ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಪ್ರಶಿಕ್ಷಣ ಅಭ್ಯಾಸ ಕಾರ್ಯಕ್ರಮದಲ್ಲಿ ನಾವು ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರವನ್ನ ನಾವು ಉಳಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ ಹೊರವಲಯದ ಖಾಸಗಿ ಗಾಲ್ಫ್ ಕ್ಲಬ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಎಸ್ವೈ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಇದೆ ಈ ಚುನಾವಣೆಯಲ್ಲಿ 140 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ ಧೂಳಿಪಟ ಆಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಅದಕ್ಕೆ ಬೇಕಾದ ವಿಶೇಷ ಪರಿಶ್ರಮವನ್ನು ಹಾಕಬೇಕಾಗುತ್ತದೆ ಸಂಘಟನೆಯನ್ನು ಬಲಪಡಿಸಬೇಕಾಗುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಮಹಿಳಾ ಸಬಲೀಕರಣ ಯುವ ಸಬಲೀಕರಣ ಈ ಎಲ್ಲಾ ಅಂಶಗಳ ಮೇಲೆ ಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ನಮ್ಮ ಗುರಿ ಸಾಧನೆ ಮಾಡಬಹುದು ಎಂದು ಮಾತನಾಡುವ ವೇಳೆ ಹೇಳಿದ್ದಾರೆ.

ಚುನಾವಣೆ ಹಾಗೂ ಸಂಘಟನೆ ದೃಷ್ಟಿಯಿಂದ ನಮ್ಮ ತಯಾರಿ. ನಮ್ಮ ಪಕ್ಷದ ವಾಸ್ತವ ಸ್ಥಿತಿ ಏನಿದೆ, ವಿಪಕ್ಷದ ಸ್ಥಿತಿ ಹೇಗಿದೆ ಎಂಬುದನ್ನು ಅರಿತು ನಾವು ಕೆಲಸ ಮಾಡಿದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ.ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಹಲವು ಬಾರಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಇದೆ. ಇಲ್ಲಿ ನಾವು ಸರ್ಕಾರವನ್ನು ಉಳಿಸಿಕೊಳ್ಳಬೇಕಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಕನಸನ್ನ ಕಾಂಗ್ರೆಸ್ ನಾಯಕರು ಕಾಣುತ್ತಿದ್ದಾರೆ. ಇದು ತಿರುಕನ ಕನಸು ಅಂತ ನಮಗೂ ಗೊತ್ತಿದೆ, ಅವರಿಗೂ ಗೊತ್ತಿದೆ ಎಂದು ಛೇಡಿಸಿದ್ದಾರೆ.
ನಾವು ವಿಶೇಷ ಪರಿಶ್ರಮ ಹಾಕಬೇಕಾಗಿದೆ. ನಾವು 140ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದರೆ ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತೆ ಆಗುತ್ತಾರೆ ಇವನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ನಾಯಕರಿಗೆ ತಾಕೀತು ಮಾಡಿದ್ದಾರೆ.