ಸ್ಪಿನ್ನರ್ ಕುಲದೀಪ್ ಯಾದವ್ ಸೇರಿದಂತೆ ಭಾರತದ ಸಂಘಟಿತ ದಾಳಿ ನೆರವಿನಿಂದ ಭಾರತ ತಂಡ 7 ವಿಕೆಟ್ ಜಯಭೇರಿ ಬಾರಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.
ದೆಹಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 27.1 ಓವರ್ ಗಳಲ್ಲಿ 99 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಸುಲಭ ಗುರಿ ಬೆಂಬತ್ತಿದ ಭಾರತ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸುಲಭ ಗುರಿ ಬೆಂಬತ್ತಿದ ಭಾರತ ಆರಂಭದಲ್ಲೇ ನಾಯಕ ಶಿಖರ್ ಧವನ್ (8) ಮತ್ತು ಇಶಾನ್ ಕಿಶನ್ (10) ಅವರನ್ನು ಬೇಗನೇ ಕಳೆದುಕೊಂಡರೂ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನಿಂದ ಜಯಭೇರಿ ಬಾರಿಸಿತು.
ಶುಭಮನ್ ಗಿಲ್ 49 ರನ್ ಗಳಿಸಿದ್ದಾಗ ಔಟಾಗಿ 1 ರನ್ ನಿಂದ ಅರ್ಧಶತಕ ವಂಚಿತರಾದರು. ಆದರೆ ಶ್ರೇಯಸ್ ಅಯ್ಯರ್ 28 ರನ್ ಬಾರಿಸಿ ಅಜೇಯರಾಗಿ ಉಳಿದರು.
ಕುಲದೀಪ್ ದಾಳಿಗೆ ಕುಸಿದ ದ.ಆಫ್ರಿಕಾ
ಭಾರತ ತಂಡಕ್ಕೆ ದೀರ್ಘ ಸಮಯದ ನಂತರ ಮರಳಿದ ವಾಷಿಂಗ್ಟನ್ ಸುಂದರ್ ಮತ್ತು ಮೊಹಮದ್ ಸಿರಾಜ್ ಮಾರಕ ದಾಳಿ ನಡೆಸಿ ದಕ್ಷಿಣ ಆಫ್ರಿಕಾಕ್ಕೆ ಚೇತರಿಸಿಕೊಳ್ಳಲಾಗದ ಆರಂಭಿಕ ಆಘಾತ ನೀಡಿದರು.
ದಕ್ಷಿಣ ಆಫ್ರಿಕಾ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಕಳಪೆ ಮೊತ್ತಕ್ಕೆ ಆಲೌಟಾಯಿತು. ಮಧ್ಯಮ ಕ್ರಮಾಂಕದಲ್ಲಿ ಹೆಂಡ್ರಿಕ್ಸ್ ಕ್ಲಾಸೆನ್ 42 ಎಸೆತಗಳಲ್ಲಿ 4 ಬೌಂಡರಿ ಸೇರಿದ 34 ರನ್ ಗಳಿಸಿದರೆ, ಮಾರ್ಕೊ ಜಾನ್ಸನ್ (14) ಹಾಗೂ ಆರಂಭಿಕ ಜೆನೆಮನ್ ಮಲಾನ್ (14) ಮಾತ್ರ ಎರಡಂಕಿಯ ಮೊತ್ತ ದಾಟಿದರು.
ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಮೊಹಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಗಳಿಸಿದರು.