ಬಿಜೆಪಿ ಭಾರತ ಒಕ್ಕೂಟದ ಚುಕ್ಕಾಣಿ ಹಿಡಿದು ಆಡಳಿತ ಮಾಡುತ್ತಿರುವ ಈ ದಶಕದ ದಿನಗಳು ನೈಜ ಭಾರತೀಯರ ಪಾಲಿನ ಕರಾಳ ಅವಧಿ. ಒಕ್ಕೂಟ ಸರಕಾರದ ಆಶಿರ್ವಾದದಿಂದ ಮತ್ತು ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳ ಕುಮ್ಮಕ್ಕಿನಿಂದ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳ ಮತೀಯ ಸಂಘರ್ಷದ ನಿರ್ಧಾರಗಳು ಭಾರತ ದೇಶದ ಬಹುತ್ವದ ಹೃದಯದ ಮೇಲಿನ ಮಹಾ ದೊಡ್ಡ ದಾಳಿಯಾಗಿದೆ. ದೇಶದ ಆರ್ಥಿಕತೆ ಹಾಳುಗೆಡವುದುˌ ಜಾತ್ಯಾತೀತ ಪರಂಪರೆ ನಷ್ಟಗೊಳಿಸಿ ಜನತಂತ್ರವನ್ನು ದುರ್ಬಲಗೊಳಿಸುವುದುˌ ಖಾಸಗಿಕರಣದ ಮೂಲಕ ಶೋಷಿತರ ಸಂವಿಧಾನಬದ್ಧ ಮೀಸಲಾತಿ ಹಕ್ಕನ್ನು ಮೊಟಕುಗೊಳಿಸುವುದು ಹಾಗು ಕಾರ್ಪೋರೇಟ್ ಕಳ್ಳೋದ್ಯಮಿಗಳ ಸಖ್ಯದಿಂದ ಸಾರ್ವಜನಿಕ ಉದ್ಯೋಗ ಕ್ಷೇತ್ರವನ್ನು ಬರಿದಾಗಿಸುವುದು ಇವು ಕೋಮುವಾದಿ ಅಂಸವಿಧಾನಿಕ ಶಕ್ತಿಗಳು ಬಿಜೆಪಿ ಆಡಳಿತದ ಮೇಲಿನ ನಿಯಂತ್ರಣ ಹೊಂದುವ ಮೂಲಕ ಸಾಧಿಸುತ್ತಿವೆ.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅದು ಒಕ್ಕೂಟವಾಗಿರಲಿˌ ಅಥವಾ ರಾಜ್ಯವೇ ಆಗಿರಲಿ ಶಿಕ್ಷಣ ಖಾತೆಯನ್ನು ಸಂಘ ಹಿನ್ನೆಲೆಯ ಸಾಂಪ್ರದಾಯಸ್ತ ಬ್ರಾಹ್ಮಣ ವ್ಯಕ್ತಿಯೇ ನಿಭಾಯಿಸುವುದರ ಹಿಂದೆ ಭಾರತದ ನೈಜ ಇತಿಹಾಸವನ್ನು ತಿರುಚುವುದು ಮತ್ತು ಶಿಕ್ಷಣವನ್ನು ಬ್ರಾಹ್ಮಣೀಕರಣಗೊಳಿಸುವ ದುರುದ್ದೇಶ ಇರುತ್ತದೆ. ಅದನ್ನು ಈಗ ಬಹಳ ವ್ಯವಸ್ಥಿತವಾಗಿ ಹಾಗು ಅಷ್ಟೇ ಭಂಡತನದಿಂದ ಕಾರ್ಯರೂಪಕ್ಕೆ ತರಲಾಗುತ್ತಿದೆ. ಭಾರತದಂತ ಬಹುತ್ವ ಸಂಸ್ಕೃತಿಯ ದೇಶವನ್ನು ಹಿಂದೂ ಎಂದು ತಪ್ಪಾಗಿ ಕರೆಯಲಾಗುವ ಬ್ರಾಹ್ಮಣ ಮತದ ಮೂಗಿನ ನೇರಕ್ಕೆ ವ್ಯಾಖಾನಿಸುವ ಪರಿಪಾಠ ಪುರೋಹಿತಶಾಹಿಗಳು ಮೊದಲಿನಿಂದ ಬೆಳೆಸಿಕೊಂಡು ಬಂದಿದ್ದಾರೆ. ತಾವು ನಂಬುವ ದೇವರುˌ ಧರ್ಮˌ ಶಾಸ್ತ್ರಗಳೆಲ್ಲವು ಇಡೀ ಭಾರತೀಯರ ಮೇಲೆ ಹಿಂದುತ್ವದ ಹೆಸರಿನಲ್ಲಿ ಹೇರುವ ದಮನಕಾರಿ ಕಾರ್ಯ ಇಂದು ಸಾಂಪ್ರದಾಯವಾದಿ ಅಸಂವಿಧಾನಿಕ ಶಕ್ತಿಗಳು ಮಾಡುತ್ತಿವೆ.
