನ್ನು ಕಾಂಗ್ರೆಸ್ ಕಾರ್ಯಕರ್ತರು ಗಂಗಾಜಲದಿಂದ ಸ್ವಚ್ಛ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸನಾತನ ಧರ್ಮವನ್ನು ಮೇಯರ್ ಅಣಕಿಸಿದ್ದಾರೆ ಎಂದು ಟೀಕಿಸಿದ್ದು, ತನಿಖೆಗೆ ಆಗ್ರಹ ಮಾಡಲಾಗಿದೆ. ರಾಜಕೀಯ ಪಕ್ಷ ಅಷ್ಟೇ ಅಲ್ಲದೆ ಹಿಂದೂ ಸಂಘಟನೆಗಳೂ ಸಹ ಈ ಘಟನೆಯನ್ನು ಖಂಡಿಸಿದ್ದು, ನಮ್ಮ ರಾಜ್ಯದಲ್ಲಿ ಯೋಗಿ ಸರ್ಕಾರದ ಆಡಳಿತಲ್ಲೇ ಈ ರೀತಿ ನಡೆದಿರುವ ನಾಚಿಕೆಗೇಡು ಎಂದು ಕಿಡಿಕಾರಿವೆ.


ಭಾನುವಾರ ನಡೆದ ಕಾರ್ಯಕ್ರಮ, 350 ಯುವತಿಯರು ಭಾಗಿ..!
ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ವಿನಾಯಕ ಸಭಾಭವನದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸರಿಸುಮಾರು 350 ಯುವತಿಯರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಿಕಿನಿ ತೊಟ್ಟು ಭಾಗವಹಿಸಿದ್ದರು. ಮಹಾರಾಷ್ಟ್ರ, ಹರಿಯಾಣ, ಕರ್ನಾಟಕದಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ಮೇಯರ್ ಪ್ರಹ್ಲಾದ್ ಪಟೇಲ್ ಉದ್ಘಾಟನೆ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು, ವೀಡಿಯೋ ವೈರಲ್ ಆದ ಬಳಿಕ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಧಾರ್ಮಿಕ ಭಾವನೆ ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ. ಆದರೆ ಆಂಜನೇಯ ಮೂರ್ತಿ ಎದುರು ಬಿಕಿನಿ ಹಾಕಿ, ಚಪ್ಪಲ್ಗಳನ್ನು ಧರಿಸಿ ಓಡಾಡಿದ್ದು, ಅಪರಾಧವೇ ಅಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇದೀಗ ಅಖಿಲೇಶ್ ಸಿಂಗ್ ಯಾದವ್ ಅವರ ಪೋಸ್ಟ್ನಿಂದ ರಾಜ್ಯ, ದೇಶ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದ್ದು, ಹಿಂದೂಗಳ ಪರ ಎನ್ನುವ ಬಿಜೆಪಿ, ತನ್ನದೇ ಪಕ್ಷದ ಮೇಯರ್ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಸೃಷ್ಟಿಸಿದೆ.
