ದಿ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಸಿನಿಮಾ ಸದ್ಯ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕಾಶ್ಮೀರಿ ಪಂಡಿತರ ನರಮೇಧ, ಅವರ ಮೇಲಿನ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ ಎಂದು ಚಿತ್ರತಂಡ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿ ಇನ್ನಿತರ ಕೆಲವು ಪ್ರತಿಪಕ್ಷಗಳು ಮತ್ತು ಅನೇಕ ನೆಟ್ಟಿಗರು ದಿ ಕಾಶ್ಮೀರ್ ಫೈಲ್ಸ್ ಒಂದು ಸುಳ್ಳಿನ ಕಂತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗ ನ್ಯಾಶನಲ್ ಕಾನ್ಫರೆನ್ಸ್ ಕಾರ್ಯಕಾರಿ ಅಧ್ಯಕ್ಷ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಮಾತನಾಡಿದ್ದು, ಈ ಸಿನಿಮಾ ಅನೇಕ ಸುಳ್ಳಿನಿಂದ ಕೂಡಿದೆ, ಇದು ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದ್ದಾರೆ.
1990ರ ಸಮಯದಲ್ಲಿ ಹತ್ಯೆಗೀಡಾದವರು, ವಲಸೆ ಹೋದವರು ಬರೀ ಕಾಶ್ಮೀರಿ ಪಂಡಿತರು ಮಾತ್ರವಲ್ಲ. ಮುಸ್ಲಿಮರು ಮತ್ತು ಸಿಖ್ಖರ ಹತ್ಯೆಯೂ ಆಗಿದೆ. ಅವರೂ ಅನೇಕರು ಇಲ್ಲಿಂದ ವಲಸೆ ಹೋಗಿದ್ದಾರೆ. ಮುಸ್ಲಿಮರು ಮತ್ತು ಸಿಖ್ಖರ ತ್ಯಾಗವನ್ನು ಚಲನಚಿತ್ರದಲ್ಲಿ ನಿರ್ಲಕ್ಷಿಸಿದೆ ಎಂದು ಅಬ್ದುಲ್ಲಾಹೇಳಿದ್ದಾರೆ.
“1990 ಮತ್ತು ನಂತರದ ನೋವು ಮತ್ತು ಸಂಕಟವನ್ನು ಹಿಂತಿರುಗಿಸಲು ಸಾಧ್ಯವಿಲ್ಲ” ಎಂದು ಅಬ್ದುಲ್ಲಾ ಟ್ವೀಟ್ನಲ್ಲಿಬರೆದುಕೊಂಡಿದ್ದಾರೆ. ಮನೆಬಿಟ್ಟು ಹೋದವರನ್ನು ಮರಳಿ ಕರೆತರುವ ವಾತಾವರಣ ನಿರ್ಮಿಸುವ ಅಗತ್ಯವಿದೆಯೇ ಹೊರತು ಕೋಮುವಾದದ ಒಡಕು ಸೃಷ್ಟಿಸಬಾರದು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಮುಖ್ಯವಾಗಿ, ಆ ಸಮಯದಲ್ಲಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು. ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶಕರು ಯಾರನ್ನೋ ಮೆಚ್ಚಿಸಲು ಸುಳ್ಳುಗಳನ್ನು ಹೆಣೆದಿದ್ದಾರೆ ಎಂದು ಒಮರ್ ಅಬ್ದುಲ್ಲಾ ಕಿಡಿಕಾರಿದರು.

ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದೆ ಎನ್ನಲಾದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್, ಇದೇ ಮಾರ್ಚ್ 11 ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದಲೂ ಈ ಚಿತ್ರ ವಿವಾದಕ್ಕೀಡಾಗಿದರೆ ಮತ್ತೊಂದೆಡೆ ರಾಜಕೀಯ ತಿಕ್ಕಾಟಕ್ಕು ಗುರಿಯಾಗಿದೆ.
ಒಂದೆಡೆ, ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಅನೇಕ ಹಿರಿಯ ನಾಯಕರು ಅಭಿನಂದಿಸಿದ್ದಾರೆ. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿವೆ.
ಮತ್ತೊಂದೆಡೆ, ವಿರೋಧ ಪಕ್ಷಗಳು ಚಿತ್ರದ ವಾಸ್ತವಿಕ ನಿಖರತೆ ಮತ್ತು ಚಿತ್ರದ ಕೋಮುದ್ವೇಷದ ಬಗ್ಗೆ ಪ್ರಶ್ನಿಸಿವೆ. ಪಂಡಿತರ ವಲಸೆ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ ಎಂದು ವಿರೋಧ ಒಕ್ಷಗಳು ವಾದ ಮಂಡಿಸುತ್ತಿದ್ದಾರೆ. ಮತ್ತು ಆ ಸಮಯದಲ್ಲಿ ರಾಜ್ಯಪಾಲರ ಆಢಳಿದಲ್ಲಿತ್ತು ಇದಕ್ಕೆಲ್ಲ ಕಾರಣ ಎಂದು ಹೇಳಿದ್ದಾರೆ.