ಅದರ ಮುಂದುವರೆದ ಭಾಗವಾಗಿಯೆ ಇಂದು ಕರ್ನಾಟಕವೂ ಸೇರಿದಂತೆ ಭಾರತದ ಇನ್ನಿತರ ರಾಜ್ಯಗಳಲ್ಲಿ ಶಾಲಾ ಶಿಕ್ಷಣವನ್ನು ಬ್ರಾಹ್ಮಣೀಕರಣಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಶಾಲಾ ಪಠ್ಯವನ್ನು ಪರಿಷ್ಕರಿಸುವ ಅಧಿಕಾರ ಮತಾಂಧ ಯುವಕರು ರಸ್ತೆಗಳಲ್ಲಿ ಕಲ್ಲೆಸೆಯುವಂತೆ ಪ್ರಚೋದನಕಾರಿ ಭಾಷಣ ಮಾಡುವ ಮತ್ತು ಲೇಖನ ಬರೆಯುವˌ ಯಾವುದೇ ಶೈಕ್ಷಣಿಕ ಹಿನ್ನೆಲೆ ಇರದ ಮೂರನೇ ದರ್ಜೆಯ ವ್ಯಕ್ತಿಗಳ ಕೈಗೆ ನೀಡಲಾಗಿದೆ. ಆ ಮೂಲಕ ಶಾಲಾ ಪಠ್ಯವನ್ನು ಬ್ರಾಹ್ಮಣೀಕರಣಗೊಳಿಸುವ ಹುನ್ನಾರ ಮಾಡಲಾಗುತ್ತಿದೆ. ಅದರಂತೆ ಶಾಲಾ ಪಠ್ಯದಲ್ಲಿ ಮತಧರ್ಮಶಾಸ್ತ್ರಕ್ಕೆ ಸಂಬಂಧಿಸಿರುವ ಹಾಗು ಭಾರತೀಯರೆಲ್ಲರ ಧರ್ಮಗ್ರಂಥವೆಂದು ಸುಳ್ಳಾಗಿ ಬಿಂಬಿಸಲಾಗಿರುವ ಬ್ರಾಹ್ಮಣರ ಧರ್ಮಶಾಸ್ತ್ರವಾದ ಭಗವದ್ಗೀತೆಯನ್ನು ಭೋದಿಸುವ ಅನೇಕ ರಾಜ್ಯ ಸರಕಾರಗಳ ನಿರ್ಧಾರವನ್ನು ಇದೇ ಮಾರ್ಚ್ ೨೧ರ ದಿ ವೈರ್ ವೆಬ್ ಜರ್ನಲ್ಲಿನಲ್ಲಿ ಪಂಜಾಬ್ನ ಮೋಹಾಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಯನ್ಸ್ ಸಂಸ್ಥೆಯ ತತ್ವಶಾಸ್ತ್ರದಲ್ಲಿ ಮಾನವಿಯತೆ ವಿಷಯದ ಶಿಕ್ಷಕರಾಗಿದ್ದ ಎಸ್ ಕೆ ಅರುಣ ಮೂರ್ತಿಯವರು ಬಹಳ ವಿವರವಾಗಿ ಬರೆದಿದ್ದಾರೆ. ಆ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ಇಲ್ಲಿ ಅದಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಚರ್ಚಿಸಿದ್ದೇನೆ.
ಮಾರ್ಚ್ ತಿಂಗಳಲ್ಲಿ ಗುಜರಾತ್ ಸರಕಾರವು ೨೦೨೨-೨೩ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ ಏಳರಿಂದ ಪದವೀಪೂರ್ವ ತರಗತಿಗಳ ವರೆಗೆ ಭಗವದ್ಗೀತೆಯು ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಘೋಷಿಸಿದೆ. ಕರ್ನಾಟಕ ಸರ್ಕಾರವು ರಾಜ್ಯ ಶಾಲೆಗಳಲ್ಲಿ ‘ನೈತಿಕ ಶಿಕ್ಷಣ’ದ ಭಾಗವಾಗಿ ಗೀತೆಯನ್ನು ಪರಿಚಯಿಸಲು ಯೋಚಿಸುವುದಾಗಿ ಹೇಳಿದೆ. ಈ ನಿರ್ಧಾರವನ್ನು ಬಿಜೆಪಿ ಆಡಳಿತದ ಇತರ ರಾಜ್ಯಗಳು ಮತ್ತು ಬಹುಶಃ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಕೂಡ ಶೀಘ್ರದಲ್ಲೇ ಅನುಸರಿಸಬಹುದು ಎಂದು ನಿರೀಕ್ಷಿಸಬಹುದಾಗಿದೆ. ಗೀತೆಯನ್ನು ಪರಿಚಯಿಸುವ ನಿರ್ಧಾರವು ಒಕ್ಕೂಟ ಸರಕಾರದ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿದೆ ಎಂದು ಗುಜರಾತ್ ಶಿಕ್ಷಣ ಸಚಿವ ಜೀತು ವಘಾನಿ ಹೇಳಿದ್ದಾರೆ. ಇದು ಸಾಂಪ್ರದಾಯಿಕ ಮತ್ತು ಪುರಾತನ ಸಂಸ್ಕೃತಿಯ ಪರಿಚಯವನ್ನು ಮಾಡುವುದಲ್ಲದೆ ವಿದ್ಯಾರ್ಥಿಗಳಿಗೆ ಭಾರತದ ಅದ್ಭುತ ಗತಕಾಲದ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಅವರು ಹೇಳಿದ ಬಗ್ಗೆ ಅರುಣ್ ಮೂರ್ತಿ ಪ್ರಾಸ್ತಾಪಿಸಿದ್ದಾರೆ.
ಇದಕ್ಕಿಂತ ಮುಂಚೆಯೇ, NCERT ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು ಮತ್ತು ಅದಕ್ಕೆ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗೆಗಿನ ಹೆಮ್ಮೆಯ ನಿರೂಪಣೆಗಳನ್ನು ಪ್ರತಿಬಿಂಬಿಸುವ ಉದ್ದೇಶವಿದೆ ಎನ್ನುವ ಕಾರಣವನ್ನು ನೀಡಲಾಗಿತ್ತು. ಶಾಲಾ ಪಠ್ಯಗಳನ್ನು ಬ್ರಾಹ್ಮಣೀಕರಿಸುವ ಇಂತಹ ನಡೆಗಳು ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ. ಇದು ಸನಾತನ ಧರ್ಮದ ಗತಕಾಲದ ನಂಬಿಕೆಗಳನ್ನು ವೈಭವೀಕರಿಸುತ್ತ ಬಿಜೆಪಿಯ ಗುಪ್ತ ಸೈದ್ಧಾಂತಿಕ ಕಾರ್ಯಸೂಚಿಯನ್ನು ಶಿಕ್ಷಣದಲ್ಲಿ ತಳ್ಳಲು ಮಾಡುತ್ತಿರುವ ಒಂದು ಹತಾಷೆಯ ಯತ್ನವಾಗಿದೆ ಎನ್ನುತ್ತಾರೆ ಅರುಣ ಮೂರ್ತಿ. ಪುರೋಹಿತಶಾಹಿಗಳು ವೈದಿಕೇತರ ಹಿಂದುಗಳ ಮನಸ್ಸಿನಲ್ಲಿ ಗೀತೆಯನ್ನು ನಿರ್ದಿಷ್ಟವಾಗಿ ಜನಪ್ರಿಯಗೊಳಿಸಿದ್ದು ನಾವೆಲ್ಲ ಬಲ್ಲೆವು.
