ಬೆಂಗಳೂರಲ್ಲಿ ಕೆರೆ ಒತ್ತುವರಿ ವಿಚಾರ ಹೊಸದೇನೂ ಅಲ್ಲ. ಪಾಲಿಕೆಯೂ ಹತ್ತಾರು ವರ್ಷದಿಂದ ಕೆರೆ ಒತ್ತುವರಿ ತೆರವು ಹಾಗೂ ಅಭಿವೃದ್ಧಿ ಅಂತ ಬಾಯಿಮಾತಲ್ಲಿ ಹೇಳ್ತಲೇ ಬರ್ತಿದೆ. ಹೀಗೆ ಜನರ ಕಣ್ಣೊರೆಸುತ್ತಿದ್ದ ಪಾಲಿಕೆಗೆ ಈಗ NGT ಚಾಟಿ ಬೀಸಿದೆ. ಕೆರೆ ಒತ್ತುವರಿ ತೆರವಿನ ವಿಚಾರಾವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಿಬಿಎಂಪಿಗೆ ನೋಟೀಸ್ ಜಾರಿಮಾಡಿದೆ. ನೋಟೀಸ್ ನಲ್ಲಿ ಬೆಂಗಳೂರಿನ ಕೆರೆಗಳ ಬಗ್ಗೆ ಸಮಗ್ರ ಮಾಹಿತಿ ಕೇಳಲಾಗಿದೆ. ಒಂದು ವಾರದ ಒಳಗಾಗಿ ಎಲ್ಲಾ ಮಾಹಿತಿಯನ್ನು ಒಳಗೊಂಡ ವರದಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರಿನ ಕೆರೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದ ಹಸಿರು ನ್ಯಾಯಾಧೀಕರಣ.!!
ಬೆಂಗಳೂರು ಕೆರೆಗಳ ನಗರಿ. ಒಂದ್ಕಾಲದಲ್ಲಿ ಬೆಂಗಳೂರಿಗರಿಗೆ ನೀರು ಒದಗಿಸುತ್ತಿದ್ದಿದ್ದೇ ಈ ಕೆರೆಗಳು. ಆದರೆ ಈ ಕೆರೆಗಳನ್ನೇ ನಮ್ಮ ಜನ ನುಂಗಿ ನೀರು ಕುಡಿದಿದ್ದಾರೆ. ಈ ಕೆರೆಗಳಿಗೆ ಪುನಶ್ಚೇತನ ಕೊಡೋದಾಗಿ ಪಾಲಿಕೆ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಿರುಗಾಡಿದೆ. ಆದರೆ ಒಂದೇ ಒಂದು ಕೆರೆಯೂ ಅಭಿವೃದ್ಧಿ ಕಂಡಿಲ್ಲ. ಕೆರೆ ಒತ್ತುವರಿಯೂ ತೆರವಾಗಿಲ್ಲ. ಹೀಗಿರುವಾಗ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರೋ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಿಬಿಎಂಪಿಗೆ ನೊಟೀಸ್ ಜಾರಿಮಾಡಿದೆ.
NGT ನೋಟೀಸ್ ಬೆನ್ನಲ್ಲೇ ಮಾಹಿತಿ ಕೊಡಲು ಪರದಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು.!!
ಬೆಂಗಳೂರಿನಲ್ಲಿರೋ ಕೆರೆಗಳ ಸ್ಥಿತಿ ಗತಿ ಏನು.? ಯಾವೆಲ್ಲಾ ಕೆರೆಯನ್ನ ಅಭಿವೃದ್ಧಿಪಡಿಸಲಾಗಿದೆ.? ಕೆರೆ ಸೇರ್ತಿರೋ ಸೀವೆಜ್ ವಾಟರ್ ತಡೆಗೆ ಕೈಗೊಂಡ ಕ್ರಮಗಳೇನು.? ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಪಾಲಿಕೆಗೆ NGT ಆದೇಶ ಮಾಡಿದೆ. ಸದ್ಯ ಪಾಲಿಕೆಯೂ ಕಳೆದ ಕೆಲ ವರ್ಷಗಳಿಂದ ಕೆರೆ ಅಭಿವೃದ್ಧಿ ಅನ್ನೋದನ್ನೇ ಮರೆತು ಕುಳಿತಿದೆ. ಈ ವರ್ಷ ಅಮೃತ್ ನಗರೋತ್ಥಾನ ಯೋಜನೆಯಡಿ ಸರ್ಕಾರ 200 ಕೋಟೆಗಳನ್ನು ಕೆರೆ ಅಭಿವೃದ್ಧಿಗಾಗಿ ನೀಡಿದೆ. ಆದರೆ ಪಾಲಿಕೆ ಈ ಹಣದಲ್ಲಿ ನಯಾಪೈಸೆಯನ್ನೂ ಸಹ ಇದುವರೆಗೆ ಬಳಕೆ ಮಾಡಿಕೊಂಡಿಲ್ಲ. ಸದ್ಯ NGT ವರದಿ ಕೇಳಿ ನೋಟಿಸ್ ನೀಡ್ತಿದ್ದಂತೆ ಮೈಕೊಡವಿರೋ ಪಾಲಿಕೆ ಎನ್ಜಿಟಿಗೆ ವರದಿಕೊಡಲು ಹೆಣಗಾಡ್ತಿದೆ.

2016ರಲ್ಲಿ ಕೆರೆಗಳು ಒತ್ತುವರಿ ಬಗ್ಗೆ ಸರ್ಕಾರಕ್ಕೆ ಕೋಳಿವಾಡ ಸಮಿತಿ ವರದಿ.!!
ಬಿಬಿಎಂಪಿ ಹಲವು ವರ್ಷಗಳಿಂದ ಕೆರೆ ಒತ್ತುವರಿ ತೆರವಿನ ಬಗ್ಗೆ ಜಾಣಕುರುಡುತನ ಪ್ರದರ್ಶಿಸ್ತಲೇ ಬಂದಿದೆ. 2016ರಲ್ಲಿ ಕೋಳಿವಾಡ ಸಮಿತಿ 1547 ಕೆರೆ ಒತ್ತುವರಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಈ ವರದಿ ಬಗ್ಗೆ ಪಾಲಿಕೆಯಾಗ್ಲೀ ಸರ್ಕಾರವಾಗ್ಲೀ ಈವರೆಗೂ ಕ್ರಮಕೈಗೊಂಡಿಲ್ಲ. ಸದ್ಯ ಬಿಬಿಎಂಪಿಗೆ NGT ತಪರಾಕಿ ಹಾಕಿರೋದ್ರಿಂದ ಪಾಲಿಕೆ ಅಡಕತ್ತರಿಯಲ್ಲಿ ಸಿಲುಕಿದೆ. ಆದರೂ ವರದಿ ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನಾದ್ರೂ ಕೆರೆ ಒತ್ತುವರಿ ತೆರವಿನ ಬಗ್ಗೆ ಪಾಲಿಕೆ ಜಾಗೃತವಾಗುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.





