ಶಿಕ್ಷಕರ ಮತ ಕ್ಷೇತ್ರ ಎಂದರೆ ಸಹಜವಾಗಿಯೇ ನೆನಪಾಗೋದು ಬಸವರಾಜ್ ಹೊರಟ್ಟಿ. ಈಗಾಗಲೇ 7ಬಾರಿ ವಿಧಾನ ಪರಿಷತ್ ಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಆದರೆ ಹೊರಟ್ಟಿ ಅವರನ್ನು ಶಿಕ್ಷಕ ಮತದಾರರು ಒಂದು ಪಕ್ಷದ ಹುರಿಯಾಳಾಗಿ ನೋಡದೇ ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ಸಚಿವ ಸ್ಥಾನ, ಸಭಾಪತಿ ಸ್ಥಾನ ಇಷ್ಟೆಲ್ಲ ಅವಕಾಶಗಳನ್ನು ನೀಡಿದ್ರು ಹೊರಟ್ಟಿ ಅವರು ಜೆಡಿಎಸ್ ಬಿಟ್ಟಿದ್ದೇಕೆ?
ಕಾಂಗ್ರೆಸ್ ಪಕ್ಷದವರು ಸೋಲಿನ ಭಯದಿಂದ ಹೊರಟ್ಟಿ ಅವರು ಈ ಬಾರಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸುವ ಮೂಲಕ ಚುನಾವಣಾ ಅಖಾಡದಲ್ಲಿ ಕೈ ಅಭ್ಯರ್ಥಿ ಬಸವರಾಜ್ ಗುರಿಕಾರ್ ಪರ ಪ್ರಚಾರಕ್ಕಿಳಿದಿದೆ. ಈ ಬಗ್ಗೆ ಹಾವೇರಿಯಲ್ಲಿ ಪಕ್ಷದ ಅಭ್ಯರ್ಥಿ ಗುರಿಕಾರ್ ಪರ ಪ್ರಚಾರ ಕೈಗೊಂಡ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬಸವರಾಜ ಹೊರಟ್ಟಿ ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ್ ಸ್ಪರ್ಧಿಸಿದ್ದು, ಅವರು 40 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೊರಟ್ಟಿಯವರು ಪಕ್ಷ ಬದಲಾವಣೆ ಮಾಡಿದ್ದಕ್ಕೆ ಕಾರಣ ಸೋಲಿನ ಭೀತಿ ಇರಬಹುದು. ಇಲ್ಲದಿದ್ದರೆ ಅಧಿಕಾರದ ಆಸೆಯೂ ಇರಬಹುದು. ಮತ್ತೆ ಚೇರ್ಮನ್ ಆಗಿ ಮುಂದುವರೆಯಬಹುದು ಅಂತ ಬಿಜೆಪಿಗೆ ಹೋಗಿದ್ದಾರೆ. ಜಾತ್ಯಾತೀತ ವಿಚಾರ ಇಟ್ಟುಕೊಂಡು ಚುನಾವಣೆ ಗೆದ್ದು ಅವರು ಈಗ ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಬಸವರಾಜ ಹೊರಟ್ಟಿ ರಾಜಕೀಯದ ಕೊನೆಯ ದಿನಗಳಲ್ಲಿ ಸಿದ್ದಾಂತ ಬಲಿ ಕೊಟ್ಟು, ಭ್ರಷ್ಟಾಚಾರದಲ್ಲಿ ಮುಳುಗಿದ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹೀಗಾಗಿ ಶಿಕ್ಷಕರು ಬಸವರಾಜ ಗುರಿಕಾರ್ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು ಎಂದು ಹೇಳಿದ್ದಾರೆ.