ಗೀತೆಯಲ್ಲಿನ ಸಂದೇಶಗಳನ್ನು ಸಾರ್ವತ್ರಿಕ ಸತ್ಯವೆಂದು ಹಿಂದುತ್ವವಾದಿಗಳು ಪ್ರತಿಪಾದಿಸಿಕೊಂಡು ಬಂದಿದ್ದರೂ ಸಹ ಅದು ಕೇವಲ ಒಂದು ಧಾರ್ಮಿಕ ಪಠ್ಯವಾಗಿ ಮಾತ್ರ ಉಳಿದದ್ದು ಸುಳ್ಳಲ್ಲ. ಅದರಾಚೆಗೆ ಅದು ಎಲ್ಲರೂ ಒಪ್ಪಬಹುದಾದ ಹಾಗು ಸ್ವೀಕರಿಸಬಹುದಾದ ಒಂದು ಸಾರ್ವತ್ರಿಕ ಮನ್ನಣೆಯ ಗ್ರಂಥವಲ್ಲ ಎನ್ನುವುದು ನಾವೆಲ್ಲ ಮನಗಾಣಬೇಕಿದೆ. ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಬೇಕಾದರೆ, ಬೇರೆ ಧರ್ಮಿಯರು ಸಾರ್ವತ್ರಿಕ ಸತ್ಯವೆಂದು ನಂಬುವ ಅವರವರ ಧರ್ಮದ ಅನೇಕ ಬೋಧನೆಗಳನ್ನು ಸಹ ಏಕೆ ಕಲಿಸಬಾರದು ಎಂದು ಅರುಣ ಪ್ರಶ್ನಿಸಿದ್ದಾರೆ. ಬಿಜೆಪಿ ಸರಕಾರದ ಈ ನಿರ್ಧಾರವು ಸಹಜವಾಗಿ, ಇತರ ಧರ್ಮಗಳ ಮೇಲೆ ಹಿಂದೂ ಧರ್ಮದ ಮಹತ್ವವನ್ನು ಮತ್ತು ಶ್ರೇಷ್ಠತೆಯನ್ನು ಒತ್ತಿಹೇಳುವುದೇ ಆಗಿದೆ ಎಂದು ಅರುಣ್ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯ ಈ ಆಡಳಿತಾತ್ಮಕ ನಡೆ ಭಾರತೀಯ ಬಹುತ್ವ ಪರಂಪರೆಯ ಮೇಲೆ ವೈದಿಕತೆಯ ಹೇರುವಿಕೆ ಎಂದೆ ಪರಿಗಣಿಸಬೇಕಿದೆ.
ಆದರೆ ಗೀತೆಯ ಭೋದನೆಯಲ್ಲಿ ಆಳವಾದ ಶಿಕ್ಷಣದ ಬಗೆಗಿನ ಕಾಳಜಿಯ ಅಂಶವೂ ಇದೆ. ಅನೇಕ ಮಹಾನ್ ವ್ಯಕ್ತಿಗಳು ಅದರ ಕುರಿತು ವ್ಯಾಖ್ಯಾನಗಳನ್ನು ಮಾಡಿ ಅದೊಂದು ಜನಪ್ರಿಯ ಪಠ್ಯವೆಂದು ಹೇಳಲಾಗಿದ್ದರೂ, ಅದು ಅಷ್ಟೇ ಅಸ್ಪಷ್ಟವಾದ ವಿಷಯಗಳು ಮತ್ತು ಕಲ್ಪನೆಗಳಿಂದ ತುಂಬಿದೆ ಎನ್ನುತ್ತಾರೆ ಅರುಣ ಮೂರ್ತಿ. ಹಾಗಾಗಿ ಗೀತೆಯನ್ನು ಪಠ್ಯದಲ್ಲಿ ಅಳವಡಿಸಿದರೆ ಇದನ್ನು ಭೋದಿಸುವ ಶಾಲಾ ಶಿಕ್ಷಕರಿಗೆ ಇರಬಹುದಾದ ವಿಮರ್ಶಾತ್ಮಕ ಹಾಗು ನಿಶ್ಚಿತಾರ್ಥ ಜ್ಞಾನದ ಕೊರತೆಯು ಅದರ ಮೂಲ ಆಶಯಗಳನ್ನು ಸಾದರಪಡಿಸಲು ಸಾಧ್ಯವಾಗುವುದಿಲ್ಲ. ಇದು ಶಾಲಾ ವಿದ್ಯಾರ್ಥಿಗಳಿಗೆ ಯಾವುದೆ ಬಗೆಯಲ್ಲಿ ಜ್ಞಾನವನ್ನು ನೀಡಲಾರದು. ಶಿಕ್ಷಣಶಾಸ್ತ್ರವನ್ನು ಗಮನಿಸಿದರೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ತರ್ಕಬದ್ಧ ಸಂವೇದನೆಗಳನ್ನು ನಿಗ್ರಹಿಸುತ್ತಾ ಗೀತೆಯ ಶ್ಲೋಕಗಳನ್ನು ಪಾಯಿಪಾಠ ಮಾಡಲು ಪ್ರೋತ್ಸಾಹಿಸುತ್ತಾರೆ. ವಾಸ್ತವವಾಗಿ, ಗೀತೆಗೆ ಸಾಮಾನ್ಯ ಜನರಲ್ಲೂ ಕೂಡ ಇದೇ ಬಗೆಯ ಜನಪ್ರಿಯತೆ ಸಂಭವಿಸಿದೆ. ಅದರೊಳಗಿನ ಅಧ್ಯಾತ್ಮಿಕ ಅಂಶಗಳನ್ನು ಕಡೆಗಣಿಸಿ ಅದನ್ನು ಒಂದು ಪ್ರಚಾರ ಸಾಧನವಾಗಿ ಕಂಠಪಾಠ ಮಾಡಿಸುವ ಅಂಶವೇ ಅದನ್ನು ಮತಧರ್ಮಶಾಸ್ತ್ರದ ಪಠ್ಯವಾಗಿ ಜನಪ್ರಿಯಗೊಳಿಸಿದೆ ಎನ್ನುತ್ತಾರೆ ಅರುಣ ಮೂರ್ತಿಯವರು.
ಗೀತೆಯು ಅಸ್ಪಷ್ಟವಾದ ಮತಧರ್ಮಶಾಸ್ತ್ರವಾಗಿದ್ದು ಅದನ್ನು ಪಠ್ಯವಾಗಿ ಏಕೆ ಪರಿಗಣಿಸಬೇಕು ಎಂದು ಅರುಣ ಪ್ರಶ್ನಿಸುತ್ತಾರೆ. ಹಾಗೆಯೇ ಗೀತೆಯ ಬಗೆಗಿನ ಕಿರು ವಿಮರ್ಶೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಠ್ಯದ ವಿಮರ್ಶೆ ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಮೂಲದಲ್ಲಿ ಭಗವದ್ಗೀತೆಯು ೧೮ ಅಧ್ಯಾಯಗಳಲ್ಲಿ ಒಟ್ಟು ೭೦೦ ಶ್ಲೋಕಗಳನ್ನು ಒಳಗೊಂಡಿದೆ. ಇದನ್ನು ಶ್ರೀಕೃಷ್ಣನು ಯುದ್ಧಭೂಮಿಯಲ್ಲಿ ಪಾಂಡವ ರಾಜಕುಮಾರ ಅರ್ಜುನನೊಂದಿಗೆ ನಡೆಸಿದನೆನ್ನಲಾದ ಸಂಭಾಷಣೆ ನಿರೂಪಣೆಯಾಗಿ ಪ್ರಸ್ತುತಪಡಿಸಲಾಗಿದೆ. ಅರ್ಜುನನು ತನ್ನ ಕೌರವ ದಾಯಾದಿಗಳ ವಿರುದ್ಧ ಯುದ್ಧ ಮಾಡಲು ನಿರಾಕರಿಸುತ್ತಾನೆ. ತನ್ನ ಬಂಧುಗಳ ಪ್ರಾಣಹಾನಿಯ ಆಲೋಚನೆಯಿಂದ ಆತ ದುಃಖಿತನಾಗಿ ಗೊಂದಲಕ್ಕೊಳಗಾಗಿರುತ್ತಾನೆ. ಗೀತೆಯ ಭೋದನೆಯಿಂದ ಆತ ಗೊಂದಲದಿಂದ ಹೊರಬರುತ್ತಾನೆ. ಶ್ರೀಕೃಷ್ಣನು ಅರ್ಜುನನಿಗೆ ದುಃಖದ ಭ್ರಮೆಯನ್ನು ನಿವಾರಿಸಿ ಸ್ವಯಂ ಅಥವಾ ಆತ್ಮದ ಸ್ವರೂಪವನ್ನು ವಿವರಿಸುತ್ತಾನೆ ಎಂದು ಗೀತೆಯನ್ನು ಅರುಣ ಅವರು ಸಕ್ಷಿಪ್ತವಾಗಿ ಪರಿಚಯಿಸುತ್ತಾರೆ.
ಈ ಮೂಲ ಕಥೆಯನ್ನು ಮೀರಿ, ಗೀತೆಯ ವಸ್ತು ವಿಷಯವು ಮೂಲಭೂತವಾಗಿ ಒಂದು ಮತಧರ್ಮಶಾಸ್ತ್ರವಾಗಿದೆ. ಗೀತೆಯ ಒಟ್ಟಾರೆ ಕೇಂದ್ರ ಪರಿಕಲ್ಪನೆಗಳೆಂದರೆ ಕರ್ಮ ಸಿದ್ಧಾಂತˌ ಸಾಂಖ್ಯ ಮತ್ತು ಯೋಗ. ಈ ಪರಿಕಲ್ಪನೆಗಳ ಅರ್ಥದ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಕಾರರು ವಿಭಿನ್ನವಾಗಿ ವಿಮರ್ಶಿಸಿದ್ದಾರೆ ಹಾಗು ಅವುಗಳಲ್ಲಿ ಗುಣಾತ್ಮಕವಾದ ವ್ಯತ್ಯಾಸಗಳಿವೆ. ಆದರೆ ಮೂಲಭೂತವಾಗಿ ಇವೆಲ್ಲವೂ ಗೀತೆಯು ಒಂದು ಮತಧರ್ಮಶಾಸ್ತ್ರದ ಗ್ರಂಥವಾಗಿದೆ ಎನ್ನುವುದನ್ನು ಒತ್ತಿ ಹೇಳಿವೆ ಎನ್ನುವ ಅರುಣ ಮೂರ್ತಿಯವರು ಒಂದು ಮತಧರ್ಮಶಾಸ್ತ್ರದ ವಸ್ತು ಹೊಂದಿರುವ ಗ್ರಂಥವು ಪಠ್ಯವಾಗಿಸಿ ವಿದ್ಯಾರ್ಥಿಗಳ ಮೇಲೆ ಹೇರಬಹುದೆ ಎಂದು ಪ್ರಶ್ನಿಸುತ್ತಾರೆ. ಗೀತೆಯ ಕೇಂದ್ರ ವಿಷಯವೆಂದರೆ ಕರ್ಮ. ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಗೀತೆಯೊಳಗಿನ ಅತ್ಯಂತ ಜನಪ್ರಿಯ ಪದ್ಯವೆಂದರೆ ನಮ್ಮ ಕ್ರಿಯೆಗಳ ಫಲಗಳಿಗೆ ನಾವು ಅರ್ಹರಲ್ಲ ಎನ್ನುವುದು (ಅಧ್ಯಾಯ 2, ಶ್ಲೋಕ 47):
“ಕರ್ಮಣ್ಯ-ಇ- ವಾಧಿಕಾರಸ್ತೆ ಮಾ ಫಲೇಷು ಕದಾಚನ|
ಮಾ ಕರ್ಮ-ಫಲ-ಹೇತುರ್ ಭೂರ್ ಮಾ ತೇ ಸಂಗೋ ’ಸ್ತ್ವಕರ್ಮಣಿ|”
(ನೀವು ನಿಮಗೆ ನಿಗದಿಗೊಳಿಸಿದ ಕರ್ತವ್ಯಗಳನ್ನು ಮಾತ್ರ ನಿರ್ವಹಿಸಬೇಕುˌ ಆದರೆ ನಿಮ್ಮ ಕ್ರಿಯೆಗಳಿಗೆ ಫಲವನ್ನು ಬಯಸಲು ಅರ್ಹರಲ್ಲ. ಅಂದರೆ ಮಾಡಿದ ಕೆಲಸಕ್ಕೆ ಕೂಲಿ ಕೇಳಬೇಡಿ ಎಂದು ಆ ಕಾಲದಲ್ಲೇ ಸ್ವಷ್ಟವಾಗಿ ಊಳಿಗಮಾನ್ಯ ಪದ್ದತಿಯನ್ನು ಪರೋಕ್ಷವಾಗಿ ಪ್ರತಿಪಾದಿಸಲಾಗಿದೆ)
ಈ ಶ್ಲೋಕವು ಸಾರುವ ಸಂದೇಶವಾದರೂ ಏನು ಎಂದು ಅರುಣ ಮೂರ್ತಿ ಪ್ರಶ್ನಿಸುತ್ತಾರೆ. ಗೀತೆಯ ಈ ಶ್ಲೋಕದ ಅರ್ಥವು ಇಂದಿನ ಅಧುನಿಕ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಾವು ಏತಕ್ಕಾಗಿ ಒಂದು ನಿರ್ಧಿಷ್ಟ ಕಾರ್ಯವನ್ನು ಮಾಡುತ್ತೇವೆ ಎಂಬ ಪ್ರಾಯೋಗಿಕ ಮನೋವಿಜ್ಞಾನದ ಪರಿಕಲ್ಪನೆಗೆ ವಿರುದ್ಧವಾಗಿದೆ ಎನ್ನುತ್ತಾರೆ. ನಿರ್ಧಿಷ್ಟ ಗುರಿ ಹಾಗು ಉದ್ದೇಶಗಳನ್ನಿಟ್ಟುಕೊಂಡು ಶಾಲೆಗೆ ಬರುವ ಯುವ ವಿದ್ಯಾರ್ಥಿಗಳು ಗೀತೆಯ ಈ ಕರ್ಮ ಸಿದ್ಧಾಂತದಿಂದ ಏನನ್ನು ಕಲಿಯಬೇಕು ಹಾಗು ಇದನ್ನು ಒಂದು ಮೌಲ್ಯವಾಗಿ ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲಕ್ಕೊಳಗಾಗುವ ಸಾಧ್ಯತೆಗಳಿವೆ. ಇಂದಿನ ಅಧುನಿಕ ಯುಗದ ಮಕ್ಕಳು ಸಮಕಾಲಿನವಾಗಿ ಪ್ರಸ್ತುತವಾಗಿರುವ ಜ್ಞಾನವನ್ನು ಪಡೆದು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಶಾಲೆಗೆ ಹೋಗುತ್ತಾರೆ. ಇದು ಇಂದು ನಾವು ಅವರಿಗೆ ಕಲಿಸಿಬೇಕಾದ ಶ್ರಮದ ಮೌಲ್ಯವಾಗಿದೆ. ಆದರೆ ಕಠಿಣ ಪರಿಶ್ರಮದ ಮೌಲ್ಯಗಳನ್ನೆ ಅಲ್ಲಗಳೆಯುವ ಗೀತೆಯೊಳಗಿನ ಕರ್ಮ ಸಿದ್ಧಾಂತ ಮಕ್ಕಳನ್ನು ಮೌಢ್ಯಗಳ ದಾಸರನ್ನಾಗಿಸುತ್ತದೆ ಎನ್ನುತ್ತಾರೆ ಅರುಣ ಮೂರ್ತಿ.
ಗೀತೆಯ ಈ ಕರ್ಮ ಸಿದ್ಧಾಂತದ ಭೋದನೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಏನು ಪ್ರಯೋಜನ ಎಂದು ಪ್ರಶ್ನಿಸುವ ಅರುಣ ಮೂರ್ತಿˌ ವಾಸ್ತವವಾಗಿ ಗೀತೆಯ ಈ ಜನಪ್ರೀಯ ಶ್ಲೋಕವು ಮಕ್ಕಳು ತಮ್ಮ ಕಠಿಣ ಪರಿಶ್ರಮಕ್ಕೆ ಫಲವನ್ನು ನಿರೀಕ್ಷಿಸಬಾರದು ಮತ್ತು ಸೂಚ್ಯವಾಗಿ, ತಮ್ಮ ಅದಮ್ಯ ಆಕಾಂಕ್ಷೆಗಳನ್ನು ದಮನಿಸಬೇಕು ಎಂದು ಬಲವಾಗಿ ಸೂಚಿಸುವುದರಿಂದ ಇದು ಮಕ್ಕಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ಇದಷ್ಟೆ ಅಲ್ಲದೆˌ ಈ ರೀತಿಯ ಕರ್ಮ ಸಿದ್ದಾಂತಕ್ಕೆ ಯಾವುದೇ ತಾತ್ವಿಕ ನೆಲೆಗಟ್ಟಿಲ್ಲ ಹಾಗು ಅದರಿಂದ ಹೆಚ್ಚಿನ ಒಳಿತಾಗುತ್ತದೆ ಎನ್ನಲು ಯಾವುದೇ ದಾಖಲೆಗಳ ಉಲ್ಲೇಖವಿಲ್ಲ. ಆದ್ದರಿಂದ ಈ ಶ್ಲೋಕವು ಕೇವಲ ಒಂದು ಮತಧರ್ಮಶಾಸ್ತ್ರದ ಹೇಳಿಕೆಯಾಗಿದೆˌ ಏಕೆಂದರೆ ಗೀತೆಯಲ್ಲಿ ಸಾರಿರುವ ಎಲ್ಲಾ ಅಂಶಗಳು ಕಾಲ್ಪನಿಕ ಭಗವಂತನಿಗೆ ಅರ್ಪಿಸಬೇಕು ಎನ್ನುವುದಾಗಿದೆ ಎನ್ನುತ್ತಾರೆ ಅರುಣ ಮೂರ್ತಿ.
ತಮ್ಮ ವಾದವನ್ನು ಪುಷ್ಟೀಕರಿಸಲು ಅರುಣ ಮೂರ್ತಿಯವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಭಿಪ್ರಾಯವನ್ಮು ಉಲ್ಲೇಖಿಸುತ್ತಾರೆ. ಡಾ. ಬಾಬಾಸಾಹೇಬರು ಗೀತೆಯ ಕುರಿತು “ಇದು ಧರ್ಮಗ್ರಥವೂ ಅಲ್ಲ ಅಥವಾ ತತ್ವಶಾಸ್ತ್ರದ ಗ್ರಂಥವೂ ಅಲ್ಲ” ಎಂದು ಹೇಳಿರುವುದು ಸರಿಯಾಗಿದೆ (‘ಎಸ್ಸೇಸ್ ಆನ್ ದಿ ಭಗವತ್ಗೀತೆ: ಫಿಲಾಸಫಿಕ್ ಡಿಫೆನ್ಸ್ ಆಫ್ ಕೌಂಟರ್-ರೆವಲ್ಯೂಷನ್: ಕೃಷ್ಣ ಅಂಡ್ ಹಿಸ್ ಗೀತಾ’: ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದ ಅವರ ಬರಹಗಳು ಮತ್ತು ಭಾಷಣಗಳ ಸಂಪುಟ ೩) ಎನ್ನುತ್ತಾರೆ ಲೇಖಕರು. ಡಾ. ಅಂಬೇಡ್ಕರ್ ಅವರು ತಮ್ಮ ಬರಹವನ್ನು ಗೀತೆಯ ಬೋಧನೆಯಾದರೂ ಏನು ಎಂದು ಪ್ರಶ್ನಿಸುವ ಮೂಲಕ ಪ್ರಾರಂಭಿಸುತ್ತಾರೆ. ಗೀತೆಯ ಕುರಿತು ಒಂದಕ್ಕೊಂದು ಹೊಂದಿಕೆಯಾಗದ ವಿವಿಧ ವಿದ್ವಾಂಸರಿಂದ ವ್ಯಕ್ತವಾಗಿರುವ ವಿಭಿನ್ನ ಅಭಿಪ್ರಾಯಗಳನ್ನು ವ್ಯಾಪಕವಾಗಿ ಉಲ್ಲೇಖಿಸಿ, ಗೀತೆಯಲ್ಲಿ ಯಾವುದೇ ಸ್ಪಷ್ಟ ಸಂದೇಶವಿಲ್ಲ ಎಂದು ತೀರ್ಮಾನಿಸುತ್ತಾರೆ ಎನ್ನುವ ಕುರಿತು ಅರುಣ ಅವರು ವಿವರವಾಗಿ ಚರ್ಚಿಸಿದ್ದಾರೆ.
ಆದಾಗ್ಯೂ, ಅಂಬೇಡ್ಕರ್ ಅವರು ಗೀತೆಯ ವಿಮರ್ಶೆಯಲ್ಲಿ ಸ್ವಲ್ಪ ಉದಾರವಾಗಿ ವರ್ತಿಸಿದ್ದಾರೆ ಎನ್ನುತ್ತಾರೆ ಅರುಣ ಮೂರ್ತಿ. ಅದು ಹೇಗೆಂದರೆˌ ಡಾ. ಅಂಬೇಡ್ಕರ್ ಅವರ ಪ್ರಕಾರ ಇದು ತಾತ್ವಿಕ ಆಧಾರದ ಮೇಲೆ ಧಾರ್ಮಿಕ ಸಿದ್ಧಾಂತಗಳನ್ನು ಸಮರ್ಥಿಸುವ ಗ್ರಂಥವಾಗಿದ್ದು ಇದರಲ್ಲಿ ವೈದಿಕ “ಧರ್ಮವನ್ನು ರಕ್ಷಿಸಲು ತತ್ವಶಾಸ್ತ್ರವನ್ನು ವ್ಯಾಪಕವಾಗಿ ಬಳಸಲಾಗಿದೆ” ಎನ್ನಲಾಗಿದೆ. ದುರ್ದೈವದ ಸಂಗತಿ ಏನೆಂದರೆ, ಗೀತೆ ಅದನ್ನೂ ಮಾಡಲು ಕೂಡ ವಿಫಲವಾಗಿದೆ ಎನ್ನುವುದು ಅರುಣ ಅವರ ಅಭಿಪ್ರಾಯ. ಅದು ಹೇಗೆಂದರೆˌ ಇದು ವಾಸ್ತವವಾಗಿ ಒಂದು ಸಿದ್ಧಾಂತವನ್ನು ಪ್ರತಿಪಾದಿಸಲು ಇನ್ನೊಂದು ಶ್ರೇಣಿಕೃತ ಸಿದ್ದಾಂತವನ್ನು ಸಮರ್ಥಿಸುತ್ತದೆ. ಅದನ್ನು ಜಾತಿ ವ್ಯವಸ್ಥೆಯ ಕುರಿತು ಗೀತೆಯ ಒಂದು ಶ್ಲೋಕವನ್ನು ಪರಿಶೀಲಿಸಿದರೆ ಅರ್ಥ ಮಾಡಿಕೊಳ್ಳಬಹುದು ಎನ್ನುತ್ತಾರೆ ಅರುಣ ಮೂರ್ತಿ. ಗೀತೆಯ ಮತಧರ್ಮಶಾಸ್ತ್ರವು ಕರ್ಮ ಸಿದ್ದಾಂತದ ಕಲ್ಪನೆಯ ಮೂಲಕ ಜಾತಿ ವ್ಯವಸ್ಥೆಯನ್ನು ಅನಾವರಣಗೊಳಿಸುತ್ತದೆ ಎನ್ನಲು ಅವರು ಕೆಳಗಿನ ಶ್ಲೋಕದ ಅರ್ಥವನ್ನು ಉಲ್ಲೇಖಿಸುತ್ತಾರೆ.
ವಾಸ್ತವವಾಗಿ ಗೀತೆಯ ೪ ನೇ ಅಧ್ಯಾಯದ ೧೩ ನೇ ಶ್ಲೋಕದಲ್ಲಿ ಶ್ರೇಣಿಕೃತ ಚಾತುರ್ವರ್ಣ್ಯ ಸಾಮಾಜಿಕ ವ್ಯವಸ್ಥೆಯ ಸೃಷ್ಟಿಕರ್ತ ತಾನೇ ಎಂದು ಶ್ರೀಕೃಷ್ಣ ಘೋಷಿಸುತ್ತಾನೆ. ಡಾ. ಅಂಬೇಡ್ಕರ್ ಅವರು ಈ ಶ್ಲೋಕವನ್ನು ಗೀತೆಯ ಒಂದು ಮುಖ್ಯ ಸಿದ್ಧಾಂತದ ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ:
“ಚಾತುರ್ವರ್ಣ್ಯಂ ಮಯ ಶ್ರಿಸ್ತಂ ಗುಣ ಕರ್ಮ ವಿಬಾಗಸ್ಯ|
ತಸ್ಯ ಕರ್ತಾರಮ್ ಅಪಿ ಮಮ್ ವಿದ್ಯಕರ್ತಾರಮ್ ಅವ್ಯಯಮ್|”
(ಜನರ ಗುಣಗಳು ಮತ್ತು ಅವರು ಮಾಡುವ ಕೆಲಸಗಳಿಗೆ ಅನುಗುಣವಾಗಿ ನಾಲ್ಕು ವರ್ಣಗಳನ್ನು ನಾನು ರಚಿಸಿದ್ದೇನೆ…..)
ಭಗವಂತನೇ ನಿರ್ಮಿಸದನೆನ್ನಲಾಗುವ ಜಾತಿ ವ್ಯವಸ್ಥೆಯ ನೈತಿಕ ಯುಕ್ತತೆಯನ್ನು ವಿದ್ಯಾರ್ಥಿಗಳು ಕಲಿಯಬೇಕೆ ಎಂದು ಅರುಣ ಅವರು ಪ್ರಶ್ನಿಸುತ್ತಾ ˌ ಆದಾಗ್ಯೂ ಜಾಣತನದಿಂದ ಆಧುನಿಕ ಕಾಲದ ಜಾತಿವಾದಿಗಳು ಈ ಶ್ರೇಣಿಕೃತ ಸಾಮಾಜಿಕ ಕ್ರಮದ ಪಾಂಡಿತ್ಯಪೂರ್ಣ ರಕ್ಷಣೆಯನ್ನು ಮಾಡಲು ಪ್ರಯತ್ನಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅದಾಗ್ಯೂ ˌ ಕೆಲವು ಕರ್ಮಠ ಸಾಂಪ್ರದಾಯವಾದಿ ವಿದ್ವಾಂಸರು ವರ್ಣ ತಾರತಮ್ಯವು ಮನುಷ್ಯನ ಸಹಜ ಗುಣಗಳು ಮತ್ತು ಕೆಲಸಗಳನ್ನು ಆಧರಿಸಿವೆ ಎಂದು ಪ್ರತಿಪಾದಿಸುತ್ತಾರೆ. ಆದರೆˌ ಆ ಸೃಷ್ಟಿಕರ್ತನಾದ ಭಗವಂತನು ಮನುಷ್ಯರ ಗುಣ-ಕ್ರೀಯೆಗಳಲ್ಲಿ ಅಂತಹ ವ್ಯತ್ಯಾಸಗಳನ್ನು ಏಕೆ ರಚಿಸುತ್ತಾನೆ ಎಂದು ನೀವು ಪ್ರತಿ ಪ್ರಶ್ನೆ ಹಾಕಿದರೆ ಅದಕ್ಕೆ ಅವರು ಯಾವುದೇ ಉತ್ತರ ನೀಡುವುದಿಲ್ಲ. ಹಾಗೆಯೇ ಈ ಕರ್ಮಠರು ಕೆಲವೊಮ್ಮೆ ಕರ್ಮ ಸಿದ್ಧಾಂತದ ಬಗ್ಗೆಯೂ ಕೂಡ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಅವರ ಈ ವಿತಂಡವಾದವು ಯಾವುದೇ ತಾತ್ವಿಕತೆ ಹೊಂದದೆ ಅದೊಂದು ಮತಧರ್ಮಶಾಸ್ತ್ರದ ವಿವರಣೆಯಾಗಿರುತ್ತದೆ ಅಷ್ಟೆ. ಇದು ಹೇಗೆಂದರೆˌ ಒಂದು ವಿಕೃತ ಸಿದ್ಧಾಂತವನ್ನು ಇನ್ನೊಂದು ಪೂರಕ ಸಿದ್ಧಾಂತದಿಂದ ರಕ್ಷಿಸುವ ಹುನ್ನಾರವಾಗಿರುತ್ತದೆ. ಹಾಗಾಗಿ ಗೀತೆಯು ಶಾಲೆಗಳಲ್ಲಿ ಭೋದಿಸಲು ಯೋಗ್ಯವಾದ ತಾತ್ವಿಕ ಪಠ್ಯವಲ್ಲ ಎಂದು ಅಂಬೇಡ್ಕರ್ ಪ್ರತಿಪಾದನೆ ಸರಿ ಎನ್ನುತ್ತಾರೆ ಅರುಣ ಮೂರ್ತಿಯವರು.
ಗೀತೆಯಲ್ಲಿನ ಯಥಾಸ್ಥಿತಿವಾದಿ ಸಿದ್ಧಾಂತವನ್ನು ಹೇಗೆ ಸಮರ್ಥಿಸಲಾಗುತ್ತದೆ ಎಂಬುದಕ್ಕೆ ಡಾ. ಅಂಬೇಡ್ಕರ್ ಅವರು ನೀಡಿದ ಉದಾಹರಣೆಯನ್ನು ಅರುಣ ಮೂರ್ತಿಯವರು ಉಲ್ಲೇಖಿಸುತ್ತಾ ಯುದ್ಧಭೂಮಿಯಲ್ಲಿ ಅರ್ಜುನನ ಪಶ್ಚಾತ್ತಾಪಕ್ಕೆ ಪ್ರತಿಕ್ರಿಯೆಯಾಗಿ, ಶ್ರೀಕೃಷ್ಣನು ಯುದ್ಧವನ್ನು ಸಮರ್ಥಿಸುತ್ತಾನೆ. ಆತ್ಮಕ್ಕೆ ಮರಣವಿಲ್ಲ ˌ ಅದನ್ನು ಯಾರೊಬ್ಬರೂ ನಾಶಪಡಿಸಲಾಗದು ಮತ್ತು ದೇಹ ಮಾತ್ರ ನಾಶವಾಗುವುದರಿಂದ ಯುದ್ಧ ಮತ್ತು ಹತ್ಯೆಗಳಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಬೋಧಿಸುತ್ತಾನೆ. ಅಷ್ಟೇ ಅಲ್ಲದೆ ಮನುಷ್ಯನ ದೇಹವು ಅವಾಸ್ತವವಾಗಿದ್ದು ಆತ್ಮ ಮಾತ್ರ ವಾಸ್ತವವೆಂದು ಹೇಳುತ್ತಾನೆ. ಹೀಗಿರುವಾಗ ದೇಹವು ನಿಜವಲ್ಲದಿದ್ದರೆ, ಭಗವಂತನು ಭ್ರಮೆಯ ದೇಹವನ್ನು ಸೃಷ್ಟಿಸಿ ಅದರಲ್ಲಿ ಆತ್ಮವನ್ನು ಏಕೆ ಸೇರಿಸಿದನು ಎಂದು ಅರುಣ ಮೂರ್ತಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಹೀಗೆ ಗೀತೆಯ ಭೋದನೆಗಳನ್ನು ಯಾವುದೆ ತಾತ್ವಿಕ ಕಾರಣಗಳಿಲ್ಲದೆ ಅಲ್ಲಿನ ಕರ್ಮ ಸಿದ್ಧಾಂತವನ್ನು ಮತ್ತೊಂದು ಪೂರಕ ಸಿದ್ಧಾಂತದ ಮೂಲಕ ರಕ್ಷಿಸಲಾಗುತ್ತದೆ. ಈ ಸಿದ್ಧಾಂತಗಳ ಸಿಂಧುತ್ವವೇನು ಎಂದು ಕೇಳಿದರೆ ಅದನ್ನು ರಕ್ಷಿಸಲು ವೇದಗಳನ್ನು ಉದಾಹರಿಸಲಾಗುತ್ತದೆ. ನಾವೆಲ್ಲ ಅದನ್ನು ಅಧಿಕೃತವೆಂದು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಲಾಗುತ್ತದೆ. ಹೀಗಾಗಿ, ಗೀತೆಯು ಒಂದು ಪ್ರತಿಗಾಮಿ ವಿಚಾರಗಳನ್ನು ಹೊಂದಿರುವ ಪ್ರಗತಿ ವಿರೋಧಿ ಮತಧರ್ಮಶಾಸ್ತ್ರದ ಪಠ್ಯವಾಗಿದೆ ಎಂದು ಅರುಣ ಮೂರ್ತಿ ಅವರು ಅಂತಿಮವಾಗಿ ಅಭಿಪ್ರಾಯ ಪಡುತ್ತಾರೆ. ಮತಧರ್ಮಶಾಸ್ತ್ರದ ಪಠ್ಯವನ್ನು “ಅನನ್ಯ ಸಾರ್ವತ್ರಿಕ ಸ್ಫೂರ್ತಿ” ಎಂಬ ಸ್ಥಿತಿಗೆ ಏರಿಸಿದಾಗ ಮತ್ತು ಪಠ್ಯಕ್ರಮದ ಭಾಗವಾಗಿ ಶಿಕ್ಷಕರಿಂದ ಕಲಿಸಲ್ಪಟ್ಟಾಗ, ಶ್ಲೋಕಗಳನ್ನು ತರ್ಕ ಮತ್ತು ವಿಶ್ಲೇಷಣೆಗೆ ಒಳಪಡಿಸಲು ಬಯಸುವ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು ಎಂದು ಪ್ರಶ್ನಿಸಿರುವ ಲೇಖಕರು ಮಕ್ಕಳಲ್ಲಿ ತರ್ಕಬದ್ಧ ದೃಷ್ಟಿಕೋನ ಮತ್ತು ವಿಮರ್ಶಾತ್ಮಕ ಮನೋಭಾವವನ್ನು ಅಭಿವೃದ್ಧಿಪಡಿಸುವ ಬದಲು ಗೀತೆಯನ್ನು ಹೃದಯದಿಂದ ಹಾಗು ಭಾವನಾತ್ಮಕವಾಗಿ ಕಲಿಯಲು ಮಕ್ಕಳಿಗೆ ಪ್ರೇರೇಪಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ರೀತಿಯ ಕಲಿಕೆಯು ಯಾವ ಉದ್ದೇಶವನ್ನು ಈಡೇರಿಸುತ್ತದೆ ಎಂಬುದು ಸ್ಪಷ್ಟವಾಗಿರಬೇಕು ಎಂದು ಲೇಖಕರು ಪ್ರತಿಪಾದಿಸುತ್ತಾರೆ.
ಬಿಜೆಪಿ ಆಡಳಿತದ ಇಂದಿನ ಈ ಎಲ್ಲ ಬಗೆಯ ಬೆಳವಣಿಗಳ ಹಿಂದೆ ಪ್ರತಿಗಾಮಿ ಶಕ್ತಿಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಪ್ರತಿಗಾಮಿಗಳು ಪ್ರಗತಿ ವಿರೋಧಿಗಳುˌ ಜೀವವಿರೋಧಿಗಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇವರುˌ ಧರ್ಮಗಳ ಹೆಸರಿನಲ್ಲಿ ಈ ದೇಶವನ್ನು ಸದಾ ಅಂಧಕಾರದಲ್ಲಿಟ್ಟಿದ್ದ ಇವರು ನಮ್ಮ ಪೂರ್ವಕಾಲದ ದಾರ್ಶನಿಕರುˌ ಆನಂತರದ ಮೊಘಲರು ಹಾಗು ಬ್ರಿಟೀಷ್ ಆಡಳಿತಗಾರರು ಹಾಕಿ ಹೋದ ಪ್ರಗತಿಯ ಬುನಾದಿಯನ್ನು ಶಿಥಿತಗೊಳಿಸಲು ಜನತತ್ರವನ್ನು ದುರುಪಯೋಗ ಪಡಿಸಿಕೊಂಡು ಪ್ರಯತ್ನಿಸುತ್ತಿದ್ದಾರೆ. ಇದನ್ನು ಈ ದೇಶದ ಪ್ರಜ್ಞಾವಂತ ನಾಗರಿಕರು ಅರ್ಥಮಾಡಿಕೊಂಡು ನಮ್ಮ ಹಿರಿಯರು ಕಟ್ಟಿದ ಈ ಬಹುತ್ವ ಭಾರತವನ್ನು ರಕ್ಷಿಸಬೇಕಿದೆ.